ಲಖಿಂಪುರ್ ಖೇರಿ ಹತ್ಯಾಕಾಂಡವನ್ನು ಉಲ್ಲೇಖಿಸಿ ’ಉತ್ತರ ಪ್ರದೇಶದಲ್ಲಿ ಸರ್ಕಾರ ನಡೆಸುತ್ತಿರುವ ದಬ್ಬಾಳಿಕೆ ವಿರುದ್ಧ ಹೋರಾಡಲು ಜಂಟಿ ವಿರೋಧದ ಅವಶ್ಯಕತೆ ಇದೆ’ ಎಂದು ಶಿವಸೇನೆಯ ಸಂಸದ ಸಂಜಯ್ ರಾವತ್ ಮಂಗಳವಾರ ಹೇಳಿದ್ದಾರೆ.
ಭಾನುವಾರ ಉತ್ತರ ಪ್ರದೇಶದ ಲಖಿಂಪುರ್ ಖೇರಿಯಲ್ಲಿ ನಡೆದ ಹಿಂಸಾಚಾರದಲ್ಲಿ ರೈತರು ಮತ್ತು ಸ್ಥಳೀಯ ಪತ್ರಕರ್ತರು ಸೇರಿದಂತೆ ಕನಿಷ್ಠ ಎಂಟು ಜನರು ಸಾವನ್ನಪ್ಪಿರುವುದು ದೇಶವನ್ನೇ ಬೆಚ್ಚಿಬೀಳಿಸಿದೆ ಎಂದು ಸಂಸದ ಸಂಜಯ್ ರಾವತ್ ಮಂಗಳವಾರ ಹೇಳಿದ್ದಾರೆ.
ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಬಂಧನ ಮತ್ತು ರೈತರನ್ನು ಭೇಟಿ ಮಾಡಲು ಹೋಗುತ್ತಿರುವ ರಾಜಕೀಯ ನಾಯಕರ ಪ್ರವೇಶವನ್ನು ನಿರ್ಬಂಧಿಸಿರುವುದನ್ನು ಉಲ್ಲೇಖಿಸಿರುವ ಸಂಜಯ್ ರಾವತ್, ಯುಪಿಯಲ್ಲಿ ಸರ್ಕಾರ ನಡೆಸುತ್ತಿರುವ ದಬ್ಬಾಳಿಕೆಯ ವಿರುದ್ಧ ಜಂಟಿ ವಿರೋಧದ ಅವಶ್ಯಕತೆ ಇರುವುದರಿಂದ ರಾಹುಲ್ ಗಾಂಧಿಯವರನ್ನು ಭೇಟಿಯಾಗುವುದಾಗಿ ಹೇಳಿದ್ದಾರೆ.
ಇದನ್ನೂ ಓದಿ: ಲಖಿಂಪುರ್ ಖೇರಿ ಹತ್ಯಾಕಾಂಡ: ಮೃತ ಪತ್ರಕರ್ತನನ್ನು ಬಿಜೆಪಿ ಕಾರ್ಯಕರ್ತ ಎಂದು ಪಟ್ಟಿ ಮಾಡಿದ್ದ ಸಚಿವ!
#LakhimpurKheriViolence has shaken the nation,@priyankagandhi has been arrested UP govt, opposition leaders are being restricted from meeting farmers. There is need for joint opposition action against oppression by Government in UP. Meeting @RahulGandhi at 4.15 pm today
जय हिंद!— Sanjay Raut (@rautsanjay61) October 5, 2021
ಈ ಕುರಿತು ಟ್ವೀಟ್ ಮಾಡಿರುವ ಸಂಸದ ಸಂಜಯ್ ರಾವತ್, “ಲಖಿಂಪುರ್ ಖೇರಿ ಹಿಂಸೆ ರಾಷ್ಟ್ರವನ್ನು ಬೆಚ್ಚಿಬೀಳಿಸಿದೆ. ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿಯವರನ್ನು ಬಂಧಿಸಲಾಗಿದೆ. ವಿರೋಧ ಪಕ್ಷದ ನಾಯಕರು ರೈತರನ್ನು ಭೇಟಿ ಮಾಡುವುದನ್ನು ನಿರ್ಬಂಧಿಸಲಾಗಿದೆ. ಯುಪಿಯಲ್ಲಿ ಸರ್ಕಾರದ ದಬ್ಬಾಳಿಕೆಯ ವಿರುದ್ಧ ಜಂಟಿ ವಿರೋಧದ ಕ್ರಮದ ಅಗತ್ಯವಿದೆ. ಇಂದು ಸಂಜೆ 4.15 ಕ್ಕೆ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡುತ್ತೇನೆ. ಜೈಹಿಂದ್!” ಎಂದಿದ್ದಾರೆ.
ಶಿವಸೇನಾ ಮುಖವಾಣಿ ಸಾಮಾನಾದಲ್ಲಿ ಲಖಿಂಪುರ್ ಖೇರಿಯಲ್ಲಿನ ಹತ್ಯೆಗಳ ಕುರಿತು ಪ್ರಧಾನಿ ನರೇಂದ್ರ ಮೋದಿಯವರ ಮೌನವನ್ನು ಪ್ರಶ್ನಿಸಿದ್ದಾರೆ.
“ಬಡವರ ಸಮಸ್ಯೆಗಳ ಬಗ್ಗೆ ಪ್ರಧಾನಮಂತ್ರಿಯವರು ಭಾವನಾತ್ಮಕವಾಗಿರುವುದನ್ನು ಕಂಡ ಅನೇಕ ಸಂದರ್ಭಗಳಿವೆ. ಆದರೆ, ಸಾವಿಗೆ ಸಿಲುಕಿರುವ ರೈತರ ಕುಟುಂಬಗಳಿಗೆ ಸಂವೇದನಾಶೀಲವಾಗಿರುವ ಮೋದಿ ಸಂತಾಪ ವ್ಯಕ್ತಪಡಿಸದಿರುವುದು ಆಶ್ಚರ್ಯಕರವಾಗಿದೆ” ಎಂದು ಬರೆದಿದ್ದಾರೆ.
ಭಾರತದ 75 ವರ್ಷಗಳ ಸ್ವಾತಂತ್ರ್ಯವನ್ನು ಆಚರಿಸುವ ಕೇಂದ್ರ ಸರ್ಕಾರದ ಒಂದು ವರ್ಷದ ಅಭಿಯಾನದ ಭಾಗವಾಗಿ ನಡೆಯುತ್ತಿರುವ ಕಾರ್ಯಕ್ರಮಗಳು ಮತ್ತು ಯೋಜನೆಗಳನ್ನು ಉದ್ಘಾಟಿಸಲು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಉತ್ತರ ಪ್ರದೇಶದ ರಾಜಧಾನಿ ಲಕ್ನೋಗೆ ಭೇಟಿ ನೀಡಿದ್ದಾರೆ.
ಭಾನುವಾರ ಲಖಿಂಪುರ್ ಖೇರಿ ಜಿಲ್ಲೆಯಲ್ಲಿ ನಡೆದ ಹಿಂಸಾತ್ಮಕ ಘರ್ಷಣೆಯಲ್ಲಿ ರೈತರು ಮತ್ತು ಸ್ಥಳೀಯ ಪತ್ರಕರ್ತರು ಸೇರಿದಂತೆ ಎಂಟು ಜನರು ಸಾವಿಗೀಡಾಗಿದ್ದಾರೆ. ಇದಕ್ಕೆ ದೇಶದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ. ಉತ್ತರ ಪ್ರದೇಶ ನೋವಿನಲ್ಲಿರುವ ಈ ಸಮಯದಲ್ಲಿ ಪ್ರಧಾನಿ ಕಾರ್ಯಕ್ರಮಗಳಿಗೆ ಚಾಲನೆ ನೀಡುತ್ತಿರುವುದು ಟೀಕೆಗೆ ಗುರಿಯಾಗಿದೆ.
ಇದನ್ನೂ ಓದಿ: ಇತ್ತ ಹತ್ಯೆಗೀಡಾದ ರೈತರಿಗಾಗಿ ಶೋಕಿಸುತ್ತಿರುವ ದೇಶ : ಅತ್ತ ಯುಪಿಯ ಕಾರ್ಯಕ್ರಮಗಳಲ್ಲಿ ಪ್ರಧಾನಿ ಭಾಗಿ