Homeಅಂಕಣಗಳುಗೌರಿ ಕಾರ್ನರ್: ಈ ದೇಶ ಕುರಿತು ಖುಷವಂತರ ಪ್ರಶ್ನೆ

ಗೌರಿ ಕಾರ್ನರ್: ಈ ದೇಶ ಕುರಿತು ಖುಷವಂತರ ಪ್ರಶ್ನೆ

- Advertisement -
- Advertisement -

ಸಿಖ್ ಧರ್ಮದ ಗುರುಗ್ರಂಥವನ್ನು ಆಳವಾಗಿ ಅಭ್ಯಾಸ ಮಾಡಿರುವ, ಸಾವಿರಾರು ಉರ್ದು ಶಾಯರಿಗಳನ್ನು ಅನುವಾದಿಸಿರುವ, ನೂರಾರು ಹಿಂದೂ ಸಂನ್ಯಾಸಿಗಳನ್ನು ಸಂದರ್ಶಿಸಿರುವ, ಜೀವನವನ್ನು ಪ್ರೀತಿಸುವಷ್ಟೇ ಎಲ್ಲ ಜಾತಿ, ಧರ್ಮದ ಜನರನ್ನು ಬಹುವಾಗಿ ಪ್ರೀತಿಸುವ -ಟೀಕಿಸುವ ವ್ಯಕ್ತಿ ಖುಷವಂತ್ ಸಿಂಗ್.

ಖುಷವಂತರಿಗೆ 80 ವರ್ಷ ತುಂಬಿದಾಗ, ಅಪ್ಪ ಅವರನ್ನು ಕುರಿತು ಹೀಗೆ ಬರೆದಿದ್ದರು: “ಸಿಖ್ ಜನರ ಶಕ್ತಿ ಮತ್ತು ಅಸಹಾಯಕತೆ, ಮುಸ್ಲಿಮರ ತ್ರಾಣ ಮತ್ತು ಹುಂಬತನ, ಹಿಂದೂಗಳ ಗುಣ ಮತ್ತು ದೋಷ-ಎಲ್ಲವನ್ನೂ ಬಲ್ಲ ವ್ಯಕ್ತಿ ಖುಷವಂತ್. ಪಾಕಿಸ್ತಾನ ಮತ್ತು ಭಾರತವನ್ನು ಹತ್ತಿರ ತರುವಲ್ಲಿ, ಸಿಖ್ ಜನ ಭಾರತದಲ್ಲೇ ಉಳಿದು ನೆಮ್ಮದಿಯಾಗಿರುವಲ್ಲಿ ಖುಷವಂತ್ ಮಾಡಿದಷ್ಟು ಕೆಲಸ ಯಾವನೂ ಮಾಡಿಲ್ಲ. ಈ ದೇಶದಲ್ಲಿ ಶಾಂತಿಗಾಗಿ ನೊಬೆಲ್ ಬಹುಮಾನ ಸಿಗಬೇಕಿದ್ದರೆ ಅದು ಸಿಗಬೇಕಾದ್ದು ಖುಷವಂತ್‌ರಿಗೆ…..”

ಈಗ ತಮ್ಮ 88ನೇ ಹರೆಯದಲ್ಲಿರುವ ಖುಷವಂತ್, ದೇಶ ವಿಭಜನೆ ಸಮಯದಲ್ಲಿ ಅತಿಘೋರ ಕೋಮುದಳ್ಳುರಿಯನ್ನು ಕಣ್ಣಾರೆ ಕಂಡವರು; ಲಾಹೋರಿನಿಂದ ದೆಹಲಿಗೆ ವಲಸೆ ಬಂದು ತಾನು ಭಾರತದವನೋ ಪಾಕಿಸ್ತಾನದವನೋ ಎಂದು ದಿಗ್ಭ್ರಾಂತರಾದವರು; 1947ರ ಆಗಸ್ಟ್ 14/15ರ ರಾತ್ರಿ ಹೊಸರಾಷ್ಟ್ರದ ಉದಯದ ಸಂಭ್ರಮದಲ್ಲಿ ಅಪಾರ ಕನಸುಗಳನ್ನು ಹೊತ್ತು ಪಾಲ್ಗೊಂಡವರು.

PC : Amazon.in

ಈಗ, ದೇಶ ವಿಭಜನೆಯಾದ 56 ವರ್ಷಗಳಲ್ಲಿ, ಅದರಲ್ಲೂ ಮುಖ್ಯವಾಗಿ ಹೋದ ವರ್ಷ ಗುಜರಾತ್ ರಾಜ್ಯದಲ್ಲಿ ನಡೆದ ಕೋಮುದಳ್ಳುರಿಯನ್ನು ಕಂಡು ಕಂಗಾಲಾಗಿದ್ದಾರೆ ಖುಷವಂತ್. ತನ್ನ ಜೀವನದುದ್ದಕ್ಕೂ ಕೋಮುಸೌಹಾರ್ದತೆಗಾಗಿ ಶ್ರಮಿಸಿದ್ದ ಖುಷವಂತ್, ಕೋಮುವಾದಿಗಳ ಪ್ರಸ್ತುತ ಅಟ್ಟಹಾಸವನ್ನು ಕಂಡು ಮೊನ್ನೆ ’ದಿ ಎಂಡ್ ಆಫ್ ಇಂಡಿಯಾ’ ಎಂಬ ಪುಸ್ತಕವನ್ನು ಹೊರತಂದಿದ್ದಾರೆ.

ನಾಲ್ಕು ಪ್ರಬಂಧಗಳ ಸಂಗ್ರಹವಾದ ಈ ಪುಸ್ತಕದ ಮುನ್ನುಡಿಯನ್ನು ಖುಷವಂತ್ ಹೀಗೆ ಆರಂಭಿಸುತ್ತಾರೆ: “ಭಾರತಕ್ಕೆ ಕತ್ತಲು ಮುಸುಕುತ್ತಿದೆ. 2002ರ ಆರಂಭದಲ್ಲಿ ಗಾಂಧಿ ಹುಟ್ಟಿದ ನಾಡು ಗುಜರಾತಿನಲ್ಲಿ ನಡೆದ ನರಮೇಧ ಹಾಗೂ ಆನಂತರದ ಚುನಾವಣೆಯಲ್ಲಿ ನರೇಂದ್ರ ಮೋದಿಯ ಜಯ ನಮ್ಮ ದೇಶಕ್ಕೆ ದುರಂತವನ್ನು ತಂದಿದೆ. ನಮ್ಮ ಆಧುನಿಕ ಇತಿಹಾಸದಲ್ಲಿ ಹಿಂದೆಂದೂ ಕಂಡರಿಯದಂತಹ ಫ್ಯಾಸಿಸ್ಟ್ ಧೋರಣೆಯನ್ನು ಹಿಂದೂ ಮೂಲಭೂತವಾದಿಗಳು ಪ್ರದರ್ಶಿಸುತ್ತಿದ್ದಾರೆ. ದೇಶ ವಿಭಜನೆಯ ನಂತರ ಮತ್ತೆಂದೂ ಅಂತಹ ನರಮೇಧ ನಡೆಯದೆಂದು ನಾನು ಭಾವಿಸಿದ್ದೆ. ಆದರೆ ಅದು ಸುಳ್ಳೆಂದು ಸಾಬೀತಾಗಿದೆ. ಮಹಾನ್ ದೇಶವಾಗುವ ಬದಲು ನಮ್ಮ ಭಾರತ ಕೆಳಮಟ್ಟಕ್ಕೆ ಕುಸಿಯುತ್ತಿದೆ, ಒಂದು ಅದ್ಭುತ ಪವಾಡ ನಮ್ಮನ್ನು ರಕ್ಷಿಸದಿದ್ದರೆ ದೇಶ ಒಡೆದುಹೋಗುತ್ತದೆ.”

ಜಾತ್ಯತೀತತೆಯಲ್ಲಿ ಅಪಾರ ನಂಬಿಕೆಯಿಟ್ಟುಕೊಂಡಿರುವ ಖುಷವಂತ್ ಸಿಂಗ್ ಹಿಂದಿನಿಂದಲೂ ಎಲ್ಲಾ ರೀತಿಯ ಧಾರ್ಮಿಕ ಮೂಲಭೂತವಾದವನ್ನು ಖಂಡಿಸುತ್ತಲೇ ಬಂದಿದ್ದಾರೆ. ಹಿಂದೂಗಳ ವಿರುದ್ಧ ಕೆಂಡಕಾರುತ್ತಿದ್ದ ಜರ್ನೇಲ್ ಸಿಂಗ್ ಬಿಂಧ್ರನ್‌ವಾಲೆನನ್ನು ಕಟುವಾಗಿ ಟೀಕಿಸಿದ್ದಕ್ಕೆ ಖಾಲಿಸ್ತಾನಿಗಳ ಹಿಟ್ ಲಿಸ್ಟ್‌ಗೆ ಸೇರ್ಪಡೆಯಾಗಿ 15 ವರ್ಷಗಳ ಕಾಲ ಖುಷವಂತ್ ಸಿಂಗ್‌ರವರು ಬಿಗಿಯಾದ ಭದ್ರತೆಯ ಮಧ್ಯೆ ಜೀವಿಸಬೇಕಾಗಿ ಬಂತು. ಈಗ ಅಲ್ಪಸಂಖ್ಯಾತರ ವಿರುದ್ಧ ಕೆಂಡಕಾರುತ್ತಿರುವ ನರೇಂದ್ರ ಮೋದಿ, ತೊಗಾಡಿಯಾ, ಬಾಳಠಾಕ್ರೆ, ಗಿರಿರಾಜ್ ಕಿಶೋರ್‌ರಂತಹ ಹಿಂದೂ ಮೂಲಭೂತವಾದಿಗಳ ವಿರುದ್ಧ ಮಾತನಾಡುತ್ತಿರುವುದಕ್ಕೆ ಅಶ್ಲೀಲ ಪತ್ರಗಳಿಗೂ, ಬಣ್ಣಬಣ್ಣದ ಶಾಪಗಳಿಗೂ ಗುರಿಯಾಗಿದ್ದಾರೆ ಖುಷವಂತ್.

ಪ್ರತಿಯೊಂದು ಧರ್ಮದ ವೈರಿ ಮತ್ತೊಂದು ಧರ್ಮವಲ್ಲ, ಬದಲಾಗಿ ತನ್ನ ಧರ್ಮದ ’ಶ್ರೇಷ್ಠತೆ’ಯನ್ನೇ ಇನ್ನೊಬ್ಬರ ಮೇಲೆ ಹೊರಿಸಲು ಯತ್ನಿಸುವವನು; ಪ್ರತಿ ಧರ್ಮವನ್ನು ಇತರರು ತೀರ್ಮಾನಿಸುವುದು ಆ ಧರ್ಮಗ್ರಂಥದಲ್ಲೇನಿದೆ ಅಥವಾ ಆ ಧರ್ಮದ ಗುರುಗಳು ಏನು ಹೇಳಿದ್ದಾರೆ ಎಂದು ವಿಶ್ಲೇಷಿಸಿಯಲ್ಲ. ಬದಲಾಗಿ ಆ ಧರ್ಮದ ಅನುಯಾಯಿಗಳು ಹೇಗೆ ನಡೆದುಕೊಳ್ಳುತ್ತಾರೆ ಎಂಬುದರ ಮೇಲೆ ಎಂದು ನಂಬಿರುವವರು ಖುಷವಂತ್. ಆದರೆ ಈಗ, ಬಾಬ್ರಿ ಮಸೀದಿಯನ್ನು ಕೆಡವುವವರು, ಕ್ರೈಸ್ತ ಮಿಷನರಿಗಳನ್ನು ಸುಟ್ಟುಹಾಕುವವರು, ಮುಸ್ಲಿಮರ ರಕ್ತವನ್ನು ಹೀರುವವರು, ತಮಗೆ ಸರಿಕಾಣದ ಪುಸ್ತಕ-ಸಿನಿಮಾ-ಚಿತ್ರಕಲೆಗಳ ವಿರುದ್ಧ ಪ್ರತಿಭಟಿಸುವುದು, ಇತಿಹಾಸವನ್ನು ತಿರುಚುವುದು…… ಇವೆ ಹಿಂದೂ ಧರ್ಮದ ಲಕ್ಷಣಗಳಂತೆ ಕಾಣಿಸುತ್ತಿದೆ ಎಂದು ಎಚ್ಚರಿಸುತ್ತಾರೆ ಖುಷವಂತ್.

“ಇವೆಲ್ಲವನ್ನು ಪ್ರತಿಭಟಿಸುವವರನ್ನು ತುಚ್ಛವಾಗಿ ಕಂಡರು, ಸ್ಯೂಡೋ ಜಾತ್ಯತೀತರು ಎಂಬ ಹಣೆಪಟ್ಟಿಯನ್ನು ನೀಡಿದರು. ಜಾತ್ಯತೀತತೆಯಲ್ಲಿ ನಂಬಿಕೆಯಿರುವವರು ಇದೆಲ್ಲವನ್ನು ಸಹಿಸಿದ್ದು ಏಕೆಂದರೆ ಇವರು ಸಂಘಟಿತರಾಗಿಲ್ಲದಿದ್ದಕ್ಕೆ. ಈಗ ನಾವು ನಮ್ಮ ದೇಶವನ್ನೇ ಆವರ ಕೈಗಿಟ್ಟಿದ್ದೇವೆ,” ಎಂದು ಪರಿತಪಿಸುತ್ತಾರೆ.

ಹಾಗೆಯೆ ಗೀತಾ ಹರಿಹರನ್ ಎಂಬ ಆಂಗ್ಲ ಲೇಖಕಿಯ ’ಇನ್ ಟೈಮ್ಸ್ ಆಫ್ ಸೀಜ್’ ಎಂಬ ಪುಸ್ತಕದಿಂದ ಒಂದು ಉದಾಹರಣೆಯನ್ನು ನೀಡುತ್ತಾರೆ. ರೆವರೆಂಡ್ ಮಾರ್ಟಿನ್ ನಿಮುಲ್ಲರ್ ಎಂಬ ಜರ್ಮನ್ ಪಾದ್ರಿಯನ್ನು ನಾಜಿಗಳು ಪೀಡಿಸಿದ್ದರು. ಅವನು ಹೀಗೆಂದಿದ್ದೇನು:

PC : The World Sikh News (ಜರ್ನೇಲ್ ಸಿಂಗ್ ಬಿಂಧ್ರನ್‌ವಾಲೆ)

“ಜರ್ಮನಿಯಲ್ಲಿ ನಾಜಿಗಳು ಪ್ರಥಮವಾಗಿ ಗುರಿಯಾಗಿಸಿಕೊಂಡಿದ್ದು ಕಮ್ಯುನಿಸ್ಟ್‌ಗಳನ್ನು. ಆದರೆ ನಾನು ಕಮ್ಯುನಿಸ್ಟ್ ಆಗಿಲ್ಲದಿದ್ದರಿಂದ ನಾನು ಸುಮ್ಮನಿದ್ದೆ.

ನಂತರ ನಾಜಿಗಳು ಯಹೂದಿಯರನ್ನು ಗುರಿಯಾಗಿಸಿಕೊಂಡಾಗ ನಾನು ಯಹೂದಿಯಲ್ಲವಾದ್ದರಿಂದ, ಆಗಲೂ ಸುಮ್ಮನಿದ್ದೆ.

ಆಮೇಲೆ ನಾಜಿಗಳು ಟ್ರೇಡ್ ಯೂನಿಯನಿಸ್ಟ್‌ಗಳನ್ನು ಹಿಡಿಯಲಾರಂಭಿಸಿದರು. ನಾನು ಯಾವ ಟ್ರೇಡ್ ಯೂನಿಯನ್‌ಗೂ ಸೇರಿಲ್ಲವಾದ್ದರಿಂದ ನಾನು ಸುಮ್ಮನೆ ಇದ್ದೆ.

ಮುಂದೆ, ಸಲಿಂಗಕಾಮಿಗಳನ್ನು ಸೆರೆ ಹಿಡಿಯಲಾರಂಭಿಸಿದಾಗಲೂ, ನಾನು ಸಲಿಂಗಕಾಮಿಯೇನಲ್ಲವಲ್ಲಾ ಎಂದು ಸುಮ್ಮನಿದ್ದೆ.

ಆನಂತರ, ನಾಜಿಗಳು ಕ್ಯಾಥೋಲಿಕ್‌ರನ್ನು ಗುರಿಮಾಡಿಕೊಂಡಾಗ, ಪ್ರಾಟೊಸ್ಟೆಂಟ್‌ನಾದ ನನಗೂ ಅದಕ್ಕೂ ಏನೂ ಸಂಬಂಧವಿಲ್ಲವಲ್ಲಾ ಎಂದು ಸುಮ್ಮನಾದೆ.

ಕೊನೆಗೆ ನಾಜಿಗಳು ನನ್ನನ್ನೇ ಗುರಿಮಾಡಿಕೊಂಡರು… ಆ ಹೊತ್ತಿಗೆ ನನ್ನ ಪರವಾಗಿ ಮಾತನಾಡಲು ಯಾರೂ ಉಳಿದಿರಲಿಲ್ಲ.”

ಈ ಪುಟ್ಟ ಟಿಪ್ಪಣಿ ಎಲ್ಲರಿಗೂ ಎಷ್ಟೊಂದು ಪಾಠ ಹೇಳುತ್ತದೆಯಲ್ಲವೇ? ಮುಸ್ಲಿಮರನ್ನು ಕೊಲ್ಲುತ್ತಿದ್ದರೆ ನನಗೇನು? ಕ್ರೈಸ್ತರನ್ನು ಬಡಿಯುತ್ತಿದ್ದರೆ ನನಗೇನು? ಬುಡಕಟ್ಟು ಜನಾಂಗದವರನ್ನು ನಾಶ ಮಾಡುತ್ತಿದ್ದರೆ ನನಗೇನು? ದಲಿತರನ್ನು ಶೋಷಿಸುತ್ತಿದ್ದರೆ ನನಗೇನು? ಲಿಂಗಾಯತರನ್ನು ಮೂಲೆಗುಂಪು ಮಾಡುತ್ತಿದ್ದರೆ ನನಗೇನು? ಒಕ್ಕಲಿಗರನ್ನು ಛಿದ್ರ ಮಾಡುತ್ತಿದ್ದರೆ ನನಗೇನು? ಎಂದು ನಾವೆಲ್ಲಾ ಸುಮ್ಮನೆ ಕೂತರೆ ನಮಗೂ ಮುಂದೆ ರೆವರೆಂಡ್ ಮಾರ್ಟಿನ್ ನಿಮುಲ್ಲರ್ ಗತಿಯೇ ಆಗುತ್ತದೆ ಎಂಬುದರಲ್ಲಿ ಸಂಶಯವಿಲ್ಲ ಅಲ್ಲವೇ?

’ದಿ ಎಂಡ್ ಆಫ್ ಇಂಡಿಯಾ’ ಪುಸ್ತಕದ ಕೊನೆಯ ಪ್ರಬಂಧದ ಶೀರ್ಷಿಕೆ ’ಈಸ್ ದೇರ್ ಎ ಸಲ್ಯೂಷನ್?’ ಎಂಬುದು.

ಈ ಅಧ್ಯಾಯದಲ್ಲಿ ಹಲವಾರು ವಿವಿಧ ಧರ್ಮಗಳನ್ನು ಹೊಂದಿರುವ ಭಾರತೀಯರಿಗೆ ಹೊಸದೊಂದು ಧರ್ಮ ಬೇಕಿದೆ ಎಂದು ಪ್ರಸ್ತಾಪಿಸುತ್ತಾರೆ ಖುಷವಂತ್ ಸಿಂಗ್. “ಒಳ್ಳೆಯವ ಅಥವಾ ಕೆಟ್ಟವನಾಗುವುದಕ್ಕೂ ಹಾಗೂ ದೇವರಲ್ಲಿ ನಂಬಿಕೆಯಿಡುವುದಕ್ಕೂ ಏನೂ ಸಂಬಂಧವಿಲ್ಲ ಎಂಬುದು ನೆನಪಿಡಬೇಕಾದ ಮುಖ್ಯ ಸಂಗತಿ. ದೇವರಲ್ಲಿ ನಂಬಿಕೆಯಿಲ್ಲದೆಯೇ ನೀವೊಬ್ಬ ಸಂತನಾಗಬಹುದು ಹಾಗೆಯೇ ದೇವರಲ್ಲಿ ನಂಬಿಕೆಯಿರಿಸಿಕೊಂಡೂ ಕೂಡ ಒಬ್ಬ ತಿರಸ್ಕರಣೀಯ ಖಳನಾಗಲೂಬಹುದು. ನನ್ನ ಧರ್ಮದಲ್ಲಿ ದೇವರಿಗೆ ಯಾವುದೇ ಸ್ಥಾನವಿಲ್ಲ.” ಎನ್ನುತ್ತಾರೆ ನಿರೀಶ್ವರವಾದಿ ಖುಷವಂತ್.

ನಮ್ಮ ದೇಶಕ್ಕೆ ಬೇಕಾಗಿರುವ ಹೊಸ ಧರ್ಮದ ತಳಹದಿ ‘work ethic’ (ಕಾರ್ಯ ಸಿದ್ಧಾಂತ) ಆಗಿರಬೇಕು ಮಾತ್ರವಲ್ಲ, ಪ್ರತಿಯೊಬ್ಬರ ಧರ್ಮವೂ ಇನ್ನೊಬ್ಬ ವ್ಯಕ್ತಿಗೆ ಅಥವಾ ಜೀವವಿರುವ ಯಾವುದೇ ಪ್ರಾಣಿಗೆ ನೋವುಂಟು ಮಾಡಬಾರದು ಹಾಗೂ ತನ್ನ ಪರಿಸರವನ್ನು ಕಾಪಾಡುವುದು ಮುಖ್ಯವಾಗಬೇಕು; ಅಹಿಂಸೆಯೇ ಎಲ್ಲಕ್ಕಿಂತ ಉತ್ಕೃಷ್ಟ ಧರ್ಮ ಹಾಗೂ ಅಸಭ್ಯತೆಯ ಅಂತಿಮ ರೂಪವೇ ಹಿಂಸೆ ಎಂದು ಮಂಡಿಸುವ ಖುಷವಂತ್ ತಮ್ಮ ಪುಸ್ತಕವನ್ನು ಇಲ್ಲಾ ವೀಲರ್ ವಿಲ್‌ಕಾಕ್ಸ್ ಎಂಬವವರ ಹೇಳಿಕೆಯೊಂದಿಗೆ ಮುಗಿಸುತ್ತಾರೆ. ಅದು ಹೀಗಿದೆ:

“So many gods, so many creeds, so many paths that wind & wind. When just the art of being kind is all that the sad world needs.”

(ಖುಷ್ವಂತ್ ಸಿಂಗ್ ಅವರು ತಮ್ಮ 88 ವಯಸ್ಸಿನಲ್ಲಿ ಬರೆದ ಪುಸ್ತಕವನ್ನು ಉದಾಹರಿಸಿ ಬರೆದಿದ್ದ ಗೌರಿಯವರ ಕಂಡಹಾಗೆ ಅಂಕಣವನ್ನು ಇಲ್ಲಿ ಮರುಪ್ರಕಟಿಸಿದ್ದೇವೆ. ಖುಷ್ವಂತ್ 2014ರಲ್ಲಿ ತಮ್ಮ 99ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದರು)


ಇದನ್ನೂ ಓದಿ: ಗೌರಿ ಕಾರ್ನರ್: ಭಾಷೆಯನ್ನು ವಿಭಜಿಸುವುದು ಹೇಗೆ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...