ಜಮ್ಮು ವಾಯುಪಡೆ ವಿಮಾನ ನಿಲ್ಧಾಣದಲ್ಲಿ ಭಾನುವಾರ ಮಧ್ಯರಾತ್ರಿ ನಡೆದಿರುವ ಸ್ಫೋಟವು ಭಾರತದಲ್ಲಿ ಮೊಟ್ಟ ಮೊದಲ ಬಾರಿ ನಡೆದಿರುವ ಹೊಸ ಮಾದರಿಯ ಭಯೋತ್ಪಾದಕ ದಾಳಿಯಾಗಿದೆ. ಇದುವರೆಗೆ ದೇಶದ ವಿವಿಧ ಭಾಗಗಳಲ್ಲಿ ಬೇರೆ ಬೇರೆ ರೀತಿಯ ಭಯೋತ್ಪಾದಕ ದಾಳಿಗಳು ನಡೆದಿವೆ. ಸುಧಾರಿತ ಸ್ಫೋಟಕಗಳು, ಗ್ರನೈಡ್ ದಾಳಿ, ಮುಂಬೈ ಮಾದರಿಯ ಅಟ್ಯಾಕ್ಗಳು ಕೂಡ ನಡೆದಿವೆ. ಈ ಮಾದರಿಯ ಸಾಕಷ್ಟು ಸಂಭವನೀಯ ಭಯೋತ್ಪಾದಕ ದಾಳಿಯನ್ನು ಭಾರತೀಯ ತನಿಖಾ ಸಂಸ್ಥೆಗಳು ಮತ್ತು ಭದ್ರತಾಪಡೆಗಳು ತಡೆದಿವೆ. ಜಮ್ಮು ವಿಮಾನ ನಿಲ್ಧಾಣದಲ್ಲಿ ಮೊನ್ನೆ ನಡೆದಿರುವ ದಾಳಿ ಭದ್ರತಾ ಸಂಸ್ಥೆಗಳಲ್ಲಿ ಆತಂಕವನ್ನು ಹುಟ್ಟು ಹಾಕಿದೆ. ಡ್ರೋಣ್ಗಳನ್ನು ಬಳಸಿ ಇದುವರೆಗೆ ಭಾರತದಲ್ಲಿ ದಾಳಿಗಳು ನಡೆದಿರಲಿಲ್ಲ. ಮೊಟ್ಟಮೊದಲ ಬಾರಿಗೆ ಜಮ್ಮುವಿನ ಇಂಡಿಯನ್ ಏರ್ ಫೋರ್ಸ್ ವಿಮಾನ ನಿಲ್ಧಾಣದಲ್ಲಿ ಉಗ್ರರು ಡ್ರೋಣ್ ಉಪಕರಣವನ್ನು ಬಳಸಿ ವಿಮಾನ ನಿಲ್ಧಾಣದ ಮೇಲೆ ಸ್ಫೋಟಕವನ್ನು ಎಸೆದಿದ್ದಾರೆ.
ಡ್ರೋಣ್ ಮೂಲಕ ದಾಳಿಯನ್ನು ನಡೆಸಲಾಗಿದೆ ಎಂಬುದನ್ನು ಅಂದಾಜಿಸಲಾಗಿದೆಯೇ ಹೊರತು ಖಚಿತವಾಗಿ ಹೇಳಿಲ್ಲ. ವೈಮಾನಿಕ ವಾಹನದಿಂದ ವಿಮಾನ ನಿಲ್ಧಾಣದ ಮೇಲೆ ಬಾಂಬ್ ಎಸೆದಿರುವುದಂತು ಸ್ಪಷ್ಟವಾಗಿದೆ. ವಿಮಾನ ನಿಲ್ಧಾಣದ ಕಣ್ಗಾವಲು ವ್ಯವಸ್ಥೆಯನ್ನು ತಪ್ಪಿಸಿ ಈ ದಾಳಿ ನಡೆದಿರುವುದು ದೇಶದ ಭದ್ರತಾ ವ್ಯವಸ್ಥೆಗೆ ಎಚ್ಚರಿಕೆಯ ಕರೆಗಂಟೆಯಾಗಿದೆ ಎಂದು ಭಾರತೀಯ ವಾಯುಸೇನೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜಮ್ಮು ವಿಮಾನ ನಿಲ್ಧಾಣವು ಭಾರತ ಮತ್ತು ಪಾಕಿಸ್ತಾನ ಅಂತರಾಷ್ಟಿಯ ಗಡಿರೇಖೆಯಿಂದ ಕೇವಲ 14 ಕಿಲೋಮಿಟರ್ ದೂರದಲ್ಲಿದೆ. ಪಾಕಿಸ್ತಾನದ ನೆಲದಿಂದಲೂ ಡ್ರೋಣ್ ಮೂಲಕ ದಾಳಿ ನಡೆಸಲಾಗಿದೆಯೇ ಎಂಬುದನ್ನು ತನಿಖೆ ನಡೆಸುತ್ತಿದ್ದೇವೆ. ಪಾಕಿಸ್ತಾನದಿಂದ ಇದುವರೆಗೆ ಭಾರತದ ಗಡಿಯೊಳಗೆ 12 ಕಿಲೋಮೀಟರ್ ದೂರದವರೆಗೆ ಡ್ರೋಣ್ಗಳು ಬಂದಿವೆ. ಡ್ರೋಣ್ ಮೂಲಕ ದಾಳಿ ನಡೆದಿರುವುದೇ ಆದರೆ ಭಾರತದ ಭದ್ರತಾ ವ್ಯವಸ್ಥೆಗೆ ಹೊಸ ಆತಂಕವೊಂದು ಎದುರಾಗಲಿದೆ.
ಸ್ಫೋಟಕವೊಂದು ವಿಮಾನ ನಿಲ್ಧಾಣದ ಛಾವಣಿಯ ಮೇಲೆ ಬಿದ್ದು ಸ್ಫೋಟಗೊಂಡಿದ್ದು ಇನ್ನೊಂದು ಸ್ಫೋಟಕ ವಿಮಾನ ನಿಲ್ಧಾಣದ ಖಾಲಿ ಸ್ಥಳದಲ್ಲಿ ಸ್ಫೋಟವಾಗಿದೆ. ಸ್ಫೋಟದ ತೀವೃತೆ ಪ್ರಬಲವಾಗಿದ್ದು ಸುಮಾರು 1 ಕಿಲೋಮೀಟರ್ ದೂರದವರೆಗೂ ಸ್ಫೋಟದ ಶಬ್ಧ ಕೇಳಿಸಿದೆ. ಸ್ಫೋಟದ ಶಬ್ಧ ಕೆಲಹೊತ್ತು ಸ್ಥಳೀಯರಲ್ಲಿ ಆತಂಕವನ್ನು ಸೃಷ್ಟಿಸಿತ್ತು.
ಇದನ್ನೂ ಓದಿ : ಮಧ್ಯಪ್ರದೇಶ: ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರ ಎಸಗಿದ ಆರ್ಎಸ್ಎಸ್ ಮುಖಂಡ, ಬಂಧನ
ಭಾರತೀಯ ವಾಯುಸೇನೆಯ ಇಬ್ಬರು ಅಧಿಕಾರಿಗಳು ಸ್ಫೋಟದಲ್ಲಿ ಗಾಯಗೊಂಡಿದ್ದು ಗಂಭೀರ ಪ್ರಮಾಣದ ಅನಾಹುತಗಳಾಗಿಲ್ಲ. ವಾಯುಸೇನೆಯ ಯಾವ ಸಿಬ್ಬಂದಿ ಕೂಡ ಸ್ಫೋಟ ಹೇಗಾಯಿತು ಎಂಬುದನ್ನು ನೋಡಿಲ್ಲ ಎಂದು ವಾಯುಸೇನೆಯ ಮೂಲಗಳು ತಿಳಿಸಿವೆ. ಸ್ಫೋಟದ ಶಬ್ಧ ಕೇಳಿ ಹೊರ ಬಂದು ನೋಡಿದ ಸಂದರ್ಭದಲ್ಲಿ ಮತ್ತೊಂದು ಸ್ಫೋಟ ನಡೆಯಿತು. ಎರಡನೇ ಸ್ಫೋಟದಲ್ಲಿ ಚಿಕ್ಕ ಗಾಯಗಳಾಗಿವೆ ಎಂದು ಸ್ಫೋಟದಲ್ಲಿ ಗಾಯಗೊಂಡ ಭಾರತೀಯ ವಾಯುಸೇನೆಯ ಅಧಿಕಾರಿಗಳು ತಿಳಿಸಿದ್ದಾರೆ.
ಲಷ್ಕರೆ ತೋಯ್ಬಾ ಉಗ್ರ ಸಂಘಟನೆಗೆ ಸೇರಿದ ವ್ಯಕ್ತಿಯಿಂದ ಐದು ಕೇಜಿ ಸ್ಫೋಟಕಗಳನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರು ವಶಪಡಿಸಿಕೊಂಡ ಕೆಲವೇ ಗಂಟೆಗಳಲ್ಲಿ ಈ ಸ್ಫೋಟ ನಡೆದಿದೆ. ಪಾಕಿಸ್ತಾನ ಮೂಲದ ಭಯೋತ್ಪಾದಕ ಜಮ್ಮುವಿನ ಜನನಿಬಿಡ ಪ್ರದೇಶದಲ್ಲಿ ಬಾಂಬ್ ದಾಳಿಯನ್ನು ನೆಸಲು ಉದ್ಧೇಶಿಸಿದ್ದ. ಬಂಧಿತ ಶಂಕಿತ ಉಗ್ರನ ವಿಚಾರಣೆ ಮುಂದುವರೆದಿದೆ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಮುಖೇಶ್ ಸಿಂಗ್ ತಿಳಿಸಿದ್ದಾರೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಜಮ್ಮು ಕಾಶ್ಮೀರದ ಪ್ರಮುಖ ರಾಜಕೀಯ ನಾಯಕರೊಂದಿಗೆ ದೆಹಲಿಯಲ್ಲಿ ಸಭೆ ನಡೆಸಿದ 2 ದಿನಗಳಲ್ಲಿ ಜಮ್ಮು ವಿಮಾನ ನಿಲ್ಧಾಣದ ಮೇಲೆ ಭಯೋತ್ಪಾದಕ ದಾಳಿಗಳು ನಡೆದಿವೆ. 2019ರ ಆಗಸ್ಟ್ ನಲ್ಲಿ ಕಾಶ್ಮೀರಕ್ಕೆ ನೀಡಿದ್ದ ಸ್ವಾಯತ್ತತೆಯನ್ನು ಕೇಂದ್ರಸರ್ಕಾರ ಹಿಂಪಡೆದ ನಂತರ ಕಾಶ್ಮೀರದ ನಾಯಕರೊಂದಿಗೆ ನಡೆಯುತ್ತಿರುವ ಮೊಟ್ಟ ಮೊದಲ ರಾಜಕೀಯ ಮಾತುಕತೆ ಇದಾಗಿದೆ. ಕಾಶ್ಮೀರದೊಂದಿಗಿನ ಹೃದಯದ ಅಂತರ ಮತ್ತು ದಿಲ್ಲಿಯ ಅಂತರವನ್ನು ದೂರ ಮಾಡುವ ಪ್ರಯತ್ನ ಇದಾಗಿದೆ ಎಂದು ಪ್ರಧಾನಿ ಮೋದಿ ಜಮ್ಮು ಕಾಶ್ಮೀರ ನಾಯಕರೊಂದಿಗಿನ ಶನಿವಾರದ ತಮ್ಮ ಭೇಟಿಯನ್ನು ಬಣ್ಣಿಸಿದ್ದರು.
ಭಾರತೀಯ ವಾಯುಸೇನೆ ಭಾನುವಾರದ ದಾಳಿ ಕುರಿತು ಹೇಳಿಕೆಗಳನ್ನು ಬಿಡುಗಡೆ ಮಾಡಿದ್ದು ಸ್ಫೋಟದ ಹಿನ್ನಲೆ ಕುರಿತು ಯಾವುದೇ ಹೇಳಿಕೆ ನೀಡಿಲ್ಲ. ಏಕ ಮಹಡಿ ಕಟ್ಟಡದ ಪಕ್ಕದಲ್ಲಿ ನಿಲ್ಲಿಸಲಾಗಿದ್ದ ಹೆಲಿಕ್ಯಾಪ್ಟರ್ ಉಗ್ರರ ಟಾರ್ಗೇಟ್ ಆಗಿತ್ತು. ಕೆಲವೇ ಅಡಿಗಳ ಅಂತರದಲ್ಲಿ ದಾಳಿಯ ಗುರಿ ತಪ್ಪಿದೆ ಎಂದು ಇಂಡಿಯನ್ ಏರ್ಫೋರ್ಸನ ಹಿರಿಯ ಅಧಿಕಾರಿಯೊಬ್ಬರು ಸ್ಫೋಟದ ಕುರಿತು ಮಾಹಿತಿ ನೀಡಿದ್ದಾರೆ.
2020 ರ ಜೂನ್ 20 ರಂದು ಗಡಿ ಭದ್ರತಾಪಡೆಯು ಭಾರತ ಪಾಕಿಸ್ತಾನ ಗಡಿಯಲ್ಲಿ ಸ್ಫೋಟಕವನ್ನು ಹೊತ್ತ ಡ್ರೋಣ್ ಒಂದನ್ನು ಹೊಡೆದುರುಳಿಸಿತ್ತು. ಆ ಡ್ರೋಣ್ ಭಾರತದ ಗಡಿಯೊಳಗಿರುವ ಅಲಿ ಬಾಯ್ ಪ್ರದೇಶವನ್ನು ಗುರಿಯಾಗಿಸಿಕೊಂಡು ಹಾರಿಸಲಾಗಿತ್ತು. ಕಳೆದ ಕೆಲವು ತಿಂಗಳುಗಳ ಹಿಂದೆ ಪಿಐಎ ಎಂದು ಬರೆಯಲಾದ ಕೆಲವು ಬಲೂನುಗಳು ಜಮ್ಮು ಭಾಗದಲ್ಲಿ ಹಾರುತ್ತಿದ್ದು ಪೊಲೀಸರು ಅದನ್ನು ವಶಪಡಿಸಿಕೊಂಡಿದ್ದಾರೆ. ಪಾಕಿಸ್ತಾನ ಭಾಗದಿಂದ ಹಾರಿಸಲಾದ ಈ ಬಲೂನುಗಳು ಭಾರತದ ಗಡಿ ಪ್ರದೇಶದ ಒಳಗೆ ಯಶಸ್ವಿಯಾಗಿ ಹಾರಾಟ ನಡೆಸಿದ್ದವು ಎಂದು ಜಮ್ಮು ಪೊಲೀಸರು ತಿಳಿಸಿದ್ದಾರೆ.
ಸ್ಫೋಟಕ್ಕೆ ಸಂಬಂಧಿಸಿದಂತೆ UAPA ಕಾಯ್ದೆಯ ಸೆಕ್ಷನ್ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ. ರಾಷ್ಟ್ರೀಯ ತನಿಖಾ ದಳ ( NIA) ಮತ್ತು NSG ಕಮಾಂಡೋಗಳು ಸ್ಫೋಟ ನಡೆದ ಸ್ಥಳವನ್ನು ತಮ್ಮ ನಿಯಂತ್ರಣಕ್ಕೆ ಪಡೆದು ಹೆಚ್ಚಿನ ತನಿಖೆಯನ್ನು ನಡೆಸುತ್ತಿದ್ದಾರೆ.
ಪಶ್ಮಿಮ ವಿಭಾಗದ ವಾಯುಸೇನೆ ಕಮಾಂಡರ್ ಏರ್ ಮಾರ್ಷಲ್ ವಿ ಆರ್ ಚೌಧರಿ ಅವರು ಘಟನೆಯ ಸ್ಥಳಕ್ಕೆ ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ. ಜಮ್ಮು ಕಾಶ್ಮೀರ ಗಡಿಯುದ್ದಕ್ಕೂ ಭೂಸೇನೆ ಮತ್ತು ವಾಯುಸೇನೆಗಳು ಕಟ್ಟೆಚ್ಚರವನ್ನು ವಹಿಸಿವೆ. ಬಾಂಬ್ ನಿಷ್ಕ್ರಿಯದಳದ ತಜ್ಞರನ್ನು ಸೂಕ್ಷ್ಮ ಪ್ರದೇಶಗಳಲ್ಲಿ ನಿಯೋಜಿಸಲಾಗಿದೆ ಎಂದು ಭಾರತ ಭದ್ರತಾಪಡೆಯ ಮೂಲಗಳು ತಿಳಿಸಿವೆ.
ಇದನ್ನೂ ಓದಿ : ದಲಿತ ನಾಯಕ ರಾಮ್ ವಿಲಾಸ್ ಪಾಸ್ವನ್ ಜನ್ಮ ದಿನಾಚರಣೆಗೆ ಮುಂದಾದ RJD: ತೇಜಸ್ವಿ ಯಾದವ್ ಹೊಸ ಹೆಜ್ಜೆ