ವ್ಯಕ್ತಿಯೊಬ್ಬರು ತಲೆ ಕೆಳಗೆ ಕಾಲು ಮೇಲೆ ಮಾಡಿ ಉಲ್ಟ ನಡಿಗೆಯ ಮೂಲಕ ಅಯೋಧ್ಯೆ ರಾಮನ ದರ್ಶನಕ್ಕೆ ತೆರಳಿದ್ದಾರೆ ಎಂಬ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಪ್ರಮುಖ ಮಾಧ್ಯಮಗಳಾದ ‘ಇಂಡಿಯಾ ಟಿವಿ, ಟಿವಿ9 ಭಾರತ್ ವರ್ಷ್’ ಕೂಡ ಈ ವಿಡಿಯೋವನ್ನು ಹಂಚಿಕೊಂಡು “ಅಯೋಧ್ಯೆಗೆ ತಲುಪುತ್ತಿರುವ ರಾಮ ಭಕ್ತರಲ್ಲಿ ಇವರೂ ಒಬ್ಬರು” ಎಂದು ಬರೆದುಕೊಂಡಿದೆ.
अयोध्या पहुंच रहे राम भक्तों के बीच एक राम भक्त ऐसा भी #Ayodhya #ViralVideo pic.twitter.com/Kc02EeD2lT
— TV9 Bharatvarsh (@TV9Bharatvarsh) January 16, 2024
ಹಲವು ಮಂದಿ ಸಾಮಾಜಿಕ ಜಾಲತಾಣ, ಯೂಟ್ಯೂಬ್ ಬಳಕೆದಾರರು ಈ ವಿಡಿಯೋವನ್ನು ಹಂಚಿಕೊಂಡು “ಕಾಲಿನ ಬದಲಾಗಿ ಕೈಯ್ಯಿಂದ ಅಯೋಧ್ಯೆಗೆ ತೆರಳುತ್ತಿರುವ ರಾಮಭಕ್ತ ಎಂದಿದ್ದಾರೆ.
ಫ್ಯಾಕ್ಟ್ಚೆಕ್ : ನಾನುಗೌರಿ.ಕಾಂ ಮೇಲಿನ ವೈರಲ್ ವಿಡಿಯೋದ ಸತ್ಯಾಸತ್ಯತೆ ಪರಿಶೀಲನೆ ನಡೆಸಿದೆ. ಮೊದಲಿಗೆ ನಾವು ಗೂಗಲ್ನಲ್ಲಿ “Devotee walking on hand”ಎಂದು ಹುಡುಕಾಡಿದ್ದೇವೆ. ಈ ವೇಳೆ 15 ಜುಲೈ 2023ರಂದು ಅಮರ್ ಉಜಾಲಾ ವೆಬ್ಸೈಟ್ ಈ ಕುರಿತು ಪ್ರಕಟಿಸಿರುವ ಸುದ್ದಿಯೊಂದು ದೊರೆತಿದೆ. ವರದಿಯ ಪ್ರಕಾರ, ಉಲ್ಟ ನಡಿಗೆ ಕೈಗೊಂಡ ವ್ಯಕ್ತಿ ಬಿಹಾರದ ಸಹರ್ಸಾ ಜಿಲ್ಲೆಯ ನಿವಾಸಿ ನಿಹಾಲ್ ಸಿಂಗ್. ಈತ ಜಾರ್ಖಂಡ್ನ ಬಸುಕಿನಾಥ್ನ ಬಾಬಾದಾಮ್ಗೆ ಉಲ್ಟ ನಡಿಗೆಯ ಮೂಲಕ ತೆರಳಿದ್ದಾರೆ. ನಿಹಾಲ್ ಸಿಂಗ್ ಸುಮಾರು 6 ವರ್ಷಗಳಿಂದ ಇದೇ ರೀತಿ ಉಲ್ಟ ನಡಿಗೆಯ ಮೂಲಕ ಬಾಬಾದಾಮ್ಗೆ ತೆರಳುತ್ತಿದ್ದಾರೆ. ಈ ಮೂಲಕ ಇದು ಅಯೋಧ್ಯೆಗೆ ತೆರಳಿದ ರಾಮ ಭಕ್ತನ ವಿಡಿಯೋ ಅಲ್ಲ ಎಂದು ತಿಳಿದು ಬಂದಿದೆ.
“ನಾವು ನಿಹಾಲ್ ಸಿಂಗ್ ಅವರನ್ನು ಫೋನ್ನಲ್ಲಿ ಸಂಪರ್ಕಿಸಿದ್ದೇವೆ. ಈ ವೇಳೆ ಅವರು ಬಿಹಾರದ ಸುಲ್ತಾನ್ಗಂಜ್ನಿಂದ 160 ಕಿಲೋಮೀಟರ್ಗಳಷ್ಟು ದೂರವನ್ನು ಕ್ರಮಿಸುವ ಮೂಲಕ ಜಾರ್ಖಂಡ್ನ ಬಸುಕಿನಾಥ್ಗೆ ತೆರಳುತ್ತಿರುವುದಾಗಿ ತಿಳಿಸಿದ್ದಾರೆ. ನಿಹಾಲ್ ಸಿಂಗ್ ಜುಲೈ 4 ರಂದು ಸಾವನ್ನ (ಶ್ರಾವಣ) ಮೊದಲ ದಿನದಂದು ತಮ್ಮ ಪ್ರಯಾಣವನ್ನು ಪ್ರಾರಂಭಿಸಿದ್ದು, ಇನ್ನೂ ಜಾರ್ಖಂಡ್ ಹಾದಿಯಲ್ಲಿದ್ದಾರೆ ಎಂದು ಫ್ಯಾಕ್ಟ್ಚೆಕ್ ವೆಬ್ಸೈಟ್ ನ್ಯೂಸ್ಚೆಕ್ಕರ್ ತಿಳಿಸಿದೆ.
ಬಿಹಾರದ ನಿಹಾಲ್ ಸಿಂಗ್ ಸುಲ್ತಾನ್ಗಂಜ್ನಿಂದ ಜಾರ್ಖಂಡ್ನ ದಿಯೋಘರ್ಗೆ 110 ಕಿಲೋಮೀಟರ್ ಪ್ರಯಾಣಿಸುತ್ತಿದ್ದಾರೆ. ಅಲ್ಲಿನ ಶಿವ ದೇವಸ್ಥಾನಕ್ಕೆ ಅವರು ತೆರಳುತ್ತಿದ್ದಾರೆ. ನಿಹಾಲ್ ಸಿಂಗ್ ಜೊತೆಗಿರುವ ವ್ಯಕ್ತಿಯ ಕೈಯ್ಯಲ್ಲಿರುವ ಬಾವುಟದಲ್ಲಿ ರಾಮನ ಬದಲು ಶಿವನ ಪೋಟೋ ಇರುವುದನ್ನು ಗಮನಿಸಬಹುದು ಎಂದು ದಿ ಕ್ವಿಂಟ್ ಹೇಳಿದೆ.
ಧ್ವಜದಲ್ಲಿ ಶಿವನ ಚಿತ್ರ
ದಿ ಕ್ವಿಂಟ್ ಫ್ಯಾಕ್ಟ್ಚೆಕ್ ಲಿಂಕ್
ಇದನ್ನೂ ಓದಿ: Fact Check: ತಮಿಳುನಾಡು ಸರ್ಕಾರ ಹಿಂದೂ ದೇವಸ್ಥಾನ ಧ್ವಂಸಗೊಳಿಸಿದ್ದು ನಿಜಾನಾ?