ಕೊರೋನಾ ಮೂರನೇ ಅಲೆ ಶೀಘ್ರದಲ್ಲೇ ಅಪ್ಪಳಿಸಲಿದೆ ಎಂದು ಮಹಾರಾಷ್ಟ್ರ ಕ್ಯಾಬಿನೆಟ್ ಸಚಿವ ಆದಿತ್ಯ ಠಾಕ್ರೆ ಹೇಳಿದ್ದು, ಈಗಿನಿಂದಲೇ ತಯಾರಿ ನಡೆಸಬೇಕು ಎಂದಿದ್ದಾರೆ.
ದೆಹಲಿಯಲ್ಲಿ ನಡೆಯುತ್ತಿರುವ ಎನ್ಡಿಟಿವಿ ಶೃಂಗಸಭೆಯಲ್ಲಿ ಕೊರೋನಾ ನಿಯಂತ್ರಣ ಕುರಿತಂತೆ ಮಾತನಾಡಿ, “ಈ ಮೂರನೇ ಅಲೆ ಈಗ ದೇಶದಾದ್ಯಂತ ಹರಡುತ್ತಿರುವ ಎರಡನೇ ಅಲೆಗಿಂತ ಬಲವಾಗಿರುತ್ತದೆಯೋ ಅಥವಾ ದುರ್ಬಲವಾಗಿರುತ್ತದೆಯೋ ಎಂದು ಈಗ ನಿರ್ಧರಿಸಲಾಗುವುದಿಲ್ಲ. ವ್ಯಾಕ್ಸಿನೇಷನ್ ಈಗಿನಿಂದಲೇ ಸಹಾಯ ಮಾಡದಿದ್ದರೂ, ಇದು ಭವಿಷ್ಯದ ತಯಾರಿಗಾಗಿ ಸಹಾಯ ಮಾಡುತ್ತದೆ” ಎಂದು ಅವರು ಹೇಳಿದರು.
” ಮಹಾರಾಷ್ಟ್ರ ರಾಜ್ಯವು ಇಂದು ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರವು ನಾವು ಕಳೆದ ವರ್ಷ ರಚಿಸಿದ ಕಾರ್ಯಪಡೆಯ ಸಲಹೆಗಳ ಮೇಲೆ ಆಧಾರಿತವಾಗಿದೆ… ವಿಜ್ಞಾನ ಮತ್ತು ವೈದ್ಯಕೀಯ ಸಂಗತಿಗಳ ಪ್ರಕಾರ ನಾವು ನಿರ್ಧಾರ ಮಾಡುತ್ತಿದ್ದೇವೆಯೇ ಹೊರತು ರಾಜಕೀಯದಿಂದಲ್ಲ” ಎಂದು ಮಹಾರಾಷ್ಟ್ರ ಪ್ರವಾಸೋದ್ಯಮ ಮತ್ತು ಪರಿಸರ ಸಚಿವ ಆದಿತ್ಯ ಠಾಕ್ರೆ ತಿಳಿಸಿದರು.
“ಅಂಡರ್-ರಿಪೋಟಿಂಗ್ (ಬೇಕೆಂತಲೇ ಪ್ರಕರಣಗಳು ಮತ್ತು ಸಾವುಗಳ ಸಂಖ್ಯೆಯನ್ನು ತಪ್ಪಾಗಿ ತೋರಿಸುವುದು) ಸಹಾಯ ಮಾಡುವುದಿಲ್ಲ ಎಂಬ ನಿಜವಾದ ನಂಬಿಕೆಗೆ ನಾವು ಬಂದಿದ್ದೇವೆ… ಈಗ ನಾವು ಕೊರೋನಾದ ಮೂರನೇ ಅಲೆ ಎದುರಿಸಲು ಸಿದ್ಧತೆ ನಡೆಸುತ್ತಿದ್ದೇವೆ. ನಮ್ಮಲ್ಲಿ ಐದು ಲಕ್ಷ ಹಾಸಿಗೆಗಳಿವೆ, ಅವುಗಳಲ್ಲಿ 70% ಆಮ್ಲಜನಕಯುಕ್ತವಾಗಿದೆ” ಎಂದು ಅವರು ಹೇಳಿದರು.
ಸಾಂಕ್ರಾಮಿಕ ರೋಗದಲ್ಲಿ ಮಹಾರಾಷ್ಟ್ರವು ದೇಶದ ಅತಿ ಹೆಚ್ಚು ಹಾನಿಗೊಳಗಾದ ರಾಜ್ಯವಾಗಿ ಉಳಿದಿದೆ, ನಿನ್ನೆ 67,123 ಹೊಸ ಪ್ರಕರಣಗಳು ವರದಿಯಾಗಿದ್ದು, 419 ಸಾವುಗಳು ಸಂಭವಿಸಿವೆ. ಒಟ್ಟಾರೆ 37.7 ಲಕ್ಷ ಕೇಸ್ಲೋಡ್ ಇದ್ದು ಇಲ್ಲಿವರೆಗೆ 60 ಸಾವಿರ ಕೋವಿಡ್ ಸಾವು ಸಂಭವಿಸಿವೆ.
ಈ ಸಾಂಕ್ರಾಮಿಕ ರೋಗದಲ್ಲಿ ಸೌಲಭ್ಯಗಳು ಲಭ್ಯ ಇವೆ, ಹಾಗಾಗಿ ಭಯಪಡಬೇಡಿ ಎಂದು ಅವರು ನಾಗರಿಕರಲ್ಲಿ ಮನವಿ ಮಾಡಿದರು.
‘ಈ ಕಾಯಿಲೆಯು ರೂಪಾಂತರಗೊಂಡಿದೆ ಮತ್ತು ಕೆಲ ತಿಂಗಳುಗಳಲ್ಲಿ ಹೆಚ್ಚು ಜಟಿಲವಾಗಿದೆ. ವೈದ್ಯರು ಮತ್ತು ವಿಜ್ಞಾನಿಗಳು ಈ ವಿಷಯದ ಬಗ್ಗೆ ನಿರ್ಧಾರ ಮಾಡುತ್ತಾರೆ, ಸಲಹೆ ನೀಡುತ್ತಾರೆ. ಯಾರೋ ಒಬ್ಬ ವ್ಯಕ್ತಿಯ ಮಾತನ್ನು ನಂಬದಿರಿ. ವಿಜ್ಞಾನ- ವೈದ್ಯಶಾಸ್ತ್ರದ ತಜ್ಞರ ತಂಡ ಸಲಹೆ ಮಾಡಿದ್ದನ್ನು ನಮ್ಮ ಸರ್ಕಾರ ಜಾರಿಗೊಳಿಸುತಿದೆ’ ಎಂದು ಆದಿತ್ಯ ಠಾಕ್ರೆ ಹೇಳಿದರು.
ಇದನ್ನೂ ಓದಿ: ಮಹಾರಾಷ್ಟ್ರ ಕೊರೋನಾ ಪಾಲಿಟಿಕ್ಸ್: ಬಿಜೆಪಿ ಮುಖಂಡರಿಂದ 4.75 ಕೋಟಿ ರೂ. ಮೌಲ್ಯದ ರೆಮ್ಡಿಸಿವಿರ್ ಅಕ್ರಮ ಸಂಗ್ರಹ ಆರೋಪ