ಈ ಬಾರಿ ಸಚಿವ ಸ್ಥಾನ ಖಂಡಿತ ಸಿಗುತ್ತದೆ ಎಂದು ಬಾರೀ ನಿರೀಕ್ಷೆ ಇತ್ತು ಆದರೆ ಸಚಿವ ಸ್ಥಾನ ಅವಕಾಶ ತಪ್ಪಿ ಹೋದ ಬಗ್ಗೆ ನನಗೆ ಮತ್ತು ಜಿಲ್ಲೆಯ ಜನತೆಗೆ ನೋವಾಗಿದೆ ಎಂದು ಸುಳ್ಯ ಶಾಸಕ ಎಸ್.ಅಂಗಾರ ಬೇಸರ ವ್ಯಕ್ತಪಡಿಸಿದ್ದಾರೆ.
ಆರು ಬಾರಿ ಶಾಸಕನಾಗಿದ್ದೇನೆ. ಹಿಂದೆಯೂ ಅವಕಾಶಕ್ಕಾಗಿ ದನಿ ಎತ್ತಿದ್ದೇನೆ. ನಮ್ಮ ಜಿಲ್ಲೆಯಲ್ಲಿ ವ್ಯಾಪಕ ವಿಶ್ವಾಸವಿಟ್ಟಿದ್ದರು. ಆದರೆ ಈ ಬಾರಿಯೂ ನೋವಾಗಿದೆ, ಜಿಲ್ಲೆಯ ಜನರು ಬೇಸರದಲ್ಲಿದ್ದಾರೆ. ಪಕ್ಷ ಹಿರಿಯರು ಇದರ ಬಗ್ಗೆ ಗಮನ ವಹಿಸಬೇಕು ಎಂದು ಹೇಳಿದ್ದಾರೆ.
ನನಗೂ ಸಚಿವ ಸ್ಥಾನ ಸಿಗುತ್ತದೆ ಎಂಬ ನಿರೀಕ್ಷೆಯಿತ್ತು. ಆದರೆ ಸುಳ್ಳಾಗಿದೆ. ಇದರಿಂದ ಸಹಜವಾಗಿ ಕಾರ್ಯಕಾರ್ತರಿಗೆ ನೋವಾಗಿದೆ. ಅವರನ್ನು ಸಮಾಧಾನ ಮಾಡಿಕಳಿಸಿದ್ದೇನೆ. ಸಚಿವ ಸ್ಥಾನ ಸಿಗದಿದ್ದರಿಂಗ ನಿಗಮ ಮಂಡಳಿಯ ಅಧ್ಯಕ್ಷ ಸ್ಥಾನ ಕೊಡಿಸುತ್ತೇನೆಂದು ಸಂಸದರು ಭರವಸೆ ನೀಡಿದ್ದಾರೆ. ಮುಂದಿನ ಸಲವಾದರೂ ಸಚಿವ ಸ್ಥಾನ ಬೇಕು ಎಂದು ಕೇಳುತ್ತೇನೆ ಎಂದು ಶಾಸಕರು ಹೇಳಿದ್ದಾರೆ.
ಈ ನಡುವೆ ಶಾಸಕ ರೇಣುಕಾಚಾರ್ಯ ಬಾಲಚಂದ್ರ ಜಾರಕಿಹೊಳಿಯವರನ್ನು ಭೇಟಿಯಾಗಿದ್ದಾರೆ. ಬಾಲಚಂದ್ರ ಜಾರಕಿಹೊಳಿ ಸಚಿವ ಸ್ಥಾನ ಸಿಗದಿದ್ದಕ್ಕೆ ಬೇಸರವಿಲ್ಲ ಎಂದು ಹೇಳಿದ್ದಾರೆ.
ಇಂದು ಮುಖ್ಯಮಂತ್ರಿ ಶ್ರೀ ಬಿ. ಎಸ್. ಯಡಿಯೂರಪ್ಪನವರ ನೇತೃತ್ವದ ಸರ್ಕಾರದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಎಲ್ಲ ನೂತನ ಸಚಿವರುಗಳಿಗೆ ಅಭಿನಂದನೆಗಳು. ನಮ್ಮ ರಾಜ್ಯ ಮಹಾಪೂರ ಮತ್ತು ಮಳೆಯಿಂದ ತತ್ತರಿಸಿ ಹೋಗಿದೆ. ಜನತೆ ಅತ್ಯಂತ ಕಷ್ಟದ ನೋವು ಅನುಭವಿಸುತ್ತಿದ್ದಾರೆ ಆ ಕಡೆಗೆ ನಮ್ಮ ಗಮನ ಕೊಡಬೇಕು ಸಚಿವ ಸಂಪುಟ ಅಸಮಾಧಾನ ಈಗ ಬೇಡ. ನೂತನ ಸಚಿವರು ತಕ್ಷಣ ಕ್ರಿಯಾಶೀಲರಾಗಬೇಕು. ಹಾರ ತುರಾಯಿಯಲ್ಲಿ ಸಮಯ ವ್ಯರ್ಥ ಮಾಡದೆ ಕೆಲಸ ಪ್ರಾರಂಭವಾಗಲಿ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಟ್ವೀಟ್ ಮಾಡಿದ್ದಾರೆ.