ದೇಶದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಮುಖೇಶ್ ಅಂಬಾನಿ ಅವರು ತಮ್ಮ ಹಿರಿಯ ಮಗನಿಗೆ ದೂರಸಂಪರ್ಕ (ಟೆಲಿಕಾಂ) ಘಟಕದ ಅಧ್ಯಕ್ಷ ಸ್ಥಾನವನ್ನು ಹಸ್ತಾಂತರಿಸುವ ರಿಲಯನ್ಸ್ ನಾಯಕತ್ವ ಬದಲಾಯಿಸಿದ್ದಾರೆ.
ಕಳೆದ ವರ್ಷ ಮುಖೇಶ್ ಅಂಬಾನಿ, “ತನ್ನ ಮಕ್ಕಳು ವ್ಯವಹಾರದಲ್ಲಿ ಮಹತ್ವದ ಪಾತ್ರಗಳನ್ನು ವಹಿಸಲಿದ್ದಾರೆ. ರಿಲಯನ್ಸ್ ಸಂಸ್ಥೆಯು ಮಹತ್ವದ ನಾಯಕತ್ವ ಪರಿವರ್ತನೆಯ ಪ್ರಕ್ರಿಯೆಯಲ್ಲಿದೆ” ಎಂದು ಹೇಳಿದ್ದರು. ಅದರ ಬೆನ್ನಲ್ಲೇ ಈ ನಿರ್ಧಾರ ಹೊರಬಿದ್ದಿದೆ.
ಸುಮಾರು 200 ಡಾಲರ್ ಶತಕೋಟಿ ಮೌಲ್ಯದ ಭಾರತದ ಅತಿದೊಡ್ಡ ಸಂಸ್ಥೆಯಲ್ಲಿ ಅಂಬಾನಿಯವರ ಮೂರು ಮಕ್ಕಳು ಈಗ ಜವಾಬ್ದಾರಿ ವಹಿಸಿದ್ದಾರೆ. ಆಕಾಶ್ ಅಂಬಾನಿ, ಇಶಾ ಅಂಬಾನಿ, ಅನಂತ್ ಅಂಬಾನಿ- ಈ ಮೂವರು ಈಗ ಅಂಬಾನಿ ಗುಂಪಿನ ಕೇಂದ್ರ ಸ್ಥಾನಗಳನ್ನು ಅಲಂಕರಿಸಿದ್ದಾರೆ.
ಆಕಾಶ್ ಅಂಬಾನಿ
ಅಂಬಾನಿಯವರ ಹಿರಿಯ ಮಗ ಆಕಾಶ್, ಬ್ರೌನ್ ವಿಶ್ವವಿದ್ಯಾನಿಲಯದಿಂದ ಅರ್ಥಶಾಸ್ತ್ರ ಪದವಿಯನ್ನು ಪೂರ್ಣಗೊಳಿಸಿದ್ದು, ಅಂಬಾನಿ ಗುಂಪಿನ ದೂರಸಂಪರ್ಕ ಘಟಕ ರಿಲಯನ್ಸ್ ಜಿಯೋದಲ್ಲಿ ನಾಯಕತ್ವ ವಹಿಸಿದ್ದಾರೆ.
ನಾನ್ಎಕ್ಸಿಕ್ಯೂಟಿವ್ ನಿರ್ದೇಶಕರಾಗಿ, ಕಂಪನಿಯ ಕಾರ್ಯತಂತ್ರ ಮತ್ತು ಬೆಳವಣಿಗೆಯ ಯೋಜನೆಗಳಲ್ಲಿ ಸಕ್ರಿಯವಾಗಿ ಕೆಲಸ ಮಾಡಿದರು. ಈ ಕಂಪನಿಯು 400 ಮಿಲಿಯನ್ಗಿಂತಲೂ ಹೆಚ್ಚು ಚಂದಾದಾರರನ್ನು ಹೊಂದಿದೆ. ಇದೀಗ ಅವರು ಟೆಲಿಕಾಂ ಘಟಕದ ಅಧ್ಯಕ್ಷರಾಗಲಿದ್ದಾರೆ ಎಂದು ರಿಲಯನ್ಸ್ ಮಂಗಳವಾರ ತಿಳಿಸಿದೆ.
ತನ್ನ ಸಂಸ್ಥೆಯ ಉದ್ಯೋಗಿಗಳನ್ನು ಸಕ್ರಿಯಗೊಳಿಸುವಲ್ಲಿ, ಉತ್ಪನ್ನಗಳ ಅಭಿವೃದ್ಧಿಯಲ್ಲಿ ಆಕಾಶ್ ತೊಡಗಿಸಿಕೊಂಡಿದ್ದಾರೆ. ಕ್ರಿಕೆಟ್ ವ್ಯವಹಾರದಲ್ಲಿಯೂ ಪಾತ್ರ ವಹಿಸಿದ್ದಾರೆ. ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಐಪಿಎಲ್ನಲ್ಲಿ ರಿಲಯನ್ಸ್ ಒಡೆತನದ ಮುಂಬೈ ಇಂಡಿಯನ್ಸ್ ತಂಡವನ್ನು ನಿರ್ವಹಿಸುವಲ್ಲಿ ಆಕಾಶ್ ಪ್ರಮುಖ ಪಾತ್ರ ವಹಿಸಿದ್ದಾರೆ.
ಜಿಯೋ ಪ್ಲಾಟ್ಫಾರ್ಮ್ಸ್ನಲ್ಲಿ ಮೆಟಾ ಪ್ಲಾಟ್ಫಾರ್ಮ್ಗಳು 5.7 ಬಿಲಿಯನ್ ಡಾಲರ್ ಹೂಡಿಕೆ ಮಾಡುವಲ್ಲಿಯೂ ಆಕಾಶ್ ಪಾತ್ರ ವಹಿಸಿದ್ದಾರೆ. 2019ರಲ್ಲಿ ಆಕಾಶ್, ವಜ್ರದ ವ್ಯಾಪಾರಿಯ ಮಗಳಾದ ಶ್ಲೋಕಾ ಮೆಹ್ತಾ ಅವರನ್ನು ವಿವಾಹವಾಗಿದ್ದಾರೆ.
ಇಶಾ ಅಂಬಾನಿ
ಆಕಾಶ್ ಅವರ ಅವಳಿ ಸಹೋದರಿ ಇಶಾ ಅಂಬಾನಿ ಈಗಾಗಲೇ ಕಂಪನಿಯ ರಿಟೇಲ್, ಇ-ಕಾಮರ್ಸ್ ಮತ್ತು ಐಷಾರಾಮಿ ಯೋಜನೆಗಳ ಚಾಲನೆಯಲ್ಲಿ ಸಕ್ರಿಯರಾಗಿದ್ದಾರೆ. ರಿಲಯನ್ಸ್ ಭಾರತದ ಅತಿದೊಡ್ಡ ಚಿಲ್ಲರೆ ವ್ಯಾಪಾರದಲ್ಲೂ ತೊಡಗಿಸಿಕೊಂಡಿದೆ. ಕಂಪನಿಯ ಎ-ಜಿಯೊ ಇ-ಕಾಮರ್ಸ್ ಅಪ್ಲಿಕೇಶನ್ ವಿಸ್ತರಿಸುವಲ್ಲಿ ಇಶಾ ಮುಂದಾಳತ್ವ ವಹಿಸಿದ್ದಾರೆ. ಇಶಾ ಅವರು ಸ್ಟ್ಯಾನ್ಫೋರ್ಡ್ನಿಂದ ಬಿಸಿನೆಸ್ ಮ್ಯಾನೇಜ್ಮೆಟ್ ಪದವಿ ಪಡೆದಿದ್ದಾರೆ.
ಇದನ್ನೂ ಓದಿರಿ: ಸಿಎಂ ಸ್ಥಾನಕ್ಕೆ ಉದ್ಧವ್ ರಾಜೀನಾಮೆ: ಸರ್ಕಾರ ರಚನೆಗೆ ಬಿಜೆಪಿ ನಾಯಕರ ಸಭೆ
ಅನಂತ್ ಅಂಬಾನಿ
ಅನಂತ್ ಅವರು ಅಂಬಾನಿಯವರ ಕಿರಿಯ ಪುತ್ರರಾಗಿದ್ದು, ಅಂಬಾನಿ ಗ್ರೂಪ್ನ ಹೂಡಿಕೆಯ ಪ್ರಮುಖ ಕ್ಷೇತ್ರವಾದ ಹೊಸ ಇಂಧನ ವ್ಯವಹಾರದ ಮೇಲೆ ಅನಂತ್ ಗಮನ ಹರಿಸಿದ್ದಾರೆ.
ಹಸಿರು ಇಂಧನ ಸಾಮರ್ಥ್ಯವನ್ನು ಹೆಚ್ಚಿಸುವ ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಕಾಂಕ್ಷಿ ಯೋಜನೆಯಲ್ಲಿ ರಿಲಯನ್ಸ್ ಸ್ಪರ್ಧಿಸುತ್ತಿದೆ.
ರಿಲಯನ್ಸ್ ಸಂಸ್ಥೆಯು ಸೌರ ಮತ್ತು ಹಸಿರು ಹೈಡ್ರೋಜನ್ ಸೇರಿದಂತೆ ಶುದ್ಧ ಇಂಧನ ಯೋಜನೆಗಳಲ್ಲಿ ತೊಡಗಿಸಿಕೊಂಡಿದೆ. ಅನಂತ್ ಇದರಲ್ಲಿ ಬಹುಮುಖ್ಯ ಪಾತ್ರ ವಹಿಸಿದ್ದಾರೆ. ಈ ಹಿಂದೆ ಕಂಪನಿಯ ಕಾರ್ಯಕ್ರಮಗಳಲ್ಲಿ ಆಕಾಶ್ ಮತ್ತು ಇಶಾ ಜೊತೆಗೆ ಪ್ರೇಕ್ಷಕರನ್ನು ಉದ್ದೇಶಿಸಿ ಅನಂತ್ ಮಾತನಾಡಿದ್ದರು. ಅನಂತ್ 2017ರಲ್ಲಿ ಬ್ರೌನ್ ವಿಶ್ವವಿದ್ಯಾಲಯದಿಂದ ಪದವಿ ಪಡೆದಿದ್ದಾರೆ.