HomeUncategorizedಮಂಡ್ಯ ಚುನಾವಣೆಯ ಒಳನೋಟ

ಮಂಡ್ಯ ಚುನಾವಣೆಯ ಒಳನೋಟ

- Advertisement -
- Advertisement -

ಬಿ. ಚಂದ್ರೇಗೌಡ |
ಮಂಡ್ಯದ ಚುನಾವಣೆಯೊಳಗೆ ನಾನು ನೇರ ಹೋಗಿ ಸೇರಿಕೊಂಡೆ. ಯಾಕೆಂದರೆ, “ಲಂಕೇಶ್ ಹೆಸರಿನಲ್ಲಿ ನಮ್ಮೂರ ಮುಂದೆ ಒಂದು ಬಯಲು ರಂಗಮಂದಿರ ಕಟ್ಟುತ್ತೇನೆ, ಒಂದೈದು ಲಕ್ಷ ರೂಪಾಯಿ ಕೊಡಣ್ಣ” ಎಂದು ಅಂಬರೀಶ್ ಬಳಿ ಕೇಳಿದ್ದೆ. ಕೂಡಲೆ ಹಿಂದೆ-ಮುಂದೆ ನೋಡದೆ ಅವರ ಸಹಾಯಕ ವಾಸುಕಿಯನ್ನ ಕರೆದು “ಲೇ ಇವುನೇನೋ ಕೇಳ್ತಿದಾನೆ ಕೊಡೋ” ಎಂದರು. ಕೂಡಲೇ ವಾಸುಕಿ ಹಣ ಬಿಡುಗಡೆ ಮಾಡಿದರು. ಈ ನಡುವೆ ಗೌರಿ ಕೂಡ ಅಂಬರೀಶ್‍ಗೆ ಫೋನ್ ಮಾಡಿ ಹೇಳಿದ್ದಳು. ಅಂತೂ ರಂಗಮಂದಿರವಾಯ್ತು. ಅದರ ಫೋಟೋ ತೋರಿಸಿ ಉದ್ಘಾಟನೆಗೆ ನೀವೇ ಬರಬೇಕು ಎಂದೆ. “ಯಾರ್ನಾರ ಕರದು ಮಾಡಿಸಿಕೋ ಹೋಗೋ” ಎಂದರು. ಆಗ ನಾನು ಅಂಬರೀಶ್ ಅರ್ಥಮಾಡಿಕೊಳ್ಳಲು ಯತ್ನಿಸಿದೆ. ಅವರೊಬ್ಬ ಅಪರೂಪದ ರಾಜಕಾರಣಿ. ಸದಾ ಜಾಲಿಯಾಗಿರುತ್ತಿದ್ದ ಅಂಬರೀಶ್, ವಿಲಾಸಿ ಜೀವನಕ್ಕೆ ಒಗ್ಗಿಕೊಂಡಿದ್ದರು. ಇಂತಹ ಜೀವನಕ್ಕಾಗಿಯೇ ಬೆಂಗಳೂರಿನ ವುಡ್‍ಲ್ಯಾಂಡ್ ಹೊಟೇಲಿನಲ್ಲಿ ತಂಗಿದ್ದರು. ಆದರೆ ಈ ಒಂಟಿ ಸಲಗನನ್ನ ಕುಟುಂಬ ಜೀವನಕ್ಕೆ ಒಗ್ಗಿಸಿ ಸಂಸಾರಸ್ಥನನ್ನಾಗಿ ಮಾಡಿದ ಕೀರ್ತಿ ಸುಮಲತಾಗೆ ಸಲ್ಲಬೇಕು. ಅಂಬರೀಶ್ ಬದುಕಿರುವವರೆಗೆ ಎಲ್ಲೂ ರಾಜಕೀಯ ವೇದಿಕೆಯಲ್ಲಿ ಕಾಣಿಸಿಕೊಳ್ಳದ ಸುಮಲತಾರನ್ನ ಜನ ನೋಡಿದ್ದು ಅವರ ಸಾವಿನ ಸಂದರ್ಭದಲ್ಲಿ. ಆದರೆ ಅಂಬಿ ಸಾವಿನ ಜಾಗವನ್ನ ದೇವೇಗೌಡರ ಕುಟುಂಬ ಆವರಿಸುತ್ತದೆಂದು ಯಾರೂ ಊಹಿಸಿರಲಿಲ್ಲ. ಆದರೆ ಅದಕ್ಕಾಗಿ ವರ್ಷದ ಹಿಂದೆಯೇ ಗೌಡರು ಮತ್ತು ಕುಮಾರಣ್ಣ ನೀಲನಕ್ಷೆಯನ್ನೇ ತಯಾರಿಸಿದ್ದರು. ಜಾಗ್ವಾರ್ ಸಿಡಿ ಬಿಡುಗಡೆಯಿಂದ ಹಿಡಿದು, ಸೀತಾರಾಮ ಕಲ್ಯಾಣ ಚಿತ್ರದ ಟಿಕೆಟ್‍ಗಳನ್ನು ಮನೆ ಬಾಗಿಲಿಗೇ ತಲುಪಿಸುವ ಹುನ್ನಾರದ ಸೂತ್ರಗಳೆಲ್ಲಾ ನಿಖಿಲ್‍ನನ್ನು ಮಂಡ್ಯದಲ್ಲಿ ಸ್ಥಾಪಿಸುವುದಾಗಿತ್ತು.
ರಾಜಕಾರಣಕ್ಕೆ ಬರಬೇಕಾದರೆ ಜನರ ನಾಲಿಗೆಯಲ್ಲಿ ಆತನ ಹೆಸರು ನಲಿದಾಡಬೇಕು. ಇದಕ್ಕೆ ಸುಲಭದ ದಾರಿ ಎಂದರೆ ಸಿನಿಮಾ ತಯಾರಿಸುವುದು. ಹೀಗಾಗಿ ಸಿನಿಮಾ ಮುಖಾಂತರ ರಾಜಕಾರಣಕ್ಕೆ ಬಂದ ದೊಡ್ಡ ಹಿಂಡೇ ಇದೆ. ಆ ಪೈಕಿ ನಿಖಿಲ್‍ದು ಈಚಿನ ಪ್ರಹಸನ. ವಾಸ್ತವವಾಗಿ ನಿಖಿಲ್‍ಗೆ ಸಿನಿಮಾ ಒಂದು ನೆಪ ಅಷ್ಟೇ. ಎರಡೇ ಚಿತ್ರಕ್ಕೆ ಆತ ಬಂದು ಮಂಡ್ಯದ ಅಭ್ಯರ್ಥಿಯಾದ, ಆಗ ಇದ್ದಕ್ಕಿದ್ದಂತೆ ಈ ಅನ್ಯಾಯದ ವಿರುದ್ಧ ಮಂಡ್ಯದ ಜನ ಎದ್ದು ನಿಂತರು. ಏಕೆಂದರೆ ಮಂಡ್ಯದಲ್ಲಿ ಜನತಾದಳ ಕಟ್ಟಿದ ಜಯರಾಂ, ಆತನ ಮಗ ಮತ್ತು ಹೆಂಡತಿ, ನಿಖಿಲ್ ಜಾಗ ತುಂಬಲು ಯೋಗ್ಯರಿದ್ದರು. ಇನ್ನ ಶಂಕರೇಗೌಡರ ಕುಟುಂಬ ಕಷ್ಟದಲ್ಲಿದೆ, ಅವರ ಪೈಕಿ ಯಾರನ್ನೂ ಗುರುತಿಸಲಿಲ್ಲ. ಅದೆಲ್ಲಕ್ಕಿಂತ ಮುಖ್ಯವಾಗಿ, ಲಕ್ಷ್ಮೀ ಅಶ್ವಿನ್‍ಗೌಡ ಎಂಬ ಹೆಣ್ಣು ಮಗಳು ಐಆರ್‍ಎಸ್‍ನಲ್ಲಿದ್ದರು. ಅವರನ್ನ ಕೆಲಸ ಬಿಡಿಸಿ ಕರೆತಂದ ದೇವೇಗೌಡರ ಪರಿವಾರ ಆಕೆಯನ್ನ ಮುಂದಿನ ಮಂಡ್ಯ ಜಿಲ್ಲೆ ರಾಜಕಾರಣಿಯೆಂದು ಬಿಂಬಿಸಿ, ಬೆಳ್ಳೂರು ಸಮೀಪ ಬೃಹತ್ ಸಭೆ ಮಾಡಿ ಪರಿಚಯಿಸಿದರು. ಆರು ತಿಂಗಳ ಹಿಂದೆ ಬಂದ ಚುನಾವಣೆಗೆ ಲಕ್ಷ್ಮೀ ಬದಲಿಗೆ ಶಿವರಾಮೇಗೌಡನಿಗೆ ಲೋಕಸಭಾ ಚುನಾವಣೆ ಟಿಕೆಟ್ ಕೊಟ್ಟರು. ಏಕೆಂದರೆ ಲಕ್ಷ್ಮೀಯಾಗಿದ್ದರೆ ನಿಖಿಲ್‍ಗೆ ಜಾಗ ಬಿಡಿಸಲು ತೊಂದರೆಯಾಗುತ್ತಿತ್ತು. ಆದರೆ ನಟ ಯಶ್ ಹೇಳುವಂತೆ ಶಿವರಾಮೇಗೌಡ ಎಂಬ ಕರ್ಚೀಫು ಮರು ಮಾತನಾಡದೆ ಸುಮ್ಮನಾದುದಲ್ಲದೆ, ಮುಂದೆ ನಾನು ಕುಮಾರಣ್ಣನ ಕಾರಿನ ಬಾಗಿಲು ತೆಗೆದು ಹತ್ತಿಸಿಕೊಳ್ಳುವ ಕೆಲಸ ಮಾಡುತ್ತೇನೆ ಎಂದಿತು. ಈ ಮಾತು ಸ್ವಾಭಿಮಾನಿ ಮಂಡ್ಯದ ಜನರನ್ನ ಕೆರಳಿಸಿತು. ಶಿವರಾಮನ ಮಗನೇ ಹೇಳಿದಂತೆ ಮಂಡ್ಯ ಜಿಲ್ಲೆ ಚುನಾವಣಾ ಬಜೆಟ್ ನೂರೈವತ್ತು ಕೋಟಿ. ಆದರೆ ಇಡೀ ಜಿಲ್ಲೆಯಾದ್ಯಂತ ನಡೆದ ಸಭೆ ಸಮಾರಂಭಗಳಿಗೆ ಹಣಕೊಟ್ಟು ಕರೆಸಿದ ಜನರ ಬಟವಾಡೆ ನೋಡಿದರೆ ಈ ಖರ್ಚು ಆ ನೂರೈವತ್ತು ಕೋಟಿಯೊಳಗಿಲ್ಲ ಅನ್ನಿಸುತ್ತೆ. ಅಂತೂ ಜನ ತಂದು ಸುರಿದು ನಿಖಿಲ್‍ನನ್ನ ಅಭ್ಯರ್ಥಿಯನ್ನಾಗಿ ಮಾಡಿದ ಸಮಾರಂಭದ ಮುಖಾಂತರ ಮಂಡ್ಯದ ಅಖಾಡ ರೆಡಿಯಾಯ್ತು.
ಇತ್ತ ಸುಮಲತಾ ತನ್ನನ್ನು ಅಭ್ಯರ್ಥಿಯನ್ನಾಗಿ ಮಾಡಿದವರ ಅಭಿಪ್ರಾಯಗಳಲ್ಲದೆ, ಜೆಡಿಎಸ್ಸು, ಕಾಂಗ್ರೆಸ್, ರೈತಸಂಘ ಮತ್ತು ಅಂಬರೀಶ್ ಅಭಿಮಾನಿಗಳ ಅಭಿಪ್ರಾಯಗಳನ್ನ ಪಡೆದು ನಾಮಪತ್ರ ಸಲ್ಲಿಸಿದರು. ಆ ದಿನವೇ ಅವರ ದೂರದೃಷ್ಟಿಯ ಮಾತು ಅಚ್ಚರಿ ಹುಟ್ಟಿಸಿತು. ಪಾಪ ನನ್ನಿಂದ ನಿಮಗೆ ಕೆಟ್ಟದಾಗಬಹುದು ಎಂದು ಯಶ್ ಮತ್ತು ದರ್ಶನ್ ಕುರಿತು ಹೇಳಿದರು. ಹಾಗೇ ಆಯ್ತು. ಸ್ವತಃ ಮುಖ್ಯಮಂತ್ರಿಯೇ ಈ ಇಬ್ಬರು ನಟರ ಬಗ್ಗೆ ಹಗುರವಾಗಿ ಮಾತನಾಡಿದರು. ಇದರಿಂದ ನಮ್ಮ ಮುಖ್ಯಮಂತ್ರಿಗೆ ಬುದ್ದಿ ಭಾಷೆಯ ಕೊರತೆ ಜೊತೆಗೆ ಅಪ್ರಭುದ್ದತೆಯೂ ಅಮರಿಕೊಂಡಿದೆ ಎಂದು ನಾಡಿನ ಜನಕ್ಕೆ ಅರಿವಾಯ್ತು. ಸ್ವತಃ ಸುಮಲತ, ಯಶ್ ಮತ್ತು ದರ್ಶನ್ ಅಭಿಮಾನಿಗಳು ಈ ಜಿಲ್ಲೆಗಷ್ಟೇ ಸೀಮಿತವಾಗಿಲ್ಲ. ಇಡೀ ನಾಡಿನಾದ್ಯಂತ ಇದ್ದಾರೆ. ಅವರ ಅಕ್ರೋಶ ದಳದ ಮೇಲಾಗಬಹುದೆಂದು ಎಚ್ಚರಿಸಿದರು. ಆದರೆ ಇಂತಹ ಎಚ್ಚರಿಕೆ ಮಾತುಗಳಿಗೆ ನಮ್ಮ ಮುಖ್ಯಮಂತ್ರಿ ಬಗ್ಗುವವರಲ್ಲ. ಅವರು ನೇರ ಸುಮಲತಾರನ್ನೇ ಟೀಕಿಸತೊಡಗಿದರು. ಇದಕ್ಕೆ ಜನರೇ ಉತ್ತರ ಕೊಡತೊಡಗಿದರು. ಜಾಲತಾಣಗಳಂತೂ ಅಂಗೈನಲ್ಲೇ ಮನರಂಜನೆ ಒದಗಿಸತೊಡಗಿದವು. ತರಕಾರಿ ಸೊಪ್ಪು ಮಾರುವವರಿಂದ ಹಿಡಿದು ಕಾಲೇಜು ಹುಡುಗರೂ ಕೂಡ ಗೌಡರ ಕುಟುಂಬವನ್ನ ಜಾಲಾಡಿಬಿಟ್ಟವು.
ಜನಸಾಮಾನ್ಯರ ಆಕ್ರೋಶ ಎಲ್ಲಿಯವರೆಗೆ ಮುಟ್ಟಿತೆಂದರೆ ದೇವೇಗೌಡರು ಒಕ್ಕಲಿಗರಲ್ಲ ಕುರುಬರು ಎಂದು ಬಹಳ ಹಿಂದೆ ಸುಬ್ರಮಣ್ಯಸ್ವಾಮಿ ಹೇಳಿದ್ದ ಪ್ರಜಾವಾಣಿಯ ಪೇಪರ್ ಕಟಿಂಗ್ ಜಾಲತಾಣದಲ್ಲಿ ಹರಿದಾಡಿತು. ಮುಗ್ದ ಜನರಿಗೆ ಜಾತಿ ಜಾಢ್ಯವನ್ನ ಅಂಟಿಸಿದ ನಾಯಕರೇ ಜಾತಿ ಅನಿಷ್ಟದ ಆಪಾದನೆಗೆ ಗುರಿಯಾದರು. ಅದಷ್ಟೇ ಅಲ್ಲ, ಮಂಡ್ಯದಲ್ಲಿ ಈ ದೇವೇಗೌಡರು ಒಕ್ಕಲಿಗ ಜನಾಂಗದ ಎಲ್ಲ ಪ್ರತಿಭಾವಂತ ನಾಯಕರನ್ನ ಮುಗಿಸಬೇಕಾದರೆ ಆತ ನಿಜವಾದ ಒಕ್ಕಲಿಗನಲ್ಲ, ಅದು ಈಗ ಸಾಬೀತಾಗಿದೆ ಎಂಬಂತೆ ಮಾತನಾಡಿದರು.
ಕೆಲವು ಬುದ್ದಿಜೀವಿಗಳೂ ಕೂಡ ಸದ್ಯದ ಸ್ಥಿತಿಯಲ್ಲಿ ಮೋದಿಯನ್ನ ಉಗ್ರವಾಗಿ ವಿರೋಧಿಸಿ ಮಹಾಘಟ್‍ಬಂಧನ್‍ಗೆ ಒಂದೆರಡು ಜಾಸ್ತಿ ಸೀಟು ದೊರಕಿಸಿಕೊಡುವ ಸಂದರ್ಭದಲ್ಲಿ ದ್ಯಾವೇಗೌಡರು ಕುಟುಂಬ ರಾಜಕಾರಣ ಮಾಡಿ ಅನ್ಯಾಯವಾಗಿ ಮೂರು ಕ್ಷೇತ್ರಗಳನ್ನ ಬಿಜೆಪಿ ಬಾಯಿಗೆ ಹಾಕುತ್ತಿದ್ದಾರಲ್ಲಾ ಎಂದು ಹಲುಬಿದರು. ಅದರಲ್ಲೂ ಮುದ್ದ ಹನುಮೇಗೌಡರ ಪ್ರಕರಣ, ಹಾಡುಹಗಲೇ ನಡೆದ ಕೂನಿಯಂತ ಪ್ರಕರಣ. ಆದರೆ ದೇವೇಗೌಡರು ಎಂತಹ ಹಠವಾದಿ ಎಂದರೆ ಆ ವಿಷಯದಲ್ಲವರು ಎಂದೂ ಹಿಂದೆ ಸರಿದಿಲ್ಲ. ತುಮಕೂರಿನಲ್ಲಿ ಮುದ್ದ ಹನುಮೇಗೌಡರನ್ನ ಬಲಿ ಪಡೆದು ಮಂಡ್ಯಕ್ಕೆ ಬಂದ ಅವರಿಗೆ, ತಾವೇ ಮತೀಯ ಜಾಲದೊಳಕ್ಕೆ ದೂಡಿದ ಜನ ತಮ್ಮ ವಿರುದ್ಧವೇ ನಿಂತಿರುವುದು ಗೋಚರಿಸಿತು. ನುರಿತ ರಾಜಕಾರಣಿಯಾದ ಅವರು ಈಗ ಮಂಡ್ಯಕ್ಕೆ ಸಿದ್ದರಾಮಯ್ಯನೇ ಬಂದು ಭಾಷಣ ಮಾಡಿದರೂ ಇದು ನಮ್ಮ ಕೈಗೆ ಸಿಗುವುದಿಲ್ಲ ಎಂಬ ಸೋಲಿನ ಮಾತನಾಡಿದರು. ಆದರೆ ಅವರ ಮಗ ಇದನ್ನೊಪ್ಪದೆ ಕೆಆರ್‍ಎಸ್‍ನಲ್ಲಿ ಬೀಡುಬಿಟ್ಟು ಕ್ಷುದ್ರ ತಂತ್ರಗಳನ್ನ ಹೆಣಿಯತೊಡಗಿದ್ದರು.
ಅವುಗಳನ್ನ ಇಲ್ಲಿ ದಾಖಲಿಸುವುದಾದರೆ ಅಂಬರೀಶ್ ಮನೆಯಲ್ಲಿ ಕೆಲಸ ಮಾಡುತ್ತಿದ್ದವರನ್ನ ಹಿಡಿದು ಆಮಿಷವೊಡ್ಡಿ ಸುಮಲತ ಬಗ್ಗೆ ಕೆಟ್ಟದಾಗಿ ಮಾತನಾಡುವಂತೆ ಪುಸಲಾಯಿಸಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ. ಕುಮಾರಸ್ವಾಮಿ ಎಂತಹ ವ್ಯಕ್ತಿಯೆಂದರೆ, ಸುಮಲತಾರ ಬಗ್ಗೆ ಕೆಟ್ಟದಾಗಿ ಮಾತನಾಡಿದವರನ್ನು ಕರೆದು ಬಹುಮಾನ ಕೊಡುವಂತಹ ಗಿರಾಕಿ. ಆದ್ದರಿಂದ ಅವರಿಗೆ ಇಂತಹ ಕೆಲಸ ಮಾಡಲು ಯಾವ ಅಳಕೂ ಆಗಲಿಲ್ಲ. ಇನ್ನ ದರ್ಶನ್‍ಗೆ ತೊಂದರೆ ಕೊಡಲು, ಅವರ ಅಭಿಮಾನಿಗಳೆಂದು ಹೇಳಿಕೊಳ್ಳುವ ಒಂದು ಗುಂಪನ್ನ ತಯಾರಿಸಿ ಅವರೆಲ್ಲಾ ದರ್ಶನ್‍ಗೆ ತಿರುಗಿಬಿದ್ದು ನಿಖಿಲ್‍ಗೆ ಓಟು ಮಾಡುತ್ತೇವೆ ಎಂಬ ಹೇಳಿಕೆಯನ್ನ ಮಾಧ್ಯಮದ ಮುಂದೆ ಕೊಡಿಸಿದರು.
ಸುಮಲತಾ ಬಿಜೆಪಿ ಸಹಾಯ ಕೇಳಿ ಆ ಪಾರ್ಟಿ ಅಭ್ಯರ್ಥಿ ನಿಲ್ಲದಂತೆ ಮಾಡಿದ್ದು ಒಂದು ಅಸ್ತ್ರವಾಗಿ ಪರಿಣಮಿಸಿದ್ದರಿಂದ ಮುಸ್ಲಿಮರನ್ನ ಕರೆದು ಅವರೆಲ್ಲಾ ಸ್ವತಂತ್ರ ಅಭ್ಯರ್ಥಿ ಪಾಳಯ ತೊರೆದು ನಿಖಿಲ್‍ಗೆ ಓಟು ಮಾಡುತ್ತೇವೆ ಎಂಬ ಹೇಳಿಕೆ ಕೊಡಿಸಿದರು. ಇನ್ನು ವಿಷ್ಣು ಅಭಿಮಾನಿಗಳಿಗೆ ಮೈಸೂರಲ್ಲೇ ಭವ್ಯವಾದ ವಿಷ್ಣು ಸ್ಮಾರಕ ನಿರ್ಮಿಸಿಕೊಡುವುದಾಗಿ ಅಮಿಷವೊಡ್ಡಿ ಅವರೆಲ್ಲಾ ನಿಖಿಲ್‍ಗೆ ಓಟು ಮಾಡುವುದಾಗಿ ಹೇಳಿಸಿದರು. ಇದಿಷ್ಟೇ ಅಲ್ಲ, ದಿಢೀರನೆ ಹೆಗಲಿಗೆ ಹಸಿರು ಟವಲ್ ಹಾಕಿಕೊಂಡು ಕೆಲವರು ಹಾಗೂ ಹಳದಿ ಕೆಂಪು ಪಟ್ಟಿ ಬಿಗಿದುಕೊಂಡ ಕನ್ನಡ ಚಳುವಳಿಗಾರರೆಲ್ಲಾ ರಾತ್ರೋರಾತ್ರಿ ತಯಾರಾಗಿ ತಾವೆಲ್ಲರೂ ಕುಮಾರಣ್ಣನ ಕೈ ಹಿಡಿಯುವುದಾಗಿ ಘೋಷಿಸಿಕೊಂಡರು. ಇಂತೆಲ್ಲಾ ಛದ್ಮವೇಶದವರು ಕುಮಾರಣ್ಣನ ಅಮಿಷಕ್ಕೊಳಗಾಗಿ ಸಪೋರ್ಟ್‍ಗೆ ಬಂದಿದ್ದು ಸರಿ. ಆದರೆ ಅಂಬರೀಶ್ ಎಂಬ ಅಪೂರ್ವ ರಾಜಕಾರಣಿ ಪರವಾಗಿ ಬಂದ ಯಶ್ ಮತ್ತು ದರ್ಶನ್ ಬಣ್ಣದವರಾಗಿ, ಕಳ್ಳೆತ್ತುಗಳಾಗಿ ಕ್ಷುದ್ರ ವ್ಯಕ್ತಿಗಳಾಗಿ ಕುಮಾರಸ್ವಾಮಿಗೆ ಕಂಡರು. ಇದೇ ಅವರಿಗೆ ಮುಳುವಾಯ್ತು.
ವಾಸ್ತವವಾಗಿ ಕುಮಾರಸ್ವಾಮಿ ತನ್ನ ಮಗನನ್ನು ಅಭ್ಯರ್ಥಿಯನ್ನಾಗಿಸಿ ಇನ್ನ ನೀನುಂಟು ಮಂಡ್ಯ ಜನರುಂಟು ಎಂದು ಉಳಿದ ಹದಿಮೂರು ಕ್ಷೇತ್ರಗಳ ಕಡೆ ಹೋಗಿದ್ದರೆ ಸುಮಲತ ಇನ್ನೂ ಕಷ್ಟಪಡಬೇಕಿತ್ತು. ಆದರೆ ಕುಮಾರಣ್ಣ ಒಬ್ಬ ಪ್ರಬುದ್ಧ ರಾಜಕಾರಣಿಯಲ್ಲ, ಕೀಳು ಅಭಿರುಚಿಯ ವ್ಯಕ್ತಿಯಂತೆ ವರ್ತಿಸತೊಡಗಿದರು. ಸುಮಲತ ತೂಕವಾಗಿ ಮಾತನಾಡುತ್ತ, ಪತ್ರಕರ್ತರಿಗೆಲ್ಲಾ ಸಮಂಜಸವಾದ ಉತ್ತರಕೊಡುತ್ತ ಎದುರಾಳಿಗಳಿಗೆ ಅವರ ಮಾತುಗಳನ್ನೆ ಅವರಿಗೆ ತಿರುಗಿಸಿಬಿಡುತ್ತ ಮಂಡ್ಯದ ಜನರಷ್ಟೇ ಅಲ್ಲ ಈ ನಾಡಿನ ಜನಮನ ಗೆದ್ದಾಗಿತ್ತು. ಒಂದು ಸಣ್ಣ ಕಾಂಟ್ರವರ್ಸಿ ಮಾತನ್ನು ಸುಮಲತಾರಿಂದ ಹೊರಡಿಸಿ ಅದನ್ನೇ ದಿನವೆಲ್ಲಾ ಹೊಸೆಯುವ ಟಿವಿಯವರ ಹುನ್ನಾರ ಫಲಿಸಲಿಲ್ಲ. ಒಂದುರೀತಿ ಸುಮಲತಾರ ಬಳಿಗೋದ ದೂರುಗಳಾಗಲಿ, ಹೇಳಿಕೆಗಳಾಗಲಿ ಮರುಜೀವ ಪಡೆಯದೆ ಸತ್ತು ಹೋಗುತ್ತಿದ್ದವು. ಜೆಡಿಎಸ್‍ನವರ ಬಾಲಿಶ ಹೇಳಿಕೆಗಳು, ಅವುಗಳಿಗೆ ಸುಮಲತಾರ ಪ್ರಬುದ್ಧ ಪ್ರತ್ಯುತ್ತರಗಳ ಪರಿಣಾಮವಾಗಿ ಚುನಾವಣೆ ಇಡೀ ಭಾರತದಲ್ಲಿ ನಡೆಯುತ್ತಿದೆಯೊ ಅಥವಾ ಮಂಡ್ಯದಲ್ಲಿ ಮಾತ್ರ ನಡೆಯುತ್ತಿದೆಯೊ ಎನ್ನುವಂತಾಯ್ತು. ಸುಮ¯ತಾರನ್ನ ಸೋಲಿಸಲೇಬೇಕೆಂಬ ಹಠಕ್ಕೆ ಕುಮಾರಣ್ಣ ಮೂರ್ನಾಲ್ಕು ಸುಮಲತಾರನ್ನ ಹಿಡಿಸಿ ತರಿಸಿದರು. ಅವರನ್ನು ತರಾತುರಿಯಿಂದ ತಯಾರು ಮಾಡಿ ನಾಮಪತ್ರ ಸಲ್ಲಿಸಿ ಒಬ್ಬಳನ್ನ ಸುಮಲತಾರಂತೆಯೇ ತಯಾರು ಮಾಡಲಾಯ್ತು. ಇಲ್ಲಿದ್ದ ಚುನಾವಣಾಧಿಕಾರಿ ಕುಮಾರಣ್ಣನಿಗೆ ಅದೆಷ್ಟು ವಿಧೇಯಳಾಗಿದ್ದಳೆಂದರೆ, ಹೇಳಿದ ಕೆಲಸವನ್ನು ಜಾಸ್ತಿಯಾಗಿಯೇ ಮಾಡುತ್ತಿದ್ದಳು. ಇದರಿಂದ ಸಿಡಿದೆದ್ದ ಸುಮಲತಾ ದೂರು ನೀಡಿದರು. ಅಷ್ಟರಲ್ಲಿ ಅಸಂಖ್ಯಾತ ತಪ್ಪು ಮಾಡಿದ್ದ ಜಿಲ್ಲಾಧಿಕಾರಿ ವರ್ಗಾವಣೆಗೊಂಡರು. ನಾನಿರುವುದು ಚುನಾವಣಾ ನಿಯಮ ಪಾಲಿಸುವುದಕ್ಕೇ ಹೊರತು ನಿಮ್ಮ ಆದೇಶಗಳನ್ನು ಪಾಲಿಸಲಲ್ಲ ಎಂಬ ಒಂದು ಮಾತು ಆ ಜಿಲ್ಲಾಧಿಕಾರಿಯಿಂದ ಬರಲಿಲ್ಲ. ವಾಸ್ತವವಾಗಿ ಕುಮಾರಣ್ಣ ತನ್ನ ಪೂರ್ವನಿರ್ಧಾರದಂತೆ ಹೇಳಿದಂತೆ ಕೇಳುವ ಅಧಿಕಾರಿಗಳನ್ನ ಜಿಲ್ಲೆಗೆ ತುಂಬಿ ಬಹಳ ದಿನಗಳಾಗಿದ್ದವು. ಈಗ ಕುಮಾರಣ್ಣನ ಆಣತಿಯಂತೆ ನಡೆದಿರುವ ಚುನಾವಣಾ ಅಕ್ರಮಗಳನ್ನ ಸಂಗ್ರಹಿಸಿರುವ ಚಿರಂಜೀವಿ ಎಂಬ ಯುವಕನ ಬಳಿಯಿರುವ ದಾಖಲಾತಿಗಳು ನಿಖಿಲ್ ಗೆದ್ದರೂ ಬೆಂಬಿಡದಂತೆ ಕಾಡುತ್ತವೆ. ಆ ದಾಖಲಾತಿ ಪರಿಶೀಲಿಸಿದರೆ ಕುಮಾರಸ್ವಾಮಿ ಈ ರಾಜ್ಯದ ಮುಖ್ಯಮಂತ್ರಿಯಾಗಿ ಮುಂದುವರಿಯುವ ಯಾವ ಅರ್ಹತೆಯನ್ನೂ ಪಡೆದಿಲ್ಲ ಎಂಬುದು ಸಾಬೀತಾಗುತ್ತದೆ.
ಶಿವರಾಮೇಗೌಡನ ಮಗನ ಹೇಳಿಕೆಯಂತೆ ಪ್ರತಿ ಬೂತಿಗೆ ಐದು ಲಕ್ಷದಂತೆ ಹರಿದು ಬಂದಿದ್ದು ನಿಜ, ಆದರೆ ಕಾರಿನಲ್ಲಿ ಬರುವ ಬದಲು ಭೈಕಿನಲ್ಲಿ ಬಂದವು. ಮುಂದೆ ಬೈಕುಗಳಿಗೆ ಎಕ್ಸಾರ್ಟಾಗಿ ಕಾರು ಹೋಗುತ್ತಿದ್ದು. ಮತ ಮಾರಿಕೊಳ್ಳುವ ಜನ ಖುಷಿಯಿಂದ ಮಾತನಾಡಿಕೊಳ್ಳುತ್ತಿದ್ದರು. ಅವರ ನಿರೀಕ್ಷೆಯಂತೆ ಓಟಿಗೆ ಸಾವಿರ ಎರಡು ಸಾವಿರಕ್ಕೆ ಬದಲು. ಐದು ನೂರಂತೆ ಎಂಬುದು ನಿರಾಶೆ ಹುಟ್ಟಿಸುತ್ತಿತ್ತು. ಹಂಚುವ ಜನ ಕೂಡ ಎಲ್ಲರಿಗೂ ಹಂಚದೆ ನಿಖಿಲನಿಗೆ ಮತಹಾಕುವವರನ್ನ ನಿಖರವಾಗಿ ಗುರುತಿಸಿ ಬಟವಾಡೆ ಮಾಡಿ ಉಳಿದದ್ದನ್ನ ಹಂಚಿಕೊಂಡರು. ಇನ್ನ ಸುಮಲತ ಹಣ ಹಂಚಿಕೆಯಿಂದ ದೂರವುಳಿದರು. ಏಕೆಂದರೆ ಅಂಬರೀಶ್ ಎಂದೂ ಹಣ ಹಂಚಿದವರಲ್ಲ. ಅದರೂ ಸೋತ ಜಿಲ್ಲೆಯ ಕಾಂಗ್ರೆಸ್ ಎಮ್ಮೆಲ್ಲೆಗಳ ತಲಾ ನೂರರಂತೆ ಹಂಚಿದರು. ಈ ಪೈಕಿ ನಾಗಮಂಗಲದ ಚಲುವರಾಯಸ್ವಾಮಿ ಕಡೆಯವರು. ನೂರು ರೂ ಹಂಚಲು ಹೋದಾಗ ಆಟೊಂತರ ಮಾಡಿಕೊಂಡವುನೆ ಇನ್ನೂರನ್ನು ಮುನ್ನೂರನ್ನೂ ಕೊಡಕ್ಕೇನಾಗಿತ್ತು” ಎಂದು ಗೊಣಗಿಕೊಂಡೇ ಈಸಿಕೊಂಡರು. ಜನಗಳು ಯಾವುದೇ ಅಳುಕಿಲ್ಲದೆ ಮತವನ್ನು ಮಾರಿಕೊಳ್ಳುತ್ತಿದ್ದಾರೆ. ಮುಂದೆ ಕೊಳ್ಳುವವರಷ್ಟೇ ಶಾಸಕರಾಗುತ್ತಾರೆ. ಆದರೆ ಮಂಡ್ಯದಲ್ಲಿ ಮಾತ್ರ ನೂರು ರೂ. ನೋಟು ಐನೂರರ ನೋಟನ್ನು ಸೋಲಿಸಿದೆ. ಸ್ವಾಭಿಮಾನದ ಭಿಕ್ಷೆಗಾಗಿ ಸೆರಗೊಡ್ಡಿದ ಸುಮಲತಾ ಮಂಡ್ಯದ ಜನರನ್ನು ಗೆದ್ದಿದ್ದಾರೆ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜೋಸೆಫ್ ವಿಜಯ್‌ ಅವರ ಐತಿಹಾಸಿಕ ಗೆಲುವು: ರಾಜ್ಯಪಾಲರ ಸೋಲು ಮತ್ತು ದ್ರಾವಿಡ ನೆಲದ ರಾಜಕೀಯ: ಒಂದು ವಿಶ್ಲೇಷಣೆ

ತಮಿಳಗ ವೆಟ್ರಿ ಕಝಗಂ (TVK) ಪಕ್ಷವು ತಮಿಳುನಾಡು ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಿ ಸರ್ಕಾರ ರಚಿಸುವ ಜವಾಬ್ದಾರಿ ತೆಗೆದುಕೊಂಡಿದೆ. ಮೇ 13, 2026ರ ಬುಧವಾರ ನಡೆದ ನಾಟಕೀಯ ವಿಶ್ವಾಸ ಮತಯಾಚನೆಯಲ್ಲಿ 144 ಮತಗಳ ಬೆಂಬಲ...

FACT CHECK: ಟಿವಿಕೆ ಪಕ್ಷ ಅಧಿಕಾರಕ್ಕೆ ಬರುತ್ತಿದಂತೆ ಹಿಂದಿ ಹೇರಿಕೆ ವಿರುದ್ದ ಪ್ರತಿಭಟನೆ ಎಂದು ಹಳೆಯ ವಿಡಿಯೋ ಹಂಚಿಕೆ

ಹಿಂದಿ ಹೇರಿಕೆ ವಿರುದ್ದದ ಹೋರಾಟವು ತಮಿಳುನಾಡಿಗೆ ಹೊಸದೇನು ಅಲ್ಲ. ಆದರೆ ಚೆನ್ನೈನ ಜವಾಹರಲಾಲ್ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷ ಅಧಿಕಾರ ವಹಿಸಿಕೊಂಡ ನಂತರ ...

ನೀಟ್: ಪ್ರಶ್ನೆಪತ್ರಿಕೆ ಸೋರಿಕೆಯ ಆತಂಕ ಮತ್ತು ಪ್ರಾದೇಶಿಕ ಹಿತಾಸಕ್ತಿಗಳ ಬಲಿ

ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಆರೋಪದ ಮೇಲೆ ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ...

ಕೇಂದ್ರ ಸಚಿವ ಬಂಡಿ ಸಂಜಯ್ ಮಗನ ವಿರುದ್ಧ ಪೋಕ್ಸೋ ಕೇಸ್ : ಕ್ರಮ ಕೈಗೊಳ್ಳದೆ ಕಥೆ ಹೇಳುತ್ತಿರುವ ಪೊಲೀಸರು, ಅಂತರ ಕಾಯ್ದುಕೊಂಡ ಬಿಜೆಪಿ

ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ, ತೆಲಂಗಾಣದ ಪ್ರಮುಖ ಬಿಜೆಪಿ ನಾಯಕ ಬಂಡಿ ಸಂಜಯ್ ಕುಮಾರ್ ಅವರ ಮಗ ಬಂಡಿ ಸಾಯಿ ಭಗೀರತ್ ವಿರುದ್ಧ 17 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಪೋಕ್ಸೋ...

ಶಾಲೆ, ಪೂಜಾ ಸ್ಥಳ, ಬಸ್ ನಿಲ್ದಾಣಗಳ ಬಳಿ ಇರುವ 717 ಮದ್ಯದಂಗಡಿಗಳನ್ನು ಮುಚ್ಚಲು ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಆದೇಶ 

ಅಧಿಕಾರ ವಹಿಸಿಕೊಂಡ ನಂತರ ತಮ್ಮ ಮೊದಲ ಪ್ರಮುಖ ಆಡಳಿತಾತ್ಮಕ ನಿರ್ದೇಶನದಲ್ಲಿ, ಸಿ. ಜೋಸೆಫ್ ವಿಜಯ್ ಸೋಮವಾರ, ತಮಿಳುನಾಡು ಸರ್ಕಾರವು ಪೂಜಾ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಮತ್ತು ಬಸ್ ನಿಲ್ದಾಣಗಳಿಂದ 500 ಮೀಟರ್ ಒಳಗೆ...

FACT CHECK: ಭಾರತೀಯರು ಚಿನ್ನ ಖರೀದಿಸಬೇಡಿ ಎಂದು 1967ರಲ್ಲೇ ಇಂದಿರಾ ಗಾಂಧಿ ಹೇಳಿದ್ರಾ?

ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ತೆಲಂಗಾಣದ ಸಿಕಂದರಾಬಾದ್ ರ‍್ಯಾಲಿಯಲ್ಲಿ ಮಾತನಾಡುತ್ತಾ, ಆರ್ಥಿಕ ಬಿಕ್ಕಟ್ಟು ತಪ್ಪಿಸಲು "ಒಂದು ವರ್ಷ ಚಿನ್ನ ಖರೀದಿಸಬೇಡಿ" ಎಂದು ಜನರಲ್ಲಿ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ, 1967ರಲ್ಲಿ ಅಂದಿನ ಪ್ರಧಾನಿ...

ಪಶ್ಚಿಮ ಬಂಗಾಳ| ಧ್ವನಿವರ್ಧಕಗಳ ನಿಯಂತ್ರಣಕ್ಕೆ ಆದೇಶಿಸಿದ ನೂತನ ಸಿಎಂ ಅಧಿಕಾರಿ; ಧಾರ್ಮಿಕ ಸಭೆ ನೆಪದಲ್ಲಿ ರಸ್ತೆ ತಡೆಗೆ ನಿಷೇಧ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ನಿಯಂತ್ರಿಸಲು ಮತ್ತು ಪ್ರಾರ್ಥನೆ ಅಥವಾ ಧಾರ್ಮಿಕ ಸಭೆ ನೆಪದಲ್ಲಿ ಸಾರ್ವಜನಿಕ ರಸ್ತೆಗಳನ್ನು ನಿರ್ಬಂಧಿಸದಂತೆ ನೋಡಿಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಹೊಸ ಸೂಚನೆಗಳನ್ನು...

ರಾಜಸ್ಥಾನದಲ್ಲಿ ನೀಟ್‌-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ; ಸಿಬಿಐ ತನಿಖೆಗೆ ಆದೇಶಿಸಿದ ಸರ್ಕಾರ

ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ ದಿನಾಂಕಗಳಲ್ಲಿ ಮರು ಪರೀಕ್ಷೆಯನ್ನು ನಡೆಸಲಾಗುವುದು, ಪರೀಕ್ಷೆಗೆ...

ಇತ್ಯರ್ಥವಾಗದ ಚುನಾವಣಾ ತಕರಾರು : ಮತ ಹಾಕಿದ ಜನರಿಗೆ ದಿನಕ್ಕೊಬ್ಬ ಶಾಸಕ

ರಾಜ್ಯದಲ್ಲಿ ಪ್ರಸ್ತುತ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೂರು ವರ್ಷಗಳನ್ನು ಪೂರೈಸಿದೆ. ಚುನಾವಣೆ ನಡೆಯಲು ಇನ್ನು ಎರಡು ವರ್ಷಗಳು ಬಾಕಿಯಿದೆ. ಅಂದರೆ, ಸರ್ಕಾರದ ಐದು ವರ್ಷಗಳ ಅವಧಿಯಲ್ಲಿ ಮುಕ್ಕಾಲು...

“ಸನಾತನವನ್ನು ನಿರ್ಮೂಲನೆ ಮಾಡಬೇಕು…”; ವಿಧಾನಸಭೆಯಲ್ಲೇ ತನ್ನ ಹಿಂದಿನ ಹೇಳಿಕೆ ಪುನರುಚ್ಚರಿಸಿದ ಉದಯನಿಧಿ ಸ್ಟಾಲಿನ್

ತಮಿಳುನಾಡು ವಿರೋಧ ಪಕ್ಷದ ನಾಯಕ ಮತ್ತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಮಂಗಳವಾರ ತಮಿಳುನಾಡು ವಿಧಾನಸಭೆಯಲ್ಲಿ ನಡೆದ ಅಧಿವೇಶನದಲ್ಲಿ, ಸನಾತನ ಧರ್ಮದ ನಿರ್ಮೂಲನೆಗೆ ಮತ್ತೊಮ್ಮೆ ಕರೆ ನೀಡಿದ್ದಾರೆ. ಸದನದಲ್ಲಿ ಮಾತನಾಡಿದ ಅವರು, "ಜನರನ್ನು ವಿಭಜಿಸುವ...