ಪಶ್ಚಿಮ ಬಂಗಾಳದ ಪುರ್ಬಾ ಮೇದಿನಿಪುರ ಜಿಲ್ಲೆಯಲ್ಲಿ ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ನಾಯಕ, ಬಿಜೆಪಿಯ ಸುವೆಂದು ಅಧಿಕಾರಿ ಅವರ ಬೆಂಗಾವಲು ವಾಹನ ಡಿಕ್ಕಿ ಹೊಡೆದು ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆಂದು ಆರೋಪಿಸಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಶುಕ್ರವಾರ ಪ್ರತಿಭಟನಾ ರ್ಯಾಲಿ ನಡೆಸಿದೆ.
ಝೆಡ್+ ವರ್ಗದ ಭದ್ರತೆಯನ್ನು ಪಡೆಯುವ ಸುವೆಂದು ಅಧಿಕಾರಿ ಆರೋಪವನ್ನು ನಿರಾಕರಿಸಿದ್ದಾರೆ. ಗುರುವಾರ ರಾತ್ರಿ ಘಟನೆ ನಡೆಯುವ ಮೊದಲೇ ನಮ್ಮ ಬೆಂಗಾವಲು ಪಡೆ ಈ ಪ್ರದೇಶವನ್ನು ಹಾದು ಹೋಗಿದೆ ಎಂದು ಅವರು ತಿಳಿಸಿದ್ದಾರೆ.
ಆ ಪ್ರದೇಶದಲ್ಲಿ ಹಾದು ಹೋಗುತ್ತಿದ್ದ ವಿಐಪಿ ಬೆಂಗಾವಲು ವಾಹನವೊಂದಕ್ಕೆ ಸಿಲುಕಿ ಈ ಪ್ರದೇಶದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿ ಒಂದು ಗಂಟೆಗೂ ಹೆಚ್ಚು ಕಾಲ ಜಿಲ್ಲೆಯ ಚಂಡೀಪುರದ ಜನರು ರಸ್ತೆ ತಡೆ ನಡೆಸಿದ್ದಾರೆ.
ವ್ಯಕ್ತಿಯು ರಸ್ತೆ ದಾಟುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಹಿರಿಯ ನಾಯಕ ಡೋಲಾ ಸೇನ್ ನೇತೃತ್ವದಲ್ಲಿ ಟಿಎಂಸಿ ಕಾರ್ಯಕರ್ತರು ಸ್ಥಳಕ್ಕೆ ಧಾವಿಸಿ ಸುವೆಂದು ಅಧಿಕಾರಿಯ ಬಂಧನಕ್ಕೆ ಒತ್ತಾಯಿಸಿ ಪ್ರತಿಭಟನಾ ರ್ಯಾಲಿಯನ್ನು ನಡೆಸಿದ್ದಾರೆ.
“ಒಬ್ಬ ವ್ಯಕ್ತಿ ಎಷ್ಟು ಅಮಾನವೀಯನಾಗಿರುತ್ತಾನೆ ಎಂದರೆ ತನ್ನ ಬೆಂಗಾವಲು ಪಡೆಗೆ ವ್ಯಕ್ತಿಯೊಬ್ಬರು ಸಿಲುಕಿದ ನಂತರವೂ ಸಂತ್ರಸ್ತ ವ್ಯಕ್ತಿಯನ್ನು ನೋಡಬೇಕೆಂದು ಅವರು ಚಿಂತಿಸಲಿಲ್ಲ. ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದೊಯ್ಯಬಹುದಿತ್ತು. ಸುವೆಂದು ಅಧಿಕಾರಿ ಜೊತೆಗಿರುವ ಭದ್ರತಾ ಸಿಬ್ಬಂದಿ ಸಂತ್ರಸ್ತ ವ್ಯಕ್ತಿಗೆ ಸಹಾಯ ಮಾಡಬಹುದಿತ್ತು” ಎಂದು ಸೇನ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ವಿಐಪಿ ಸಂಸ್ಕೃತಿಯ ವಿರುದ್ಧ ಸಂದೇಶ ರವಾನಿಸಲು ಬಿಜೆಪಿ ನಾಯಕನನ್ನು ಬಂಧಿಸಿ ವಿಚಾರಣೆ ನಡೆಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಟಿಎಂಸಿ ವಕ್ತಾರ ಕುನಾಲ್ ಘೋಷ್ ಕೂಡ ಸುವೆಂದು ಅಧಿಕಾರಿಯನ್ನು ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.
ಆದರೆ ಈ ಆರೋಪ ನಿರಾಧಾರ ಎಂದು ಸುವೆಂದು ಹೇಳಿಕೊಂಡಿದ್ದಾರೆ. “ಘಟನೆ ಸಂಭವಿಸುವ ಮೊದಲೇ ನನ್ನ ಬೆಂಗಾವಲು ಪಡೆ ಈ ಪ್ರದೇಶವನ್ನು ದಾಟಿತ್ತು. ಸೂಕ್ತ ತನಿಖೆಯಿಂದ ಸತ್ಯಾಂಶ ಹೊರ ಬರಲಿದೆ” ಎಂದು ಸ್ಪಷ್ಟಪಡಿಸಿದ್ದಾರೆ.
ವಿಷಯವನ್ನು ರಾಜಕೀಯಗೊಳಿಸುವ ಪ್ರಯತ್ನ ನಡೆಯುತ್ತಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಸುಕಾಂತ ಮಜುಂದಾರ್ ಪ್ರತಿಕ್ರಿಯಿಸಿದ್ದಾರೆ. ಅಧಿಕಾರಿಗೆ ಝೆಡ್ + ಭದ್ರತೆ ಸಿಗುವುದರಿಂದ ಯಾರಾದರೂ ಭದ್ರತಾ ವಲಯವನ್ನು ಹೇಗೆ ಉಲ್ಲಂಘಿಸಬಹುದು ಎಂದು ಪ್ರಶ್ನಿಸಿದ್ದಾರೆ.
“ಬಿಜೆಪಿ ಮತ್ತು ಸುವೆಂದು ಅಧಿಕಾರಿಯವರ ಹೆಸರು ಕಡಿಸುವ ಪ್ರಯತ್ನ ಇದಾಗಿದೆ. ನಾವು ಅದನ್ನು ಖಂಡಿಸುತ್ತೇವೆ. ಆದರೆ ಝೆಡ್ + ರಕ್ಷಣೆಯ ಕಾರಣ ರಸ್ತೆಯನ್ನು ತೆರವು ಮಾಡುವುದಕ್ಕೆ ರಾಜ್ಯ ಪೊಲೀಸರಿಗೆ ಅಧಿಕಾರವಿದೆ. ಭದ್ರತೆಯಲ್ಲಿ ಆಗಿರುವ ಲೋಪದ ಬಗ್ಗೆ ಅವರು ಉತ್ತರಿಸಬೇಕು” ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿರಿ: ಮಣಿಪುರ ಹಿಂಸಾಚಾರ: ಸಿಆರ್ಪಿಎಫ್ ಯೋಧನಿಗೆ ಗುಂಡಿಕ್ಕಿ ಹತ್ಯೆ