ಲಖಿಂಪುರ್ ಖೇರಿ ಹತ್ಯಾಕಾಂಡದ ಕುರಿತು ಇಂದು ರಾಷ್ಟ್ರಪತಿಗಳನ್ನು ಭೇಟಿಯಾದ ಕಾಂಗ್ರೆಸ್ ನಿಯೋಗ ರೈತರ ಮೇಲೆ ಕಾರು ಹರಿಸಿದ ಆರೋಪ ಎದುರಿಸುತ್ತಿರುವ ಆಶಿಶ್ ಮಿಶ್ರಾರವರ ತಂದೆ ಅಜಯ್ ಮಿಶ್ರಾರನ್ನು ಸಂಚಿವ ಸಂಪುಟದಿಂದ ಕೈಬಿಡಬೇಕು ಮತ್ತು ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ಸ್ವತಂತ್ರ ತನಿಖೆ ನಡೆಸಬೇಕೆಂದು ಪಟ್ಟು ಹಿಡಿದಿದೆ. ಇದಕ್ಕೆ ಪ್ರತಿಕ್ರಿಯಿಸಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್ರವರು ಈ ಕುರಿತು ಸರ್ಕಾರದೊಂದಿಗೆ ಮಾತನಾಡುವುದಾಗಿ ತಿಳಿಸಿದರು ಎಂದು ಕಾಂಗ್ರೆಸ್ ಹೇಳಿದೆ.
ಅಕ್ಟೋಬರ್ 3 ರಂದು ಉತ್ತರ ಪ್ರದೇಶದ ಲಖಿಂಪುರ್ ಖೇರಿಯಲ್ಲಿ ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದ ರೈತರ ಮೇಲೆ ಕಾರು ಹರಿಸಿ ನಾಲ್ವರು ರೈತರು ಸೇರಿದಂತೆ 8 ಜನರ ಹತ್ಯೆಗೆ ಕಾರಣವಾದ ಆರೋಪದ ಮೇಲೆ ಕೇಂದ್ರ ಸಚಿವರ ಮಗ ಆಶಿಶ್ ಮಿಶ್ರಾರನ್ನು ಬಂಧಿಸಲಾಗಿದೆ. ಆದರೆ ಅವರ ತಂದೆ ಕೇಂದ್ರ ಸಚಿವರಾಗಿ ಮುಂದುವರೆಯುತ್ತಿರುವಾಗ ಈ ಪ್ರಕರಣದಲ್ಲಿ ನಿಷ್ಪಷಪಾತ ತನಿಖೆ ಸಾಧ್ಯವಿಲ್ಲ ಎಂದು ಆಗ್ರಹಿಸಿರುವ ಕಾಂಗ್ರೆಸ್, ಸಂತ್ರಸ್ತ ರೈತ ಕುಟುಂಬದ ಬೇಡಿಕೆಯೂ ಇದೇ ಆಗಿದೆ ಎಂದಿದೆ.
“ಲಖಿಂಪುರ್ ಘಟನೆಯ ಸಂಪೂರ್ಣ ವಿವರವನ್ನು ರಾಷ್ಟ್ರಪತಿಗಳಿಗೆ ತಿಳಿಸಿದ್ದೇವೆ. ಹಾಲಿ ನ್ಯಾಯಾಧೀಶರಿಂದ ಸ್ವತಂತ್ರ ತನಿಖೆ ಮತ್ತು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಥೆನಿಯವರನ್ನು ವಜಾಗೊಳಿಸಬೇಕೆಂಬುದು ನಮ್ಮ ಒತ್ತಾಯ” ಎಂದು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.
ರಾಷ್ಟ್ರಪತಿ ಭೇಟಿ ಬಳಿಕ ಮಾತನಾಡಿದ ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ, “ಆರೋಪಿಯ ತಂದೆ ಸಚಿವರಾಗಿ ಮುಂದುವರೆಯುವವರೆಗೂ ತಮಗೆ ನ್ಯಾಯ ಸಿಗುವುದಿಲ್ಲ ಎಂದು ಸಂತ್ರಸ್ತ ಕುಟುಂಬಗಳು ನಂಬಿವೆ. ಇದು ಉತ್ತರ ಪ್ರದೇಶ ಸೇರಿದಂತೆ ದೇಶಾದ್ಯಂತ ಸರಿಯಾಗಿ ಆಲೋಚಿಸುವವರ ಅಭಿಪ್ರಾಯವೂ ಆಗಿದೆ. ಈ ವಿಚಾರದ ಕುರಿತು ಸರ್ಕಾರದೊಂದಿಗ ಮಾತುಕತೆ ನಡೆಸುವುದಾಗಿ ರಾಷ್ಟ್ರಪತಿಗಳು ತಿಳಿಸಿದ್ದಾರೆ” ಎಂದಿದ್ದಾರೆ.
अपराध के बाद जब सरकार व प्रशासन अन्याय करने लगें, तब आवाज़ उठाना ज़रूरी है।
लखीमपुर अन्याय मामले में हमारी दो माँगें हैं-
– निष्पक्ष न्यायिक जाँच
– गृह राज्य मंत्री की तुरंत बर्ख़ास्तगीताकि न्याय हो! pic.twitter.com/wXucPtqIYJ
— Rahul Gandhi (@RahulGandhi) October 13, 2021
ಪೊಲೀಸ್ ಇಲಾಖೆ ಸೇರಿದಂತೆ ಹಲವು ತನಿಖಾ ಸಂಸ್ಥೆಗಳು ಕೇಂದ್ರ ಗೃಹ ಸಚಿವಾಲಯದ ಅಡಿಯಲ್ಲಿ ಬರುವುದರಿಂದ ಆರೋಪಿಯ ತಂದೆಯೇ ಆ ಸಚಿವಾಲಯವನ್ನು ನಿಯಂತ್ರಿಸುವ ಕಾರಣಕ್ಕೆ ತನಿಖೆ ನ್ಯಾಯಯುತವಾಗಿರುತ್ತದೆ ಎಂಬ ಯಾವುದೇ ನಂಬಿಕೆ ಇಲ್ಲ. ಹೀಗಾಗಿ ಅಜಯ್ ಮಿಶ್ರಾ ರಾಜಿನಾಮೆಗೆ ನೀವು ಕ್ರಮ ಕೈಗೊಳ್ಳಬೇಕು ಎಂದು ರಾಹುಲ್ ರಾಷ್ಟ್ರಪತಿಗಳಿಗೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಲಖಿಂಪುರ್ ಖೇರಿ ಹತ್ಯಾಕಾಂಡ: ಎಸ್ಐಟಿಯಿಂದ ಆರೋಪಿ ಕಾರು ಚಾಲಕನ ಬಂಧನ