ಮಧ್ಯಪ್ರದೇಶದ ಭಿಂಡ್ ಜಿಲ್ಲೆಯಲ್ಲಿ ಆಂಬ್ಯುಲೆನ್ಸ್ಗಳ ಕೊರತೆ ಎದುರಾಗಿದ್ದು, ಅನಾರೋಗ್ಯ ಪೀಡಿತ ತಂದೆಯನ್ನು ತಳ್ಳುವ ಗಾಡಿಯಲ್ಲಿ ಆಸ್ಪತ್ರೆಗೆ ಕರೆದೊಯ್ದ ವ್ಯಕ್ತಿಯ ಕುರಿತು ವರದಿ ಮಾಡಿದ ಮೂವರು ಪತ್ರಕರ್ತರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ‘ದಿ ಕ್ವಿಂಟ್’ ವರದಿ ಮಾಡಿದೆ.
ಪತ್ರಕರ್ತರಾದ ಕುಂಜ್ಬಿಹಾರಿ ಕೌರವ್, ಅನಿಲ್ ಶರ್ಮಾ ಮತ್ತು ಎನ್.ಕೆ.ಭಟೆಲೆ ಅವರು ‘ಪತ್ರಿಕಾ’, ‘ನ್ಯೂಸ್ 18’ ಮತ್ತು ‘ಲಲ್ಲೂರಾಮ್ ಡಾಟ್ ಕಾಮ್’ನಲ್ಲಿ ವರದಿ ಮಾಡಿದ್ದಾರೆ. ಆಂಬ್ಯುಲೆನ್ಸ್ ಕೊರತೆಯ ಕುರಿತು ಬೆಳಕು ಚೆಲ್ಲಿದ್ದಕ್ಕೆ ಪತ್ರಕರ್ತರ ಮೇಲೆ ಕ್ರಮ ಜರುಗಿಸಲಾಗಿದೆ ಎಂದು ಎನ್ಡಿಟಿವಿ ವರದಿ ಮಾಡಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 420 (ವಂಚನೆ ಮತ್ತು ಅಪ್ರಾಮಾಣಿಕತೆ), 505-2 (ವರ್ಗಗಳ ನಡುವೆ ದ್ವೇಷವನ್ನು ಸೃಷ್ಟಿಸುವ ಅಥವಾ ಉತ್ತೇಜಿಸುವ ಹೇಳಿಕೆಗಳು) ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆಯ ಸೆಕ್ಷನ್ 69ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ದಾಬೋ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ರಾಜೀವ್ ಕೌರವ್ ಅವರು ನೀಡಿದ ದೂರಿನ ಆಧಾರದ ಮೇಲೆ ಎಫ್ಐಆರ್ ದಾಖಲಿಸಲಾಗಿದೆ.
ಸುಳ್ಳು ಮತ್ತು ಆಧಾರ ರಹಿತ ಸುದ್ದಿಗಳನ್ನು ಮಾಡಲಾಗಿದೆ ಎಂದು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.
ಭಿಂಡ್ ಜಿಲ್ಲಾಧಿಕಾರಿ ಸತೀಶ್ ಕುಮಾರ್ ಎಸ್ ತನಿಖಾ ತಂಡವನ್ನು ರಚಿಸಿದ್ದರು. ಕಂದಾಯ ಮತ್ತು ಆರೋಗ್ಯ ಇಲಾಖೆಗಳ ಅಧಿಕಾರಿಗಳನ್ನು ಒಳಗೊಂಡ ತನಿಖಾ ತಂಡವು ವರದಿ ನೀಡಿದ್ದು, ಆಂಬ್ಯುಲೆನ್ಸ್ ಸೇವೆಗಾಗಿ ಕುಟುಂಬವು ಯಾವುದೇ ಕರೆಯನ್ನು ಮಾಡಿಲ್ಲ ಎಂದು ತಿಳಿಸಲಾಗಿದೆ.
ಜ್ಞಾನ ಪ್ರಸಾದ್ ವಿಶ್ವಕರ್ಮ ಎಂದು ಗುರುತಿಸಲಾದ ವೃದ್ಧನನ್ನು ಮೊದಲು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತೇ ಹೊರತು ಸರ್ಕಾರಿ ಆಸ್ಪತ್ರೆಗಲ್ಲ ಎಂದು ತನಿಖಾ ತಂಡ ಹೇಳಿಕೊಂಡಿದೆ.
ಆದರೆ ತನಿಖಾ ತಂಡದ ಹೇಳಿಕೆಗಳಿಗೆ ವ್ಯತಿರಿಕ್ತವಾಗಿ ವೃದ್ಧನ ಕುಟುಂಬ ಸದಸ್ಯರು ಹೇಳಿಕೆ ನೀಡಿದ್ದಾರೆ.
“ಆಂಬ್ಯುಲೆನ್ಸ್ಗೆ ಕರೆ ಮಾಡಿದರೂ ಸಿಗದ ಕಾರಣ ಸುಮಾರು 5 ಕಿಲೋಮೀಟರ್ ತಳ್ಳೊ ಗಾಡಿಯನ್ನು ಬಳಸಬೇಕಾಯಿತು” ಎಂದು ಜ್ಞಾನಪ್ರಸಾದ್ ವಿಶ್ವಕರ್ಮ ಅವರ ಮಕ್ಕಳಾದ ಹರಿಕೃಷ್ಣ ಮತ್ತು ಪುಷ್ಪಾ ಆರೋಪಿಸಿದ್ದಾರೆ.
ಸದರಿ ಕುಟುಂಬಕ್ಕೆ ಸರ್ಕಾರಿ ಯೋಜನೆಗಳ ಅಡಿಯಲ್ಲಿ ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದು ಅಧಿಕಾರಿಗಳು ಹೇಳಿರುವುದನ್ನು ಪುಷ್ಪಾ ಅವರು ಅಲ್ಲಗಳೆದಿದ್ದಾರೆ ಎಂದು ಎನ್ಡಿಟಿವಿ ವರದಿ ಮಾಡಿದೆ.
ಇದನ್ನೂ ಓದಿರಿ: ಲಕ್ನೋ: ಜಾತಿ ನಿಂದನೆ ದೂರು ನೀಡಿದ ದಲಿತ ಪತ್ರಕರ್ತ; ಬ್ರಾಹ್ಮಣ ಪತ್ರಕರ್ತನ ವಿರುದ್ಧ ಎಫ್ಐಆರ್
“ನಮಗೆ ಪಿಎಂ ಆವಾಸ್ ಯೋಜನೆಯ ಒಂದು ಕಂತು ಮಾತ್ರ ಸಿಕ್ಕಿದೆ” ಎಂದು ಅವರು ಸ್ಪಷ್ಟಪಡಿಸಿದ್ದಾರೆ. “ಜಿಲ್ಲಾಡಳಿತದ ತಂಡವು ನನ್ನ ಸಹೋದರನ ಮನೆಯ ಚಿತ್ರಗಳನ್ನು ತೆಗೆದುಕೊಂಡಿತು” ಎಂದು ತಿಳಿಸಿದ್ದಾರೆ.
ಕೆಲವು ಸರ್ಕಾರಿ ಅಧಿಕಾರಿಗಳು ಖಾಲಿ ಪೇಪರ್ ಮೇಲೆ ಸಹಿ ಹಾಕುವಂತೆ ಒತ್ತಾಯಿಸಿದರು ಎಂದು ಹರಿಕೃಷ್ಣ ಗಂಭೀರ ಆರೋಪ ಮಾಡಿದ್ದಾರೆ.
ಆದರೆ ಈ ಆರೋಪಕ್ಕೆ ಅಧಿಕಾರಿಗಳು ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಎನ್ಡಿಟಿವಿ ವರದಿ ಮಾಡಿದೆ.