ಮಣಿಪುರದ ಕಾಂಗ್ಪೋಕ್ಷಿ ಜಿಲ್ಲೆಯಲ್ಲಿ ಬುಡಕಟ್ಟು ಸಮುದಾಯದ ಇಬ್ಬರು ಮಹಿಳೆಯರನ್ನು ಬೆತ್ತಲು ಮೆರವಣಿಗೆ ಮಾಡಿ, ಸಾಮೂಹಿಕ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆದ ಬಳಿಕ ಗುರುವಾರ ದೇಶಾದ್ಯಂತ ಆಕ್ರೋಶ ವ್ಯಕ್ತವಾಯಿತ. ಆಬಳಿಕವಷ್ಟೇ ಅಲ್ಲಿಯ ಬಿಜೆಪಿ ಸರ್ಕಾರ ಆರೋಪಿಗಳ ಬಂಧನಕ್ಕೆ ಮುಂದಾಯಿತು. ಸಧ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿದೆ.
ಖಾಸಗಿ ಸುದ್ದಿವಾಹಿನಿ ಇಂಡಿಯಾ ಟುಡೆ ಚಾನೆಲ್ ಜೊತೆ ದೂರವಾಣಿ ಕರೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಅವರು, ಗುರುವಾರ ಸಂಜೆ ಇಬ್ಬರು ವ್ಯಕ್ತಿಗಳನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದರು. ಕೆಲವು ಗಂಟೆಗಳ ನಂತರ, ಇನ್ನೂ ಇಬ್ಬರನ್ನು ಬಂಧಿಸಲಾಗಿದೆ ಎಂದು ಅಧಿಕೃತ ಮೂಲಗಳು ಹೇಳಿವೆ.
”ಇಲ್ಲಿ ಪ್ರತಿದಿನವೂ ಸಂಘರ್ಷ ನಡೆಯುತ್ತಿದೆ. ತುಂಬಾ ಮಂದಿ ಬಲಿಯಾಗಿದ್ದಾರೆ. ಇದೇ ರೀತಿಯ ಹಲವು ಎಫ್ಐಆರ್ ದಾಖಲಾದ ಬಗ್ಗೆ ಸಂದೇಶ ಬರುತ್ತಿದೆ. ಇಂತಹ ನೂರಾರು ಘಟನೆಗಳು ಮಣಿಪುರದಲ್ಲಿ ಎರಡು ತಿಂಗಳಲ್ಲಿ ನಡೆದಿದೆ. ಈ ವಿಡಿಯೋ ನಿನ್ನೆಯಷ್ಟೇ ಹೊರಗೆ ಬಂದಿದೆ. ಇಲ್ಲಿನ ‘ಗ್ರೌಂಡ್ ರಿಯಾಲಿಟಿ’ ನೋಡಿದ ಬಳಿಕ ನೀವು ಮಾತನಾಡಿ. ನಿಮ್ಮ ಆರೋಪಗಳನ್ನೆಲ್ಲ ಕೇಳಲು ನಾವು ತಯಾರಿಲ್ಲ. ಇದೇ ರೀತಿಯ ನೂರಾರು ಪ್ರಕರಣಗಳು ನಡೆದಿವೆ, ಅದಕ್ಕಾಗಿಯೇ ನಾವು ಇಂಟರ್ನೆಟ್ ಸೇವೆಯನ್ನು ಇಲ್ಲಿ ಬಂದ್ ಮಾಡಿದ್ದೇವೆ” ಎಂದು ಸಿಂಗ್ ಹೇಳಿದ್ದಾರೆ.
ಈ ಘಟನೆ ಮೇ 4ರಂದು ನಡೆದಿದೆ ಎನ್ನಲಾಗಿದ್ದು, ಬುಧವಾರದಿಂದ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಗುರುವಾರ ಕೃತ್ಯದ ಬಗ್ಗೆ ದೇಶಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಯಿತು. ಪ್ರಧಾನಿ ಮೋದಿ ಅವರು ಮಣಿಪುರ ಹಿಂಸಾಚಾರದ ಬಗ್ಗೆ 77 ದಿನಗಳಲ್ಲಿ ಒಂದೇ ಒಂದು ಮಾತು ಕೂಡ ಆಡಲಾರದವರು, ಗುರುವಾರ ಈ ಬಗ್ಗೆ 16 ಸೆಕೆಂಡ್ಗಳ ಕಾಲ ಮಾತನಾಡಿದ್ದಾರೆ.
ಇದನ್ನೂ ಓದಿ: 77 ದಿನಗಳ ನಂತರ ಮಣಿಪುರದ ಹಿಂಸಾಚಾರದ ಕುರಿತು ಮೌನ ಮುರಿದ ಪ್ರಧಾನಿ ಮೋದಿ
ಬಂಧಿತವಾದ ಮೊದಲ ವ್ಯಕ್ತಿಯನ್ನು ಹುಯಿರಮ್ ಸರದಾಶ್ ಸಿಂಗ್ ಎಂದು ಗುರುತಿಸಲಾಗಿದ್ದು, ಕಾಂಗ್ಪೋಕ್ಷಿ ಜಿಲ್ಲೆಯಲ್ಲಿ ಕುಕೃತ್ಯ ಎಸಗಲು ದುಷ್ಕರ್ಮಿಗಳ ಗುಂಪಿಗೆ ನಿರ್ದೇಶನ ನೀಡಿರುವುದು ಬುಧವಾರ ಬಯಲಾದ ವಿಡಿಯೊದಲ್ಲಿ ಕಂಡಬಂದಿದೆ. ಬಂಧಿತ ಇತರ ಮೂವರು ವ್ಯಕ್ತಿಗಳ ಗುರುತು ತಕ್ಷಣಕ್ಕೆ ಪತ್ತೆಯಾಗಿಲ್ಲ.
ಹಿರಿಯ ಅಧಿಕಾರಿಗಳು ವಿಡಿಯೊವನ್ನು ಕೂಲಂಕಷವಾಗಿ ಪರಿಶೀಲಿಸುತ್ತಿದ್ದು, ಬಂಧಿತ ವ್ಯಕ್ತಿಗಳು ಮತ್ತು ವಿಡಿಯೊದಲ್ಲಿ ಕಾಣಿಸಿಕೊಂದಿರುವ ವ್ಯಕ್ತಿಗಳ ಸಾಮ್ಯತೆ ಪರಿಶೀಲನೆ ನಡೆಸುತ್ತಿದ್ದಾರೆ.
”ವಿಡಿಯೊ ಬಯಲಾಗುತ್ತಿದ್ದಂತೆ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಗುರುವಾರ ರಾತ್ರಿ ಅಪರಿಚಿತ ಶಸ್ತ್ರಸಜ್ಜಿತ ವ್ಯಕ್ತಿಗಳ ವಿರುದ್ಧ ಅಪಹರಣ, ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ತೌಬಲ್ ಜಿಲ್ಲೆಯ ನಾಗ್ಪೋಕ್ ಸೆಕ್ಸ್, ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ. ಇತರ ಆರೋಪಿಗಳನ್ನು ಶ್ರೀಪುವಾಗಿ ಬಂಧಿಸಲು ಎಲ್ಲಾ ಪ್ರಯತ್ನಗಳು ನಡೆಯುತ್ತಿವೆ” ಎಂದು ಅಧಿಕಾರಿಗಳು ಹೇಳಿದ್ದಾರೆ.
ಹಿರಿಯ ಐಪಿಎಸ್ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ನಡೆದ ರಾತ್ರಿ ಕಾರ್ಯಾಚರಣೆಯಲ್ಲಿ ಕೌಬಲ್ ಜಿಲ್ಲೆಯಿಂದ 32 ವರ್ಷದ ಆರೋಪಿ ಹಯಿರಮ್ ಹರದಾಶ್ ಸಿಂಗ್ನನ್ನು ಬಂಧಿಸಲಾಗಿದೆ.
ದುಷ್ಕರ್ಮಿಗಳ ಗುಂಪು ಮಹಿಳೆಯರನ್ನು ಬಿಡುಗಡೆ ಮಾಡುವ ಮೊದಲು ಇಬ್ಬರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.
ಈ ನಡುವೆ, ಗ್ರಾಮಸ್ತರು ಬಂಧಿತ ಆರೋಪಿ ಹರದಾಜ್ ಸಿಂಗ್ ಅವರ ಮನೆಗೆ ಬೆಂಕಿ ಹಚ್ಚಿದ್ದು, ಕುಟುಂಬವನ್ನು ಬಹಿಷ್ಕರಿಸಿದ್ದಾರೆ. ”ಇದೊಂದು ಅಮಾನವೀಯ ಕೃತ್ಯ ಎಂದಿರುವ ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಅಪರಾಧಿಗಳು ಗರಿಷ್ಠ ದಂಡನೆಗೆ ಅರ್ಹರು” ಎಂದು ಹೇಳಿದ್ದಾರೆ.