Homeಮುಖಪುಟಗೌರಿ ಲಂಕೇಶ್ ಮುಸ್ಲಿಂ ಪಕ್ಷಪಾತಿಯಾಗಿದ್ದರೇ? - ಇಸ್ಮತ್ ಪಜೀರ್

ಗೌರಿ ಲಂಕೇಶ್ ಮುಸ್ಲಿಂ ಪಕ್ಷಪಾತಿಯಾಗಿದ್ದರೇ? – ಇಸ್ಮತ್ ಪಜೀರ್

ಗೌರಿಯ ಮತ್ತು ಅವರ ಚಳವಳಿಯ ಸಂಗಾತಿಗಳಾದ ನಮ್ಮೆಲ್ಲರ ವಾದ ಬಾಬಾ ಬುಡಾನ್‍ಗಿರಿ ಈ ನೆಲದ ಸೌಹಾರ್ದ ಪರಂಪರೆಯ ಬಹುದೊಡ್ಡ ಕೇಂದ್ರಗಳಲ್ಲೊಂದು ಎಂದಾಗಿತ್ತು. ಅಂದಿನಿಂದ ಇಂದಿನವರೆಗೂ ನಮ್ಮ ಘೋಷಣೆ “ಬಾಬಾ ದತ್ತ ಬೇರೆಯಲ್ಲ, ಹಿಂದೂ-ಮುಸ್ಲಿಂ ಶತ್ರುಗಳಲ್ಲ” ಎಂಬುವುದಾಗಿದೆ.

- Advertisement -
- Advertisement -

ನಮಗೆಲ್ಲಾ ಗೊತ್ತಿರುವ ಹಾಗೆ ಅಕ್ಕ ಗೌರಿ ಲಂಕೇಶ್ ಮೇಲೆ ಮುಸ್ಲಿಂ ಪಕ್ಷಪಾತಿಯೆಂಬ ಬಹುದೊಡ್ಡ ಆರೋಪವಿತ್ತು. ಇದು ನ್ಯಾಯ ಪಕ್ಷಪಾತಿಯಾದ ಪ್ರತಿಯೋರ್ವ ಸೆಕ್ಯುಲರ್ ವ್ಯಕ್ತಿಯ ಮೇಲೆ ಬಂದ ಮತ್ತು ಬರುವ ಬಹಳ ಸಹಜವಾದ ಆರೋಪ. ಇಂತಹ ಆರೋಪ ಮಹಾತ್ಮ ಗಾಂಧೀಜಿಯವರ ಮೇಲೆಯೂ ಇದೆ. ಅಷ್ಟಕ್ಕೂ ಗೌರಿ ಮುಸ್ಲಿಂ ಪಕ್ಷಪಾತಿಯಾಗಿದ್ದರೇ? ಎಂಬುವುದಕ್ಕೆ ಉತ್ತರ ಕಂಡುಹುಡುಕುವ ಅಗತ್ಯ ಖಂಡಿತವಾಗಿಯೂ ಇಲ್ಲ. ಗೌರಿಯ ಹುತಾತ್ಮತೆಯ ಬಗ್ಗೆ ಒಂದೇ ವಾಕ್ಯದಲ್ಲಿ ಹೇಳಬಹುದಾದ ಮಾತು “ಈ ನೆಲದ ಸಂವಿಧಾನದ ಉಳಿವಿಗಾಗಿ ಹೋರಾಡಿ ಮಡಿದ ಅನೇಕ ಹೋರಾಟಗಾರರಲ್ಲಿ ಗೌರಿ ಕೂಡಾ ಒಬ್ಬರು”. ದೇಶದ ಪ್ರಥಮ ಪ್ರಧಾನಿ ಜವಾಹರ್‍ಲಾಲ್ ನೆಹರೂ ಕೋಮುವಾದದ ಬಗ್ಗೆ ಬಹಳ ಸ್ಪಷ್ಟವಾದ ನಿಲುವೊಂದನ್ನು ತಳೆದಿದ್ದರು. “ಅಲ್ಪಸಂಖ್ಯಾತರ ಕೋಮುವಾದ ಸ್ವತಃ ಅವರಿಗೇ ಮಾರಕವಾದರೆ ಬಹುಸಂಖ್ಯಾತರ ಕೋಮುವಾದ ರಾಷ್ಟ್ರಕ್ಕೆ ಮಾರಕ” ಎಂದಿದ್ದರು.

ನಮ್ಮಲ್ಲಿ ಹೇಗೆ ಹಿಂದೂ ಕೋಮುವಾದದ ವಿರುದ್ಧ ಮಾತನಾಡುವ ಹಿಂದೂಗಳ ಮೇಲೆ ಹಲ್ಲೆ ದೌರ್ಜನ್ಯಗಳು ಮತ್ತವರ ಕೊಲೆ ನಡೆಯುತ್ತವೆಯೋ ಅಂತೆಯೇ ಪಾಕಿಸ್ತಾನದಲ್ಲಿ ಅಲ್ಲಿನ ಮುಸ್ಲಿಮ್ ಕೋಮುವಾದದ ವಿರುದ್ಧ ಮಾತನಾಡುವ ಮುಸ್ಲಿಂ ಚಿಂತಕರ ಹೋರಾಟಗಾರರ ಮೇಲೆಯೂ ಹಲ್ಲೆ, ದೌರ್ಜನ್ಯ, ಕೊಲೆಗಳೂ ನಡೆಯುತ್ತವೆ. ಉದಾ: ಅಸ್ಮಾ ಜಹಾಂಗೀರ್, ಇಸ್ಮಾಯಿಲ್ ಗುಲೆಲೋವ್. ಗೌರಿ ತನ್ನ ಕಂಡಹಾಗೆ ಎಂಬ ಸಂಪಾದಕೀಯ ಅಂಕಣದಲ್ಲಿ ಅನೇಕಾರು ಬಾರಿ ಪಾಕಿಸ್ತಾನಿ ಮೂಲಭೂತವಾದಿಗಳ ವಿರುದ್ಧ ಮತ್ತು ಅಲ್ಲಿನ ಅಲ್ಪಸಂಖ್ಯಾತ ಹಿಂದೂಗಳ ಪರ ಧ್ವನಿಯೆತ್ತುವ ಮುಸ್ಲಿಂ ಚಿಂತಕರ ಹೋರಾಟಗಾರರ ಪರವಾಗಿ ಬರೆದಿದ್ದಾರೆ. ದುರಂತವೇನೆಂದರೆ ಗೌರಿಯ ಇಂತಹ ಜೀವಪರ, ದುರ್ಬಲರ ಪರ ನಿಲುವುಗಳು ಗೌರಿಯನ್ನು ನಖಶಿಖಾಂತ ವಿರೋಧಿಸುತ್ತಿದ್ದ, ಅವರು ಹುತಾತ್ಮರಾದ ಬಳಿಕವೂ ಅವರ ಮೇಲೆ ನೀಚಾತಿನೀಚವಾಗಿ ಬರೆಯುವ, ಮಾತನಾಡುವ ಹಿಂದೂತ್ವವಾದಿ ಶಕ್ತಿಗಳಿಗೆ ಇದು ಎಂದೂ ಅರ್ಥವಾಗುವುದಿಲ್ಲ.

ಅವರ ಮೇಲೆ ಹಿಂದೂತ್ವವಾದಿ ಶಕ್ತಿಗಳು ಮೊಟ್ಟ ಮೊದಲು ಮುಗಿಬಿದ್ದು ದ್ವೇಷ ಸಾಧಿಸತೊಡಗಿದ್ದು ಬಾಬಾ ಬುಡಾನ್‍ಗಿರಿ ಹೋರಾಟದ ಪ್ರಾರಂಭಕಾಲದಲ್ಲಿ. ಗೌರಿ ಎಲ್ಲೂ ಕೂಡಾ ಬಾಬಾ ಬುಡಾನ್‍ಗಿರಿಯನ್ನು ಮುಸ್ಲಿಮರ ಸ್ವತ್ತು ಎಂದು ವಾದಿಸಿಲ್ಲ. ಗೌರಿಯ ಮತ್ತು ಅವರ ಚಳವಳಿಯ ಸಂಗಾತಿಗಳಾದ ನಮ್ಮೆಲ್ಲರ ವಾದ ಬಾಬಾ ಬುಡಾನ್‍ಗಿರಿ ಈ ನೆಲದ ಸೌಹಾರ್ದ ಪರಂಪರೆಯ ಬಹುದೊಡ್ಡ ಕೇಂದ್ರಗಳಲ್ಲೊಂದು ಎಂದಾಗಿತ್ತು. ಅಂದಿನಿಂದ ಇಂದಿನವರೆಗೂ ನಮ್ಮ ಘೋಷಣೆ “ಬಾಬಾ ದತ್ತ ಬೇರೆಯಲ್ಲ, ಹಿಂದೂ-ಮುಸ್ಲಿಂ ಶತ್ರುಗಳಲ್ಲ” ಎಂಬುವುದಾಗಿದೆ. ಯಾವಾಗ ಹಿಂದೂತ್ವವಾದಿಗಳು ಅದನ್ನು ಕೇವಲ ಹಿಂದೂಗಳ ಶ್ರದ್ಧಾ ಕೇಂದ್ರವೆಂದು ವಾದಿಸ ಹೊರಟರೋ ಅದನ್ನು ಎದುರಿಸಿ ಗೌರಿ ಹೇಳುತ್ತಾ ಬಂದಿದ್ದಿಷ್ಟೆ. ಬಾಬಾ ಬುಡಾನ್‍ಗಿರಿ ಕೇವಲ ಹಿಂದೂಗಳ ಸ್ವತ್ತಲ್ಲ. ಅದು ಈ ನಾಡಿನ ಎಲ್ಲಾ ಸೌಹಾರ್ದಪ್ರಿಯರ ಸ್ವತ್ತು.

ಸುಮಾರು ಎಂಟು -ಒಂಬತ್ತು ವರ್ಷಗಳ ಹಿಂದಿನ ಮಾತು. ಒಮ್ಮೆ ಗೌರಿ ಯಾವನೋ ಒಬ್ಬ ಸ್ವಾಮಿಯ ಅಕ್ರಮಗಳನ್ನು ಬಯಲಿಗೆಳೆದು ಬರೆದಾಗ ಯುವಕನೊಬ್ಬ ಗೌರಿಗೆ ಪತ್ರವೊಂದನ್ನು ಬರೆದು “ನೀನು ಕೇವಲ ಹಿಂದೂ ಸ್ವಾಮಿಗಳ ವಿರುದ್ಧ ಮಾತ್ರ ಬರೆಯುತ್ತಿಯಲ್ವಾ? ನಿನಗೆ ಧಮ್ ಇದ್ದರೆ ಓರ್ವ ಮುಸ್ಲಿಂ ಮೌಲವಿಯ ವಿರುದ್ಧ ಬರೆ” ಎಂದು ಸವಾಲು ಹಾಕಿದ್ದ. ಇದನ್ನು ಮುಂದಿನ ಸಂಚಿಕೆಯಲ್ಲಿ ಉಲ್ಲೇಖಿಸಿದ ಗೌರಿ ದೇಶ ಕಂಡ ಅಪ್ರತಿಮ ಸ್ವಾತಂತ್ರ್ಯ ಹೋರಾಟಗರರಲ್ಲೊಬ್ಬರಾದ ಮೌಲಾನಾ ಅಬುಲ್ ಕಲಾಂ ಆಝಾದ್ ಬಗ್ಗೆ ಬರೆದರು. ಮೌಲಾನಾ ಕೂಡಾ ಓರ್ವ ಇಸ್ಲಾಮೀ ಮೌಲವಿಯಾಗಿದ್ದರು.

ಸೆಕ್ಯುಲರ್ ಆಗಿ ಚಿಂತಿಸುವ ಸ್ವಾಮೀಜಿಗಳ ಬಗ್ಗೆ ಬರೆದರೆ ಇವರು ಅಂತಹ ಸ್ವಾಮಿಗಳನ್ನು ಸಾಬರಿಗೆ ಹುಟ್ಟಿದ ಸ್ವಾಮಿಗಳು ಎಂದರೆ ಏನು ಮಾಡಕ್ಕಾಗುತ್ತೆ? ತಮ್ಮ ಪಾಡಿಗೆ ಧಾರ್ಮಿಕ ಕೆಲಸಗಳನ್ನು ಮಾಡುತ್ತಾ, ಯಾವ ರಾಜಕೀಯ ಮೂಲಭೂತವಾದಿ ಸಂಘಟನೆಗಳ ಜೊತೆ ಕೈ ಜೋಡಿಸದಿದ್ದ ಸ್ವಾಮಿಗಳ ವಿರುದ್ಧ ಯಾವತ್ತೂ ಗೌರಿ ಬರೆದಿಲ್ಲ. ಪ್ರಗತಿಪರರೊಂದಿಗೆ ಗುರುತಿಸಿಕೊಳ್ಳದೆಯೂ ತಮ್ಮ ಮಠಗಳೊಳಗೆ ಪೂಜೆ ಪುರಸ್ಕಾರಗಳಲ್ಲದೇ ಅನ್ನ ದಾಸೋಹ, ಅಕ್ಷರ ದಾಸೋಹ ಮುಂತಾದ ಸಾಮಾಜಿಕ ಕೆಲಸಗಳನ್ನು ಮಾಡುತ್ತಾ ಬಂದ ಮಠ ಮತ್ತು ಸ್ವಾಮಿಗಳನ್ನು ಸಾಂದರ್ಭಿಕವಾಗಿ ಅವರು ಪ್ರಶಂಸಿಸಿ ಬರೆದದ್ದೂ ಇದೆ.

ಮಠಗಳ ವಿಚಾರಕ್ಕೆ ಬಂದಾಗಲೂ ಯಾವುದಾದರೂ ದುರ್ಬಲ ಸಮುದಾಯದ ಮಠದ ಮೇಲೆ ಆರ್ಥಿಕವಾಗಿ ಮತ್ತು ಸಾಮುದಾಯಿಕವಾಗಿ ಬಲಿಷ್ಠವಾಗಿರುವ ಮಠ, ಸ್ವಾಮಿಗಳು ದರ್ಪ, ದಬ್ಬಾಳಿಕೆ ಮಾಡಿದಾಗ, ಅವರ ಸ್ವತ್ತು ಕಬಳಿಸಲು ಯತ್ನಿಸಿದಾಗ, ಅವರ ಮೇಲೆ ಯಜಮಾನಿಕೆ ಪ್ರದರ್ಶಿಸಿದಾಗ ಗೌರಿ ಬಲಿಷ್ಠರ ವಿರುದ್ಧ ಮತ್ತು ಬಲಹೀನರ ಪರ ಬರೆದ ಧಾರಾಳ ಉದಾಹರಣೆಗಳಿವೆ. ಗೋಕರ್ಣ ದೇವಸ್ಥಾನವನ್ನು ಹೊಸನಗರ ರಾಮಚಂದ್ರಾಪುರ ಮಠ ತನ್ನ ಅಧೀನಕ್ಕೆ ತರಲು ರಾಜಕೀಯ ಬಲದ ಮೂಲಕ ಯತ್ನಿಸಿದಾಗ ಗೋಕರ್ಣ ದೇವಳದ ಪರ ನಿರಂತರ ವರದಿ, ಲೇಖನಗಳನ್ನು ಪ್ರಕಟಿಸಿದ್ದಿದೆ. ಗೋಕರ್ಣ ದೇವಸ್ಥಾನವೇನೂ ಪ್ರಗತಿಪರ ಮಠವಲ್ಲ. ಅದು ಅಪ್ಪಟ ಆಸ್ತಿಕ ಹಿಂದೂಗಳದ್ದು. ಅದೆಷ್ಟೋ ಸ್ವಾಮಿಗಳ ಜನಪರ ಕಾರ್ಯಕ್ರಮಗಳಿಗೆ ಪತ್ರಿಕೆಯ ಮೂಲಕ ಬೆಂಬಲ ನೀಡಿದ ಗೌರಿ  ಅದೇ ಸ್ವಾಮಿಗಳ ರಾಜಕೀಯ ಹಿತಾಸಕ್ತಿಗಳನ್ನು ನಿರ್ದಾಕ್ಷಿಣ್ಯವಾಗಿ ಖಂಡಿಸಿದ್ದೂ ಇದೆ.

ಗೋ ಹತ್ಯಾ ನಿಷೇಧ ಕಾನೂನಿನ ಬಗ್ಗೆ ಬರೆದಾಗ, ಹೋರಾಡಿದಾಗ ಹಲವರು ಗೌರಿ ಮುಸ್ಲಿಮರ ಪರ ಬ್ಯಾಟಿಂಗ್ ಮಾಡುತ್ತಿದ್ದಾರೆಂದು ಆರೊಪಿಸುತ್ತಿದ್ದರು. ಗೌರಿಗೆ ಗೋವು ಯಾವತ್ತೂ ರಾಜಕೀಯ ಮತ್ತು ಧಾರ್ಮಿಕ ಸಂಗತಿಯಾಗಿರಲೇ ಇಲ್ಲ. ಗೌರಿ ಆಗ ಮಾಡಿದ ಹೋರಾಟ ಜನರ ಆಹಾರದ ಹಕ್ಕಿನ ಬಗ್ಗೆ ಮತ್ತು ಸಂವಿಧಾನದತ್ತ ಹಕ್ಕಿನ ಬಗ್ಗೆ.

ಅಮೃತ ಮಹಲ್ ಎಂಬ ದೇಸೀ ತಳಿಯ ಹಸುವಿನ ರಕ್ಷಣೆಯ ನೆಪದಲ್ಲಿ ಆಗಿನ ರಾಜ್ಯದ ಬಿ.ಜೆ.ಪಿ. ಸರಕಾರ ಹೊಸನಗರ ಮಠಕ್ಕೆ ಗೋಮಾಳಗಳನ್ನು ವಹಿಸಿಕೊಟ್ಟಾಗ, ಅದಕ್ಕಾಗಿ ನಿಧಿ ನೀಡಿದಾಗ ಗೌರಿ ಅದನ್ನು ವಿರೋಧಿಸಿ ಬರೆದರು. ಅದನ್ನು ನಿರ್ದಿಷ್ಟವಾಗಿ ಒಂದು ಬಲಿಷ್ಠ ಸಮುದಾಯದ ಮಠಕ್ಕೆ ವಹಿಸಿಕೊಡುವುದರ ಬಗ್ಗೆ ಅವರಿಗೆ ವಿರೋಧವಿತ್ತು. ಅದಕ್ಕೆ ಬಹಳ ಸ್ಪಷ್ಟ ಕಾರಣವಿತ್ತು. ಗೋವಿನ ಹೆಸರಲ್ಲಿ ದುಡ್ಡು ಬಾಚುವ ಹುನ್ನಾರದ ಬಗ್ಗೆ ಗೌರಿಗೆ ಸ್ಪಷ್ಟ ವಿರೋಧವಿತ್ತು. ಸ್ವತಃ ಗೌರಿ ತನ್ನ ತೋಟದಲ್ಲಿ ದನ ಸಾಕುತ್ತಿದ್ದರು ಎಂಬ ವಿಚಾರ ಅನೇಕರಿಗೆ ತಿಳಿದಿರಲಿಕ್ಕಿಲ್ಲ.

ಗೌರಿ ವಿರುದ್ಧ ಮುಸ್ಲಿಂ ಪಕ್ಷಪಾತದ ಆರೋಪ ಹೊರಿಸುವವರು ಇನ್ನೊಂದು ವಿಚಾರವನ್ನು ಗಮನಿಸಬೇಕು. ಗೌರಿ ಯಾವತ್ತೂ ವಿವೇಚನಾರಹಿತರಾಗಿ, ಸಾರಾಸಗಟಾಗಿ ಮುಸ್ಲಿಮರನ್ನು ಬೆಂಬಲಿಸಿಲ್ಲ. ಮುಸ್ಲಿಮರ ತಪ್ಪುಗಳನ್ನು ಖಡಾಖಂಡಿತವಾಗಿ ವಿರೋಧಿಸಿದ ಧಾರಾಳ ಉದಾಹರಣೆಗಳಿವೆ. ಸ್ವತಃ ನಾನು ದಾರುಲ್ ಉಲೂಂ ದೇವ್‍ಬಂದ್‍ನ ಕೆಲವು ಅನಪೇಕ್ಷಿತ ಮತ್ತು ಜನವಿರೋಧೀ ಫತ್ವಾಗಳನ್ನು ಖಂಡಿಸಿ ಬರೆದ ಲೇಖನಗಳನ್ನು ಗೌರಿ ಒಳ್ಳೆಯ ಪ್ರಾಶಸ್ತ್ಯ ನೀಡಿ ಪ್ರಕಟಿಸಿದ್ದಾರೆ. ದೆಹಲಿಯ ಜಾಮಿಯಾ ಮಸೀದಿಯ ಶಾಹಿ ಇಮಾಮ್ ಬುಖಾರಿಯ ಎಡಬಿಡಂಗಿತನದ ರಾಜಕೀಯ ಹೇಳಿಕೆಗಳನ್ನು, ಕೃತ್ಯಗಳನ್ನು ನಿರ್ದಾಕ್ಷಿಣ್ಯವಾಗಿ ಖಂಡಿಸಿ ಗೌರಿ ಬರೆದಿದ್ದಾರೆ. ಶಾಹಿ ಇಮಾಂ ಬುಖಾರಿ ಜಾಮಿಯಾ ಮಸೀದಿಯನ್ನು ಮತ್ತದರ ಸ್ವತ್ತನ್ನು ಪಿತ್ರಾರ್ಜಿತ ಸ್ವತ್ತಿನಂತೆ ಬಳಸುತ್ತಿದ್ದುದರ ವಿರುದ್ಧ ನಾನು ಬರೆದ ಲೇಖನಗಳನ್ನು ಗೌರಿ ಪ್ರಕಟಿಸಿದ್ದಾರೆ. ಮುಸ್ಲಿಂ ಪುರೋಹಿತಶಾಹಿತ್ವದ ಮಹಿಳಾ ವಿರೋಧೀ ನಿಲುವಿನ ವಿರುದ್ಧ ಗೌರಿ ತನ್ನ ‘ಕಂಡಹಾಗೆ’ ಸಂಪಾದಕೀಯ ಅಂಕಣದಲ್ಲಿ ಅನೇಕ ಬಾರಿ ಬರೆದದ್ದಿದೆ. ಗೌರಿ  ಮುಸ್ಲಿಂ ಮಹಿಳೆಯರ ಬುರ್ಖಾ ಧರಿಸುವ ಹಕ್ಕಿನ ಪರ ಬರೆದಿದ್ದರು. ಆದರೆ ಗೌರಿ  ಅಲ್ಲೆಲ್ಲೂ ಪುರುಷ ಪ್ರಧಾನ ನೀತಿಯನ್ನು ಬೆಂಬಲಿಸಿಲ್ಲ. ಅವರು “ಬುರ್ಖಾ ಆಯ್ಕೆ ಮತ್ತು ಸ್ವಾತಂತ್ರ್ಯದ ಪ್ರಶ್ನೆ” ಎಂಬ ನಿಲುವು ತಾಳಿದ್ದರು. ಅದೇ ಸಂದರ್ಭ ಗೌರಿ ಸಾರಾ ಅಬೂಬಕರ್ ಅವರ ಬುರ್ಖಾ ವಿರೋಧೀ ಬರಹಗಳನ್ನೂ ಪ್ರಕಟಿಸಿದ್ದರು.

2014 ರ ಡಿಸೆಂಬರ್ ತಿಂಗಳಲ್ಲಿ ಯಾದಗಿರಿ ಜಿಲ್ಲೆಯ ತಿಂಥಣಿಯಲ್ಲಿ ನಡೆದ ಕೋಮು ಸೌಹಾರ್ದ ವೇದಿಕೆಯ ಸಮಾವೇಶದಲ್ಲಿ ನನ್ನ ಜೊತೆ ನನ್ನ ಪತ್ನಿಯೂ ಭಾಗವಹಿಸಿದ್ದಳು. ಬುರ್ಖಾಧಾರಿಯಾಗಿದ್ದ ನನ್ನ ಪತ್ನಿಯ ಜೊತೆ ಬುರ್ಖಾ ಕಳಚುವಂತೆ ವಾದಿಸಿದ್ದರು. ಆಗ ಆಕೆ “ಇದು ನನ್ನ ಮೇಲೆ ಯಾರೂ ಹೇರಿದ್ದಲ್ಲ. ಇದು ನನ್ನ ಆಯ್ಕೆ ಮತ್ತು ನನ್ನ ಸ್ವಾತಂತ್ರ್ಯ” ಎಂದು ಗೌರಿಯ ಬಳಿ ವಾದಿಸಿದ್ದಳು.

ಗೌರಿಯನ್ನು ಮುಸ್ಲಿಂ ಪಕ್ಷಪಾತಿ ಎನ್ನುವವರು ಗೌರಿಯ ಬರಹಗಳನ್ನು ಪೂರ್ವಾಗ್ರಹ ರಹಿತವಾಗಿ ಓದಬೇಕು. ಅವರ ಕಂಡ ಹಾಗೆ ಸಂಪಾದಕೀಯ ಬರಹಗಳ ಮೂರು ಸಂಪುಟಗಳಿವೆ. ಅವುಗಳನ್ನು ಓದಿದಾಗ ಗೌರಕ್ಕ ಏನು ಎಂದು ತಿಳಿಯುತ್ತದೆ.


ಇದನ್ನೂ ಓದಿ: ಸತ್ಯವ ನುಡಿಯುವ ದಿಟ್ಟತೆಗೆ ಪ್ರತೀಕವಾದ ಗೌರಿ ಲಂಕೇಶ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....