ಉತ್ತರ ಪ್ರದೇಶದ ಸೋನ್ಭದ್ರ ಜಿಲ್ಲೆಯಲ್ಲಿ ಭಾರತದ ಭೂವೈಜ್ಞಾನಿಕ ಸಮೀಕ್ಷೆ (ಜಿಎಸ್ಐ) ಸುಮಾರು 3,000 ಟನ್ಗಳಷ್ಟು ಮತ್ತು 12 ಲಕ್ಷ ಕೋಟಿ ರೂ.ಗಳ ಚಿನ್ನದ ನಿಕ್ಷೇಪವನ್ನು ಪತ್ತೆ ಮಾಡಿದೆ, ಇದು ಭಾರತದ ಪ್ರಸ್ತುತ ಇರುವ ಅಮೂಲ್ಯ ಲೋಹಕ್ಕಿಂತ ಐದು ಪಟ್ಟು ಹೆಚ್ಚಾಗಿದೆ ಎಂಬುದು ಸುಳ್ಳು ಸುದ್ದಿಯೆಂದು ತಿಳಿದುಬಂದಿದೆ.
ಇಲ್ಲಿನ ಸೋನ್ ಪಹಡಿ ಮತ್ತು ಹಾರ್ಡಿ ಪ್ರದೇಶಗಳಲ್ಲಿ ಭಾರೀ ಪ್ರಮಾಣದ ಚಿನ್ನದ ನಿಕ್ಷೇಪ ಪತ್ತೆಯಾಗಿದೆ ಎಂದು ಜಿಲ್ಲಾ ಗಣಿಗಾರಿಕೆ ಅಧಿಕಾರಿ ಕೆ.ಕೆ.ರೈ ಶುಕ್ರವಾರ ತಿಳಿಸಿದ್ದರು. ಅದನ್ನು ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ (ಜಿಎಸ್ಐ) ತಿರಸ್ಕರಿಸಿದ್ದು ಅಂದಾಜು ಎಂದರೆ ಸಾಧಾರಣ ಗುಣಮಟ್ಟದ ಸುಮಾರು 160 ಕೆಜಿ ಚಿನ್ನ ಮಾತ್ರ ಲಭ್ಯವಾಗಲಿದೆ ಎಂದು ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ.
ಈ ಮೊದಲು “1992-93ರಲ್ಲಿ ಭಾರತದ ಭೂವೈಜ್ಞಾನಿಕ ಸಮೀಕ್ಷೆಯಿಂದ ಸೋನ್ಭದ್ರದಲ್ಲಿ ಚಿನ್ನದ ನಿಕ್ಷೇಪವನ್ನು ಕಂಡುಹಿಡಿಯುವ ಕೆಲಸವನ್ನು ಪ್ರಾರಂಭಿಸಲಾಯಿತು. ಈಗ ಸೋನ್ ಪಹಡಿಯಲ್ಲಿ ಸುಮಾರು 2,943.26 ಟನ್ ಹಾಗೂ ಹಾರ್ಡಿ ಬ್ಲಾಕ್ನಲ್ಲಿ ಸುಮಾರು 646.16 ಕಿಲೋಗ್ರಾಂಗಳಷ್ಟು ಚಿನ್ನ ಪತ್ತೆಯಾಗಿದೆ. ಇ-ಟೆಂಡರಿಂಗ್ ಮೂಲಕ ಈ ಬ್ಲಾಕ್ಗಳ ಹರಾಜು ಶೀಘ್ರದಲ್ಲೇ ಪ್ರಾರಂಭವಾಗಲಿದೆ” ಎಂದು ಅಧಿಕಾರಿಗಳು ಹೇಳಿದ್ದರು.
ಆದರೆ ಕಳೆದ ಒಂದು ವಾರದಿಂದ ಚಾಲ್ತಿಯಲ್ಲಿದ್ದ ಈ ವಿಷಯವನ್ನು ಜಿಎಸ್ಐನ ಕೋಲ್ಕತ್ತಾದ ಪ್ರಧಾನ ಕಚೇರಿಯು ಸ್ಪಷ್ಟವಾಗಿ ತಿರಸ್ಕರಿಸಿದೆ. ಉತ್ತರ ಪ್ರದೇಶದ ಗಣಿಗಾರಿಕೆ ಇಲಾಖೆ ಮತ್ತು ಸೋನ್ಭದ್ರದ ಸಂಗ್ರಾಹಕ ನಡುವೆ ಕೆಲವು ಪತ್ರವ್ಯವಹಾರಗಳು ಸೋರಿಕೆಯಾದ ನಂತರ ಈ ಗೊಂದಲ ಆರಂಭವಾಗಿದೆ. ಉತ್ತರ ಪ್ರದೇಶದ ಗಣಿ ಮತ್ತು ಖನಿಜಗಳ ನಿರ್ದೇಶನಾಲಯದಿಂದ (ಗಣಿಗಾರಿಕೆ ನಿರ್ದೇಶನಾಲಯ) ಈ ವರ್ಷದ ಜನವರಿ 31ರ ಪತ್ರವೊಂದು ಈ ಸುಳ್ಳು ಸುದ್ದಿ ಹರಡುವಿಕೆಗೆ ಕಾರಣವಾಗಿದೆ ಎಂದು ಜಿಎಸ್ಐ ತನ್ನ ಹೇಳಿಕೆಯಲ್ಲಿ ಉಲ್ಲೇಖಿಸಿದೆ.
ಜನವರಿ 31ರ ಈ ಪತ್ರವು ಫೆಬ್ರವರಿ 19 ರಂದು ಸೋನ್ಭದ್ರದ ಸ್ಥಳೀಯ ಮಾಧ್ಯಮಗಳಿಗೆ ಸೋರಿಕೆಯಾದಾಗ ಸೋನ್ಭದ್ರ ಚಿನ್ನದಿಂದ ತುಂಬಿದೆ ಎಂಬ ಸುದ್ದಿ ದೇಶಾದ್ಯಂತ ಹರಡಿತು. ಈ ಜಿಲ್ಲೆಯಲ್ಲಿ 3000 ಟನ್ ಚಿನ್ನ ಸಿಗುತ್ತದೆ ಎಂಬ ಸುದ್ದಿಯ ನಂತರ, ಟಿವಿ ಚಾನೆಲ್ಗಳು ಭಾರತ ಮತ್ತೆ ಚಿನ್ನದ ಹಕ್ಕಿಯಾಗಲಿದೆ ಎಂಬಂತಹ ವಾತಾವರಣವನ್ನು ಸೃಷ್ಟಿಸಲು ಪ್ರಾರಂಭಿಸಿದ್ದರು.
ವಿಶ್ವ ಚಿನ್ನದ ಮಂಡಳಿಯ ಪ್ರಕಾರ, ಭಾರತದಲ್ಲಿ ಪ್ರಸ್ತುತ 626 ಟನ್ ಚಿನ್ನದ ಸಂಗ್ರಹವಿದೆ. ಹೊಸದಾಗಿ ಸಿಕ್ಕಿರುವ ಈ ಮೀಸಲು ಚಿನ್ನ ಆ ಮೊತ್ತಕ್ಕಿಂತ ಐದು ಪಟ್ಟು ಹೆಚ್ಚು ಮತ್ತು ಸುಮಾರು 12 ಲಕ್ಷ ಕೋಟಿ ರೂ ಬೆಲೆ ಬಾಳುತ್ತದೆ ಎಂದೆಲ್ಲಾ ಅಂದಾಜಿಸಲಾಗಿತ್ತು.
ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ್ ಮೌರ್ಯ ಕೂಡ ಇದನ್ನು ದೇವರ ಆಶೀರ್ವಾದ ಎಂದು ಕರೆದಿದ್ದರು. ಆದರೆ ಇದು ಸುಳ್ಳು ಸುದ್ದಿಯೆಂದು ಜಿಎಸ್ಐನ ಕೋಲ್ಕತಾ ಕೇಂದ್ರ ಕಚೇರಿ ಶನಿವಾರ ಪತ್ರಿಕಾ ಪ್ರಕಟಣೆ ಹೊರಡಿಸಿ ಸ್ಪಷ್ಟನೆ ನೀಡಿದೆ.
ಉತ್ತರ ಪ್ರದೇಶದ ಎರಡನೇ ಅತಿದೊಡ್ಡ ಜಿಲ್ಲೆ ಸೋನ್ಭದ್ರ – ನಾಲ್ಕು ರಾಜ್ಯಗಳೊಂದಿಗೆ ತನ್ನ ಗಡಿಯನ್ನು ಹಂಚಿಕೊಂಡಿರುವ ಏಕೈಕ ಜಿಲ್ಲೆಯಾಗಿದೆ. ಪಶ್ಚಿಮಕ್ಕೆ ಮಧ್ಯಪ್ರದೇಶ, ದಕ್ಷಿಣಕ್ಕೆ ಚತ್ತೀಸ್ಘಡ, ಆಗ್ನೇಯಕ್ಕೆ ಜಾರ್ಖಂಡ್ ಮತ್ತು ಪೂರ್ವಕ್ಕೆ ಬಿಹಾರವಿದೆ.