ಕಝಾಕಿಸ್ತಾನ್ ನಲ್ಲಿ ಇಂಧನ ಬೆಲೆಗಳ ಹೆಚ್ಚಳವನ್ನು ವಿರೋಧಿಸಿ ನಡೆದ ಪ್ರತಿಭಟನೆಗಳು ಹಿಂಸಾಚಾರಕ್ಕೆ ತಿರುಗಿವೆ. ಬೆಲೆ ಏರಿಕೆ ವಿರುದ್ದ ಪ್ರಾರಂಭವಾಗಿದ್ದ ಪ್ರತಿಭಟನೆಯು ಇದೀಗ ಸರ್ಕಾರಿ ವಿರೋಧಿ ಗಲಭೆಯಾಗಿ ಮಾರ್ಪಟ್ಟಿದ್ದು, 12 ಹೆಚ್ಚು ಪ್ರತಿಭಟನಾಕಾರರು ಹಾಗೂ 18 ಪೊಲೀಸರು ಮೃತಪಟ್ಟಿದ್ದಾರೆ. ಇದರಲ್ಲಿ ಒಬ್ಬ ಪೊಲೀಸ್ ಅಧಿಕಾರಿಯ ಶಿರಚ್ಛೇದ ಮಾಡಿರುವುದಾಗಿ ವರದಿಯಾಗಿದೆ.
ಬುಧವಾರದಂದು ದೇಶದ ಅತಿದೊಡ್ಡ ನಗರವಾದ ನೂರ್ ಸುಲ್ತಾನ್ನಲ್ಲಿರುವ ಅಧ್ಯಕ್ಷರ ನಿವಾಸ ಮತ್ತು ಅಲ್ಮಾಟಿಯ ಮೇಯರ್ ಕಚೇರಿಗೆ ನುಗ್ಗಿದ ಪ್ರತಿಭಟನಾಕಾರರು ರಾತ್ರಿಯಿಡೀ ಹಲವು ಕಟ್ಟಡಗಳಿಗೆ ದಾಳಿ ಮಾಡಲು ಪ್ರಯತ್ನಿಸಿದ್ದಾರೆ. ಹಲವು ಸರ್ಕಾರಿ ಕಚೇರಿಗೆ ಪ್ರತಿಭಟನಾಕಾರರು ಬೆಂಕಿ ಹಚ್ಚಿದ್ದಾರೆ.
ಇದನ್ನೂ ಓದಿ:ಗಾಲ್ವಾನ್ ಕಣಿವೆಯಲ್ಲಿ ಚೀನಿ ಧ್ವಜಾರೋಹಣ: ಮೋದಿ ಮೌನ ಪ್ರಶ್ನಿಸಿದ ಖರ್ಗೆ
“ಡಜನ್ಗಟ್ಟಲೆ ದಾಳಿಕೋರರನ್ನು ಹತ್ಯೆ(liquidated) ಮಾಡಲಾಗಿದೆ” ಎಂದು ಪೊಲೀಸ್ ವಕ್ತಾರ ಸಲ್ತಾನಾತ್ ಅಜಿರ್ಬೆಕ್ ರಾಜ್ಯ ಸುದ್ದಿ ವಾಹಿನಿ ಖಬರ್ -24 ಗೆ ತಿಳಿಸಿದ್ದಾರೆ. ಉಗ್ರಗಾಮಿಗಳೆಂದು ಭಾವಿಸಲಾದ ಜನರನ್ನು ಕೊಲ್ಲುವುದನ್ನು ವಿವರಿಸಲು ಬಳಸುವ ಸಾಮಾನ್ಯ ಪದವನ್ನು ಅವರು ಬಳಸಿದ್ದಾರೆ.
ಕಝಾಕಿಸ್ತಾನ್ ಅಧ್ಯಕ್ಷರಾದ ಕಸ್ಸೈಂ ಜೋಮಾರ್ಟ್ ಟೋಕಾಯೆವ್ ಆರಂಭದಲ್ಲಿ ಪ್ರತಿಭಟನಾಕಾರರನ್ನು ಸಮಾಧಾನಪಡಿಸುವುದಕ್ಕೆ ಪ್ರಯತ್ನಿಸುತ್ತಿರುವಂತೆ ತೋರುತ್ತಿದ್ದರೂ, ನಂತರ ಅವರು ಅಶಾಂತಿಯನ್ನು ನಿಗ್ರಹಿಸಲು ಕಠಿಣಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಪ್ರತಿಜ್ಞೆ ಮಾಡಿದ್ದಾರೆ ಮತ್ತು ಇಡೀ ದೇಶದಲ್ಲಿ ಎರಡು ವಾರಗಳ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದಾರೆ.
ಅಶಾಂತಿಯನ್ನು ಅವರು “ಭಯೋತ್ಪಾದಕ ಬ್ಯಾಂಡ್” ಎಂದು ದೂಷಿಸಿದ್ದು, ಸಹಾಯಕ್ಕಾಗಿ ರಷ್ಯಾ ನೇತೃತ್ವದ ಮಿಲಿಟರಿ ಒಕ್ಕೂಟವನ್ನು ಕರೆದ್ದಾರೆ.
ಇದನ್ನೂ ಓದಿ:ಧರ್ಮ ಸಂಸದ್ನಲ್ಲಿ ದ್ವೇಷ ಭಾಷಣ: ಭಾರತದ ಉನ್ನತ ರಾಜತಾಂತ್ರಿಕರಿಗೆ ಸಮನ್ಸ್ ನೀಡಿದ ಪಾಕಿಸ್ತಾನ
ಈಗಾಗಲೆ, ಪ್ರತಿಭಟನೆಗಳನ್ನು ಹತ್ತಿಕ್ಕಲು ರಷ್ಯಾ ಮತ್ತು ಅದರ ಮಿತ್ರರಾಷ್ಟ್ರಗಳು ಪಡೆಗಳನ್ನು ಕಳುಹಿಸಿದೆ. ಆದರೆ ಇದನ್ನು ಅಮೇರಿಕಾ ವಿರೋಧಿಸಿದ್ದು, ‘ವಿಶ್ವವೂ ಗಮನಿಸುತ್ತಿದೆ’ ಎಂದು ಎಚ್ಚರಿಸಿದೆ.
ಪೆಟ್ರೋಲಿಯಂ ಅನಿಲ ಇಂಧನದ ಬೆಲೆಯಲ್ಲಿ ತೀವ್ರ ಏರಿಕೆಯಾಗುತ್ತಿರುವುದನ್ನು ವಿರೋಧಿಸಿ ಕಝಾಕಿಸ್ತಾನದಲ್ಲಿ ಭಾನುವಾರ ಪ್ರಾರಂಭವಾದ ಪ್ರತಿಭಟನೆಗಳು ತೀವ್ರಗೊಂಡಿದ್ದು ನಂತರದಲ್ಲಿ ದೇಶದ ಪಶ್ಚಿಮ ಅಲ್ಮಾಟಿ ಮತ್ತು ರಾಜಧಾನಿ ನೂರ್-ಸುಲ್ತಾನ್ಗೆ ಹಬ್ಬಿಕೊಂಡಿದೆ. ಮೂರು ದಶಕಗಳ ಹಿಂದೆ ಸ್ವಾತಂತ್ರ್ಯ ಗಳಿಸಿದ ಕಝಾಕಿಸ್ತಾನ್ನಲ್ಲಿ, ಪ್ರತಿಭಟನೆಯ ವೇಳೆ ನಡೆದ ಅತ್ಯಂತ ಭೀಕರ ಘಟನೆ ಇದು ಎಂದು ಮಾಧ್ಯಮಗಳು ಉಲ್ಲೇಖಿಸಿವೆ.
ಕಝಕಿಸ್ತಾನದಲ್ಲಿ ಬೆಲೆ ಏರಿಕೆಯ ಬಿಸಿ ತೀವ್ರವಾಗಿದ್ದು ಬೆಲೆ ಏರಿಕೆಯಿಂದಾಗಿ ಅಲ್ಲಿಯ ಜನರು ಬೇಸತ್ತಿದ್ದು, ಇದರ ಜೊತೆಗೆ ಹಣದುಬ್ಬರವು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. 2019ರಲ್ಲಿ ಅಧ್ಯಕ್ಷನಾದ ಕಸ್ಸೈಂ ಜೋಮಾರ್ಟ್ ಟೋಕಾಯೆವ್ ಜನರ ತೀವ್ರ ವಿರೋಧಕ್ಕೆ ಗುರಿಯಾಗಿದ್ದಾರೆ.
ಇದನ್ನೂ ಓದಿ:ಲಡಾಖ್: ಪಾಂಗಾಂಗ್ ಸರೋವರಕ್ಕೆ ಸೇತುವೆ ನಿರ್ಮಿಸುತ್ತಿರುವ ಚೀನಾ!