Homeಅಂಕಣಗಳುಕಾಫಿ ವಲಯದ ಜನರು ತಮ್ಮ ಉಳಿವಿಗಾಗಿ ಏನೂ ಪ್ರಯತ್ನವೇ ಮಾಡಲಿಲ್ಲವೇ?

ಕಾಫಿ ವಲಯದ ಜನರು ತಮ್ಮ ಉಳಿವಿಗಾಗಿ ಏನೂ ಪ್ರಯತ್ನವೇ ಮಾಡಲಿಲ್ಲವೇ?

- Advertisement -
- Advertisement -

ಕಳೆದು ಹೋದ ದಿನಗಳು….. ಭಾಗ -2, ಅಧ್ಯಾಯ -14

ಕೇವಲ ಮೂರು ನಾಲ್ಕು ವರ್ಷ ಕಳೆಯುವುದರೊಳಗೆ ಕಾಫಿಯ ಬೆಲೆ ಮೂರು ದಶಕಗಳ ಹಿಂದಿನ ಕಾಫಿ ಬೆಲೆಗೆ ಬಂದು ನಿಂತಿತ್ತು. ಕಾಫಿ ಕೊಳ್ಳುವ ಸಂಸ್ಥೆಗಳ ಸಂಖ್ಯೆ ಕೇವಲ ಕೆಲವೇ ಇದ್ದವು. ಸ್ಥಳೀಯ ವ್ಯವಹಾರಸ್ಥರು, ಕಾಫಿ ಕೊಳ್ಳುವುದನ್ನು ನಿಲ್ಲಿಸಿದ್ದರು. ಕೆಲವರು ಸಾಲದಲ್ಲಿ ಮುಳುಗಿ ಊರುಬಿಟ್ಟಿದ್ದರು.

ಕಾಫಿ ವಲಯ ನಿರಂತರ ಸಂಕಷ್ಟಕ್ಕೊಳಗಾಗಿತ್ತು. ಪ್ರಾಕೃತಿಕ ಬದಲಾವಣೆಗಳಿಂದ ಮಳೆಗಾಲದಲ್ಲಿಯೂ ಉಷ್ಣಾಂಶದ ಏರಿಕೆ ಕಂಡು ಬರತೊಡಗಿತು. ಇದು ಅರೆಬಿಕಾ ಕಾಫಿಯ ಬಹುಮುಖ್ಯ ಶತ್ರುವಾದ ಕಾಂಡ ಕೊರಕ ಕೀಟಗಳಿಗೆ ಅತ್ಯುತ್ತಮ ಸ್ಥಿತಿ. ಇದರಿಂದಾಗಿ ಅರೆಬಿಕಾ ತೋಟಗಳು ನಾಶವಾಗತೊಡಗಿದವು. ಜೊತೆಗೆ ಶುಂಠಿ ಮತ್ತಿತರ ಕೃಷಿಗಳಿಗೆ ಬಳಸಿದ ಅತಿಯಾದ ವಿಷಗಳ ಪರಿಣಾಮವೋ ಕೆಲವು ಜಾತಿಯ ಕೀಟಾಹಾರಿ ಇರುವೆಗಳು ನಾಶವಾಗಿ ಅದುವರೆಗೆ ಯಾವುದೇ ರೋಗವಿಲ್ಲದ ಸುರಕ್ಷಿತ ಬೆಳೆಯಾಗಿದ್ದ ರೊಬಸ್ಟ ಕಾಫಿಗೂ ಕಾಯಿ ಕೊರಕವೆಂಬ ಮಾರಿಯೊಂದು ಪ್ರಾರಂಭವಾಗಿ ಮೊದಲೇ ಬೆಳೆ ಇಳಿಕೆಯಿಂದಾದ ಸಂಕಷ್ಟಕ್ಕೆ ಮತ್ತೊಂದು ಸಮಸ್ಯೆ ಸೇರಿತ್ತು.

ಇಷ್ಟುವರ್ಷಗಳ ನಂತರವೂ 10102021 ರಂದು ಕಾರ್ಮಿಕ ಸಂಘಟನೆಗಳಿಂದ ಕಾಫಿ ಉದ್ಯಮ ಉಳಿಸಿ ಚಳುವಳಿ

ಎಷ್ಟೋ ತೋಟಗಳು ಕೆಲಸ ನಿಲ್ಲಿಸಬೇಕಾದ ಪರಿಸ್ಥಿತಿ ತಲೆದೋರಿತು. ನೂರಾರು ಸಣ್ಣ ಬೆಳೆಗಾರರು ಅಕ್ಷರಶಃ ಕೆಲಸ ನಿಲ್ಲಿಸಿದರು. ಇಲ್ಲವೇ ಸಿಕ್ಕಿದ ಫಸನ್ನು ಕೊಯ್ದು ಸುಮ್ಮನಾದರು. ಮದ್ಯಮ ಗಾತ್ರದ ತೋಟಗಳವರೂ ಕಾಟಾಚಾರಕ್ಕೆಂಬತೆ ಕೆಲಸ ಮಾಡಿಸಬೇಕಾದ ಸ್ಥಿತಿಯಿತ್ತು. ಮೊದಲ ಬಾರಿಗೆ ಕಾಫಿ ವಲಯದಲ್ಲಿ ಕಾರ್ಮಿಕರು ಮತ್ತು ಮಾಲಿಕರು ಒಟ್ಟಾಗಿ “ಕಾಫಿ ಉದ್ಯಮ ಉಳಿಸಿ” ಎಂದು ಬೀದಿಗಿಳಿದರು. ಎಷ್ಟೋ ಜನರು ಕೆಲಸವಿಲ್ಲದೆ  ನಗರ ಸೇರಿದರು. (ಪರಿಸ್ಥಿತಿಯ ವ್ಯಂಗ್ಯವೆಂದರೆ, ಈ ಘಟನೆ ನಡೆದದ್ದು 2003-04 ರಲ್ಲಿ ಈಗ ನಾನಿದನ್ನು ಬರೆಯುತ್ತಿರುವ 2021-22 ರಲ್ಲಿಯೂ  ಅಂದರೆ ಹದಿನೆಂಟು ವರ್ಷಗಳ ನಂತರವೂ ಅದೇ ಪರಿಸ್ಥಿತಿ,  ಕಾರ್ಮಿಕರು ಕಾಫಿ ಉದ್ಯಮ ಉಳಿಸಿ ಎಂದು ತಮ್ಮ ಮತ್ತು ಬೆಳೆಗಾರರ ಪರವಾಗಿ ಹೋರಾಟಕ್ಕಿಳಿಯುತ್ತಿದ್ದಾರೆ.- ಪೋಟೋ ನೋಡಿ)

ಕಾಫಿ ವಲಯದ ಜನರು ತಮ್ಮ ಉಳಿವಿಗಾಗಿ ಏನೂ ಪ್ರಯತ್ನವೇ ಮಾಡಲಿಲ್ಲವೇ?

ಎಲ್ಲ ಕಡೆಗಳಲ್ಲಿ ಇರುವಂತೆಯೇ ಪ್ರಜ್ಞಾವಂತರು, ಪ್ರಯೋಗಶೀಲರು ಇಲ್ಲಿಯೂ ಇದ್ದಾರೆ. ಆದರೆ ಇಲ್ಲಿನ ಪ್ರಾಕೃತಿಕ ಮತ್ತು ಸಾಮಾಜಿಕ ಜೊತೆಯಲ್ಲಿ ಕೃಷಿ ವೈವಿದ್ಯಗಳ ಮಿತಿಯೇನೆಂದು ಅರಿಯದ ಹೊರಗಿನ ಜನರು ಕೆಲವರು, ಇವರೆಲ್ಲ ಸುಖಜೀವಿಗಳು, ಐಷಾರಾಮಿಗಳು, ಪ್ರಕೃತಿಯ ಶೋಷಣೆ ಮಾಡಿಯೇ ಬದುಕಲು ಬಯಸುವವರು ಎಂಬಂತಹ ಅಭಿಪ್ರಾಯಗಳನ್ನು ಹೊಂದಿದ್ದಾರೆ.

ಮಲೆನಾಡಿನಲ್ಲಿ ಸತತ ಮಳೆ ಕಡಿಮೆಯಾಗಿ ನೀರಿಗೆ ಕೊರತೆ ಉಂಟಾದಾಗ ಹಲವು ಪ್ರಯತ್ನಗಳು ನಡೆದವು. ಸಕಲೇಶಪುರ ತಾಲ್ಲೂಕು ಹೆತ್ತೂರು ಹೋಬಳಿಯವರಾದ ರಾಮಚಂದ್ರ ಎಂಬವರು ಗುಂಡೂರಾವ್ ಮುಖ್ಯಮಂತ್ರಿಗಳಾಗಿದ್ದ ಕಾಲದಲ್ಲಿ ಸ್ಟೈಪೆಂಡರಿ ಉದ್ಯೋಗಿಯಾಗಿ ಕೆಲಸಕ್ಕೆ ಸೇರಿದವರು. ನಂತರ ಪಂಚಾಯತ್ ಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸುತ್ತಿದ್ದರು. ಅವರು ಕೃಷಿಕರೂ ಕೂಡಾ. ಸಕಲೇಶಪುರ ತಾಲ್ಲೂಕಿನಲ್ಲಿ ಸಂಘ ಸಂಸ್ಥೆಗಳನ್ನು ಕಟ್ಟಿ ರಂಗ ಚಟುವಟಿಕೆ ಮತ್ತು ಇತರ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸುತ್ತಿದ್ದರು, ಸಾಕ್ಷರತಾ ಆಂದೋಲನದಲ್ಲಿ ನಿರಂತರ ತೊಡಗಿಸಿಕೊಂಡವರು. ನಾವೆಲ್ಲ ಜೊತೆಯಾಗಿ ಕೆಲಸಮಾಡುತ್ತಿದ್ದೆವು.

ಅವರು ಜಲ ಸಂರಕ್ಷಣೆ ಮತ್ತು ನೀರಿಂಗಿಸುವ ವಿಚಾರದ ಕಾರ್ಯಾಗಾರಗಳನ್ನು ಆಯೋಜಿಸಿದರು. ಖ್ಯಾತ ಪರಿಸರ ತಜ್ಞ ಶ್ರೀ ಪಡ್ರೆಯವರನ್ನೂಕರೆಸಿ ಶಿಬಿರಗಳನ್ನು ನಡೆಸಿದರು. ಸಕಲೇಶಪುರ ತಾಲ್ಲೂಕಿನಾದ್ಯಂತ ಹಲವು ಕಡೆಗಳಲ್ಲಿ ಜಲ ಸಾಕ್ಷರತೆಯ ಕಾರ್ಯಕ್ರಮಗಳಾದವು. ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿಯೂ ಇದೇ ರೀತಿಯ ಪ್ರಯತ್ನಗಳು ನಡೆದವು.

ಈ ಎಲ್ಲ ವಿಚಾರಗಳ ಬಗ್ಗೆ ಪ್ರತಿಕೆಗಳಲ್ಲಿ ಹಲವಾರು ಜನರು ಲೇಖನಗಳನ್ನು ಬರೆದರು. ಕಾಫಿ ವಲಯದ ಸಮಸ್ಯೆಗಳ ಬಗ್ಗೆ ದೊಡ್ಡ ಮಟ್ಟದಲ್ಲೇ ಸುದ್ದಿಯಾಯಿತು.

ಹಾರ್ಲೆ ಎಸ್ಟೇಟಿನಲ್ಲಿ ಸುವರ್ಣ ಸಂಭ್ರಮ

ಬೆಂಗಳೂರು ದೂರದರ್ಶನ ಕೇಂದ್ರದವರು ಕಾಫಿ ಬೆಳೆಯ ಬಗ್ಗೆ ಒಂದು ಸಮಗ್ರ ಚಿತ್ರಣ ನೀಡುವ ಉದ್ದೇಶದಿಂದ ಒಂದು ಕಾರ್ಯಕ್ರಮವನ್ನು ರೂಪಿಸಿದರು. ಆಗ ಕವಿ ಸುಬ್ಬು ಹೊಲೆಯಾರ್ ಅವರು ಬೆಂಗಳೂರು ದೂರದರ್ಶನದಲ್ಲಿದ್ದರು. ಅವರು ನನ್ನನ್ನು ಸಂಪರ್ಕಿಸಿ ಒಂದು ಸಮಗ್ರ ಚಿತ್ರಣ ನೀಡುವ ಕಾರ್ಯಕ್ರಮಕ್ಕೆ ರೂಪು ರೇಷೆಯನ್ನು ಚರ್ಚಿಸಿದರು. ಅದರಂತೆ ಕಾಫಿ ಕೃಷಿಗೆ ಸಂಬಂಧ ಪಟ್ಟ ಎಲ್ಲ ವಿಭಾಗಗಳ ಸಮಸ್ಯೆಗಳನ್ನು ಬಿಂಬಿಸುವ ಹಾಗೆ ಕಾಫಿ ಬೆಳೆಗಾರರರು, ಕಾರ್ಮಿಕರು, ನೌಕಕರು, ವ್ಯಾಪಾರಿಗಳು, ಉದ್ಯಮಿಗಳು, ಕೊಮಾರ್ಕ್ ಸಂಸ್ಥೆಯವರು, ರೈತ ನಾಯಕರು ಹಾಗೂ ಕಾಫಿ ಸೀಮೆಯ ಇತರ ಉದ್ಯೋಗಿಗಳನ್ನೂ ಒಳಗೊಂಡಂತೆ ಒಂದು ಚಿತ್ರೀಕರಣ ಪಠ್ಯವನ್ನು ರೂಪಿಸಿಕೊಂಡೆವು.

ಇವರೆಲ್ಲರ ಜೊತೆಯಲ್ಲಿ ಸ್ವತಃ ಕಾಫಿ ಬೆಳೆಗಾರರರೂ ಆಗಿರುವ ಪೂರ್ಣಚಂದ್ರ ತೇಜಸ್ವಿಯವರ ದು ಪುಟ್ಟ ಸಂದರ್ಶನ ಮಾಡುವುದು ನಮ್ಮ ಉದ್ದೇಶವಾಗಿತ್ತು. ಆ ಸಮಯದಲ್ಲಿ ಅವರು ಯಾವುದೇ ಟಿ.ವಿ. ಮಾದ್ಯಮಕ್ಕೆ ಸಂದರ್ಶನ ನೀಡದೆ ಏಳು ವರ್ಷಗಳಾಗಿತ್ತು. ಆದ್ದರಿಂದ ಏನನ್ನುತ್ತಾರೋ ಎಂಬ ಅಳುಕು ನಮ್ಮಲ್ಲಿತ್ತು. ಎಲ್ಲ ಕಡೆ ಚಿತ್ರೀಕರಣ ಮುಗಿಸಿ ನಾವು ಮೂಡಿಗೆರೆಗೆ ಹೋದೆವು. ತೇಜಸ್ವಿಯವರೂ ಕೂಡಾ ಅವರ ತೋಟದಲ್ಲಿ ನೀರಿನ ಕೊರತೆಯುಂಟಾಗಿ ಹರಿಯುತ್ತಿದ್ದ ಸಣ್ಣ ಕವಲಿಯೊಂದರ ನೀರನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿ ಇದ್ದರು. ಆದರೆ ಕೃಷಿಕರ ಸಮಸ್ಯೆಯ ಬಗ್ಗೆ ನೀವು ಮಾತಾಡಬೇಕು ಒಪ್ಪಿಕೊಂಡರು.

ದೂರದರ್ಶನಕ್ಕೆ ಸಂದರ್ಶನ ನೀಡುತ್ತಿರುವ ತೇಜಸ್ವಿಯವರು

ಅವರ ತೋಟದ ಮಧ್ಯದಲ್ಲೇ ನಿಂತು, ಸಂದರ್ಶನವೂ ನಡೆಯಿತು. ತೇಜಸ್ವಿ ಕಾಫಿ ಬೆಳೆಗಾರರ ಬಗ್ಗೆ ಮಾತನಾಡುತ್ತಾ ‘ನಾವು ಕಳೆದ ನಲುವತ್ತು ವರ್ಷಗಳಿಂದ ಕಾಫಿ ಮಾರಾಟದ ಸಂಪೂರ್ಣ ಜವಾಬ್ಧಾರಿಯನ್ನು ಕಾಫಿಬೋರ್ಡನ ಕೈಗೊಪ್ಪಿಸಿ ಕುಳಿತು ಬಿಟ್ಟಿದ್ದೆವು. ಕಾಫಿಗೆ ತಕ್ಕಮಟ್ಟಿನ ಒಳ್ಳೆಯಬೆಲೆ ದೊರಕುತ್ತಿದ್ದುದರಿಂದ ಈ ಸ್ಥಿತಿ ಶಾಶ್ವತ ಎಂಬಂತೆ ನಿರಾಳವಾಗಿದ್ದೆವು. ಈಗ ನಮ್ಮ ಉತ್ಪನ್ನದ ಮಾರಾಟದ ಜವಾಬ್ದಾರಿಯನ್ನು ಸಮರ್ಥವಾಗಿ ನಾವೇ ನಿರ್ವಹಿಸಲು ಕಲಿಯಬೇಕಾಗಿದೆ.’ ಕೃಷಿಯಲ್ಲಿನ ಅನಿಶ್ಚಿತ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು, ಅದಕ್ಕೆ ಹೊಂದಿಕೊಂಡು ಬದುಕಲು ಅಗತ್ಯವಾದ ಆರ್ಥಿಕ ಶಿಸ್ತನ್ನು ಕಲಿಯುವ ಬಗ್ಗೆ ಮಾತ್ರವಲ್ಲ ಸಮಗ್ರವಾಗಿ ರೈತರ ಬಗ್ಗೆ, ಅದರಲ್ಲೂ ಕಾಫಿ ಬೆಳೆಗಾರರಿಗಿಂತಲೂ ಇನ್ನೂ ಅನಿಶ್ಚಿತ ಸ್ಥಿತಿಯಲ್ಲಿ ಬದುಕುವ-ಹಣ್ಣು ತರಕಾರಿ ಬೆಳೆಯುವ ರೈತರ ಬಗ್ಗೆಯೂ ಮಾತನಾಡಿದರು. ಆ ರೈತರಿಗೆ ಹೋಲಿಸಿದರೆ ಕಾಫಿ ಬೆಳೆಗಾರರ ಸ್ಥಿತಿ ಅವರಷ್ಟು ಚಿಂತಾಜನಕವಲ್ಲವೆಂದು ನನ್ನ ಅಭಿಪ್ರಾಯ ಎಂದರು. ನಂತರ ಯಾವ ಸರ್ಕಾರನೂ ರೈತನ ನೆರವಿಗೆ ಬರೋದಿಲ್ಲ, ಹೆಚ್ಚೆಂದರೆ ಸಾಲ ವಸೂಲಿಯನ್ನು ಮುಂದೂಡೋದೋ ಇಲ್ಲಾ ಬಡ್ಡಿ ಒಂದ್ಸೊಲ್ಪ ಕಡಿಮೆ ಮಾಡೋದೋ ಇಂಥಾ ಸಣ್ಣಪುಟ್ಟ ರಿಯಾಯಿತಿ ಕೊಡಬಹುದಷ್ಟೆ ನಮ್ಮನ್ನು ನಾವೇ ನೋಡಿಕೊಳ್ಳಲು ಕಲೀಬೇಕು ಎಂದರು.

ಇವೆಲ್ಲ ದೂರದರ್ಶನದಲ್ಲಿ ಪ್ರಸಾರವೂ ಆಯಿತು.

ಸುವರ್ಣ ಸಂಭ್ರಮದ ದಿನ ಕಾರ್ಮಿಕರಿಗೆ ಸನ್ಮಾನ

ಕಾರ್ಯಕ್ರಮವನ್ನು ಟಿ.ವಿ.ಯಲ್ಲಿ ನೋಡಿದ ಕೆಲವರು ಕಾಫಿ ಬೆಳೆಗಾರರು, ನನ್ನಲ್ಲಿ ನೀನು ನಮ್ಮೆಲ್ಲರ ಸಂದರ್ಶನ ಮಾಡಬೇಕಿತ್ತು. ನಮ್ಮೆಲ್ಲರನ್ನು ಬಿಟ್ಟು ಆ ತೇಜಸ್ವಿಯವರನ್ನು ಸಂದರ್ಶನ ಮಾಡಿದ್ದೀಯ ಅವರು ನಮ್ಮ ವಿರುದ್ದವೇ ಮಾತಾಡಿದರು ಎಂದು ಜಗಳಕ್ಕೆ ಬಂದರು!

ಆದರೆ ವಾಸ್ತವದ ನೆಲೆಗಟ್ಟಿನ ಅವರ ಕೆಲವು ಮಾತುಗಳ ಅಂದು ಕೆಲವರು ಕಾಫಿ ಬೆಳೆಗಾರರರಿಗೆ ಇಷ್ಟವಾಗಲಿಲ್ಲ ಎನ್ನುವುದು ಬೇರೆ ಮಾತು. (ಈ ಬಗ್ಗೆ ನಾನು ಬೇರೆ ಕಡೆ ವಿವರವಾಗಿ ಬರೆದಿರುವುದರಿಂದ ಮತ್ತೆ ಇಲ್ಲಿ ಪ್ರಸ್ತಾಪಿಸುವುದಿಲ್ಲ)

ಆದರೆ ಈ ವಿಚಾರಗಳಿಗೆ ಇನ್ನೂ ಒಂದು ಮುಖವಿದೆ. ತೇಜಸ್ವಿಯವರು ಕಾಫಿ ಬೆಳೆಗಾರರು ಹೌದು. ಅವರ ಮಾತುಗಳಲ್ಲಿ ಒಟ್ಟಾರೆಯಾಗಿ ಕೃಷಿಯ ಬಗೆಗಿನ ಅಭಿಪ್ರಾಯಗಳು ಸರಿಯೂ ಹೌದು ಆದರೆ. ಅವರು ಕಾಫಿ ಅಥವಾ ಬೆಳೆಯನ್ನೇ ಅವಲಂಬಿಸಿ ಬದುಕುವ ಬೆಳೆಗಾರರಲ್ಲ. ಬೇರೆ ಆದಾಯ ಮೂಲಗಳ ಬೆಂಬಲವಿರುವ ಕೃಷಿಕನ ಸಮಸ್ಯೆ ಮತ್ತು ಆತ ಯೋಚಿಸುವ ರೀತಿಗೂ ಬರಿಯ ಕೃಷಿಯನ್ನೇ ನಂಬಿ ಬದುಕುವ, ಬೇರೆ ಯಾವುದೇ ಆದಾಯ ಇಲ್ಲದಿರುವವರ ಸಮಸ್ಯೆ ಮತ್ತು ಯೋಚನಾ ಕ್ರಮಕ್ಕೂ ವ್ಯತ್ಯಾಸ ಇದೆ.

ಕಾರಣಗಳು ಏನೇ ಇರಲಿ, ತಪ್ಪು ಯಾರದ್ದೇ ಆಗಿರಲಿ ಕಾಫಿ ವಲಯದಲ್ಲಿ ಬಹಳ ಸಂಕಷ್ಟದ ಪರಿಸ್ಥಿತಿ ಇತ್ತು.  ರವೀಂದ್ರನಾಥರು ತೋಟದ ಎಲ್ಲ ಕೆಲಸಗಾರರನ್ನು ಸಭೆ ಕರೆದು ಸಮಸ್ಯೆಗಳನ್ನು ವಿವರಿಸಿದರು. ಹೀಗೇ ಮುಂದುವರಿದರೆ ತೋಟ ಉಳಿಸಿಕೊಳ್ಳುವದೇ ಕಷ್ಟವಾಗಬಹುದು ಎಂದರು.

ಆಗ ಕಾರ್ಮಿಕರು ಹೌದು ಈಗಿನ ಸಂದರ್ಭ ನಮಗೂ ಅರ್ಥವಾಗಿದೆ ನಮ್ಮ ದಿನಗೂಲಿಯನ್ನು ಸ್ವಲ್ಪ ಕಡಿತಗೊಳಿಸಿ, ಈಗ ತೋಟ ಉಳಿದರೆ ಮುಂದೆ ಮತ್ತೆ ಒಳ್ಳೆಯ ದಿನಗಳು ಬರಬಹುದು ಎಂದರು.! ಶೇ ಹತ್ತರಷ್ಟು ಕಡಿಮೆ ದಿನಗೂಲಿಗೆ ಕೆಲಸಮಾಡಲು ಪ್ರಾರಂಭಿಸಿದರು. ಇದರಿಂದಾಗಿ ವರ್ಷಕ್ಕೆ ಕೆಲವು ಲಕ್ಷಗಳ ಉಳಿತಾಯವಾಗುತ್ತಿತ್ತು. ಈ ರೀತಿ ಎಲ್ಲ ಕೆಲಸಗಾರರನ್ನು ಉಳಿಸಿಕೊಂಡು ಮುಂದಿನ ಮೂರು ವರ್ಷಗಳ ಕಾಲ ತೋಟವನ್ನು ನಡೆಸಲು ಕಾರ್ಮಿಕರ ಈ ನಿರ್ಧಾರ ಸಹಕಾರಿಯಾಯಿತು.

ಮುಂದೆ ಹಾರ್ಲೆ ಎಸ್ಟೇಟಿಗೆ ಐವತ್ತು ವರ್ಷ ತುಂಬಿದ ನೆನಪಿನ ಕಾರ್ಯಕ್ರಮದಲ್ಲಿ ಈ ಎಲ್ಲ ಕಾರ್ಮಿಕರನ್ನು ಸನ್ಮಾನಿಸಲಾಯಿತು. ಹಬ್ಬದಂತೆ ನಡೆದ ಅಂದಿನ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಬಂದಿದ್ದ ಕಾರ್ಮಿಕ ಆಯುಕ್ತರು “ಎಲ್ಲ ಕಡೆ ಇದೇ ರೀತಿಯ ವಾತಾವರಣ ಇದ್ದರೆ ನಮ್ಮ ಕೆಲಸ ಹಗುರವಾಗುತ್ತದೆ” ಎಂದರು. ಇಂದು ಕರ್ನಾಟಕ ರಾಜ್ಯ ಪತ್ರಕರ್ತರ ಸಂಘದ ಅಧ್ಯಕ್ಷರಾಗಿರುವ ಶಿವಾನಂದ ತಗಡೂರ್ ಅವರೂ ಆ ಕಾರ್ಯಕ್ರಮದಲ್ಲಿ ಅತಿಥಿಗಳಾಗಿದ್ದರು.

* ಪ್ರಸಾದ್ ರಕ್ಷಿದಿ

(ಪ್ರಸಾದ್ ರಕ್ಷಿದಿಯವರು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬೆಳ್ಳೇಕೆರೆಯಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ರಂಗಭೂಮಿ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿದ್ದಾರೆ. ‘ಜೈ ಕರ್ನಾಟಕ ಸಂಘ’ ಎಂಬ ವೇದಿಕೆ ಸ್ಥಾಪಿಸಿದ ಅವರು ಸುತ್ತಲಿನ ಕಾರ್ಮಿಕರನ್ನೆಲ್ಲ ಒಟ್ಟುಹಾಕಿ ಅವರಿಗೆ ರಾತ್ರಿಶಾಲೆಗಳ ಮೂಲಕ ಅಕ್ಷರಾಭ್ಯಾಸ ಕಲಿಸಿದವರು. ಕೂಲಿ ಕಾರ್ಮಿಕರಿಗೆ ರಂಗಭೂಮಿಯ ಒಲವು ಮೂಡಿಸಿ, ನಾಟಕ ತಂಡವೊಂದನ್ನು ಕಟ್ಟಿ ಹತ್ತಾರು ನಾಟಕಗಳನ್ನು ಪ್ರದರ್ಶಿಸಿದ್ದಲ್ಲದೆ ರಾಜ್ಯ ಮಟ್ಟದಲ್ಲಿ ಪ್ರಥಮ ಬಹುಮಾನ ಗಳಿಸಿದ ಹೆಗ್ಗಳಿಕೆ ಅವರದು. ಶಾಲಾಭಿವೃದ್ದಿ, ಸಾವಯವ ಕೃಷಿ, ರಚನಾತ್ಮಕ ರಾಜಕೀಯ ಅವರ ಆಸಕ್ತಿಯ ಕ್ಷೇತ್ರಗಳು. ಅವರ `ಬೆಳ್ಳೇಕೆರೆ ಹಳ್ಳಿ ಥೇಟರ್’ ಈ ಎಲ್ಲಾ ಚಟುವಟಿಕೆಗಳನ್ನು ವಿವರಿಸುವ ಮಹತ್ವದ ಕೃತಿಯಾಗಿದೆ.)


ಇದನ್ನೂ ಓದಿ: ಕಾಫಿ, ಯಾಲಕ್ಕಿ, ಮೆಣಸು, ವೆನಿಲ್ಲಾ, ಶುಂಠಿಯಂತಹ ಬೆಳೆ ಬದಲಾವಣೆಗಳು ಮತ್ತು ಕಷ್ಟನಷ್ಟಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...