ಅನರ್ಹತೆ ನೋಟಿಸ್ಗೆ ಪ್ರತಿಕ್ರಿಯೆ ಸಲ್ಲಿಸಲು ಮಹಾರಾಷ್ಟ್ರದ ಬಂಡಾಯ ಶಾಸಕರಿಗೆ ಸುಪ್ರೀಂ ಕೋರ್ಟ್ ಜುಲೈ 12 ರವರೆಗೆ ಸಮಯ ನೀಡಿದೆ. ಇದರ ಬಳಿಕ ವಿಶ್ವಾಸಮತ ಯಾಚನೆ ನಡೆಸಲು ಇರುವ ಸಾಂವಿಧಾನಿಕ ನಿಬಂಧನೆಗಳ ಬಗ್ಗೆ ತಿಳಿಯಲು ಬಂಡಾಯಗಾರರು ವಕೀಲರನ್ನು ಸಂಪರ್ಕಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಮಿತ್ರ ಪಕ್ಷ ಎನ್ಸಿಪಿಗೆ ಸೇರಿರುವ ಉಪ ಸ್ಪೀಕರ್ ನರಹರಿ ಝಿರ್ವಾಲ್ ಅವರು ಕಳೆದ ವಾರ ಏಕನಾಥ್ ಶಿಂಧೆ ಮತ್ತು ಇತರ 15 ಬಂಡಾಯ ಶಾಸಕರಿಗೆ ಅನರ್ಹತೆ ನೋಟಿಸ್ ನೀಡಿದ್ದರು.
ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ ಸರ್ಕಾರದ ಪರ ವಾದ ಮಂಡಿಸಿದ ವಕೀಲ ದೇವದತ್ ಕಾಮತ್, ಬಾಕಿ ಉಳಿದಿರುವ ಸಮಸ್ಯೆಗಳು ಇತ್ಯರ್ಥವಾಗುವವರೆಗೆ ವಿಶ್ವಾಸಮತ ಯಾಚನೆ ಬೇಡ ಎಂದು ಪ್ರತಿಪಾದಿಸಿದ್ದರು. ಆದರೆ, ಅನಗತ್ಯ ತೊಡಕುಗಳನ್ನು ಉಂಟುಮಾಡುವ ಆದೇಶವನ್ನು ಹೊರಡಿಸಲು ಸಾಧ್ಯವಿಲ್ಲ ಎಂದಿರುವ ಸುಪ್ರೀಂ ಕೋರ್ಟ್, “ಯಾವುದಾದರೂ ಅಕ್ರಮ ನಡೆದರೆ, ನೀವು ಯಾವಾಗಲಾದರೂ ನ್ಯಾಯಾಲಯಕ್ಕೆ ಹೋಗಬಹುದು” ಎಂದಿತ್ತು.
ಇದನ್ನೂ ಓದಿ: ಟ್ವಿಟರ್ ಟ್ರೆಂಡಿಂಗ್ನಲ್ಲಿ ಮೊದಲ ಸ್ಥಾನ ಕಾಯ್ದುಕೊಂಡ #IStandWithZubair ಹ್ಯಾಷ್ಟ್ಯಾಗ್
ಶಿವಸೇನೆಯ ಏಕನಾಥ್ ಶಿಂಧೆ ನೇತೃತ್ವದ ಬಂಡಾಯ ಶಾಸಕರ ಬಣ ಮತ್ತು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ಇನ್ನೊಂದು ಬಣ ಯಾವುದೇ ಒಪ್ಪಂದಕ್ಕೆ ಬರಲು ನಿರಾಕರಿಸಿದ್ದು, ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಈ ವಾರ ಸದನದಲ್ಲಿ ಬಹುಮತ ಸಾಬೀತುಪಡಿಸಲು ರಾಜ್ಯ ಸರ್ಕಾರವನ್ನು ಕೇಳಬಹುದು ಎಂದು ಮೂಲಗಳು ತಿಳಿಸಿವೆ.
ಬಂಡಾಯ ಶಾಸಕರು ಏಕನಾಥ್ ಶಿಂಧೆ ನೇತೃತ್ವದಲ್ಲಿ ಪ್ರಸ್ತುತ ಬಿಜೆಪಿ ಆಡಳಿತವಿರುವ ಅಸ್ಸಾಂನ ಗುವಾಹಟಿಯಲ್ಲಿರುವ ಪಂಚತಾರಾ ಹೋಟೆಲ್ನಲ್ಲಿ ವಾಸ್ತವ್ಯ ಹೂಡಿದ್ದು, ಜುಲೈ 5 ರವರೆಗೆ ಹೋಟೆಲ್ನಲ್ಲಿ ತಮ್ಮ ವಾಸ್ತವ್ಯವನ್ನು ವಿಸ್ತರಿಸಬಹುದು. ಶಿಂಧೆ ಅವರು ಸುಮಾರು 50 ಶಾಸಕರ ಬೆಂಬಲವನ್ನು ಹೊಂದಿದ್ದು, ಅದರಲ್ಲಿ ಶಿವಸೇನೆಯ 40 ಶಾಸಕರಿದ್ದಾರೆ ಎಂದು ಹೇಳಿಕೊಂಡಿದ್ದಾರೆ.
ಇನ್ನು, ಮುಂಬೈನಲ್ಲಿರುವ ದೇವೇಂದ್ರ ಫಡ್ನವೀಸ್ ಅವರ ನಿವಾಸದಲ್ಲಿ ಹಲವು ಬಿಜೆಪಿ ನಾಯಕರು ಬಂಡಾಯ ಶಿಂಧೆ ಬಣದೊಂದಿಗೆ ಸರ್ಕಾರ ರಚಿಸಲು ಚಿಂತನ ಮಂಥನ ನಡೆಸಿದ್ದಾರೆ. ಏಕನಾಥ್ ಶಿಂಧೆ ಅವರ ಸರ್ಕಾರ ರಚನೆಯ ಪ್ರಸ್ತಾಪಕ್ಕೆ ನಾವು ಮುಕ್ತರಾಗಿದ್ದೇವೆ ಎಂದು ಪಕ್ಷದ ನಾಯಕ ಸುಧೀರ್ ಮುಂಗಂಟಿವಾ ಹೇಳಿದ್ದಾರೆ.
ಅನರ್ಹತೆ ನೋಟಿಸ್ನ ವಿರುದ್ಧ ಶಿವಸೇನೆಯ ಬಂಡಾಯ ಶಾಸಕರು ಸಲ್ಲಿಸಿರುವ ಮನವಿಯ ಮೇರೆಗೆ ಮಹಾರಾಷ್ಟ್ರ ವಿಧಾನಸಭೆಯ ಉಪ ಸ್ಪೀಕರ್, ಮಹಾರಾಷ್ಟ್ರ ರಾಜ್ಯ ವಿಧಾನಸಭೆಯ ಕಾರ್ಯದರ್ಶಿ ಮತ್ತು ಇತರರಿಗೆ ಸುಪ್ರೀಂ ಕೋರ್ಟ್ ಸೋಮವಾರ ನೋಟಿಸ್ ಜಾರಿ ಮಾಡಿದೆ. ಬಂಡಾಯ ಶಿವಸೇನೆ ನಾಯಕ ಏಕನಾಥ್ ಶಿಂಧೆ ಅವರು ಇದನ್ನು “ಬಾಳಾಸಾಹೇಬರ ಹಿಂದುತ್ವದ ವಿಜಯ” ಎಂದು ಬಣ್ಣಿಸಿದ್ದಾರೆ.
ಸುಪ್ರೀಂ ಕೋರ್ಟ್ನ ತೀರ್ಪಿನ ಸ್ವಲ್ಪ ಸಮಯದ ನಂತರ, ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್ಸಿಪಿ) ಮತ್ತು ಕಾಂಗ್ರೆಸ್ನ ಹಿರಿಯ ನಾಯಕರು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರನ್ನು ಭೇಟಿಯಾಗಿ ಅವರಿಗೆ ತಮ್ಮ ಬೆಂಬಲವನ್ನು ಪುನರುಚ್ಚರಿಸಿದ್ದಾರೆ.
ಇದನ್ನೂ ಓದಿ: ಮಹಾರಾಷ್ಟ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದ ಸುಪ್ರೀಂಕೋರ್ಟ್; ‘ಬಾಳಾಸಾಹೇಬರ ಹಿಂದುತ್ವದ ವಿಜಯ’ ಎಂದ ಏಕನಾಥ್ ಶಿಂಧೆ