Homeಮುಖಪುಟರಾಷ್ಟ್ರೀಯ ಪಕ್ಷ ಸ್ಥಾಪನೆ ಮಾಡುವತ್ತ ಕೆಸಿಆರ್‌‌? ಏನಿದು ತಂತ್ರಗಾರಿಕೆ?

ರಾಷ್ಟ್ರೀಯ ಪಕ್ಷ ಸ್ಥಾಪನೆ ಮಾಡುವತ್ತ ಕೆಸಿಆರ್‌‌? ಏನಿದು ತಂತ್ರಗಾರಿಕೆ?

- Advertisement -
- Advertisement -

ಕೆಸಿಆರ್ ಎಂದೇ ಖ್ಯಾತರಾಗಿರುವ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಗೆ ಸೆಡ್ಡು ಹೊಡೆಯಲು ಯಾವುದೋ ಒಂದು ದೊಡ್ಡ ಪ್ರಯೋಗದಲ್ಲಿ ತೊಡಗಿದ್ದಾರೆ.

ಅಧಿಕೃತವಾಗಿ ಇನ್ನೂ ಘೋಷಿಸದಿದ್ದರೂ, ತೆಲಂಗಾಣ ರಾಷ್ಟ್ರ ಸಮಿತಿ (TRS) ಶೀಘ್ರದಲ್ಲೇ BRS (ಭಾರತೀಯ ರಾಷ್ಟ್ರ ಸಮಿತಿ) ಎಂದು ಮರುನಾಮಕರಣಗೊಂಡು ರಾಷ್ಟ್ರೀಯ ಪಕ್ಷವಾಗಿ ಹೊಮ್ಮಲಿದೆ. ಕೆಸಿಆರ್ ಅವರು ತಮ್ಮ ಕಾರ್ಯತಂತ್ರಗಳು ಮತ್ತು ಯೋಜನೆಗಳನ್ನು ರೂಪಿಸುವಲ್ಲಿ ನಿರತರಾಗಿದ್ದಾರೆ ಎಂದು ‘ದಿ ನ್ಯೂಸ್‌ ಮಿನಿಟ್‌’ ಜಾಲತಾಣ ವರದಿ ಮಾಡಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಈ ವಿದ್ಯಮಾನದ ಹಿಂದೆ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಕೈವಾಡವಿದೆ ಎಂದು ಕೆಲವರು ಹೇಳುತ್ತಿದ್ದಾರೆ. ರಾಷ್ಟ್ರೀಯ ಮಟ್ಟದ ಆಕಾಂಕ್ಷೆಯನ್ನು ಹೊಂದಿದ್ದ ತೆಲುಗು ದೇಶಂ ಪಕ್ಷದ (ಟಿಡಿಪಿ) ಸಂಸ್ಥಾಪಕ ಮತ್ತು ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್‌.ಟಿ.ರಾಮರಾವ್ (ಎನ್‌ಟಿಆರ್) ನಂತರದಲ್ಲಿ ಈ ಹೆಜ್ಜೆ ಇರಿಸುತ್ತಿರುವ ದಕ್ಷಿಣ ಭಾರತದ ಮೊದಲು ರಾಜಕಾರಣಿ ಎಂದು ಕೆಸಿಆರ್‌ ಅವರನ್ನು ಕೆಲವರು ಗುರುತಿಸುತ್ತಿದ್ದಾರೆ.

‘ನ್ಯೂಸ್‌ ಮಿನಿಟ್‌’ ಜೊತೆ ಮಾತನಾಡಿರುವ ರಾಜಕೀಯ ವಿಶ್ಲೇಷಕ ಪಿ.ಪವನ್, “ಎನ್‌ಟಿಆರ್ ರಾಷ್ಟ್ರೀಯ ಪಕ್ಷ (ಭಾರತ ದೇಶಂ ಪಕ್ಷ) ಪ್ರಾರಂಭಿಸಲು ಪ್ರಯತ್ನಿಸಿದರೂ ಯಶಸ್ಸಾಗಲಿಲ್ಲ. ನಂತರ, ಚಂದ್ರಬಾಬು ನಾಯ್ಡು ಅವರು ಟಿಡಿಪಿಯನ್ನು ರಾಷ್ಟ್ರೀಯ ಪಕ್ಷವಾಗಿ ನೋಂದಾಯಿಸಿಕೊಂಡರು. ಆದರೆ ಪ್ರಧಾನಿ ಸ್ಥಾನದ ಮೇಲೆ ಅವರ ಕಣ್ಣು ಎಂದಿಗೂ ಇರಲಿಲ್ಲ. ಅವರೇ ಈ ಪ್ರಸ್ತಾಪವನ್ನು ಒಮ್ಮೆ ಅಲ್ಲ ಎರಡು ಬಾರಿ ತಿರಸ್ಕರಿಸಿದ್ದಾರೆ” ಎಂದಿದ್ದಾರೆ.

“ಎನ್‌ಟಿಆರ್‌ ನಂತರದಲ್ಲಿ ರಾಷ್ಟ್ರ ರಾಜಕಾರಣದ ಮೇಲೆ ಕಣ್ಣಿಟ್ಟಿರುವ ಮೊದಲ ಮುಖ್ಯಮಂತ್ರಿಯಾಗಿಯೂ ಕೆಸಿಆರ್‌ ಹೊಮ್ಮುತ್ತಾರೆ. ರಾಜಕೀಯ ಒತ್ತಡಗಳಿಂದಾಗಿ ದಕ್ಷಿಣ ಭಾರತದ ರಾಜಕಾರಣಿಗಳಾದ ಪಿ.ವಿ.ನರಸಿಂಹರಾವ್ ಮತ್ತು ಎಚ್‌.ಡಿ.ದೇವೇಗೌಡರು ರಾಷ್ಟ್ರಮಟ್ಟದಲ್ಲಿ ನಾಯಕರಾಗಿ ಹೊರಹೊಮ್ಮಲು ಸಾಧ್ಯವಾಯಿತು” ಎನ್ನುತ್ತಾರೆ ಪವನ್‌.

ಪಕ್ಷದ ಹೆಸರು ಇನ್ನೂ ಪರಿಗಣನೆಯಲ್ಲಿದೆ. ಇನ್ನೂ ಅಂತಿಮಗೊಂಡಿಲ್ಲ ಎಂದು ಟಿಆರ್‌ಎಸ್‌ನ ಉನ್ನತ ಮೂಲಗಳು ಹೇಳುತ್ತವೆ. ಜುಲೈ 2 ಮತ್ತು 3 ರಂದು ಹೈದರಾಬಾದ್‌ನಲ್ಲಿ ನಡೆಯಲಿರುವ ಬಿಜೆಪಿ ಕಾರ್ಯಕಾರಿ ಸಭೆಯ ಮೊದಲು ಅದನ್ನು ಅಧಿಕೃತಗೊಳಿಸಲು ಪಕ್ಷವು ಯೋಜಿಸಿದೆ ಎಂದು ಮೂಲವು ಬಹಿರಂಗಪಡಿಸಿದೆ.

‘ನವ ಭಾರತ್ ಪಕ್ಷ’, ‘ಜೈ ಭಾರತ್‌’ ಮತ್ತು ‘ಭಾರತ್ ರಾಷ್ಟ್ರ ಸಮಿತಿ’ ಎಂಬ ಹೆಸರುಗಳು ಪರಿಗಣನೆಯಲ್ಲಿವೆ ಎನ್ನಲಾಗುತ್ತಿದೆ. ಹೆಸರನ್ನು ಬದಲಾಯಿಸಬೇಕಾಗಿದ್ದರೂ, ಪಕ್ಷದ ಧ್ವಜ ಮತ್ತು ಅದರ ಟ್ರೇಡ್‌ಮಾರ್ಕ್ ಗುಲಾಬಿ ಬಣ್ಣವನ್ನು ಉಳಿಸಿಕೊಳ್ಳಲಾಗುತ್ತಿದೆ. ಪಕ್ಷದ ಧ್ವಜದಲ್ಲಿರುವ ತೆಲಂಗಾಣ ನಕ್ಷೆಯನ್ನು ಭಾರತೀಯ ಧ್ವಜ ಅಥವಾ ಭಾರತ ಮಾತೆಯ ಚಿತ್ರ ಅಥವಾ ಎರಡರ ಸಂಯೋಜನೆಯೊಂದಿಗೆ ಬದಲಾಯಿಸಬಹುದು ಎನ್ನಲಾಗುತ್ತಿದೆ.

ಕೆಸಿಆರ್ ರಾಷ್ಟ್ರೀಯ ರಾಜಕೀಯಕ್ಕೆ ಪ್ರವೇಶಿಸುವುದು ವಾಸ್ತವವಾಗಿ ರಾಜ್ಯ ರಾಜಕೀಯಕ್ಕೆ ಸಂಬಂಧಿಸಿದೆ ಎಂದು ಹೆಸರು ಹೇಳಲಿಚ್ಛಿಸದ ರಾಜಕೀಯ ವಿಶ್ಲೇಷಕರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

“ಒಂದು ರಾಜ್ಯದ ನಾಯಕ ತನ್ನನ್ನು ತಾನು ರಾಷ್ಟ್ರೀಯ ನಾಯಕ ಎಂದು ಬಿಂಬಿಸಿಕೊಂಡಾಗ, ಅದು ಮೂಲತಃ ರಾಜ್ಯದ ಹೆಮ್ಮೆಯನ್ನು ಇಮ್ಮಡಿಗೊಳಿಸುತ್ತದೆ. ಒಬ್ಬ ರಾಜ್ಯದ ನಾಯಕನಿಗೆ ರಾಷ್ಟ್ರೀಯ ಮಹತ್ವಾಕಾಂಕ್ಷೆಗಳಿವೆ ಮತ್ತು ತೆಲಂಗಾಣ ಹೆಮ್ಮೆಯನ್ನು ಸ್ವಾಗತಿಸಿ ಎಂದು ಕೆಸಿಆರ್ ಅವರು ತೆಲಂಗಾಣ ಜನತೆಗೆ ಹೇಳಲು ಬಯಸುತ್ತಿದ್ದಾರೆ. ಇದು ರಾಜ್ಯದ ಚುನಾವಣೆಗೆ ಸಹಾಯ ಮಾಡುತ್ತದೆ ಎಂದು ಕೆಸಿಆರ್‌ ನಂಬಿದ್ದಾರೆ” ಎಂಬುದು ರಾಜಕೀಯ ವಿಶ್ಲೇಷಕರ ಮಾತು.

ಇದನ್ನೂ ಓದಿರಿ: ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ವಿರುದ್ಧ ‘ಚಾರ್ಜ್‌ ಶೀಟ್‌’ ಹೊರಡಿಸಿದ ಬಹುತ್ವ ಕರ್ನಾಟಕ!

ಕೆಸಿಆರ್ ಅವರು ಬೇರೆ ರಾಜ್ಯಗಳಲ್ಲಿ ಚುನಾವಣೆಗೆ ಸ್ಪರ್ಧಿಸುವ ಯಾವುದೇ ನೈಜ ಯೋಜನೆಯನ್ನು ಹೊಂದಿದ್ದಾರೆ ಎಂದು ತಂತ್ರಜ್ಞರು ನಂಬುವುದಿಲ್ಲ. 2014ರಲ್ಲಿ ಜಯಲಲಿತಾ ಅವರು ರಾಷ್ಟ್ರೀಯ ನಾಯಕಿಯಾಗಿ ತಮ್ಮನ್ನು ತಾವು ಬಿಂಬಿಸಿಕೊಂಡಿದ್ದರು ಎಂಬುದನ್ನು ನೆನಪಿಸಿಕೊಳ್ಳಬಹುದು. ಇದು ಅವರ ಇಮೇಜ್ ಅನ್ನು ಹೆಚ್ಚಿಸುವಲ್ಲಿ ಸಹಾಯ ಮಾಡಿತು.

ತನ್ನನ್ನು ರಾಷ್ಟ್ರೀಯ ನಾಯಕ ಎಂದು ಬಿಂಬಿಸಿಕೊಳ್ಳುವ ಮೂಲಕ ಕೆಸಿಆರ್ ಬಿಜೆಪಿಯನ್ನು ತನ್ನ ಪರಮ ಶತ್ರುವೆಂಬಂತೆ ಬಿಂಬಿಸಿಕೊಂಡಿದ್ದಾರೆ. ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಕಳೆದೆರಡು ಅವಧಿಗಳಿಂದ ಕಾಂಗ್ರೆಸ್ ಅಧಿಕಾರದಲ್ಲಿಲ್ಲ. ಆದ್ದರಿಂದ ಕಾಂಗ್ರೆಸ್‌ನವರನ್ನು ಟೀಕಿಸಿದರೆ ಪ್ರಯೋಜನವಿಲ್ಲ. ತನ್ನನ್ನು ರಾಷ್ಟ್ರೀಯ ಮಟ್ಟದಲ್ಲಿ ತೋರಿಸಿಕೊಳ್ಳುವ ಮೂಲಕ, ಪ್ರಧಾನಿ ಮೋದಿ ಮತ್ತು ಬಿಜೆಪಿಯ ಮೇಲಿನ ತಮ್ಮ ದಾಳಿಯನ್ನು ಕೆಸಿಆರ್‌ ಸಮರ್ಥಿಸಿಕೊಳ್ಳಬಹುದು. ಬಿಜೆಪಿಯವರನ್ನು ಪ್ರಾಥಮಿಕ ಶತ್ರುವಾಗಿ ಎದುರು ನಿಲ್ಲಿಸಬಹುದು ಎಂಬ ತಂತ್ರಗಾರಿಕೆ ಇಲ್ಲಿದೆ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು.

ಮೂಲ: ದಿ ನ್ಯೂಸ್‌ ಮಿನಿಟ್‌

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚುನಾವಣಾ ಆಯೋಗ ಪಕ್ಷಾತೀತವಾಗಿ ನಡೆದುಕೊಳ್ಳುತ್ತಿಲ್ಲ: ಪಿಣರಾಯಿ ವಿಜಯನ್

0
ಪ್ರಧಾನಮಂತ್ರಿ ನರೇಂದ್ರ ಮೋದಿ ಇತ್ತೀಚೆಗೆ ಮುಸ್ಲಿಮರ ವಿರುದ್ಧ ನೀಡಿದ್ದ ಹೇಳಿಕೆಗಳಿಗೆ ಸಂಬಂಧಿಸಿದಂತೆ ತಕ್ಷಣ ಕ್ರಮ ಕೈಗೊಳ್ಳುವ ಮೂಲಕ ಚುನಾವಣಾ ಆಯೋಗವು ಪಕ್ಷಾತೀತವಾಗಿ ವರ್ತಿಸದಿರುವುದು ದುರದೃಷ್ಟಕರ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಮೋದಿಯ...