Homeಕರ್ನಾಟಕರಾಜ್ಯದಲ್ಲೀಗ ಬಿ.ಎಲ್ ಸಂತೋಷ್‍ದ್ದೇ ಆಟ: ಒಂದೇ ಏಟಿಗೆ ಐದು ಹಕ್ಕಿ ಢಮಾರ್..

ರಾಜ್ಯದಲ್ಲೀಗ ಬಿ.ಎಲ್ ಸಂತೋಷ್‍ದ್ದೇ ಆಟ: ಒಂದೇ ಏಟಿಗೆ ಐದು ಹಕ್ಕಿ ಢಮಾರ್..

- Advertisement -
- Advertisement -

ಅಸಲಿ ಆಟ ಈಗ ಬಹಿರಂಗಕ್ಕೆ ಬರುತ್ತಿದೆ. ಈ ಆಟದ ಅಂತಿಮ ಗುರಿಯೇ ಮುಖ್ಯಮಂತ್ರಿಯಾಗಿಯೂ ಸಚಿವ ಸಂಪುಟ ರಚಿಸುವ ಅಧಿಕಾರವಿಲ್ಲದೇ ಹತಾಶರಾಗಿದ್ದ ಯಡಿಯೂರಪ್ಪನವರ ರಾಜಕೀಯ ಅಧಃಪತನಗೊಳಿಸುವುದು! ಯಡಿಯೂರಪ್ಪನವರೊಂದಿಗೆ ಇನ್ನೂ ನಾಲ್ಕು ಹಕ್ಕಿಗಳ ರೆಕ್ಕೆಪುಕ್ಕಗಳನ್ನು ಕತ್ತರಿಸಿದ ಈ ಒಂದು ಏಟಿನ ಹಿಂದೆ ಕಟ್ಟಾ ಆರೆಸ್ಸೆಸ್ ಮನುಷ್ಯ ಬಿ.ಎಲ್. ಸಂತೋಷ್ ಕೈವಾಡವಿದೆ. ಅವರ ಕೈಗೆ ಅಮಿತ್ ಶಾ ಶಕ್ತಿ ತುಂಬುತ್ತಿದ್ದಾರೆ. ಇದಕ್ಕೆಲ್ಲ ಮೋದಿಯವರ ಆಶೀರ್ವಾದ ಇದೆ.

ಹೀಗಾಗಿ ಮುಖ್ಯಮಂತ್ರಿಗಿರಿಯೇ ಯಡಿಯೂರಪ್ಪರ ರಾಜಕೀಯ ಜೀವನಕ್ಕೆ ಶಾಪವಾಗುವ ಸಾಧ್ಯತೆಗಳು ದಟ್ಟವಾಗಿವೆ. ಇದರೊಂದಿಗೇ ಸಂತೋಷ್ ಏಟು ಯಡಿಯೂರಪ್ಪನವರಷ್ಟೇ ಅಲ್ಲದೇ, ಜಗದೀಶ ಶೆಟ್ಟರ್, ಈಶ್ವರಪ್ಪ, ಆರ್.ಅಶೋಕ್ ಮಗ್ಗಲು ಮುರಿಯುವ ಉದ್ದೇಶ ಹೊಂದಿದೆ. ಇದೆಲ್ಲದರ ಜೊತೆಗೆ ಈ ಏಟಿನಕೊನೆಯ ಹಕ್ಕಿ, ವಿಚಿತ್ರ ಆದರೂ ಸತ್ಯ, ಅದು ಜೆಡಿಎಸ್ ನಾಯಕ ಕುಮಾರಸ್ವಾಮಿ!

ಹೇಳಿದ್ ಕೇಳಿಕೊಂಡಿರ್ಬೇಕ್!
ಹಾಗಾದರೆ, ಈ ರಾಜಕೀಯ ಆಟದ ಅಸಲಿ ಗುರಿಯಾದರೂ ಏನು? ತಮ್ಮದೇ ಪಕ್ಷದ ಐದಾರು ನಾಯಕರನ್ನು ಮಟ್ಟ ಹಾಕುವುದೆಂದರೆ? ಅದನ್ನೇ ಅಮಿತ್ ಶಾ ಬಹುಪಾಲು ರಾಜ್ಯಗಳಲ್ಲಿ ಮಾಡುತ್ತ ಬಂದಿದ್ದಾರಲ್ಲವೇ? ಅಂದರೆ ಬಿಜೆಪಿಗೆ-ಅದರಲ್ಲೂ ಮುಖ್ಯವಾಗಿ ಮೋದಿ, ಶಾಗಳಿಗೆ- ಈಗ ಬೇಕಿರುವುದು ‘ಹೇಳಿದ್ದು ಕೇಳಿಕೊಂಡು’ ಬಿದ್ದಿರುವ ರಾಜ್ಯ ಸರ್ಕಾರಗಳು ಮತ್ತು ನಾಯಕರು ಅಷ್ಟೇ. ಅದರ ಭಾಗವಾಗಿಯೇ ಪಕ್ಷದಲ್ಲಿ ಮತ್ತು ತಕ್ಕ ಮಟ್ಟಿಗೆ ಸಾರ್ವಜನಿಕವಾಗಿ ಸ್ವಂತ ವರ್ಚಸ್ಸು ಹೊಂದಿರುವ ನಾಯಕರನ್ನು ಸೈಡ್‍ಲೈನ್‍ಗೆ ತಳ್ಳುವ ಕೆಲಸ ಮಾಡಲಾಗುತ್ತಿದೆ. ಈಗಾಗಲೇ ಬಿಜೆಪಿ ಅಧಿಕಾರದಲ್ಲಿರುವ ಬಹುಪಾಲು ರಾಜ್ಯಗಳಲ್ಲಿ ಈ ಕೆಲಸವನ್ನು ‘ಯಶಸ್ವಿ’ಯಾಗಿ ಮಾಡಲಾಗಿದೆ.

ಮಹಾರಾಷ್ಟ್ರದಲ್ಲಿ ಮರಾಠಿ ಸಮುದಾಯದ ಜನಬೆಂಬಲವಿರುವ ಮಾಸ್ ಲೀಡರುಗಳನ್ನು ಹತ್ತಿಕ್ಕಲು ಅಚ್ಚರಿಯ ರೂಪದಲ್ಲಿ ವಿರಳ ಜನಸಂಖ್ಯೆಯ ಬ್ರಾಹ್ಮಣ ಸಮುದಾಯದ ದೇವೇಂದ್ರ ಫಡ್ನವಿಸರನ್ನು ಮುಖ್ಯಮಂತ್ರಿ ಪಟ್ಟಕ್ಕೆ ಏರಿಸಲಾಗಿತು. ಹರಿಯಾಣದಲ್ಲಿ ಆ ರಾಜ್ಯದಲ್ಲಿ ಪ್ರಬಲ ಮಾಸ್‍ಬೇಸ್ ಹೊಂದಿರುವ ಬಿಜೆಪಿ ನಾಯಕರನ್ನು ಹಿಂದಕ್ಕೆ ತಳ್ಳಿ ಪಂಜಾಬಿ ಮೂಲದ ಮನೋಹರ್‍ಲಾಲ್ ಖಟ್ಟರ್ ಅವರನ್ನು ಮುಖ್ಯಮಂತ್ರಿ ಮಾಡಲಾಗಿದೆ. ಫಡ್ನವೀಸ್ ಮತ್ತು ಖಟ್ಟರ್ ಇಬ್ಬರೂ ಆರೆಸ್ಸೆಸ್ ಮೂಲದವರು ಎಂಬುದನ್ನು ಇಲ್ಲಿ ಗಮನಿಸಬೇಕು.

ಜಾಖ್ಯಂಡ್ ರಾಜ್ಯ ಸೃಷ್ಟಿಯಾದ ನಂತರ ಇಲ್ಲಿಯವರೆಗೆ ಅಲ್ಲಿ ಮುಖ್ಯಮಂತ್ರಿಗಳಾದವರೆಲ್ಲ ಅಲ್ಲಿನ ಆದಿವಾಸಿ-ಬುಡಕಟ್ಟು ಸಮುದಾಯದವರು. ಯಾವುದೇ ಪಕ್ಷ ಅಧಿಕಾರದಲ್ಲಿದ್ದರೂ ಆದಿವಾಸಿ-ಬುಡಕಟ್ಟು ಸಮುದಾಯದವರೇ ಅಲ್ಲಿ ಮುಖ್ಯಮಂತ್ರಿಯಾಗುತ್ತ ಬಂದಿದ್ದರು. ಆದರೆ ಮೊದಲ ಬಾರಿ ಈ ಪರಿಪಾಠ ಮುರಿದ ಅಮಿತ್ ಶಾ ಮತ್ತು ಆರೆಸ್ಸೆಸ್ ಟೀಮ್ ಆದಿವಾಸಿಯಲ್ಲದ ರಘುವರ್ ದಾಸ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿತು. ಉತ್ತರಪ್ರದೇಶದಲ್ಲೂ ಅಷ್ಟೇ. ನಾಯಕನಾಗಿ ರಾಜ್ಯಾದ್ಯಂತ ದೊಡ್ಡ ವರ್ಚಸ್ಸಿಲ್ಲದ ಯೋಗಿ ಆದಿತ್ಯನಾಥರನ್ನು ಸಿಎಂ ಮಾಡುವ ಮೂಲಕ ಉತ್ತರಪ್ರದೇಶದ ಪ್ರಭಾವಿ ಬಿಜೆಪಿ ನಾಯಕರನ್ನು ಮಣಿಸಲಾಯ್ತು. ಯೋಗಿಯ ಪಕ್ಕಕ್ಕೆ ಇಬ್ಬರು ಡಿಸಿಎಂಗಳನ್ನು ಕೂಡಿಸಲಾಗಿತು. ಕೇವಲ 40 ಸದಸ್ಯರ ಗೋವಾ ವಿಧಾನಸಭೆಯಲ್ಲೂ ಎರಡು ಡಿಸಿಎಂ ಹುದ್ದೆ ಸೃಷ್ಟಿಸಲಾಗಿದೆ.

ಮಾಸ್ ಲೀಡರ್‍ಗಳಿಗೆ ಮೂಗುದಾರ!
ಇದೆಲ್ಲದರ ಉದ್ದೇಶವೇ ಪ್ರಬಲ ಜಾತಿಯ ಅಥವಾ ಹೆಚ್ಚು ಜನಸಂಖ್ಯೆಯುಳ್ಳ ಸಮುದಾಯದ ನಾಯಕರು ಸ್ವಂತ ವರ್ಚಸ್ಸನ್ನು ಹೆಚ್ಚಿಸಿಕೊಳ್ಳದಂತೆ ತಡೆಯುವುದು. ಅಮಿತ್ ಶಾರ ಬಿಜೆಪಿಗೆ ಬೇಕಿರುವುದು ತಲೆ ಬಗ್ಗಿಸಿ ಕೆಲಸ ಮಾಡುವ, ಸ್ವಂತಿಕೆ ಇಲ್ಲದ, ಇದ್ದರೂ ಅದನ್ನೂ ಅಡವಿಟ್ಟು ಕೆಲಸ ಮಾಡುವ ಹೌದಪ್ಪಗಳಷ್ಟೇ.

ಅದರ ಭಾಗವಾಗಿಯೇ ಈಗ ಕರ್ನಾಟಕದಲ್ಲೂ ಮಣಿಸುವ, ಹಣಿಯುವ ಕೆಲಸ ಶುರುವಾಗಿದೆ. ವಾರದ ಹಿಂದೆಯೇ ಸಚಿವ ಸಂಪುಟದ ಸದಸ್ಯರು ಪ್ರಮಾಣವಚನ ಸ್ವೀಕರಿಸುವಾಗಲೇ ಇದರ ಸುಳಿವು ಸಿಕ್ಕಿತ್ತು. ಮೊದಲಿಗೆ ಹಿರಿಯ ದಲಿತ ಸಚಿವ ಗೋವಿಂದ ಕಾರಜೋಳರು ಪ್ರಮಾಣವಚನ ಸ್ವೀಕರಿಸಿದ ನಂತರ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಈಶ್ವ್ರರಪ್ಪ ಇತ್ಯಾದಿ ಹಿರಿಯ ನಾಯಕರು ಪ್ರಮಾಣವಚನ ಸ್ವೀಕರಿಸಬೇಕಿತ್ತು. ಆದರೆ, ಬಿ.ಎಲ್ ಸಂತೋಷ್ ಮತ್ತು ಅಮಿತ್ ಶಾ ಮೊದಲೇ ಯೋಜನೆ ರೂಪಿಸಿದಂತೆ, ಎರಡನೆಯವರಾಗಿ ಅಶ್ವಥ್ ನಾರಾಯಣ ಮತ್ತು ಮೂರನೆಯವರಾಗಿ ಲಕ್ಷ್ಮಣ ಸವದಿಯವರು ಪ್ರಮಾಣವಚನ ಸ್ವೀಕರಿಸಿದಾಗಲೇ ಯಡಿಯೂರಪ್ಪ ಮತ್ತು ಇತರ ಹಿರಿಯ ನಾಯಕರಿಗೆ ಮುಂದೆ ಬೀಳಲಿರುವ ಏಟು-ಪೆಟ್ಟುಗಳ ಸುಳಿವು ಸಿಕ್ಕಿತ್ತು.

ಆದರೂ ಛಲ ಬಿಡದ ಯಡಿಯೂರಪ್ಪ ತಮ್ಮಿಷ್ಟದ ಸಚಿವ ಸಂಪುಟ ರಚನೆಗೆ ಅನುಮತಿ ಕೊಡಿ ಎಂದು ದೆಹಲಿಗೆ ಎಡತಾಕಿದರು. ಆದರೆ, ಅಲ್ಲಿ ಸಂತೋಷ್ ಎಂಬ ಅಡ್ಡಗಾಲು ಇದೆ ಎಂಬುದು ಗೊತ್ತಿದ್ದರೂ ಅದು ಈ ಪರಿ ಏಟು ಕೊಡುತ್ತದೆ ಎಂದು ಅವರು ನಿರೀಕ್ಷೆ ಮಾಡಿರಲಿಲ್ಲ. ಈಗ ಖಾತೆ ಹಂಚಿಕೆ ಮತ್ತು ಮೂವರು ಉಪ ಮುಖ್ಯಮಂತ್ರಿಗಳ ನೇಮಕಾತಿಯ ಮೂಲಕ ಯಡಿಯೂರಪ್ಪ ಸೇರಿ ಇತರ ಮೂವರು ಮಾಸ್ ಪ್ರಮುಖ ಲೀಡರುಗಳನ್ನು ಮೆತ್ತಗೆ ಮಾಡಲಾಗಿದೆ. ಲಿಂಗಾಯತ ಜಗದೀಶ್ ಶೆಟ್ಟರ್, ಕುರುಬ ಸಮುದಾಯದ ಈಶ್ವರಪ್ಪ ಮತ್ತು ಒಕ್ಕಲಿಗ ಸಮುದಾಯದ ಆರ್.ಅಶೋಕ್ ಈ ಏಟಿಗೆ ಸಿಕ್ಕ ಇತರ ಮೂವರು ಬಿಜೆಪಿ ನಾಯಕರು.

ಲಿಂಗಾಯತ ಸಮುದಾಯದ ನಾಯಕ ಎನಿಸಿರುವ ಯಡಿಯೂರಪ್ಪ ಮುಂದೆಂದೂ ಹೈಕಮಾಂಡ್‍ಗೆ ಸವಾಲಾಗದಂತೆ ಅವರ ರೆಕ್ಕೆ-ಪುಕ್ಕಗಳನ್ನು ಕತ್ತರಿಸಲಾಗಿದೆ. (ಈ ಕುರಿತಂತೆ ರಾಜಕೀಯ ವಿಶ್ಲೇಷಕ ವಿ.ನಟರಾಜ್ ಅವರ ಲೇಖನ ನೋಡಿ.)

ಅಶೋಕ್ ಎದುರು ಅಶ್ವಥ್
ಆರ್.ಅಶೋಕ್ ವರ್ಚಸ್ಸು ಕುಂದಿಸಲು ಮಲ್ಲೇಶ್ವರಂ ಶಾಸಕ ಅಶ್ವಥ್ ನಾರಾಯಣರನ್ನು ಮುಂದಕ್ಕೆ ತರಲಾಗಿದೆ. ಇದರಲ್ಲಿ ಎಷ್ಟು ಫಲ ಸಿಗುತ್ತೋ ಅದು ಭವಿಷ್ಯದ ವಿಚಾರ. ಆದರೆ ಸದ್ಯಕ್ಕೆ ಆರ್. ಅಶೋಕ್ ಮಹತ್ವಾಕಾಂಕ್ಷೆಗೆ ತಣ್ಣೀರು ಸುರಿಯಲಾಗಿದೆ. 2008ರಲ್ಲಿ ಅಧಿಕಾರಕ್ಕೆ ಬಂದ ಯಡಿಯೂರಪ್ಪ ಸರ್ಕಾರದಲ್ಲಿ ಪ್ರಮುಖ ಖಾತೆ ಹೊಂದಿದ್ದ ಅಶೋಕ್, ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದಾಗ ಉಪ ಮುಖ್ಯಮಂತ್ರಿ ಪಟ್ಟವನ್ನೂ ಪಡೆದಿದ್ದರು. ಬಿಜೆಪಿಯ ಪೈಕಿ ಒಕ್ಕಲಿಗರಲ್ಲಿ ಅಷ್ಟಿಷ್ಟು ಜನಪ್ರಿಯತೆ ಹೊಂದಿದ್ದ ಅಶೋಕ್ ಆ ಸಮುದಾಯದಲ್ಲಿ ಇನ್ನಷ್ಟು ಅಚ್ಚುಮೆಚ್ಚಿನವರಾಗುವುದು ಸಂತೋಷ್ ಅಥವಾ ಅಮಿತ್ ಶಾರಿಗೆ ಬೇಕಾಗಿಲ್ಲ. ಮೇಲೆಯೇ ವಿವರಿಸಿದಂತೆ ಸ್ವಂತ ವರ್ಚಸ್ಸಿನ ಅಥವಾ ಸಮುದಾಯವೊಂದರ ಪ್ರಬಲ ನಾಯಕರು ಹೈಕಮಾಂಡ್ ನಿರ್ಧಾರಗಳಿಗೆ ಮುಂದೊಂದು ದಿನ ಅಡ್ಡಿಯಾಗಬಹುದು ಎಂಬ ಭೀತಿ ಅವರಲ್ಲಿದೆ. ಹಾಗಾಗಿ ಅಶೋಕ್ ಅಂತವರನ್ನು ಎಲ್ಲಿಡಬೇಕೋ ಅಲ್ಲಿ ಇಡುವ ಕೆಲಸವನ್ನು ಮಾಡಲಾಗಿದೆ.

ಉಪ ಮುಖ್ಯಮಂತ್ರಿ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದ ಅಶೋಕರಿಗೆ ಶಾಕ್ ನೀಡಲಾಗಿದೆ. ಕೈಗೆ ಕಂದಾಯ ಕೊಟ್ಟು ತೆಪ್ಪಗಿರಲು ಸೂಚಿಸಲಾಗಿದೆ. ಮುಂದೆ ಕೂಡ ಅಶೋಕ್‍ಗೆ ಪರ್ಯಾಯವಾಗಿ ಒಕ್ಕಲಿಗ ನಾಯಕನನ್ನು ಬೆಳೆಸುವ ಉದ್ದೇಶದಿಂದ ಮಲ್ಲೇಶ್ವರಂ ಕ್ಷೇತ್ರದಾಚೆ ಯಾವ ಪ್ರಭಾವವೂ ಇರದ ಒಕ್ಕಲಿಗ ಅಶ್ವಥ್ ನಾರಾಯಣರಿಗೆ ಡಿಸಿಎಂ ಹುದ್ದೆ ನೀಡಲಾಗಿದೆ. ಇದೇ ಮೊದಲ ಬಾರಿ ಸಚಿವರಾಗಿರುವ ಅಶ್ವಥ್ ನಾರಾಯಣರಿಗೆ ಈ ಸ್ಥಾನ ಕೊಟ್ಟಿದಕ್ಕೆ ಬಿಜೆಪಿಯಲ್ಲೇ ಸಾಕಷ್ಟು ಅಸಮಾಧಾನವಿದೆ. ಉಳಿದ ಹಿರಿಯ ನಾಯಕರು ಬಹಿರಂಗವಾಗಿ ಈ ಭಿನ್ನಮತವನ್ನು ತೋರಿಸದೇ ತೆಪ್ಪಗಾಗಿದ್ದಾರೆ. ಆದರೆ ಅಶೋಕ್ ಹಾಗೂ ಸಿ.ಟಿ.ರವಿ ಮಾತ್ರ ಸರ್ಕಾರಿ ಕಾರು ಮತ್ತು ಚಾಲಕನನ್ನು ವಾಪಸ್ ಕಳಿಸಿ ಸ್ವಂತ ಕಾರು ಬಳಸುವ ಮೂಲಕ ಪ್ರತಿಭಟನೆಯ ಕುರುಹು ತೋರಿಸಿದ್ದಾರೆ.

ಮಾಜಿ ಸಿಎಂ ಶೆಟ್ಟರ್‍ಗೂ ಸ್ಟಾಪ್ ಸಿಗ್ನಲ್
ಲಿಂಗಾಯತ ಸಮುದಾಯದ ಮಾಜಿ ಸಿಎಂ ಜಗದೀಶ ಶೆಟ್ಟರ್‍ಗೂ ನಿಯಂತ್ರಣ ಹಾಕಲು ಅವರಿಗೂ ಡಿಸಿಎಂ ಪಟ್ಟ ನಿರಾಕರಿಸಲಾಗಿದೆ. ಸಚಿವ ಸ್ಥಾನದ ಪಟ್ಟಿಯಲ್ಲೂ ಮೊದಲ ಐದು ಸಾನಗಳಲ್ಲಿ ಶೆಟ್ಟರ್‍ಗೆ ಅವಕಾಶವಿಲ್ಲ. ಹಾಗೆಯೇ ಎರಡನೇ ಹಂತದ ನಾಯಕ ಲಿಂಗಾಯತ ಸಮುದಾಯದ ಲಕ್ಷ್ಮಣ ಸವದಿಗೆ ಅಚ್ಚರಿಯ ರೀತಿಯಲ್ಲಿ ಡಿಸಿಎಂ ಸ್ಥಾನ ನೀಡುವ ಮೂಲಕ ಯಡಿಯೂರಪ್ಪ ಮತ್ತು ಶೆಟ್ಟರ್‍ಗೆ ಪರ್ಯಾಯವಾಗಿ ಸವದಿಯವರನ್ನು ಲಿಂಗಾಯತ ನಾಯಕರನ್ನಾಗಿ ಬಿಂಬಿಸುವ ಉದ್ದೇಶವನ್ನು ಸಂತೋಷ್ ಮತ್ತು ಶಾ ಹೊಂದಿದ್ದಾರೆ.

ಹಿಂದೊಮ್ಮೆ ಡಿಸಿಎಂ ಆಗಿದ್ದ ಈಶ್ವರಪ್ಪ ಈ ಸಲವೂ ಆ ಹುದ್ದೆಯ ಕನಸು ಕಾಣುತ್ತಿದ್ದರು. ರಾಜ್ಯದ ಜನಸಂಖ್ಯೆಯಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಕುರುಬ ಸಮುದಾಯದ ಈಶ್ವರಪ್ಪರಿಗೆ ಗ್ರಾಮೀಣಾಭಿವೃದ್ಧಿ ನೀಡಿ ಡಿಸಿಎಂ ಪಟ್ಟವನ್ನು ನಿರಾಕರಿಸಲಾಗಿದೆ.

ಹೀಗೆ ಬಿ.ಎಲ್.ಸಂತೋಷ್ ಒಂದೇ ಏಟಿಗೆ ನಾಲ್ವರು ಪ್ರಮುಖ ಬಿಜೆಪಿ ನಾಯಕರನ್ನು ಬಗ್ಗು ಬಡಿದು ತಮ್ಮ ಇಷ್ಟದ ಸಚಿವ ಸಂಪುಟವನ್ನು ಮತ್ತು ತಮಗೆ ಬೇಕಾದ ಡಿಸಿಎಂಗಳನ್ನು ತುರುಕುವ ಮೂಲಕ ಹೆಚ್ಚೂ ಕಡಿಮೆ ತಾನೇ ರಿಮೋಟ್ ಮುಖ್ಯಮಂತ್ರಿ ಎಂಬುದನ್ನು ಸಾಧಿಸಲು ಹೊರಟಂತಿದೆ.

ಸಾಕಷ್ಟು ಅಸಮಾಧಾನವಿದ್ದರೂ ರಾಜ್ಯದ ಹಲವಾರು ಬಿಜೆಪಿ ನಾಯಕರು ಬಾಲ ಮುದುರಿಕೊಂಡು ಕೂತಿದ್ದಾರೆ. ಸ್ವತಃ ಯಡಿಯೂರಪ್ಪನವರೇ ಎಲ್ಲ ಹತಾಶೆ, ಅವಮಾನಗಳ ನಡುವೆ ಗಪ್‍ಚುಪ್ ಕೂತಿದ್ದಾರಲ್ಲ?

ಜನರು ಚುನಾಯಿಸಿದ ಪ್ರಾದೇಶಿಕ ಜನಪ್ರತಿನಿಧಿಗಳ ಸರ್ಕಾರಗಳನ್ನು ದಿಲ್ಲಿಯ ನಾಯಕರು ತಮ್ಮ ಹತೋಟಿಗೆ ತೆಗೆದುಕೊಳ್ಳುವುದು ಇಂದಿರಾಗಾಂಧಿ ಕಾಲದಲ್ಲೇ ಶುರುವಾಗಿತ್ತು. ಅದನ್ನು ಇನ್ನಷ್ಟು ರುತ್‍ಲೆಸ್‍ಆಗಿ ಮಾಡಲು ಮೋದಿ-ಶಾ ನಿರ್ಧರಿಸಿದ್ದಾರೆ. ಕರ್ನಾಟಕದ ಮಟ್ಟಿಗೆ ಅದರ ಪ್ರಮುಖ ಆಟಗಾರ ಬಿ.ಎಲ್.ಸಂತೋಷ್ ಆಗಿದ್ದಾರೆ. ಇಂದಲ್ಲಾ ನಾಳೆ, ಯಡಿಯೂರಪ್ಪನವರ ಜಾಗದಲ್ಲಿ ತಾನು ಕೂರಲು ಬಯಸಿದಾಗ ಅವರಿಗೆ ಯಾವ ಅಡ್ಡಿಯೂ ಇರದಂತೆ ಮಾಡಲು ಬೇಕಾದ ಎಲ್ಲಾ ವ್ಯವಸ್ಥೆಗಳನ್ನೂ ಸಂತೋಷ್ ಮಾಡಿಕೊಂಡಿದ್ದಾರೆ. ಸೀಟಿ ರವಿ ಮತ್ತು ಆರ್.ಅಶೋಕ್ ಹಾಕಿರುವ ಗುಟುರು ಸಹಾ ತಣ್ಣಗಾಗಲಿದ್ದು, ಮುಂದಿನ ದಿನಗಳಲ್ಲಿ ಸ್ವತಃ ಯಡಿಯೂರಪ್ಪನವರೇ ಬಂಡಾಯ ನಾಯಕರಾಗುವ ಸಾಧ್ಯತೆ ಇದೆಯೇ ಎಂಬುದನ್ನು ಕಾದು ನೋಡಬೇಕಿದೆ.

ಐದನೇ ಬಲಿಪಶು ಕುಮಾರಸ್ವಾಮಿ!
ಇದು ವಿಚಿತ್ರ ಅನಿಸಿದರೂ ಸತ್ಯ. ಆಕಸ್ಮಿಕ ಯಡಿಯೂರಪ್ಪ ಏನಾದರೂ ಬಂಡಾಯವೆದ್ದರೆ ಅವರ ಹಿಂದೆ ಬಹಳ ಎಂದರೆ ಎಂಟತ್ತು ಶಾಸಕರು ಹೋಗಬಹುದು. ಅಶೋಕ್ ಹಿಂದೆ ಒಂದಿಬ್ಬರು ಹೋದಾರು. ಹೀಗೊಮ್ಮೆ ನಡೆದರೂ ಅದನ್ನು ಎದುರಿಸಲೂ ಸಂತೋಷ್-ಶಾ ಜೋಡಿ ಪರ್ಯಾಯವೊಂದನ್ನೂ ರೂಪಿಸಿಕೊಂಡಿದ್ದಾರೆ.

ಈಗಾಗಲೇ ಅವರು ಕೇಂದ್ರದ ಅಧಿಕಾರ ಬಳಸಿ ಕುಮಾರಸ್ವಾಮಿಯನ್ನೂ ತಮ್ಮ ಖೆಡ್ಡಾಕ್ಕೆ ಕೆಡವಿಕೊಂಡಿದ್ದಾರೆ. ಐಎಂಎ ಕೇಸು ಮತ್ತು ಫೋನ್ ಕದ್ದಾಲಿಕೆ ಪ್ರಕರಣಗಳನ್ನು ಮುಂದಿಟ್ಟುಕೊಂಡು ಕುಮಾರಸ್ವಾಮಿಯವರನ್ನು ಮೆತ್ತಗೆ ಮಾಡಲಾಗುತ್ತಿದೆ. ಉಳಿದಂತೆ ಐಟಿ ಇಲಾಖೆ ಮತ್ತು ಸಿಬಿಐ ಭೂತಗಳ ಭಯವನ್ನೂ ಬಿತ್ತುವ ತಯಾರಿ ನಡೆಸಲಾಗಿದೆ. ಇದರ ಪರಿಣಾಮವಾಗಿ ಬಿಜೆಪಿಯಲ್ಲಿ ಬಂಡಾಯ ಶುರುವಾದರೂ ಜೆಡಿಎಸ್ ಬೆಂಬಲವನ್ನು ಅಮಿತ್ ಶಾ ಮತ್ತು ಸಂತೋಷ್ ಪಕ್ಕಾ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ರಾಷ್ಟ್ರೀಯ ಬಿಜೆಪಿ ಸಂಘಟನಾ ವಿಷಯ ಮತ್ತು ಬಿಜೆಪಿಯ ರಾಜ್ಯ ಸರ್ಕಾರಗಳ ವಿಚಾರದಲ್ಲಿ ಅಮಿತ್ ಶಾ ನಿರ್ಣಯಗಳೇ ಅಂತಿಮ. ಶಾ ನಂತರದ ಸ್ಥಾನದಲ್ಲಿ ಜೆ.ಪಿ.ನಡ್ಡಾ ಇದ್ದರೆ, ಮೂರನೇ ಸ್ಥಾನದಲ್ಲಿ ಸಂತೋಷ್ ಇದ್ದಾರೆ. ಹೀಗಾಗಿ ಇನ್ನು ಮುಂದೆ ಹೆಸರಿಗಷ್ಟೇ ಯಡಿಯೂರಪ್ಪ ಸಿಎಂ, ಸಂತೋಷ್ ಡಿಫ್ಯಾಕ್ಟೋ ಸಿಎಂ…

ಬಂಡಾಯವೆದ್ದು ಯಡಿಯೂರಪ್ಪ ಹೊರಹೋದರೆ ಆಗ ಜೆಡಿಎಸ್ ಬೆಂಬಲದಲ್ಲಿ ಸಂತೋಷ್ ತಾನೆ ಸಿಎಂ ಕುರ್ಚಿಯಲ್ಲಿ ಕೂಡಲೂಬಹುದು ಅಥವಾ ಅವರ ಡಮ್ಮಿ ಒಬ್ಬರನ್ನು ಕೂರಿಸಬಹುದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. ಬ್ರಾಹ್ಮಣ ಚಾಲ್ ಈ ಮಾತು ಅವರೆ ಬಹುಜಾಣತನದವರು ಎಂದು ಹೇಳಿಕೊಳ್ಳುತ್ತಾರೆ! ಇದುವರೆಗೆ ಬ್ರಾಹ್ಮಣ ರಲ್ಲಿ ಜನಿಸಿದ ಮಹಾಮಾನವತಾವಾದಿ ಬಸವಣ್ಣನವರ ಎತ್ತರದವರು ಬಂದಿಲ್ಲ. ಇಂದು ಬ್ರಾಹ್ಮಣ ದಿಂದ ಬಸವ ಧರ್ಮ ಕ್ಕೆ ಬಂದು ತುಪ್ಪ ತಿಂದವರಿಂದ ಆಗುತ್ತಿರುವ ದುರಂತ ಬೇರೆಯವರಿಂದ ಆಗುತ್ಯಿಲ್ಲ ಎಂಬ ಮಾತು ನಿತ್ಯ ಸತ್ಯ ವಾಗಿದೆ. ಒಂದು ದಿನ ಖಾಲಿಯಾಗುವ ಇಲ್ಲದ ಧರ್ಮ ದಿಂದ ಬಸವಧರ್ಮ ಕ್ಕೆ ಬಂದರೆ ಭಾರತಕ್ಕೆ ಉಳಿಗಾಲವಿದೆ ತಿಳಿಯಿರಿ.
    ಧರ್ಮ ಗ್ರಂಥವಿಲ್ಲದ, ಏಕರೂಪದ ಧರ್ಮ ದೀಕ್ಷೆ ಇಲ್ಲದ ಧರ್ಮ‌ ಗುರು ಇಲ್ಲದ ಧರ್ಮ ಧರ್ಮ ವೇ? ಸ. ಮಾ ನ ತೆ, ಸಹೋದರತೆ, ಬ ರ ಮಾಡಿಕೊಳ್ಳಲಿ. ಮೋಸಗಾರಿಕೆಯೆ ಅವರ ಜಾಣತನ ಆಗದಿರಲಿ.
    ಬುದ್ಧನ
    ಶಾಂತಿ
    ಬಸವನ
    ಕ್ರಾಂತಿ
    ಭೀಮನ
    ಉತ್ ಕ್ರಾಂತಿ
    ಇವು
    ಮೂರು
    ಬಿಟ್ಟರೆ
    ಭಾರತ ದಲ್ಲಿ
    ಬರಿ
    ಭ್ರಾಂತಿ!!!

LEAVE A REPLY

Please enter your comment!
Please enter your name here

- Advertisment -

ನಿರುದ್ಯೋಗಿ ಯುವಕರನ್ನು ಜಿರಳೆಗಳು ಎಂದ ಸಿಜೆಐ: ಇದೆಂತಾ ಮಾತು ನ್ಯಾಯಮೂರ್ತಿಗಳೇ!

‘ಕೆಲವು ನಿರುದ್ಯೋಗಿ ಯುವಕರು ಜಿರಳೆಗಳಂತೆ ಸಮಾಜವನ್ನು ಕಾಡುತ್ತಾರೆ. ಉದ್ಯೋಗ, ಸ್ಥಾನಮಾನ ಸಿಗದೆ ಇದ್ದಾಗ ಅವರು ಎಲ್ಲರ ಮೇಲೆ ದಾಳಿ ಆರಂಭಿಸುತ್ತಾರೆ’ ಇದು ಯಾವುದೋ ರಾಜಕೀಯ ರ‍್ಯಾಲಿಯ ಭಾಷಣವಲ್ಲ ಅಥವಾ ಟಿವಿ ಚಾನೆಲ್‌ಗಳ ಜಗಳವಲ್ಲ,...

ಮುಸ್ಲಿಮರು ಕೇವಲ ವೋಟು ಹಾಕಿಕೊಂಡೇ ಇರಬೇಕಾ..ಹಕ್ಕುಗಳನ್ನು ಕೇಳಬಾರದಾ?: ಕಾಂಗ್ರೆಸ್‌ಗೆ ಮುಸ್ಲಿಂ ಸಮಾವೇಶ ಪ್ರಶ್ನೆ

"ಮುಸ್ಲಿಮರು ಕೇವಲ ವೋಟು ಹಾಕಿಕೊಂಡೇ ಇರಬೇಕಾ? ಯಾವ ಹಕ್ಕನ್ನೂ ಕೇಳಬಾರದು ಎಂದು ನೀವು (ಕಾಂಗ್ರೆಸ್‌ನವರು) ಬಯಸುತ್ತಿದ್ದೀರಾ?" ಎಂದು ಕರ್ನಾಟಕ ಮುಸ್ಲಿಂ ಸಮಾವೇಶ ಖಾರವಾಗಿ ಪ್ರಶ್ನಿಸಿತು. ಬೆಂಗಳೂರಿನ ಪುರಭವನದಲ್ಲಿ ಇಂದು (ಮೇ 16, ಶನಿವಾರ) ನಡೆದ...

“ಸನಾತನ ಬೇರುಗಳಲ್ಲಿರುವ ಅಸಮಾನತೆಗೆ ದ್ರಾವಿಡ ನೆಲದ ಪ್ರತಿರೋಧ”: ಉದಯನಿಧಿ ಹೇಳಿಕೆ ವಿವಾದವಾಗಿದ್ದೇಗೆ..?

ಸನಾತನ ಸಂಸ್ಥೆಗಳನ್ನು ಮತ್ತು ಸನಾತನ ಧರ್ಮವನ್ನು ನಿರ್ಮೂಲನೆ ಮಾಡುವ ಬಗ್ಗೆ ಉದಯನಿಧಿ ಸ್ಟಾಲಿನ್ ಅವರ ಹೇಳಿಕೆಗಳು ಸದ್ಯ ದೇಶಾದ್ಯಂತ ಸಂಚಲನ ಮೂಡಿಸಿವೆ.  ತಮಿಳುನಾಡು ವಿಧಾನಸಭೆಯಲ್ಲಿ ನೂತನ ಮುಖ್ಯಮಂತ್ರಿಯಾಗಿ ಸಿ. ಜೋಸೆಫ್ ವಿಜಯ್ ಅವರು ಅಧಿಕಾರ...

ನೇತ್ರಾವತಿ ತೀರದಲ್ಲಿ ‘ಅಂತರಗಂಗೆ’ಯಂತೆ ಹರಿಯುತ್ತಿರುವ ಪ್ರತಿರೋಧ: ವೇದವಲ್ಲಿಯಿಂದ ಸೌಜನ್ಯಳವರೆಗೆ ಪ್ರತಿಧ್ವನಿಸುತ್ತಿರುವ ಪ್ರಶ್ನೆ-‘ಕೊಂದವರು ಯಾರು?’

ಪ್ರಪಂಚದಾದ್ಯಂತ ಪಿತೃಪ್ರಧಾನ ವ್ಯವಸ್ಥೆ ಮತ್ತು ಪ್ರಭುತ್ವಗಳು ಹಲವು ರೀತಿಗಳಲ್ಲಿ ಮಹಿಳೆಯರನ್ನು ದಮನಿಸುವ ವಿಧಾನಗಳನ್ನು ಕಂಡುಕೊಂಡು ಕರಗತ ಮಾಡಿಕೊಂಡಿವೆ. ಅದರಲ್ಲಿ ಅತ್ಯಂತ ಪರಿಣಾಮಕಾರಿಯಾದುದು, ದೇವರು, ಭಕ್ತಿ ಮತ್ತು ಧರ್ಮದ ಹೆಸರಿನಲ್ಲಿ ಮಹಿಳೆಯರನ್ನು ದಮನಕ್ಕೊಳಪಡಿಸುವ ತಂತ್ರ....

ರೂ. 170 ಕೋಟಿ ದಂಡ ಪಾವತಿಸಲು ಮುಂದಾದ ಅದಾನಿ : ಏನಿದು ಪ್ರಕರಣ?

ಅಮೆರಿಕದ ನ್ಯಾಯಾಲಯದಲ್ಲಿ ದಾಖಲಾಗಿದ್ದ ವಂಚನೆ ಮತ್ತು ಲಂಚದ ಪ್ರಕರಣಕ್ಕೆ ಸಂಬಂಧಿಸಿದಂತೆ, ಉದ್ಯಮಿ ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿ ಒಟ್ಟು 18 ಮಿಲಿಯನ್ ಡಾಲರ್ (ಸುಮಾರು 170 ಕೋಟಿ ರೂಪಾಯಿ) ದಂಡ ಪಾವತಿಸಲು ಒಪ್ಪಿಕೊಳ್ಳುವ ಮೂಲಕ...

ಭೋಜಶಾಲಾ-ಕಮಲ್ ಮೌಲಾ ಪ್ರಕರಣದಲ್ಲಿ ಹಿಂದೂಗಳ ಪರ ತೀರ್ಪು…ಮಸೀದಿಯಲ್ಲ ದೇವಸ್ಥಾನವೆಂದ ಕೋರ್ಟ್ : ಏನಿದು ವಿವಾದ?

ಸುಮಾರು 100 ವರ್ಷಗಳ ಹಳೆಯ ವಿವಾದವಾದ ಭೋಜಶಾಲಾ-ಕಮಲ್ ಮೌಲಾ ಮಸೀದಿ ಪ್ರಕರಣದಲ್ಲಿ ಶುಕ್ರವಾರ (ಮೇ 15) ಮಧ್ಯಪ್ರದೇಶ ಹೈಕೋರ್ಟ್ ತೀರ್ಪು ನೀಡಿದ್ದು, ಭೋಜಶಾಲಾದಲ್ಲಿರುವ ಐತಿಹಾಸಿಕ ಸ್ಥಳವು ಸರಸ್ವತಿ ದೇವಿಗೆ ಸಮರ್ಪಿತವಾದ ದೇವಾಲಯವಾಗಿದೆ ಎಂದು...

“ಮಹಿಳಾ ಮೀಸಲಾತಿ ಮುಖವಾಡದಲ್ಲಿ ಡಿಲಿಮಿಟೇಷನ್ ಕುತಂತ್ರ ವಿಫಲ” ಬಿಜೆಪಿಗೆ ದಕ್ಷಿಣ ಭಾರತದ ಎಚ್ಚರಿಕೆ

ಮೋದಿ ನೇತೃತ್ವದ ಕೇಂದ್ರ ಸರ್ಕಾರವು 2026ರ ಏಪ್ರಿಲ್ 16ರಂದು ಸಂಸತ್ತಿನ ವಿಶೇಷ ಅಧಿವೇಶನ ಕರೆದು, ಮಹಿಳಾ ಮೀಸಲಾತಿ ಅನುಷ್ಠಾನವನ್ನು ತ್ವರಿತಗೊಳಿಸುವ ನೆಪವನ್ನು ಮುಂದುಮಾಡಿ ಮೂರು ಮಸೂದೆಗಳನ್ನು ಮಂಡಿಸಿತು. ಇವುಗಳಲ್ಲಿ ಪ್ರಮುಖವಾದ ಸಂವಿಧಾನ (131ನೇ...

ಹೊಸ ಕಾರ್ಮಿಕ ಕಾನೂನು ಶ್ರಮಿಕರ ಮೂಲಭೂತ ಹಕ್ಕುಗಳಿಗೆ ಕತ್ತರಿ!

"8 ಗಂಟೆ ಕೆಲಸ, 8 ಗಂಟೆ ಮನರಂಜನೆ, 8 ಗಂಟೆ ವಿಶ್ರಾಂತಿ" ಎಂಬ ತತ್ವವು ಸುಲಭವಾಗಿ ದೊರೆತದ್ದಲ್ಲ, ಇದು ದೀರ್ಘಕಾಲದ ಹೋರಾಟ, ತ್ಯಾಗ ಮತ್ತು ಏಕತೆಯ ಫಲವಾಗಿದೆ. ಕೆಲಸದ ಹೊರೆ ಅತಿಯಾಗಿ ಇದ್ದ...

ಮನರೇಗಾ ಯಶೋಗಾಥೆ: ಭಾಗ-1 ದಲಿತರು-ಮಹಿಳೆಯರಿಗೆ ಆರ್ಥಿಕ ಭದ್ರತೆ; ಗ್ರಾಮ ಸಬಲೀಕರಣಕ್ಕೆ ಮನರೇಗಾ ಕೊಟ್ಟ ಕೊಡುಗೆ ಅಪಾರ

2001-2004 ರವರೆಗಿನ ನಿರಂತರ ಬರ ಕರ್ನಾಟಕದ ಬಹುತೇಕ ಹಳ್ಳಿಗಳನ್ನು ಕಂಗಾಲಾಗಿಸಿದ್ದಂತೂ ನಿಜ. ಎಲ್ಲ ಕೆರೆಗಳು ಬತ್ತಿಹೋಗಿದ್ದರಿಂದ ದನಕರುಗಳಿಗೆ ನೀರು ಕುಡಿಸಲೂ ಜನ ಅಲೆದಾಡುತ್ತಿದ್ದರು. ಜನರಿಗೆ ಕುಡಿಯುವ ನೀರು ಪೂರೈಕೆ ಸಹ ಆ ಸಂದರ್ಭದಲ್ಲಿ...

ಮಣಿಪುರ: ಬುಡಕಟ್ಟು ಚರ್ಚ್ ನಾಯಕರ ಮೇಲೆ ಉಗ್ರ ದಾಳಿ:  ಹಲವೆಡೆ ಮೇಣದ ಬತ್ತಿಯ ಜೊತೆಗೆ ಶೋಕ ವ್ಯಕ್ತ ಪಡಿಸಿದ ಕುಕಿ ಸಮುದಾಯ 

ಇಂಫಾಲ್: ಮಣಿಪುರದ ಕಾಂಗ್‌ಪೋಕ್ಪಿ ಜಿಲ್ಲೆಯಲ್ಲಿ ಮೂವರು ಪ್ರಮುಖ ಕುಕಿ ಚರ್ಚ್ ನಾಯಕರನ್ನು ಹೊಂಚು ಹಾಕಿ ದಾಳಿ ನಡೆಸಿ ಕೊಲ್ಲಲಾಗಿದೆ. ಈ ಘಟನೆಯು ರಾಜ್ಯದಲ್ಲಿ ಜನಾಂಗೀಯ ಉದ್ವಿಗ್ನತೆಯನ್ನು ಮತ್ತಷ್ಟು ತೀವ್ರಗೊಳಿಸಿದೆ.  ಮೇ 13ರಂದು ಬೆಳಿಗ್ಗೆ ಚುರಾಚಂದ್‌ಪುರನಲ್ಲಿ...