Homeಕರ್ನಾಟಕಹತಾಶೆಯ ಬಿಜೆಪಿ ಮುಖಂಡರ ಬೆದರಿಕೆಯ ಭಾಷೆ!

ಹತಾಶೆಯ ಬಿಜೆಪಿ ಮುಖಂಡರ ಬೆದರಿಕೆಯ ಭಾಷೆ!

- Advertisement -
- Advertisement -

ಕರ್ನಾಟಕ ರಾಜ್ಯದ ಚುನಾವಣೆ ಪ್ರಚಾರದ ಭಾಷಣದಲ್ಲಿ ಕೇಂದ್ರ ಸರಕಾರದ ಗೃಹಮಂತ್ರಿಗಳಾದ ಶ್ರೀ ಅಮಿತ್ ಶಾ ಅವರು ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆದ್ದರೆ ರಾಜ್ಯದಲ್ಲಿ ಕೋಮುಗಲಭೆಗಳು ನಡೆಯುತ್ತವೆ ಎಂದು ಹೇಳಿದ್ದಾರೆ. ಸ್ವತಃ ಅಮಿತ್ ಶಾ ಅವರಿಗೆ ಗೊತ್ತಿರದಿದ್ದರೂ ಭಾರತ ರಾಷ್ಟ್ರದ ಗೃಹಮಂತ್ರಿಗಳಿಗೆ ಬಹು ಜವಾಬ್ದಾರಿಯುತವಾದ ಸ್ಥಾನವಿರುತ್ತದೆ. ಪೂರ್ವಾಶ್ರಮದಲ್ಲಿ ಅಪರಾಧಿಗಳಾಗಿದ್ದರೂ, ಗಡಿಪಾರು ಆಗಿದ್ದರೂ ಗೃಹಮಂತ್ರಿ ಹುದ್ದೆಯು ಸಂವಿಧಾನಾತ್ಮಕವಾದ ಸರಕಾರದ ಹುದ್ದೆಯಾಗಿರುತ್ತದೆ. ಇದು ಅವರಿಗೆ ಇನ್ನೂ ಅರ್ಥವಾದಂತೆ ಕಾಣುತ್ತಿಲ್ಲ. ಅವರಾಗಲಿ ಬಿಜೆಪಿ ಪಕ್ಷವಾಗಲಿ ಏನೇ ಸಮಜಾಯಿಷಿ ಕೊಟ್ಟರೂ ಅವರ ಈ ಹೇಳಿಕೆಯ ನಿಜಾರ್ಥವು ಎಲ್ಲರಿಗೂ ಅರ್ಥವಾಗಿದೆ. ಗೆದ್ದ ಮೇಲೆ ಕಾಂಗ್ರೆಸ್ ಪಕ್ಷವು ಕೋಮುಗಲಭೆಗಳನ್ನು ಮಾಡಿಸಲು ಕಾರಣವೇ ಇರುವುದಿಲ್ಲ, ಹೀಗಾಗಿ ತಮ್ಮ ಪಕ್ಷವು ಸೋತರೆ ಈ ಗಲಭೆಗಳನ್ನು ನಡೆಸುತ್ತದೆ ಎಚ್ಚರವಾಗಿರಿ ಎಂದು ಈ ಹೇಳಿಕೆಯ ತಾತ್ವಿರ್ಯವಲ್ಲದೇ ಮತ್ತೇನು?

ಶಾ ಅವರು ಸತ್ಯವನ್ನೇ ನುಡಿದಿದ್ದಾರೆ. ಕಾರಣಗಳು ಹೀಗಿವೆ: ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಆಳ್ವಿಕೆಯು ಸಂಪೂರ್ಣವಾಗಿ ವಿಫಲವಾಗಿದೆ. ಭ್ರಷ್ಟಾಚಾರ, ದೇಶದ ಕಾನೂನುಗಳನ್ನು ತಿರುಚಿ, ಉಲ್ಲಂಘನೆ ಮಾಡಿ ಕಾರ್ಪೊರೆಟ್ ಶಕ್ತಿಗಳಿಗೆ ಮಾಡುತ್ತಿರುವ ಸಹಾಯ, ಬೆಲೆ ಏರಿಕೆ, ದಲಿತರು, ಮುಸ್ಲಿಮರು ಹಾಗೂ ಮಹಿಳೆಯರ ಮೇಲೆ ನಿರಂತರವಾದ ಆಕ್ರಮಣ ಹಾಗೂ ಹಿಂಸೆ- ಇವುಗಳ ಹೊರತಾಗಿ ಇನ್ನ್ಯಾವ ಸಾಧನೆಯನ್ನು ಅದು ಮಾಡಿಲ್ಲ. ಕ್ರಮೇಣವಾಗಿ ಅಂಧ ಭಕ್ತಿ, ಪ್ರಚಾರದ ಪ್ರಭಾವ ಇವುಗಳಿಂದ ಹೊರಬರುತ್ತಿರುವ ಜನರು ಇದನ್ನು ಅರ್ಥಮಾಡಿಕೊಂಡು ಎಚ್ಚರಗೊಳ್ಳುತ್ತಿದ್ದಾರೆ. ಆದರೆ ಬಿಜೆಪಿ, ಆರ್‌ಎಸ್‌ಎಸ್ ಬಳಿ ಕೋಮುಗಲಭೆ, ಧ್ರುವೀಕರಣವನ್ನು ಬಿಟ್ಟರೆ ಇನ್ಯಾವುದೇ ಸೈದ್ಧಾಂತಿಕ ಪರ್ಯಾಯ ಇಲ್ಲ. ಕ್ರಿಯಾಶೀಲತೆಯೂ ಇಲ್ಲ. ಆರ್‌ಎಸ್‌ಎಸ್‌ನ ಸ್ಥಾಪಕರಿಂದ ಶುರುವಾಗಿ ಈವರೆಗೆ ಗಂಭೀರ ಚಿಂತನೆ, ರಾಜಕೀಯ ಕ್ರಿಯಾಶೀಲತೆಗೆ ಬೇಕಾದ ವೈಚಾರಿಕ ಶಕ್ತಿ ಎಂದಿಗೂ ಇದ್ದಿಲ್ಲ. ಇಂಥ ನಿರ್ವಾತದಲ್ಲಿ ಅಮಿತ್ ಶಾ ಅಂಥವರಿಗೆ ಜನರನ್ನು ಹೆದರಿಸುವುದು ಅನಿವಾರ್ಯವಾಗಿದೆ. ಮಾನ್ಯ ಯಡಿಯೂರಪ್ಪನವರನ್ನು ಅಧಿಕಾರದಿಂದ ಕೆಳಗಿಳಿಸುವುದಕ್ಕೂ ಬಹುಮುಖ್ಯ ಕಾರಣವೆಂದರೆ ಅವರು ನೇರವಾಗಿ ಕೋಮುವಾದಿ ಹಿಂಸೆಯನ್ನು ಬೆಂಬಲಿಸಿಲ್ಲ ಎಂಬುದು. ನಂತರ ಶ್ರೀ

ಯಡಿಯೂರಪ್ಪ

ಬೊಮ್ಮಾಯಿಯವರನ್ನು ಮುಖ್ಯಮಂತ್ರಿಗಳನ್ನಾಗಿ ಮಾಡಲಾಯಿತು. ಅವರು ಮಾಡಿದ ಮೊದಲ ಕೆಲಸವೆಂದರೆ ಕೋಮುಗಲಭೆ, ಹಿಂಸೆಯಲ್ಲಿ ತೊಡಗಿದ್ದವರಿಗೆ ‘Action–Reaction’ ಸೂತ್ರದಲ್ಲಿ ಸಂಪೂರ್ಣ ಬೆಂಬಲ ಹಾಗೂ ರಿಯಾಯಿತಿ ನೀಡಿದ್ದು. ಅವರಿಗೆ ಹೈಕಮಾಂಡ್‌ನಿಂದ ದೊರೆತ ಎರಡೇ ನಿರ್ದೇಶನಗಳೆಂದರೆ ಭ್ರಷ್ಟಾಚಾರ ವಿರುದ್ಧ ಏನೂ ಕ್ರಮ ತೆಗೆದುಕೊಳ್ಳಬೇಡಿ ಮತ್ತು ಕೋಮುವಾದಿ ಗಲಭೆಗಳಿಗೆ ಸಂಪೂರ್ಣ ಅವಕಾಶ ಕೊಡಿಯೆಂದಿರಬೇಕು. ಇವೆರಡನ್ನೂ ಅವರು ಅಕ್ಷರಶಃ ಪಾಲಿಸಿದ್ದಾರೆ. ಜೊತೆಗೆ ಕರ್ನಾಟಕದ ಬಿಜೆಪಿ ಧುರೀಣರ ಹುಟ್ಟುಗುಣವಾದ ಹೈಕಮಾಂಡ್ ಗುಲಾಮಗಿರಿಯೂ ಅವರ ವ್ಯಕ್ತಿತ್ವದಲ್ಲಿದೆ. ಹೀಗಾಗಿ ಕರ್ನಾಟಕದ ಅಸ್ಮಿತೆ, ವೈಚಾರಿಕ ಪ್ರಜ್ಞೆ, ಜಾತ್ಯತೀತತೆ ಅವರಿಗೆ ಮುಖ್ಯವಾಗಿಲ್ಲ. ಶ್ರೀ ಯಡಿಯೂರಪ್ಪನವರಿಗೆ ಲಿಂಗಾಯತ ಸಮುದಾಯದ ಬಗ್ಗೆಯಾದರೂ ಅಭಿಮಾನವೋ ಕಾಳಜಿಯೋ ಇದೆ. ಆದರೆ ಬೊಮ್ಮಾಯಿಯವರು ತಾವೇ ಮುಂದೆ ನಿಂತು ಯಡಿಯೂರಪ್ಪ, ಶೆಟ್ಟರ್, ಸವದಿಯವರಿಗೆ ಅವಮಾನ ಮಾಡಿಸಿದ್ದಾರೆ. ಏಕೆಂದರೆ ಒಂದು ವೇಳೆ ಗೆದ್ದರೆ ತಾವು ಮಾತ್ರ ಲಿಂಗಾಯತ ಧುರೀಣರೆಂದು ಅಧಿಕಾರಕ್ಕಾಗಿ ಹಕ್ಕು ಚಲಾಯಿಸಬಹುದೆಂಬುದು ಅವರ ಎಣಿಕೆಯಿರಬಹುದು. ಅಧಿಕಾರಕ್ಕಾಗಿ ಲಿಂಗಾಯತ ಸಮುದಾಯಕ್ಕೂ ದ್ರೋಹ ಬಗೆದು ಕಡೆಗಣಿಸಲು ಸಿದ್ಧ ಎನ್ನುವ ನಂಬಿಕೆಯಿರುವುದರಿಂದಲೇ ಬಿಜೆಪಿ ಪಕ್ಷ ಹಾಗೂ ಕೇಂದ್ರ ಸರಕಾರಗಳು ಅವರಿಗೆ ಸಂಪೂರ್ಣ ಬೆಂಬಲ ನೀಡಿದೆ. ಈ ಎಲ್ಲಾ ಹಿನ್ನೆಲೆಯಿಂದಾಗಿಯೇ ಅಮಿತ್ ಶಾ ಧೈರ್ಯವಾಗಿ ಕರ್ನಾಟಕದ ಜನತೆಯನ್ನು ಸಾರ್ವಜನಿಕವಾಗಿ ಬೆದರಿಸುವ ಧೈರ್ಯ ಮಾಡಿದರು.

ಇದನ್ನೂ ಓದಿ: ಎದ್ದೇಳು ಕರ್ನಾಟಕ: ಒಂದು ಅಸಾಧಾರಣ ಚುನಾವಣೆಯಲ್ಲಿ ಒಂದು ವಿಶಿಷ್ಟ ಪ್ರಯೋಗ

ಇದನ್ನು ಗಂಭೀರವಾಗಿ ಪರಿಗಣಿಸಲು ಗಟ್ಟಿಯಾದ ಕಾರಣಗಳಿವೆ. ಮೊದಲನೆಯದಾಗಿ ಕೇಂದ್ರ ಸರಕಾರವು ಭಾರತೀಯ ಸಂವಿಧಾನದ ಮೂಲರಚನೆಯ ಭಾಗವೇ ಆಗಿರುವ ಒಕ್ಕೂಟದ ಪರಿಕಲ್ಪನೆಯನ್ನು ಒಪ್ಪಿಕೊಂಡಿಲ್ಲ. ಒಕ್ಕೂಟದ ಬದಲಾಗಿ ಸರ್ವಾಧಿಕಾರವನ್ನು ತರಲು ಅದು ಪ್ರಯತ್ನಿಸುತ್ತದೆ. ಇದನ್ನು ಒಪ್ಪುತ್ತಿಲ್ಲವಾದ್ದರಿಂದ ಸರ್ವೋಚ್ಚ ನ್ಯಾಯಾಲಯದ ಮೇಲೆ ಕೂಡ ಅನೈತಿಕ ಒತ್ತಡ ತರಲು ಪ್ರಯತ್ನಿಸುತ್ತದೆ. ಇದರ ಭಾಗವಾಗಿಯೇ ನಡ್ಡಾ ಅವರು ಕರ್ನಾಟಕದಲ್ಲಿಯೇ ಭಾಷಣ ಮಾಡುತ್ತಾ, ಇಲ್ಲಿಯ ಜನರಿಗೆ ನೀವು ಬಿಜೆಪಿಗೆ ಮತ ಹಾಕಿ ಶ್ರೀ ಮೋದಿಯವರ ಆಶೀರ್ವಾದ ಪಡೆಯಿರಿ ಎಂದು ಹೇಳುತ್ತಾರೆ. ಹೀಗಾಗಿ ಆರ್‌ಎಸ್‌ಎಸ್, ಬಿಜೆಪಿ ಸಿದ್ಧಾಂತವೆಂದರೆ ಬಲಾಢ್ಯ ಕೇಂದ್ರ ಮತ್ತು ಅಸಹಾಯಕ ರಾಜ್ಯಗಳ ನಡುವೆ ತೀವ್ರ ಅಸಮಾನತೆಯ ನಿಬಂಧವಿರಬೇಕೆಂಬುದು. ಕರ್ನಾಟಕದಲ್ಲಿ ಹಾಗೆ ಆಗುತ್ತಿಲ್ಲವೆಂದು ಅವು ವಿಚಲಿತವಾಗಿವೆ. ತಮಗೆ ಬಿಜೆಪಿ ಟಿಕೆಟ್ ಸಿಕ್ಕಲಿಲ್ಲವೆಂದು ಬಂಡಾಯ ಮಾಡಿದ ಬಿಜೆಪಿ ರಾಜಕಾರಣಿಗಳು ಮೋದಿಯವರ ಪ್ರಶ್ನಾತೀತ ನಾಯಕತ್ವ, ವಿಶ್ವಗುರು ಪಾತ್ರ ಇವುಗಳನ್ನು ಒಂದುಕ್ಷಣವೂ ಗಮನಿಸದೇ ಆಚೆಗೆ ಎಸೆದಿದ್ದಾರೆ. ಕರ್ನಾಟಕದಲ್ಲಿ ಚುನಾವಣಾ ಸೋಲು-ಗೆಲುವುಗಳಿಗಿಂತ ಇದು ಬಹುದೊಡ್ಡ ಆಘಾತವಾಗಿದೆ. ಏಕೆಂದರೆ ತಮ್ಮ ಪಕ್ಷದ ರಾಜಕೀಯ ಧುರೀಣರೇ ದೆಹಲಿಯ ಉಸಿರುಗಟ್ಟುವ ಅಧಿಕಾರವನ್ನು ತಡೆದುಕೊಳ್ಳಲು ಆಗುವುದಿಲ್ಲವೆಂದು ಪ್ರತಿರೋಧ ತೋರಿಸಿದ ಮೇಲೆ ಸಾಮಾನ್ಯ ಪ್ರಜೆಗಳಿಗೂ ಕೇಂದ್ರದವ ಪ್ರಾಬಲ್ಯವು ಕೇವಲ ಮಾಧ್ಯಮಗಳ ವಿಚಾರವೆಂಬುದು ಗೊತ್ತಾಗಿದೆ. ಹೀಗಾಗಿಯೇ ಶೆಟ್ಟರ್ ಹಾಗೂ ಸವದಿಯವರ ಮೇಲೆ ಇಂಥ ರೋಷ. ಜೊತೆಗೆ ಅಭದ್ರತೆ. ಇವರಿಬ್ಬರೂ ಚುನಾವಣೆಯಲ್ಲಿ ಸೋಲುವುದು ಅಸಾಧ್ಯ. ಅಲ್ಲಿಗೆ 2024ರ ಚುನಾವಣೆಗಳ ಭವಿಷ್ಯವು ಬೇರೆಯಾಗುತ್ತದೆ. ಆದರೆ ಬಿಜೆಪಿಗೆ ಪರ್ಯಾಯವಿಲ್ಲ.

ಬಸವರಾಜ ಬೊಮ್ಮಾಯಿ

ಇನ್ನೊಂದು ಕಾರಣವೆಂದರೆ ಹಿಂದುತ್ವದ ಕಟ್ಟರ್ ಅನುಯಾಯಿಗಳನ್ನು ಬಿಜೆಪಿ ಬಳಸಿಕೊಂಡು ಎಸೆದಿದೆ ಅನ್ನುವ ಸತ್ಯವು ಈಗ ಜನರಿಗೆ ಮನದಟ್ಟಾಗುತ್ತಿದೆ. ಪುತ್ತೂರಿನಲ್ಲಿ ಪುತ್ತಿಲನೆನ್ನುವ ಹಿಂದುತ್ವವಾದಿಗೆ ಟಿಕೆಟು ಕೊಟ್ಟಿಲ್ಲ. ಅಷ್ಟೇ ಅಲ್ಲ ನಿನ್ನೆಯಿಂದ ಸಾಮಾಜಿಕ ಜಾಲತಾಣಗಳಲ್ಲಿ ಕಲ್ಲಡ್ಕ ಭಟ್ಟರ ವಿಡಿಯೋ ಒಂದರಲ್ಲಿ, ’ಅವನು ಮಾಡಿದ ಅಪರಾಧಗಳಿಗೂ ನಮಗು ಏನು ಸಂಬಂಧವೆಂದು’ ಅವರು ನೇರವಾಗಿ ಹೇಳಿದ್ದಾರೆ. ಈ ವಿಡಿಯೋವನ್ನು ವಿವರವಾಗಿ ಕೇಳಿದರೆ, ಪುತ್ತಿಲ ಅವರ ಮೇಲೆ ಯಾವಯಾವ ಕೇಸುಗಳಿವೆ ಮತ್ತು ಅವರ ಮೇಲೆ ಯಾವಯಾವ ಕೇಸುಗಳನ್ನು ಹಾಕಬಹುದು ಎಂದು ಅವರ ಶತ್ರುಗಳಿಗೆ ವಿವರವಾಗಿ ಹೇಳಿಕೊಡುತ್ತಿರುವುದು ಅರ್ಥವಾಗುತ್ತದೆ. ಹಾಗೆಯೇ ಕಾರ್ಕಳದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಶ್ರೀರಾಮಸೇನೆಯ ಮುತಾಲಿಕರು ಹಾಲಿ ಶಾಸಕರ ಜಾತಕವನ್ನು ಪ್ರತಿದಿನ ಬಿಡಿಸಿ ಇಡುತ್ತಿದ್ದಾರೆ. ಆದರೆ ಅವರಿಗೆ ಬಿಜೆಪಿಯ ಯಾವ ಬೆಂಬಲವೂ ಇಲ್ಲ; ಅಂದರೆ ಕರಾವಳಿಯಲ್ಲಿ ಕೋಮುವಾದಿ ಗಲಭೆ ಹಾಗೂ ಹಿಂಸೆಗಳ ಮೂಲಕ ಬಿಜೆಪಿಗೆ ತಳಪಾಯ ಒದಗಿಸಿದ ಹಿಂದುತ್ವವಾದಿ ಗುಂಪುಗಳನ್ನು ಈಗ ಬೀದಿಗೆ ಎಸೆಯಲಾಗಿದೆ. ಇವರಲ್ಲಿ ಬಹುಪಾಲು ಶೂದ್ರರು, ದಲಿತರು ಆಗಿರುವುದರಿಂದ ಹೀಗೆ ಮಾಡುವುದರಲ್ಲಿ ಆರ್‌ಎಸ್‌ಎಸ್‌ಗೆ ಯಾವುದೇ ಅಭ್ಯಂತರವಿಲ್ಲ.

ಇನ್ನು ಕಡೆಯದಾಗಿ ಶ್ರೀ ಯಡಿಯೂರಪ್ಪನವರು ಶೆಟ್ಟರ್‌ರನ್ನು ಸೋಲಿಸುವುದೇ ನನ್ನ ಜೀವನದ ಗುರಿ ಎಂದು ಅಬ್ಬರಿಸುತ್ತಿರುವುದು; ಕರ್ನಾಟಕದ ಚುನಾವಣಾ ಅಭ್ಯರ್ಥಿಗಳ ಆಯ್ಕೆಯ ಸಭೆಯಲ್ಲಿ ಶ್ರೀ ಸಂತೋಷ್ ಅವರೊಬ್ಬರೇ ಅನೇಕ ಕ್ಷೇತ್ರಗಳಿಗೆ ಅಭ್ಯರ್ಥಿಯನ್ನು ಶಿಫಾರಸ್ಸು ಮಾಡುವುದನ್ನು ವಿರೋಧಿಸಿದ ಯಡಿಯೂರಪ್ಪನವರನ್ನು ಹೊರಗೆ ಹಾಕಲಾಯಿತು ಎಂಬ ಸುದ್ದಿ ಕೇಳಿಬಂತು. ಅವರನ್ನು ಹೊರಗಿಟ್ಟು ಚರ್ಚೆ ನಡೆಸಲಾಯಿತು. ಆದರೂ ಅವರು ಏನು ಆಗಿಲ್ಲವೆಂದರು. ಈಗ ಈ ಆರ್ಭಟಕ್ಕೆ ಕಾರಣವೆಂದರೆ ಬಿಜೆಪಿ ಯಡಿಯೂರಪ್ಪನವರ ಅಕ್ರಮ ಆಸ್ತಿ, ಅವರ ಪತ್ನಿಯ ಅಸಹಜ ಸಾವು, ಒಬ್ಬ ರಾಜಕೀಯ ಮಹಿಳೆಯ ಜೊತೆಗಿನ ಸಂಬಂಧ- ಇವುಗಳ ಬಗ್ಗೆ ದಾಖಲೆಗಳನ್ನು ಸಂಗ್ರಹಿಸಿ ಅವರನ್ನು ಹದ್ದುಬಸ್ತಿನಲ್ಲಿ ಇಟ್ಟಿದೆ ಎಂಬುದು ಗುಟ್ಟಾಗೇನೂ ಉಳಿದಿಲ್ಲ. ಅಲ್ಲದೆ ಪಕ್ಷ ಲಿಂಗಾಯತ ಸಮುದಾಯವನ್ನು ಅವಮಾನಿಸಿಲ್ಲ ಎನ್ನುವುದನ್ನು ಅವರು ಸಮರ್ಥಿಸಬೇಕೆಂದು ಹೈಕಮಾಂಡ್ ಆಜ್ಞೆ ನೀಡಿದೆ. ಹೀಗಾಗಿ ಕರ್ನಾಟಕದ ’ಮಾಸ್‌ಲೀಡರ್’ ಒಬ್ಬರು ವೈಯಕ್ತಿಕ ಭೀತಿಯಿಂದಾಗಿ, ತಮ್ಮ ರಕ್ತದಲ್ಲಿ ಚುನಾವಣೆ ಫಲಿತಾಂಶ ಬರೆದುಕೊಡಲು ಸಿದ್ಧರಾಗಿದ್ದಾರೆ. ಈಗಾಗಲೇ ಪಕ್ಷದ ಕಸದಬುಟ್ಟಿಗೆ ಸೇರಿರುವ ಅವರು ದೇಹದಲ್ಲಿ ಉಳಿದಿರುವ ರಕ್ತವನ್ನು ಮುಂದಿನ ಕರಾಳ ದಿನಗಳಿಗಾಗಿ ಉಳಿಸಿಕೊಳ್ಳಲಿ.

ಜೆ.ಪಿ ನಡ್ಡಾ

ಈ ಹೇಳಿಕೆಗಳಿಗೆ, ದ್ವೇಷ ಭಾಷಣಗಳಿಗೆ ನಾವು ಸ್ಪಂದಿಸುವುದು ಹೇಗೆ? ಮೊದಲನೆಯದಾಗಿ ಇವೆಲ್ಲವೂ ಪೂರ್ವನಿರ್ಧಾರಿತವೆನ್ನುವುದು ಗೊತ್ತಿರಲಿ. ಇವ್ಯಾವುದೇ ಹೇಳಿಕೆಗಳು ಆ ಕ್ಷಣದದಲ್ಲಿ ಬಾಯಿತಪ್ಪಿ ಬಂದವುಗಳಲ್ಲ. ಇವುಗಳ ಉದ್ದೇಶವೆಂದರೆ ಆತಂಕ ಹಾಗು ಆಕ್ರೋಶದ ಸ್ಥಿತಿಯನ್ನು ನಿರ್ಮಾಣ ಮಾಡುವುದು. ಅಂಥ ವಾತಾವರಣದಲ್ಲಿ ಸೂಕ್ತವಾದ ಅವಕಾಶ ಸಿಕ್ಕಕೂಡಲೇ ಗಲಭೆ ಆರಂಭಿಸಿ ಅದರ ಜವಾಬ್ದಾರಿಯನ್ನು ವಿರೋಧ ಪಕ್ಷಗಳಿಗೆ ಆರೋಪಿಸುವುದು. ಇದರ ಪ್ರಯೋಜನವೆಂದರೆ ರಾಜ್ಯ ಸರಕಾರದ ಸಂಪೂರ್ಣ ವಿಫಲತೆಯು ಚುನಾವಣೆಯ ಕೇಂದ್ರ ವಿಷಯವಾಗುವುದಿಲ್ಲ. ಕೋಮುವಾದಿ ಧ್ರುವೀಕರಣದಿಂದಾಗಿ ಒಂದಿಷ್ಟು ಮತಗಳು ಬಿಜೆಪಿ ಪರವಾಗಿ ಬೀಳಬಹುದು. ಪರಿಹಾರವೆಂದರೆ ಈ ಕೀಟಲೆಗಳಿಗೆ ಜನ ಸಾಮಾನ್ಯರು ಸ್ಪಂದಿಸದಿರುವುದು ಮತ್ತು ವಿವಿಧ ಪಕ್ಷಗಳ ಧುರೀಣರು ಏನೇ ಹೇಳಿದರೂ ನಾವು ನಮ್ಮ ದಿನನಿತ್ಯದ ಬದುಕಿನ ವಾಸ್ತವದ ಆಧಾರದ ಮೇಲೆ ಆಯ್ಕೆ ಮಾಡಿಕೊಂಡು ಮತಚಲಾಯಿಸುವುದು.

ಜೊತೆಗೆ, ಕರ್ನಾಟಕದ ಅಸ್ಮಿತೆಯ ಮೇಲೆ ಹೊರಗಿನವರು ಆಕ್ರಮಣವನ್ನು ಮತ ಚಲಾಯಿಸುವುದರ ಮೂಲಕ ವಿರೋಧಿಸೋಣ. ದೇಶದ ಪ್ರಧಾನ ಮಂತ್ರಿಗಳು, ಗೃಹ ಮಂತ್ರಿಗಳು ನಮ್ಮ ಪ್ರೀತಿಯ ರಾಷ್ಟ್ರನಾಯಕರಾಗಿ ನಮ್ಮವರಾಗಬೇಕಿತ್ತು. ದುರಂತವೆಂದರೆ ಇಲ್ಲಿಯ ಸಮುದಾಯಗಳನ್ನು, ಧುರೀಣರನ್ನು ಅವಮಾನಿಸಿ ಹೀನಾಯಗೊಳಿಸುವ ಹೊರಗಿನ ಶಕ್ತಿಗಳ ಪ್ರತಿನಿಧಿಗಳಾಗಿದ್ದಾರೆ. ಅವರು ನಮ್ಮ ರಾಜ್ಯದ ಅಮಾಯಕರನ್ನು ಅವಮಾನಿಸಿ, ಸಂಕಷ್ಟಕ್ಕೆ ಸಿಲುಕಿಸಲು ಬೇರೆ ರಾಜ್ಯಗಳಿಂದ ’ಕಾರ್ಯಕರ್ತ’ರನ್ನು ಇಲ್ಲಿಗೆ ತಂದಿರುವ ದುಷ್ಟರಾಗಿದ್ದಾರೆ. ಕರ್ನಾಟಕ ಜನತೆ ’ನಮ್ಮ ಕರ್ನಾಟಕ ನಮಗೆ’ ಎಂದು ಒಂದು ದನಿಯಲ್ಲಿ ಗಟ್ಟಿಯಾಗಿ ಹೇಳಿದರೆ ಸಾಕು ಪರಿಸ್ಥಿತಿ ಬದಲಾಗುತ್ತದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...

Uttarakhand | ಬಜರಂಗದಳದ ಕಾರ್ಯಕರ್ತರು ಈಗ ದ್ವೇಷ ಬಿತ್ತುವ ವೃತ್ತಿಪರ ಇನ್‌ಫ್ಲ್ಯುಯೆನ್ಸರ್ಸ್!

ಈ ವರ್ಷದ ಆರಂಭದಲ್ಲಿ ಉತ್ತರಾಖಂಡದ ಕೋಟದ್ವಾರದಲ್ಲಿ ಹಿಂದುತ್ವ ಗುಂಪೊಂದು ವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬರ ಅಂಗಡಿಗೆ ನುಗ್ಗಿ, ಅಂಗಡಿಯ ಹೆಸರಾದ ‘ಬಾಬಾ’ ಎಂಬುವುದನ್ನು ಬದಲಾಯಿಸುವಂತೆ ಒತ್ತಾಯಿಸಿತ್ತು. ‘ಬಾಬಾ’ ಎಂಬುವುದು ‘ಹಿಂದೂ’ ಹೆಸರಾಗಿದೆ ಎಂದು ಆ...

​ನಿಗಿ ನಿಗಿ ಕೆಂಡದಂತಾಗಿರುವ ಬಿಡದಿ, ಡಿಕೆಶಿಗೆ ಬಿಸಿ ತುಪ್ಪದಂತಾದ ರೈತರು

​ಬದಲಾದ ರಾಜಕೀಯ ಸಂದರ್ಭದಲ್ಲಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಡಿ.ಕೆ. ಶಿವಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಡದಿಯ ಟೌನ್‌ಶಿಪ್ ಯೋಜನೆಯ ವಿರುದ್ಧ ನಡೆಯುತ್ತಿರುವ ರೈತರ ಹೋರಾಟ ದಿನದಿಂದ ದಿನಕ್ಕೆ ಉಗ್ರ ರೂಪ ಪಡೆಯುತ್ತಿದೆ. ​ಭೂಸ್ವಾಧೀನದ...

ಪ್ರಜಾಪ್ರಭುತ್ವವನ್ನು ಹತ್ತಿಕ್ಕಲು ‘SIR’ ಅನ್ನೇ ಅಸ್ತ್ರವನ್ನಾಗಿಸಿಕೊಂಡ ನರೇಂದ್ರ ಮೋದಿ!

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ತಕ್ಷಣ (ಮೇ 4 ರಂದು), ಕಾಳೀಘಾಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅತ್ಯಂತ ಆಕ್ರೋಶದಿಂದ ಮಾತನಾಡಿದ್ದರು. ಅಷ್ಟೇ ಅಲ್ಲದೆ,...

ಕೇರಳದಲ್ಲಿ ಶಾಲಾ ಬಾಲಕಿಯರಿಗೆ ಮೂರು ದಿನ ಮುಟ್ಟಿನ ರಜೆ, ಅಸಂಘಟಿತ ವಲಯದ ಮಹಿಳೆಯರಿಗೆ ಆರು ತಿಂಗಳ ಹೆರಿಗೆ ರಜೆ ಘೋಷಣೆ 

ತಿರುವನಂತಪುರಂ: ಕೇರಳದ ವಿ.ಡಿ. ಸತೀಶನ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಹಲವಾರು ಕಲ್ಯಾಣ ಕ್ರಮಗಳನ್ನು ಘೋಷಿಸಿದೆ, ಇದರಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮೂರು ದಿನಗಳ ಮಾಸಿಕ ಮುಟ್ಟಿನ ರಜೆ, ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಸಮಾನ...

ಜಿರಳೆ ಜನತಾ ಪಕ್ಷದ ಖಾತೆಗೆ ನಿರ್ಬಂಧ; ದೆಹಲಿ ಹೈಕೋರ್ಟ್‌ನಿಂದ ಕೇಂದ್ರ-ಎಕ್ಸ್‌ಗೆ ನೋಟಿಸ್

ಜಿರಳೆ ಜನತಾ ಪಕ್ಷದ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದಿಪ್ಕೆ ಅವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳನ್ನು ನಿರ್ಬಂಧಿಸಿದ್ದನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದು, ದೆಹಲಿ ಹೈಕೋರ್ಟ್ (ಮೇ 29) ಕೇಂದ್ರ ಸರ್ಕಾರ ಮತ್ತು ಸಾಮಾಜಿಕ...

“ದಲಿತ ಮುಖ್ಯಮಂತ್ರಿ” ಅರ್ಹರು ಯಾರಿಲ್ಲಿ?

ಸದ್ಯ ಕರ್ನಾಟಕದಲ್ಲಿ ಮುಖ್ಯಮಂತ್ರಿಗಳ ಬದಲಾವಣೆಗೆ ವೇದಿಕೆ ಸಜ್ಜುಗೊಂಡಿದೆ. ಸುಧೀರ್ಘಾವಧಿ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ ಅಹಿಂದ ರಾಜಕಾರಣದ ಕುರಿತು ಮಾತಾಡುತ್ತಿದ್ದ, ಸಮಾಜವಾದಿ ಹಿನ್ನೆಲೆಯ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಡಿ.ಕೆ. ಶಿವಕುಮಾರ್‌ ಮುಖ್ಯಮಂತ್ರಿಯಾಗಿ...

‘ನಾನು ಪ್ರೀತಿ-ವಿಶ್ವಾಸಗಳಿಗೆ ತಲೆಬಾಗುವವನೇ ಹೊರತು ಒತ್ತಡ-ಪ್ರಭಾವಗಳಿಗೆ ಒಳಗಾಗುವವನಲ್ಲ’: ವಿದಾಯ ಭಾಷಣದಲ್ಲಿ ಸಿದ್ದರಾಮಯ್ಯ

ಹೈಕಮಾಂಡ್ ಯಾವಾಗ ಸೂಚಿಸುತ್ತದೆಯೋ ಆಗ ರಾಜೀನಾಮೆ ಕೊಡುತ್ತೇನೆ ಎಂದು ಹೇಳಿದ್ದ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ 2026 ಮೇ 28 ರಂದು ಹೈಕಮಾಂಡ್ ಸೂಚನೆ ಮೇರೆಗೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಮೂಲಕ...

ಪಶ್ಚಿಮ ಬಂಗಾಳ| ಬಕ್ರೀದ್‌ ಹಬ್ಬಕ್ಕೂ ಮುನ್ನ ರೈತರಿಗೆ ಸಂಕಷ್ಟ; ಜಾನುವಾರು ಮಾರುಕಟ್ಟೆಗಳು ನಿರ್ಜನ

ಈದ್ ಅಲ್-ಅಧಾ ಹಬ್ಬದ ಮುನ್ನ ಉತ್ತರ ಬಂಗಾಳದಾದ್ಯಂತ ಜಾನುವಾರು ಮಾರುಕಟ್ಟೆಗಳು ಹೆಚ್ಚಾಗಿ ನಿರ್ಜನವಾಗಿದ್ದವು. ವ್ಯಾಪಾರಿಗಳು ಮತ್ತು ರೈತರು ಜಾನುವಾರು ಮಾರಾಟದ ಮೇಲಿನ ನಿರ್ಬಂಧಗಳಿಂದಾಗಿ ವ್ಯಾಪಾರದಲ್ಲಿ ಪ್ರಮುಖ ಕುಸಿತ ಕಂಡುಬಂದಿದೆ ಎಂದು ಅವಲತ್ತುಕೊಂಡಿದ್ದಾರೆ. ಮಾಲ್ಡಾ...