ನಿನ್ನೆ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘ (ಜೆಎನ್ಯುಎಸ್ಯು) ಚುನಾವಣೆಯ ಮತಗಳನ್ನು ಎಣಿಕೆ ಮಾಡಲಾಗಿದ್ದು, ಅಧ್ಯಕ್ಷ, ಉಪಾಧ್ಯಕ್ಷ, ಪ್ರಧಾನ ಕಾರ್ಯದರ್ಶಿ ಮತ್ತು ಜಂಟಿ ಕಾರ್ಯದರ್ಶಿ ಎಂಬ ನಾಲ್ಕು ಕೇಂದ್ರ ಸಮಿತಿ ಸ್ಥಾನಗಳಲ್ಲಿ ನಾಲ್ಕರಲ್ಲಿಯೂ ಎಡ ಒಕ್ಕೂಟವು ಬೃಹತ್ ಮುನ್ನಡೆ ಸಾಧಿಸಿದೆ. ಆದರೆ ದೆಹಲಿ ಹೈಕೋರ್ಟ್ ಆದೇಶದ ಅನ್ವಯ ಸೆಪ್ಟೆಂಬರ್ 17 ರವರೆಗೆ ಫಲಿತಾಂಶದ ಘೋಷಣೆಯನ್ನು ತಡೆಹಿಡಿಯಲಾಗಿದೆ.
ಆರ್.ಎಸ್.ಎಸ್ ಸಂಯೋಜಿತ ಎಬಿವಿಪಿ ಮತ್ತು ಬಿರ್ಸಾ ಅಂಬೇಡ್ಕರ್ ಫುಲೆ ವಿದ್ಯಾರ್ಥಿ ಸಂಘ (ಬಾಪ್ಸಾ) ಎರಡನೇ ಮತ್ತು ಮೂರನೇ ಸ್ಥಾನಗಳಿಗಾಗಿ ತೀವ್ರ ಪೈಪೋಟಿ ನಡೆಸಿವೆ.
ಫಲಿತಾಂಶ ಘೋಷಣೆ ಯಾಕಿಲ್ಲ?
ಜೆಎನ್ಯುಎಸ್ಯುನಲ್ಲಿ ಕೌನ್ಸಿಲರ್ಗಳ ಚುನಾವಣೆಗೆ ತಮ್ಮ ನಾಮಪತ್ರಗಳನ್ನು ಅಕ್ರಮವಾಗಿ ತಿರಸ್ಕರಿಸಲಾಗಿದೆ ಎಂದು ಇಬ್ಬರು ವಿದ್ಯಾರ್ಥಿಗಳು ದೆಹಲಿ ಹೈಕೋರ್ಟ್ ನಲ್ಲಿ ಪ್ರಶ್ನಿಸಿದ ಕಾರಣದಿಂದಾಗಿ ದೆಹಲಿ ಹೈಕೋರ್ಟ್ ಸೆಪ್ಟೆಂಬರ್ 6 ರ ಶುಕ್ರವಾರದಂದು ಫಲಿತಾಂಶ ಪ್ರಕಟಣೆಯನ್ನು ತಡೆಹಿಡಿದಿದೆ.
“ಅಂತಿಮ ಫಲಿತಾಂಶಗಳ ಘೋಷಣೆಯು ಈ ನ್ಯಾಯಾಲಯವು ಅಂಗೀಕರಿಸಬೇಕಾದ ಮುಂದಿನ ವಿಚಾರಣೆಯ ನಂತರವೇ ಘೋಷಿಸಬೇಕು ಎಂದು ಕೋರ್ಟ್ ಹೇಳಿದ್ದು, ಮುಂದಿನ ವಿಚಾರಣೆಯು ಸೆಪ್ಟೆಂಬರ್ 17 ರಂದು ನಡೆಯಲಿದೆ. ಹಾಗಾಗಿ ಅಧಿಕೃತ ಫಲಿತಾಂಶ ಅಂದು ಹೊರಬೀಳಲಿದೆ. ಏನೇ ಆದರೂ ಎಡ ಒಕ್ಕೂಟ ಜಯಿಸಿರುವುದು ನಿನ್ನೆಯ ಮತ ಎಣಿಕೆಯಲ್ಲಿ ಸ್ಪಷ್ಟವಾಗಿದೆ.
ಮೇಲಿನ ಹೈಕೋರ್ಟ್ ಆದೇಶವನ್ನು ಗಮನದಲ್ಲಿಟ್ಟುಕೊಂಡು, ಕೇಂದ್ರ ಸ್ಥಾನಗಳ ಮತ ಎಣಿಕೆಯಲ್ಲಿ ಕೊನೆಯ 150 ಮತಗಳು ಮತ್ತು ಕೌನ್ಸಿಲರ್ಗಳ ಸ್ಥಾನಗಳ ಕೊನೆಯ 50 ಮತಗಳನ್ನು ಎಣಿಸಿಲ್ಲ ಮತ್ತು ಘೋಷಿಸಿಲ್ಲ ಎಂದು ಚುನಾವಣಾ ಸಮಿತಿ ಹೇಳಿದೆ.
ಎಡ ಒಕ್ಕೂಟದಲ್ಲಿ ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ (ಎಸ್ಎಫ್ಐ), ಅಖಿಲ ಭಾರತ ವಿದ್ಯಾರ್ಥಿ ಸಂಘ (ಎಐಎಸ್ಎ), ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಫೆಡರೇಶನ್ (ಡಿಎಸ್ಎಫ್) ಮತ್ತು ಅಖಿಲ ಭಾರತ ವಿದ್ಯಾರ್ಥಿಗಳ ಒಕ್ಕೂಟ (ಎಐಎಸ್ಎಫ್) ವಿದ್ಯಾರ್ಥಿ ಸಂಘಟನೆಗಳಿವೆ. ಆಯಿಶಿ ಘೋಷ್ ಅವರು ಅಧ್ಯಕ್ಷ ಸ್ಥಾನಕ್ಕೆ, ಸಾಕೇತ್ ಮೂನ್ ಉಪಾಧ್ಯಕ್ಷ ಸ್ಥಾನಕ್ಕೆ, ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಸತೀಶ್ ಚಂದ್ರ ಯಾದವ್, ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ ಎಂಡಿ ದ್ಯಾನಿಷ್ ಅವರ ಆಯ್ಕೆ ಬಹುತೇಕ ಖಚಿತವಾಗಿದೆ.
ಈ ಭಾರಿ ಶೇಕಡಾ 67.9 ರಷ್ಟು ಮತದಾನ ದಾಖಲಾಗಿದ್ದು, ಇದು ಏಳು ವರ್ಷಗಳಲ್ಲಿ ಅತಿ ಹೆಚ್ಚು ಎಂದು ಹೇಳಲಾಗಿದೆ. ಕೇಸರಿ ನಿಲುವಂಗಿಯನ್ನು ಧರಿಸಿ ಜೆಎನ್ಯುನ ಯೋಗಿ ಎಂದು ಕರೆಯಲ್ಪಡುತ್ತಿದ್ದ ಸ್ವತಂತ್ರ ಅಭ್ಯರ್ಥಿ ರಾಘವೇಂದ್ರ ಮಿಶ್ರಾ ಅವರು ಅಧ್ಯಕ್ಷ ಹುದ್ದೆಗೆ ಸ್ಪರ್ಧಿಸುತ್ತಿದ್ದರು. ಆದರೆ ಅತ್ಯಂತ ಕಡಿಮೆ ಮತ ಪಡೆಯುವ ಮೂಲಕ ಮುಖಭಂಗ ಅನುಭವಿಸಿದ್ದಾರೆ.
ಇನ್ನು ಎಬಿವಿಪಿ ಈ ಬಾರಿಯಾದರೂ ಗೆಲ್ಲಲೇಬೇಕೆಂದು ಏನೆಲ್ಲಾ ಪ್ರಯತ್ನಪಟ್ಟರೂ ಸಾಧ್ಯವಾಗಿಲ್ಲ. ಎಡ ಒಕ್ಕೂಟ ಪಡೆದ ಅರ್ಧದಷ್ಟು ಮತಗಳನ್ನು ಮಾತ್ರ ಪಡೆಯಲು ಎಬಿವಿಪಿ ಶಕ್ತವಾಗಿದ್ದು ಮತ್ತೆ ಮುಗ್ಗರಿಸಿದೆ.