ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ‘ಒಂದು ಪ್ರಶ್ನೆ’ ವಿಡಿಯೋ ಸರಣಿ ಆರಂಭಿಸಿದ್ದು, ಎಲ್ಪಿಜಿ ಬೆಲೆ ಏರಿಕೆಯನ್ನು ವಿನೂತನವಾಗಿ ಪ್ರಶ್ನಿಸಿದ್ದಾರೆ. ಈ ಹಿಂದಿನ ವಿಡಿಯೊದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ)ಯನ್ನು ನಾಗಪುರ ಎಜುಕೇಷನ್ ಪಾಲಿಸಿ ಎಂದು ವಿಶ್ಲೇಷಿಸಿದ್ದರು. ಎರಡನೇ ವಿಡಿಯೊದಲ್ಲಿ ‘ಸಿಲಿಂಡರ್ ಬೆಲೆ ಏರಿಕೆ’ಯ ಕುರಿತು ಮಾತನಾಡಿದ್ದಾರೆ.
ಅಡುಗೆ ಮನೆಯಲ್ಲಿ ನಿಂತು ಕಾಫಿ ಹೀರುತ್ತಾ ಮಾತನಾಡಿರುವ ಡಿ.ಕೆ.ಶಿವಕುಮಾರ್, “ನಾನು ಅಡುಗೆ ಮನೆಗೆ ಸಂಬಂಧಿಸಿದಂತೆ ಈಗ ಮಾತನಾಡುತ್ತಿದ್ದೇನೆ. ಈ ವಾರ ಕೇಳುವ ಪ್ರಶ್ನೆ ಏನೆಂದರೆ, ಎಲ್ಪಿಜಿ ಬೆಲೆಯನ್ನು ಇಳಿಸಬೇಕಾ? ಬೇಡವಾ?” ಎಂದಿದ್ದಾರೆ.
“ಸಿಲಿಂಡರ್ ಬೆಲೆ 888 ರೂ. ಇದ್ದು, ಸದ್ಯದಲ್ಲೇ 900 ರೂಪಾಯಿಯಿಂದ 1000 ರೂ.ವರೆಗೆ ತಲುಪಬಹುದು. ರಾಜ್ಯದ ಜನತೆಗೆ ಎಂತಹ ಸಂಕಷ್ಟ ನೋಡಿ. ಕೋವಿಡ್ನಿಂದ ಜನ ಸಾಯುತ್ತಿದ್ದಾರೆ. ಕೆಲಸ ಕಳೆದುಕೊಳ್ಳುತ್ತಿದ್ದಾರೆ. ಆದರೆ ಬೆಲೆ ಮಾತ್ರ ಕಡಿಮೆಯಾಗಲಿಲ್ಲ” ಎಂದು ಟೀಕಿಸಿದ್ದಾರೆ.
Are you ready for this week's question?
ಪ್ರಿಯ ಸ್ನೇಹಿತರೇ, ವಿಶೇಷವಾಗಿ ತಾಯಂದ್ರೇ, ಅಕ್ಕ-ತಂಗಿಯರೇ ಈ ವಾರ ಗಂಭೀರವಾದ ಪ್ರಶ್ನೆಯೊಂದನ್ನ ನಿಮ್ ಮುಂದೆ ಇಡ್ತಿದ್ದೀನಿ. #OnduPrashne pic.twitter.com/yv5IyeD0mq
— DK Shivakumar (@DKShivakumar) September 11, 2021
“ರಾಜ್ಯದ ನಾನಾ ಭಾಗಗಳಲ್ಲಿ ನಾನು ತಿರುಗಾಡಿ ಬಂದಿದ್ದೇನೆ. ಬಡವರು, ಶ್ರೀಮಂತರು, ಮಧ್ಯಮ ವರ್ಗದವರನ್ನು ನಾನು ಭೇಟಿಯಾಗಿದ್ದೇನೆ. ಅವರೆಲ್ಲರೂ ಬೆಲೆ ಏರಿಕೆಯಿಂದ ಬೆಂದು ಹೋಗಿದ್ದಾರೆ. ಬಡಕುಟುಂಬದವರ ಮುಂದೆ ಇರುವ ಆಯ್ಕೆ ಎರಡೇ. ಒಂದು ಅವರ ಮಕ್ಕಳ ಶಾಲೆಗೆ ಶುಲ್ಕ ಕಟ್ಟಬೇಕಾ? ಅಥವಾ ಗ್ಯಾಸ್ ಸಿಲಿಂಡರ್ ಖರೀದಿ ಮಾಡಬೇಕಾ? ಪೋಷಕರ ಉದ್ಯೋಗ ನಷ್ಟವಾದ ಕಾರಣ, ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿಲ್ಲ. ನಿರುದ್ಯೋಗದಿಂದ ಜನರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಸಿಲಿಂಡರ್ ಬೆಲೆಯನ್ನು ಏರಿಸುವುದು ನ್ಯಾಯಾನಾ?” ಎಂಬ ಪ್ರಶ್ನೆಯನ್ನು ಜನರ ಮುಂದಿಟ್ಟಿದ್ದಾರೆ.
ಸಿಲಿಂಡರ್ ತುಂಬಿಸಲು ಕಾಸಿಲ್ಲದೆ ಎಷ್ಟೋ ಕುಟುಂಬಗಳು ಸೌದೆ ಒಲೆಯನ್ನು ನೋಡುತ್ತಿವೆ. ಗ್ಯಾಸ್ ತುಂಬಿಸಲು ಒಡೆವೆಯನ್ನು ಒತ್ತೆ ಇಡುತ್ತಿದ್ದಾರೆ. ಹೀಗಾಗಿ ನನ್ನ ಬೇಡಿಕೆಯೊಂದೇ ಕನಿಷ್ಠ 150 ರೂಪಾಯಿಯಾದರೂ ಬೆಲೆ ಇಳಿಕೆಯಾಗಬೇಕಲ್ಲವೇ? ನಿಮ್ಮ ಉತ್ತರವನ್ನು ನಿರೀಕ್ಷೆ ಮಾಡುತ್ತಿದ್ದೇನೆ. ಸಾಮಾಜಿಕ ಮಾಧ್ಯಮಗಳಾದ ಫೇಸ್ಬುಕ್, ಟ್ವಿಟ್ಟರ್ನಲ್ಲಿ, ಇನ್ಸ್ಟಾದಲ್ಲಿ ನಿಮ್ಮ ಅಭಿಪ್ರಾಯ ತಿಳಿಸಿ” ಎಂದು ಕೇಳಿಕೊಂಡಿದ್ದಾರೆ.