ಜನವರಿ 8ರ ಭಾನುವಾರದಂದು ಬೆಂಗಳೂರಿನ ಕೆ.ಆರ್ ಸರ್ಕಲ್ ಬಳಿಯ ಅಲುಮ್ನಿ ಅಸೋಸಿಯೇಷನ್ ಆವರಣದಲ್ಲಿ ಜನಸಾಹಿತ್ಯ ಸಮ್ಮೇಳನ ನಡೆಯಲಿದೆ. ಕನ್ನಡ ನಾಡು-ನುಡಿ ಒಳಗೊಳ್ಳುವ ಪರಂಪರೆಯ ಹೊರತು ಯಾರನ್ನು, ಯಾವುದನ್ನು ಹೊರಗಿಡುವ ಸಂಕುಚಿತ ಮನಸ್ಥಿತಿಯಲ್ಲ ಎಂಬುದನ್ನು ಸಾರಲು ನಡೆಯುತ್ತಿರುವ ಸಮ್ಮೇಳನಕ್ಕೆ ‘ಸಂತ ಶಿಶುನಾಳ ಶರೀಫ ಮತ್ತು ಗುರು ಗೋವಿಂದ ಭಟ್ಟ’ ಸಭಾಂಗಣವೆಂದು ಹೆಸರಿಡಲಾಗಿದೆ. ಇತ್ತೀಚಿಗೆ ನಿಧನರಾದ ಖ್ಯಾತ ಪತ್ರಕರ್ತರು ಮತ್ತು ಲೇಖಕರಾದ ಎಂ.ಎಸ್ ಪ್ರಭಾಕರರವರ ನೆನಪಿನಲ್ಲಿ ‘ಕಾಮರೂಪಿ’ ದ್ವಾರ ಸಿದ್ಧಪಡಿಸಲಾಗಿದೆ.
ಭಾನುವಾರ ಬೆಳಿಗ್ಗೆ 9 ಗಂಟೆಗೆ ಕನ್ನಡ ಧ್ಜಜಾರೋಹಣದೊಂದಿಗೆ ಸಮ್ಮೇಳನಕ್ಕೆ ಚಾಲನೆ ನೀಡಲಾಗುತ್ತದೆ. ಮುಖ್ಯ ಅತಿಥಿಗಳಾಗಿ ಕನ್ನಡ ಹೋರಾಟಗಾರರಾದ ವಾಟಾಳ್ ನಾಗರಾಜ್, ಶಿವರಾಮೇಗೌಡ ಮತ್ತು ಬಿ.ಎನ್ ಜಗದೀಶರವರು ಪಾಲ್ಗೊಳ್ಳಲಿದ್ದಾರೆ. 9.30ಕ್ಕೆ ‘ಬಂಡಾಯದ ಗೆರೆಗಳು: ವ್ಯಂಗ್ಯಚಿತ್ರ ಮತ್ತು ಪೋಸ್ಟರ್ಗಳ ಪ್ರದರ್ಶನ’ ಕಾರ್ಯಕ್ರಮವನ್ನು ಹಿರಿಯ ರಂಗಕರ್ಮಿಗಳಾದ ರಘುನಂದನರವರು ಉದ್ಘಾಟಿಸಲಿದ್ದಾರೆ. ಖ್ಯಾತ ವ್ಯಂಗ್ಯಚಿತ್ರಕಾರರಾದ ಪಿ.ಮಹಮದ್, ದಿನೇಶ್ ಕುಕ್ಕುಜಡ್ಕ, ಸತೀಶ್ ಆಚಾರ್ಯ, ಪಂಜು ಗಂಗೊಳ್ಳಿ, ಬಾದಲ್ ನಂಜುಂಡಸ್ವಾಮಿ, ಚಂದ್ರಶೇಖರ್ ಶೆಟ್ಟಿ ಭಾಗವಹಿಸಲಿದ್ದಾರೆ. ಚಿತ್ರಕಲಾವಿದರಾದ ಚೇತನ್ ಪುತ್ತೂರು, ಸರೋವರ್ ಬೆಂಕಿಕೆರೆ, ಉದಯ ಗಾಂವ್ಕರ್, ನವೀನ್ ಹಾಸನ, ವಿಶ್ವವಿನ್ಯಾಸ, ಸುನೈಫ್, ರೂಮಿ ಹರೀಶ್, ರೂಪಶ್ರೀ ಕಲ್ಲಿಗನೂರು, ಚರಿತಾ ಮೈಸೂರು, ನಭಾ ಒಕ್ಕುಂದ, ಸನತ್ ಕುಮಾರ್, ರಾಜೇಂದ್ರ ಪ್ರಸಾದ್ ಮತ್ತು ಸಾತ್ವಿಕ್ ನೆಲ್ಲಿತೀರ್ಥ ಉಪಸ್ಥಿತರಿರುತ್ತಾರೆ.
ಬೆಳಿಗ್ಗೆ 10 ಗಂಟೆಗೆ ಚಂಪಾ ವೇದಿಕೆಯಲ್ಲಿ ಜನಸಾಹಿತ್ಯ ಸಮ್ಮೇಳನದ ಉದ್ಘಾಟನೆ ನಡೆಯಲಿದೆ. ಕವಿಗಳು ಮತ್ತು ಲೇಖಕರಾದ ಡಾ.ಮೂಡ್ನಾಕೂಡು ಚಿನ್ನಸ್ವಾಮಿಯವರು ಉದ್ಟಾಟಿಸಲಿದ್ದು, ಲೇಖಕಿ ಬಾನು ಮುಶ್ತಾಕ್ರವರು ಅಧ್ಯಕ್ಷತೆ ವಹಿಸಲಿದ್ದಾರೆ. ಹಿರಿಯ ಚಿಂತಕರಾದ ಪುರುಷೋತ್ತಮ ಬಿಳಿಮಲೆಯವರು ದಿಕ್ಸೂಚಿ ಭಾಷಣ ಮಾಡಿದರೆ, ಮುಖ್ಯ ಅತಿಥಿಗಳಾಗಿ ಪ್ರೊ.ಎಸ್.ಜಾಫೆಟ್, ಜಾಣಗೆರೆ ವೆಂಕಟರಾಮಯ್ಯ, ಚೆನ್ನಿ ಜನಾರ್ದನ್, ಅಗ್ನಿಶ್ರೀಧರ್, ಅಕ್ಕೈ ಪದ್ಮಶಾಲಿ, ವಡ್ಡಗೆರೆ ನಾಗರಾಜಯ್ಯ ಭಾಗವಹಿಸಲಿದ್ದಾರೆ. ಭೈರಪ್ಪ ಹರೀಶ್ ಕುಮಾರ್ರವರು ಪ್ರಸ್ತಾವಿಕ ಮಾತುಗಳನ್ನಾಡಲಿದ್ದಾರೆ.
ಮಧ್ಯಾಹ್ನ 12.30 ರಿಂದ 1.30ರವರೆಗೆ ನಡೆಯುವ ಸಾಹಿತ್ಯ, ಪ್ರಭುತ್ವ ಮತ್ತು ಬಹುತ್ವದ ಕುರಿತ ವಿಚಾರ ಗೋಷ್ಠಿಯಲ್ಲಿ ಡಾ. ಮಹಮ್ಮದ್ ಮುಸ್ತಾಫಾ ವಿಷಯ ಮಂಡನೆ ಮಾಡಿದರೆ ಅಕ್ಷತಾ ಕೆ ಸಿಯವರು ಪ್ರತಿಕ್ರಿಯೆ ನೀಡಲಿದ್ದಾರೆ. ಕನ್ನಡ ನಾಡು ನುಡಿ – ಟಿಪ್ಪು ಕೊಡುಗೆಗಳು ವಿಷಯದ ಕುರಿತು ಟಿ ಗುರುರಾಜ್ ವಿಷಯ ಮಂಡನೆ ಮಾಡಿದರೆ ಕಲೀಂ ಪಾಷಾರವರು ಪ್ರತಿಕ್ರಿಯೆ ನೀಡಲಿದ್ದಾರೆ. ಇದೇ ಸಂದರ್ಭದಲ್ಲಿ ಲಿಂಗದೇವರು ಹಳೆಮನೆ ಸಂಪಾದಕತ್ವದ ‘ಧೀರ ಟಿಪ್ಪು ಲಾವಣಿಗಳು ಮತ್ತು ಟಿ ಗುರುರಾಜ್ ಬರೆದಿರುವ ‘ನಮ್ಮ ಟಿಪ್ಪು – ವದಂತಿ ಮತ್ತು ಸತ್ಯ ಸಂಗತಿ’ ಪುಸ್ತಕಗಳ ಬಿಡುಗಡೆ ನಡೆಯಲಿದೆ. ನಾ ದಿವಾಕರ್ರವರು ಗೋಷ್ಟಿಯ ಅಧ್ಯಕ್ಷತೆ ವಹಿಸಲಿದ್ದಾರೆ.
ಮಧ್ಯಾಹ್ನ 1.30 ರಿಂದ 2:00ರವರೆ ಆಹಾರ ಗೋಷ್ಠಿ ನಡೆಯಲಿದೆ. ಆಹಾರದ ಮೇಲಿನ ರಾಜಕಾರಣ ಮತ್ತು ದೌರ್ಜನ್ಯ ವಿಷಯದ ಕುರಿತು ರಂಗನಾಥ ಕಂಟನಕುಂಟೆ ಮತ್ತು ಪಲ್ಲವಿ ಇಡೂರುರವರು ವಿಷಯ ಮಂಡಿಸುತ್ತಾರೆ. ಊಟದ ಕೌಂಟರ್ನಲ್ಲಿ ಬಹುತ್ವವನ್ನು ಸಾರು ಉಪ್ಪಿನಕಾಯಿ, ತರಕಾರಿ ಪಲ್ಯ, ಅನ್ನ, ಮೀನು ಸಾರು, ತರಕಾರಿ ಸಾಂಬರ್, ಗೀ ರೈಸ್, ದಾಲ್, ಚಿಕನ್ ಕಬಾಬ್ ಮತ್ತು ಪಾಯಸ ಇರುವ ಊಟದ ವ್ಯವಸ್ಥೆ ಮಾಡಲಾಗುವುದು ಎಂದು ವ್ಯವಸ್ಥಾಪಕರು ತಿಳಿಸಿದ್ದಾರೆ.
ಮದ್ಯಾಹ್ನ 2:00 ರಿಂದ 3:00ವರೆಗೆ ಕವಿಗೋಷ್ಠಿ ನಡೆಯಲಿದ್ದು, ಬಂಜಗೆರೆ ಜಯಪ್ರಕಾಶ್ ಅಧ್ಯಕ್ಷತೆ ವಹಿಸುವರು. ಎಚ್ ಆರ್ ಸುಜಾತರವರು ಆಶಯ ಮಾತುಗಳನ್ನಾಡಿದರೆ, ದೀಪದ ಮಲ್ಲಿ, ದಾದಪೀರ್ ಜೈಮನ್, ಚಾಂದ್ ಪಾಷಾ, ಪ್ರಕಾಶ್ ಮಂಟೇದಾ, ಟೀನಾ ಶಶಿಕಾಂತ್, ಸಿರಾಜ್ ಬಿಸ್ರಳ್ಳಿ, ಫಾತಿಮಾ ರಾಲಿಯಾ, ಹಾಜಿರ ಖಾನಂ, ಚಾಂದಿನಿ, ಶಿವರಾಜ್ ಮೋತಿ, ಪಂಚಮಿ ಎಸ್, ಸಂಘಮಿತ್ರೆ, ಮಂಜುನಾಥ ಮಾಗೊದಿ, ಪುನೀತ್, ಧನಂಜಯ ದೇವರಹಳ್ಳಿ, ವಿಕಾಸ್ ಮೌರ್ಯ, ರೂಮಿ ಹರೀಶ್ ಮತ್ತು ಪ್ರವೀಣ್ ಬಿ ಎಂ ಕವನ ವಾಚಿಸಲಿದ್ದಾರೆ.
ಸೌಹಾರ್ದತೆ ಮತ್ತು ಕನ್ನಡತನ ವಿಷಯದ ಕುರಿತ ಮಧ್ಯಾಹ್ನದ ಗೋಷ್ಟಿಯಲ್ಲಿ ಚಿಂತಕರಾದ ರಾಜೇಂದ್ರ ಚೆನ್ನಿಯವರು ವಿಷಯ ಮಂಡನೆ ಮಾಡಲಿದ್ದಾರೆ. ಅಲ್ಪಸಂಖ್ಯಾತರು ಮತ್ತು ದಲಿತರ ಮೇಲಿನ ದಾಳಿ : ಸಾಹಿತ್ಯ ಲೋಕದ ಜವಾಬ್ದಾರಿಗಳು ವಿಷಯದ ಕುರಿತು ಮಾವಳ್ಳಿ ಶಂಕರ್ ಮುನೀರ್ ಕಾಟಿಪಳ್ಳ ವಿಷಯ ಮಂಡನೆ ಮಾಡಲಿದ್ದಾರೆ. ಕನ್ನಡವನ್ನು ಬೆಳಗಿಸಿದ ಕ್ರೈಸ್ತ ಮಿಷನರಿಗಳು ವಿಷಯದ ಕುರಿತು ಡಾ. ಕುಮಾರಸ್ವಾಮಿ ಬೆಜ್ಜಿಹಳ್ಳಿ ವಿಷಯ ಮಂಡನೆ ಮಾಡಿದರೆ ಪ್ರಿಯಾಂಕ ಮಾವಿನಕರ್ ಪ್ರತಿಕ್ರಿಯೆ ನೀಡಲಿದ್ದಾರೆ.
ಸಂಜೆ 5:00 ಗಂಟೆಯಿಂದ ಸಮಾರೋಪ ಸಮಾರಂಭ ನಡೆಯಲಿದ್ದು, ಡಾ. ಜಿ ರಾಮಕೃಷ್ಣರವರು ಅಧ್ಯಕ್ಷತೆ ವಹಿಸಿದರೆ ಡಾ ಕೆ ಮರುಳಸಿದ್ದಪ್ಪನವರು ಸಮಾರೋಪ ಭಾಷಣ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಿ. ಬಸವಲಿಂಗಯ್ಯ, ಪಿಚ್ಚಳ್ಳಿ ಶ್ರೀನಿವಾಸ್, ದು. ಸರಸ್ವತಿ, ಯು. ಟಿ ಫರ್ಜಾನ, ವಸಂತರಾಜ್, ಅನಂತ್ ನಾಯಕ್, ರವಿಕುಮಾರ್ ಟೆಲೆಕ್ಸ್ ಭಾಗವಹಿಸಲಿದ್ದಾರೆ.
ಬೀದಿಗೆ ಬರಲಿ ಕಲೆ – ಸಾಹಿತ್ಯ ಗೋಷ್ಟಿಯಲ್ಲಿ ಸಮುದಾಯ ಬೆಂಗಳೂರು ವತಿಯಿಂದ ಬೀದಿ ನಾಟಕ ನಡೆಯಲಿದೆ. ಅದಕ್ಕೂ ಮೊದಲು ಗುಂಡಣ್ಣ ಚಿಕ್ಕಮಗಳೂರುರವರು ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ.
ಇದನ್ನೂ ಓದಿ: ಮುಸ್ಲಿಂ ಲೇಖಕರನ್ನು ಹೊರಗಿಟ್ಟ ಕಸಾಪ: ಪ್ರತಿರೋಧವಾಗಿ ಜ.8ರಂದು ಜನಸಾಹಿತ್ಯ ಸಮ್ಮೇಳನ
ಈ ಸಮ್ಮೇಳನ ಆಯ ವ್ಯಯ ವಿವರ ಘೋಷಿಸಬೇಕಿತ್ತು. ಅಂದಾಜು ವೆಚ್ಚ ಮಾಹಿತಿ. ಕನ್ನಡ ಸಾಹಿತ್ಯ ಪರಿಷತ್ತಿನ ವಿರುದ್ಧದ ಸದರಿ ಸಮ್ಮೇಳನದ ಕ್ರಿಯಾಯೋಜನೆಯನ್ನೂ ಕೊಟ್ಟಿದ್ದರೆ ಅನುಕೂಲ ಆಗುತ್ತಿತ್ತು.
ಕಾತರದಿಂದ ಕಾಯುತ್ತಿರುವ ಜನ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿ ನಡೆಯಲಿ; ಜಯಧ್ವನಿ ಮೊಳಗಲಿ.