Homeಮುಖಪುಟಬೆಳ್ಳಿ ಚುಕ್ಕಿ; ಕಪ್ಪು ರಂಧ್ರದ ಬೆಳಕು!

ಬೆಳ್ಳಿ ಚುಕ್ಕಿ; ಕಪ್ಪು ರಂಧ್ರದ ಬೆಳಕು!

- Advertisement -
- Advertisement -

ನಭೋಮಂಡಲದ ವಿಸ್ಮಯಕಾರಿ ಕೌತುಕಗಳನ್ನು ವೈಜ್ಞಾನಿಕ ಅಧ್ಯಯನಕ್ಕೆ ಒಳಪಡಿಸಿದಷ್ಟೂ ಅದು ಹೆಚ್ಚಿನ ವಿಸ್ಮಯಗಳನ್ನು ನಮ್ಮ ಮುಂದಿರಿಸುತ್ತದೆ. ಮನುಷ್ಯ ಈ ವಿಶ್ವದ ಅರಿವನ್ನು ಪಡೆಯುವುದಕ್ಕೆ ಹಾಕಿಕೊಳ್ಳುವ ಪ್ರಶ್ನೆಗಳಿಗೆ ನಿರ್ದಿಷ್ಟ ಗುರಿಯಿದ್ದರೂ, ಅದಕ್ಕೆ ಉತ್ತರ ಮಾತ್ರ ಅನಂತವಾಗಿಯೇ ಇರುವುದನ್ನು ಅವನು ಗ್ರಹಿಸಿದ್ದಾನೆ. ಈ ವಿಶ್ವದ ಅರಿವಿಗೆ ಆದಿಯೂ ಇಲ್ಲ, ಅಂತ್ಯವೂ ಇಲ್ಲ. ಅನಂತದೆಡೆಗೆ ನಮ್ಮ ಪ್ರಜ್ಞೆ ಹಾತೊರೆಯುತ್ತಿರುವುದಂತೂ ನಿಜ. ಏನೇ ಇರಲಿ, ಆಕಾಶದಲ್ಲಿ ಕಾಣುವ ಒಂದೊಂದು ಕಾಯವೂ ಮನುಷ್ಯನ ಕಲ್ಪನೆಗೆ ಸವಾಲೇ ಆಗಿರುತ್ತದೆ. ಅದಿರಲಿ, ಹಿಂದಿನ ಸಂಚಿಕೆಯಲ್ಲಿ ಸೂಪರ್‌ನೋವಾದ ಬಗ್ಗೆ ತಿಳಿದೆವು. ಈಗ ಕಪ್ಪು ರಂಧ್ರದ ಬಗ್ಗೆ ಸ್ವಲ್ಪ ಚರ್ಚಿಸೋಣ.

ಸಾಮಾನ್ಯವಾಗಿ ನಮಗೆ ತಿಳಿದಿರುವ ವಿಚಾರವೆಂದರೆ, ಕಪ್ಪಗಿರುವ ವಸ್ತುಗಳು ನಮಗೆ ಕಾಣುವುದಿಲ್ಲವೆಂದು. ಇದಕ್ಕೆ ಕಾರಣ, ಕಪ್ಪಗಿರುವ ವಸ್ತುವಿನ ಮೇಲೆ ಬಿದ್ದ ಬೆಳಕು, ಪ್ರತಿಫಲನವಾಗುವುದೇ (reflection) ಇಲ್ಲ, ಬದಲಾಗಿ ವಸ್ತುವು ಬೆಳಕನ್ನು ಹೀರಿಕೊಳ್ಳುತ್ತದೆ (absorbs). ಹೀಗೆ ಪ್ರತಿಫಲನದ ಬೆಳಕು ನಮ್ಮ ಕಣ್ಣಿಗೆ/ಕ್ಯಾಮರಾಗೆ ಬೀಳುವುದಿಲ್ಲವಾದ್ದರಿಂದ, ಕಪ್ಪಾಗಿರುವ ವಸ್ತು ನಮಗೆ ಕಾಣುವುದಿಲ್ಲ. ಈ ವಿವರಣೆಯ ಪ್ರಕಾರ ಕಪ್ಪು ರಂಧ್ರ ಏಂದರೆ, ಏನೋ ಕಾಣದಿರುವ ಆಕಾಶ ಕಾಯದ ಬಗ್ಗೆ ಅಂತ ತಿಳಿದುಕೊಳ್ಳುತ್ತೇವೆ. ಕಪ್ಪು ರಂಧ್ರ ತನ್ನ ಬಳಿ ಬರುವ ಎಲ್ಲಾ ದ್ರವ್ಯವನ್ನೂ (Matter), ಬೆಳಕನ್ನೂ ಸೇರಿಸಿ ತನ್ನೊಳಗೆ ಎಳೆದುಕೊಳ್ಳುತ್ತದೆ ಎನ್ನುವ ವಿಚಾರವನ್ನೂ ತಿಳಿದಿದ್ದೇವೆ. ಆದರೆ, ಖಗೋಳ ವಿಜ್ಞಾನಿಗಳ ಇತ್ತೀಚಿನ ವೀಕ್ಷಣೆಯ ತಿಳಿವಿನ ಪ್ರಕಾರ, ಕಪ್ಪು ರಂಧ್ರದಿಂದ ಬಂದ ಬೆಳಕನ್ನು ಮೊದಲ ಬಾರಿಗೆ ನಮಗೆ ಪರಿಚಯಿಸಿದೆ. ಅಂದರೆ, ಇಲ್ಲಿಯವರೆಗೂ ನಮಗೆ ತಿಳಿದಿದ್ದ ಕಪ್ಪು ರಂಧ್ರ `Black Hole’ ಬೆಳಕನ್ನು ಹೊರಸೂಸುತ್ತಾ?

ಕಪ್ಪು ರಂಧ್ರ ಹೇಗೆ ಉಂಟಾಗುತ್ತದೆ

ನಕ್ಷತ್ರದ ಜೀವ ಚಕ್ರದಲ್ಲಿ, ಕಪ್ಪು ರಂಧ್ರ ಅಂತಿಮ ಹಂತ. ಸೂಪರ್ನೋವಾ ಆದ ನಕ್ಷತ್ರವು ತನ್ನ ತಿರುಳಿನ ದ್ರವ್ಯ ರಾಶಿಯ ಆಧಾರದ ಮೇಲೆ ಕಪ್ಪು ರಂಧ್ರಗಳಾಗುತ್ತವೆ. ಹೆಚ್ಚು ದ್ರವ್ಯ ರಾಶಿಯನ್ನು (mass) ಗುರುತ್ವ ಬಲದ ಕಾರಣದಿಂದ ಕಡಿಮೆ ಗಾತ್ರದಲ್ಲಿ ತುರುಕಿದಂತಾದಾಗ ಉಂಟಾಗುವ ಕಾಯ, ಕಪ್ಪು ರಂಧ್ರ. ನಮ್ಮ ಸೂರ್ಯ ಕೂಡ ಕಪ್ಪು ರಂಧ್ರವಾಗುವಾಗಬೇಕಾದರೆ, ಅದರ ದ್ರವ್ಯರಾಶಿಯಲ್ಲಿ ಯಾವುದೇ ಬದಲಾವಣೆ ಮಾಡದೆ, 3km ವ್ಯಾಸವಿರುವ ಒಂದು ಗೋಳದ ಒಳಗೆ ತುರುಕಿದರೆಅದು ಕಪ್ಪು ರಂಧ್ರವಾಗುತ್ತದೆ. ಹೀಗೆ ಕಪ್ಪು ರಂಧ್ರವಾದ ನಕ್ಷತ್ರಗಳಲ್ಲಿ ಗುರುತ್ವ ಬಲವು ತೀವ್ರವಾಗುತ್ತಾ ಹೋಗುತ್ತದೆ. ಇಂತಹ ಕಾಯದ ಮೇಲ್ಮೈನಿಂದ ಯಾವ ದ್ರವ್ಯವೂ (Matter) ಹೊರಬರಲಾರದು. ಎಲ್ಲವೂ ಅದರೊಳಗೆ ಇರುತ್ತದೆ. ಬೆಳಕಿನ ಕಿರಣಗಳೂ ಕೂಡ ಇದರಿಂದ ಹೊರಬರಲು ಸಾಧ್ಯವಿಲ್ಲ. ಯಾವಾಗ ಈ ಕಾಯದಿಂದ ಏನೂ ಹೊರಬರಲು ಸಾಧ್ಯವಿಲ್ಲವೋ, ಆಗ ಈ ಕಾಯ ನಭೋಮಂಡಲದಲ್ಲಿರುವುದು ನಮಗೆ ಕಾಣುವುದೇ ಇಲ್ಲ. ಈ ಕಾರಣದಿಂದ ಈ ಕಾಯಕ್ಕೆ ಕಪ್ಪು ರಂಧ್ರ ಎಂಬ ಹೆಸರಿದೆ.

ಹೀಗಿದ್ದರೂ ಈ ಕಾಯವನ್ನು ಹೇಗೆ ಗುರುತಿಸಬಹುದೆಂದರೆ, ಈ ಕಪ್ಪು ರಂಧ್ರವು ಅದರ ಹತ್ತಿರ ಇರುವ ಇನ್ನಿತರ ನಕ್ಷತ್ರಗಳ ಮೇಲೆ ಬೀರುವ ಪ್ರಭಾವದಿಂದ ಪರೋಕ್ಷವಾಗಿ ಗುರುತಿಸಬಹುದಾಗಿದೆ.

ಕಪ್ಪು ರಂಧ್ರದಿಂದ ಏನೂ ಹೊರಬರುವುದಿಲ್ಲವೇಕೆ?

ನೀವು ಒಂದು ಕಲ್ಲನ್ನು ಮೇಲಕ್ಕೆಸೆದರೆ ಏನಾಗುತ್ತದೆ? ನಾವು ಎಸೆದ ಬಲಕ್ಕೆ (force) ಅನುಸಾರವಾಗಿ ಎತ್ತರಕ್ಕೆ ಚಲಿಸಿ ಮತ್ತೆ ನೆಲಕ್ಕೆ ಬೀಳುತ್ತದೆ. ನಾವು ಇನ್ನೂ ಜೋರಾಗಿ ಎಸೆದರೆ, ಇನ್ನೂ ಎತ್ತರಕ್ಕೆ ಚಲಿಸಿ ಮತ್ತೆ ನೆಲಕ್ಕೆ ಬೀಳುತ್ತದೆ. ಹೀಗೆ ನಾವು ನಮ್ಮ ಎಸೆಯುವ ಬಲವನ್ನು ಹೆಚ್ಚು ಮಾಡುತ್ತಿದ್ದರೆ, ಆ ವಸ್ತು ಮತ್ತಷ್ಟೂ ಎತ್ತರಕ್ಕೆ ಹೋಗುತ್ತದೆ. ಇದಕ್ಕೆ ಭೂಮಿಯ ಗುರುತ್ವ ಬಲ ಕಾರಣ ಎಂಬುದು ಸಾಮಾನ್ಯ ತಿಳಿವಳಿಕೆ. ಭೂಮಿಯ ಗುರುತ್ವ ಬಲವನ್ನು ಮೀರಿದ ಬಲದಲ್ಲಿ ಒಂದು ವಸ್ತುವನ್ನು ನಾವು ಎಸೆದಾಗ ಏನಾಗಬಹುದು? ಆ ವಸ್ತುವು ಕೆಳಗೆ ಬೀಳದೇ ಹಾಗೆ ಮೇಲ್ಮುಖವಾಗಿ ಚಲಿಸುತ್ತಲೇ ಇರುತ್ತದೆ. ನಮ್ಮ ರಾಕೆಟ್‌ಗಳು ಕೆಲಸ ಮಾಡುವುದು ಹೀಗೆ. ರಾಕೆಟ್‌ನಲ್ಲಿ ಮೇಲ್ಮುಖ ಬಲ ಭೂಮಿಯ ಗುರುತ್ವ ಬಲಕ್ಕಿಂತಲೂ ನಿರಂತರವಾಗಿ ಹೆಚ್ಚಿರುತ್ತದೆ. ಆದುದರಿಂದ, ರಾಕೆಟ್ ಕೆಳಗೆ ಬೀಳದೆ ಮೇಲ್ಮುಖವಾಗಿಯೇ ಚಲಿಸುತ್ತಿರುತ್ತದೆ. ವೈಜ್ಞಾನಿಕವಾಗಿ, ಇದನ್ನು Escape Velocity (ವಿಮೋಚನಾ ವೇಗ) ಎಂದು ಕರೆಯುತ್ತಾರೆ. ಅಂದರೆ, ಒಂದು ವಸ್ತುವು ಭೂಮಿಯ ಗುರುತ್ವ ಬಲವನ್ನೂ ಮೀರಿ ಹೋಗಲು ಬೇಕಾದ ಕನಿಷ್ಠ ವೇಗ. ಇದು ಭೂಮಿಗೆ 11.19 km/ ಆಗಿದೆ. ಇದರ ಅರ್ಥ, ಯಾವುದೇ ವಸ್ತುವು ಒಂದು ಸೆಕೆಂಡಿಗೆ ಹನ್ನೊಂದು ಕಿಲೋಮೀಟರ್ ಮೇಲ್ಮುಖವಾಗಿ ನಿರಂತರವಾಗಿ ಚಲಿಸುತ್ತಿದ್ದರೆ, ಅದು ಭೂಮಿಯ ಗುರುತ್ವ ಬಲ ಮೀರಿ ಆಕಾಶಕ್ಕೆ ಹೋಗುತ್ತದೆ.

ಹಾಗಾದರೆ, ಕಪ್ಪು ರಂಧ್ರದಲ್ಲಿ Escape Velocity ಎಷ್ಟಿರಬಹುದು ಊಹಿಸಿ. ಕಪ್ಪು ರಂಧ್ರದ Escape Velocity ಒಂದು ಸೆಕೆಂಡಿಕೆ ಸುಮಾರು 3 ಲಕ್ಷ ಕಿಮೀಗಿಂತಲೂ ಹೆಚ್ಚಿದೆ. ಅಂದರೆ ಕಪ್ಪು ರಂಧ್ರದಿಂದ ಹೊರಗೆ ಬರಬೇಕೆಂದರೆ, ಸೆಕೆಂಡಿಗೆ 3 ಲಕ್ಷಕ್ಕಿಂತಲೂ ಹೆಚ್ಚು ವೇಗದಲ್ಲಿ ಮೇಲ್ಮುಖವಾಗಿ ಚಲಿಸಿದಾಗ ಮಾತ್ರ ಸಾಧ್ಯ. ನಮಗೆ ತಿಳಿದಿರುವ ಅತೀ ವೇಗ ಅಂದರೆ, ಬೆಳಕಿನ ಕಿರಣಗಳ ವೇಗ: ಒಂದು ಸೆಕೆಂಡಿಗೆ 3 ಲಕ್ಷ ಕಿಲೋಮೀಟರ್ ಚಲಿಸುತ್ತದೆ. ಆದರೂ, ಬೆಳಕು ಕೂಡ ಕಪ್ಪು ರಂಧ್ರದ Escape Velocityಗಿಂತಲೂ ಕಡಿಮೆ ವೇಗದಲ್ಲಿಯೇ ಚಲಿಸುವುದರಿಂದ, ಅದೂ ಕೂಡ ಹೊರಬರುವುದಿಲ್ಲ. ಆದುದರಿಂದ, ಕಪ್ಪು ರಂಧ್ರದಿಂದ ಯಾವ ದ್ರವ್ಯವೂ (Matter), ಬೆಳಕೂ ಕೂಡ ಪಾರಾಗಲು ಸಾಧ್ಯವಿಲ್ಲ.

ಕಪ್ಪು ರಂಧ್ರದ ನೂರು ವರ್ಷದ ಇತಿಹಾಸ

ಕಪ್ಪು ರಂಧ್ರದ ಬಗ್ಗೆ ನಮಗೆ ತಿಳಿದಿರುವ ವಿಚಾರ ಇನ್ನೂ ಅಸ್ಪಷ್ಟ. ಆದರೆ ಕಳೆದ ನೂರು ವರ್ಷಗಳಿಂದಲೂ ಈ ಕಾಯ ನಮ್ಮ ಕಲ್ಪನೆಗಳನ್ನು ವಿಸ್ತರಿಸುತ್ತಲೇ ಇದೆ. ಆಲ್ಬರ್ಟ ಐನ್ಸ್ಟೈನ್ ತಮ್ಮ ಸಾಮಾನ್ಯ ಸಾಪೇಕ್ಷ ಸಿದ್ಧಾಂತದ ಸಂಶೋಧನಾ ಪತ್ರಿಕೆಯಲ್ಲಿ Mathematical Model ಮುಖಾಂತರ ಕಪ್ಪು ರಂಧ್ರವನ್ನು ವಿವರಿಸಿದರು. ತದನಂತರ ಸರ್ ರೋಜರ್ ಪೆನ್ರೋಸ್, ರಿಹಾರ್ಡ್ ಗೆನ್ಸಲ್ ಮತ್ತು ಆಂಡ್ರಿಯಾ ಘೆಜ಼್‌ರವರು ವಿಶ್ವದಲ್ಲಿ ಕಪ್ಪು ರಂಧ್ರದ ಇರುವಿಕೆಯನ್ನು ಖಾತರಿಪಡಿಸಿದರು. ಈ ಅಧ್ಯಯನಕ್ಕೆ ಕಳೆದ ವರ್ಷದ ನೊಬೆಲ್ ಪ್ರಶಸ್ತಿಯನ್ನು ಈ ಮೂವರೂ ವಿಜ್ಞಾನಿಗಳಿಗೆ ನೀಡಲಾಗಿದೆ. ನೂರು ವರ್ಷಗಳ ಹಿಂದೆಯೇ ಇಂತಹ ಕಾಯವನ್ನು ತನ್ನ ಥಿಯರಿ ಮುಖಾಂತರ ಪರಿಚಯಿಸಿದ್ದ ಐನ್ಸ್ಟೈನ್, ಇಂತಹ ಕಾಯ ಕೇವಲ ಕಾಲ್ಪನಿಕ ಎಂದೇ ವ್ಯಾಖ್ಯಾನಿಸಿದ್ದರು. ವಿಜ್ಞಾನ ಮತ್ತು ತಂತ್ರಜ್ಞಾನ ಬೆಳೆದಂತೆ, ನಭೋಮಂಡಲವನ್ನು ಬೇಧಿಸಿ ನೋಡುವ ತಾಂತ್ರಿಕತೆ ಹುಟ್ಟುಕೊಂಡ ಮೇಲೆ, ಅಂದು ಐನ್ಸ್ಟೈನ್ ಪ್ರತಿಪಾದಿಸಿದ್ದ ಸಾಮಾನ್ಯ ಸಾಪೇಕ್ಷ ಸಿದ್ಧಾಂತ ಮತ್ತು ಅದರ ಉಪ ಥಿಯರಿಗಳು ಪ್ರತಿಪಾದಿಸುವ ಅಂಶಗಳನ್ನು ಬೇರೆ ರೀತಿಯಲ್ಲಿ ಸಾಬೀತುಪಡಿಸುವ ವೈಜ್ಞಾನಿಕ ಅಧ್ಯಯನಗಳು ಇಂದಿಗೂ ಬರುತ್ತಲೇ ಇವೆ. ಸಾಮಾನ್ಯ ಸಾಪೇಕ್ಷ ಸಿದ್ಧಾಂತವನ್ನು ನಾವು ಕಂಡುಕೊಂಡಿರುವುದು, ಮಾನವನ ಇತಿಹಾಸದ ಒಂದು ಪ್ರಮುಖ ಮೈಲುಗಲ್ಲು.

ಕಪ್ಪು ರಂಧ್ರದ ಬೆಳಕು!

ಕಪ್ಪು ರಂಧ್ರದ ಬಗ್ಗೆ ಇಷ್ಟೆಲ್ಲಾ ಕತೆ ಹೇಳಿದ ಮೇಲೆ, ಏನಿದು ಕಪ್ಪು ರಂಧ್ರದ ಬೆಳಕು? ಅದು ಹೇಗೆ ಉಂಟಾಗುತ್ತದೆಂದು ಯೋಚಿಸುತ್ತಿದ್ದರೆ, ಇತ್ತೀಚಿನ ಕ್ಯಾಲಿಫೋರ್ನಿಯಾದ ಸ್ಟ್ಯಾನ್‌ಫರ್ಡ್ ವಿಶ್ವವಿದ್ಯಾನಿಲಯ ಮತ್ತು ಯುರೋಪಿಯನ್ ಸ್ಪೇಸ್ ಏಜನ್ಸಿಯ ಒಂದು ಅಧ್ಯಯನದಲ್ಲಿ ಅದಕ್ಕೆ ಉತ್ತರ ಇದೆ. ಇದರ ಪ್ರಕಾರ, ಖಗೋಳ ವಿಜ್ಞಾನಿಗಳು 800 ಜೋತಿರ್ವಷ ದೂರವಿರುವ, ಸೂರ್ಯನಿಗಿಂತಲೂ 10 ಲಕ್ಷ ಪಟ್ಟು ಹೆಚ್ಚು ದ್ರವ್ಯರಾಶಿ ಹೊಂದಿರುವ ಒಂದು ಕಪ್ಪು ರಂಧ್ರವನ್ನು ಅಧ್ಯಯನ ಮಾಡುವಾಗ, ಅದರ ಸುತ್ತಲಿನ ಬೆಳಕನ್ನು ವೀಕ್ಷಿಸಿದರು. ಇದನ್ನು ವೈಜ್ಞಾನಿಕ ವಿಧಾನಗಳಿಂದ ಅಧ್ಯಯನ ಮಾಡಿದಾಗ ತಿಳಿದ ವಿಚಾರವೆಂದರೆ, ಈ ಬೆಳಕು ಬರುತ್ತಿರುವುದು ಕಪ್ಪು ರಂಧ್ರದಿಂದ ಅಲ್ಲಾ, ಬದಲಾಗಿ ಕಪ್ಪು ರಂಧ್ರದ ಹಿಂದೆ ಇರುವ ಕಾಯಗಳಿಂದ ಬರುತ್ತಿರುವುದೆಂದು.

ಈ ಬೆಳಕು ಸೂಸುತ್ತಿರುವ ಕಾಯ/ಮೋಡಗಳು ಕಪ್ಪು ರಂಧ್ರದ ಹಿಂದಿದ್ದರೂ, ಹೇಗೆ ಆ ಬೆಳಕು ನಮಗೆ ಕಾಣುತ್ತಿದೆ? ಇದಕ್ಕೂ ಕೂಡ ಐನ್ಸ್ಟೈನ್ ಅವರ ಸಾಮಾನ್ಯ ಸಾಪೇಕ್ಷ ಸಿದ್ಧಾಂತವೇ ಉತ್ತರ. ಇದರ ಪ್ರಕಾರ ತೀವ್ರವಾದ ಗುರುತ್ವ ಬಲ ಇರುವ ಕಾಯದ ಬಳಿ ಬೆಳಕು ನೇರವಾಗಿ ಚಲಿಸದೆ ಬಾಗುತ್ತದೆ. ಹೀಗೆ ಕಪ್ಪು ರಂಧ್ರದ ಬಳಿ ಬಾಗಿದ ಬೆಳಕು ಭೂಮಿಯ ದಿಕ್ಕಿಗೆ ಬಂದಾಗ, ಕಪ್ಪು ರಂಧ್ರ ಅಡ್ಡ ಇದ್ದರೂ, ಅದರ ಹಿಂದೆ ಇರುವ ಕಾಯವನ್ನು ಅಥವಾ ಅದರ ಬೆಳಕನ್ನು ನಾವು ನೋಡಬಹುದು. ಇದನ್ನೇ “Gravitational Lensing Effect” ಎಂದು ಕರೆಯುತ್ತಾರೆ.

ಈ ಕಪ್ಪು ರಂಧ್ರ ತನ್ನ ಹತ್ತಿರದಲ್ಲಿರುವ ದ್ರವ್ಯ ಮತ್ತು ಅನಿಲದ ಮೋಡಗಳನ್ನು ತನ್ನ ಹತ್ತಿರ ವೇಗವಾಗಿ ಎಳೆದುಕೊಂಡು ನುಂಗುತ್ತಿರಬೇಕಾದರೂ, ಕಪ್ಪು ರಂಧ್ರದ ಪರಿಧಿಯಲ್ಲಿ, ಕ್ಷ ಕಿರಣಗಳು ಉತ್ಪತ್ತಿಯಾಗುವುದು ತಿಳಿದಿರುವ ವಿಚಾರ. ಆದರೆ, ಈ ಅಧ್ಯಯನದಲ್ಲಿ ಕಂಡ ಬೆಳಕು ಆ ಕ್ಷ ಕಿರಣಗಳಿಗಿಂತಲೂ ವಿಭಿನ್ನವಾಗಿದ್ದವು. ಇದನ್ನು ವಿಜ್ಞಾನಿಗಳು “Luminous Echoes” (ಹೊಳೆಯುವ ಪ್ರತಿಧ್ವನಿ) ಎಂದು ಕರೆದಿದ್ದಾರೆ. ಇದೇ ಪ್ರಥಮ
ಬಾರಿಗೆ ಇಂತಹ ಬೆಳಕನ್ನು ಕಂಡಿರುವ ವಿಜ್ಞಾನಿಗಳಿಗೆ, ಕಪ್ಪು ರಂಧ್ರದ ಬಗ್ಗೆ ಇನ್ನಷ್ಟು ವಿಸ್ಮಯಕಾರಿ ಅಂಶಗಳನ್ನು ಬಯಲಿಗೆಳೆಯುವ ದಿನಗಳು ದೂರವಿಲ್ಲ ಅಂತಲೇ ಹೇಳಬಹುದು. ಈ ಕಪ್ಪು ರಂಧ್ರದ ಒಳಗೆ ಏನಿದೆ, ಅದರ ಗುಣಗಳೇನು ಎನ್ನುವುದು ಮಾನವನಿಗೆ ಇನ್ನೂ misteryಯೇ! ಮುಂದೆ?


ಇದನ್ನೂ ಓದಿ: 2020ರ ಭೌತ ವಿಜ್ಞಾನದ ನೊಬೆಲ್ ಪ್ರಶಸ್ತಿ | ಕಪ್ಪು ರಂಧ್ರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...