ಕ್ರಿಮಿನಲ್ ಹಿನ್ನೆಲೆಯುಳ್ಳ ವ್ಯಕ್ತಿಗಳಿಗೆ ವೈಯಕ್ತಿಕ ಭದ್ರತಾ ಅಧಿಕಾರಿಗಳನ್ನು (ಪಿಎಸ್ಒ) ಒದಗಿಸುವಂತೆ ನ್ಯಾಯಾಲಯಗಳು ಪೊಲೀಸರಿಗೆ ನಿರ್ದೇಶನ ನೀಡಲು ಪ್ರಾರಂಭಿಸಿದರೆ ಸಮಾಜವು ನ್ಯಾಯಾಂಗದ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳುತ್ತದೆ ಎಂದಿರುವ ಮದ್ರಾಸ್ ಹೈಕೋರ್ಟ್, ಪೊಲೀಸ್ ಭದ್ರತೆ ಕೋರಿ ಬಿಜೆಪಿ ನಾಯಕರೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ.
ಎಪ್ರಿಲ್ 1 ರಂದು ನೀಡಿದ ಆದೇಶದಲ್ಲಿ ನ್ಯಾಯಮೂರ್ತಿ ಎನ್ ಆನಂದ್ ವೆಂಕಟೇಶ್ ಅವರು, ಬಿಜೆಪಿಯ ಒಬಿಸಿ ರಾಜ್ಯ ಕಾರ್ಯದರ್ಶಿ ಕೆ ವೆಂಕಟೇಶ್ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ್ದಾರೆ.
ಕಳೆದ ವರ್ಷ ಆಗಸ್ಟ್ನಲ್ಲಿ ಅರ್ಜಿದಾರರ ಹತ್ತಿರದ ಸಂಬಂಧಿಯನ್ನು ಅಪರಿಚಿತ ವ್ಯಕ್ತಿಗಳು ಹತ್ಯೆಗೈದಿದ್ದರು. ಘಟನೆಯ ನಂತರ, ಅರ್ಜಿದಾರರಾದ ವೆಂಕಟೇಶ್ ಅವರಿಗೂ ಹಲವಾರು ಬೆದರಿಕೆ ಕರೆಗಳು ಬರಲಾರಂಭಿಸಿದ್ದವು. ಈ ಹಿನ್ನೆಲೆ ವೆಂಕಟೇಶ್ ಗನ್ ಲೈಸೆನ್ಸ್ ಪಡೆದುಕೊಂಡಿದ್ದರು. ಬಳಿಕ ಪೊಲೀಸ್ ಭದ್ರತೆ ಕೋರಿ ಮನವಿ ಸಲ್ಲಿಸಿದ್ದರು. ವೆಂಕಟೇಶ್ ಕ್ರಿಮಿನಲ್ ಹಿನ್ನೆಲೆ ಹೊಂದಿರುವ ಕಾರಣ ಈ ಮನವಿಯನ್ನು ರಾಜ್ಯ ಪೊಲೀಸರು ತಿರಸ್ಕರಿಸಿದ್ದರು.
ವೆಂಕಟೇಶ್ ವಿರುದ್ಧ ಆಂಧ್ರ ಪ್ರದೇಶದಲ್ಲಿ 49 ಮತ್ತು ತಮಿಳುನಾಡಿನಲ್ಲಿ 3 ಸೇರಿ ಒಟ್ಟು 52 ಎಫ್ಐಆರ್ಗಳಿವೆ ಎಂದು ಪೊಲೀಸರು ನ್ಯಾಯಾಲಯಕ್ಕೆ ವಸ್ತು ಸ್ಥಿತಿ ತಿಳಿಸಿದ್ದರು.
ಪೊಲೀಸರ ವರದಿಯಲ್ಲಿ ವೆಂಕಟೇಶ್ ಓರ್ವ ರೌಡಿ ಶೀಟರ್ ಎಂದು ಉಲ್ಲೇಖಿಸಿದನ್ನು ನ್ಯಾಯಾಲಯ ಗಮನಿಸಿದೆ. ವೆಂಕಟೇಶ್ಗೆ ಬೆದರಿಕೆ ಕರೆ ಬರಲು ಕಾರಣ ಅವರ ಸ್ವಂತ ಕೃತ್ಯಗಳಾಗಿವೆ ಎಂದು ನ್ಯಾಯಾಲಯ ಹೇಳಿದೆ. ಭದ್ರತೆ ಕೋರಿದ್ದ ಅರ್ಜಿ ವಜಾಗೊಳಿಸಿದೆ.
ಅರ್ಜಿದಾರರಾದ ವೆಂಕಟೇಶ್ ಪರ ವಕೀಲರಾದ ನಿತ್ಯೇಶ್ ನಟರಾಜ್ ಮತ್ತು ಅನಿರುದ್ಧ್ ಶ್ರೀರಾಮ್ ವಾದ ಮಂಡಿಸಿದ್ದಾರೆ. ಪ್ರತಿವಾದಿ ರಾಜ್ಯ ಸರ್ಕಾರದ ಪರವಾಗಿ ಹೆಚ್ಚುವರಿ ಪಬ್ಲಿಕ್ ಪ್ರಾಸಿಕ್ಯೂಟರ್ ಎ ದಾಮೋದರನ್ ವಾದ ಮಂಡಿಸಿದ್ದಾರೆ.
ಇದನ್ನೂ ಓದಿ : ವ್ಯಕ್ತಿಯೊಬ್ಬರಿಗೆ ಥಳಿಸಿದ ನುಹ್ ಹಿಂಸಾಚಾರ ಆರೋಪಿ ಬಿಟ್ಟು ಭಜರಂಗಿ: ಮೂಕ ಪ್ರೇಕ್ಷಕನಾಗಿ ನಿಂತ ಪೊಲೀಸ್ ಸಿಬ್ಬಂದಿ!