Homeಮುಖಪುಟಸರ್ಕಾರದ ಅನುಮತಿ ಇಲ್ಲದೆ ಮಾರಾಟವಾದ ದಲಿತರ ಭೂಮಿ ವಾಪಸ್ ಕೊಡಿಸುವ ಪಿಟಿಸಿಎಲ್ ತಿದ್ದುಪಡಿ ಕಾಯ್ದೆ ಮಂಡನೆ

ಸರ್ಕಾರದ ಅನುಮತಿ ಇಲ್ಲದೆ ಮಾರಾಟವಾದ ದಲಿತರ ಭೂಮಿ ವಾಪಸ್ ಕೊಡಿಸುವ ಪಿಟಿಸಿಎಲ್ ತಿದ್ದುಪಡಿ ಕಾಯ್ದೆ ಮಂಡನೆ

ಪರಿಶಿಷ್ಟ ಜಾತಿ/ಪಂಗಡಗಳಿಗೆ ಕಾಂಗ್ರೆಸ್ ಸರ್ಕಾರ ಕೊಟ್ಟ ಮಾತನ್ನು ಮೊದಲ ಅಧಿವೇಶನದಲ್ಲಿಯೇ ಈಡೇರಿಸಿದ್ದೇವೆ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ತಿಳಿಸಿದ್ದಾರೆ.

- Advertisement -
- Advertisement -

ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟುಗಳ ಕೆಲವು ಭೂಮಿಗಳ ವರ್ಗಾವಣೆ ನಿಷೇಧ ತಿದ್ದುಪಡಿ ವಿಧೇಯಕ (ಪಿಟಿಸಿಲ್ ತಿದ್ದುಪಡಿ ಮಸೂದೆ) 2023 ಅನ್ನು ಇಂದು ವಿಧಾನಸಭಾ ಅಧಿವೇಶನದಲ್ಲಿ ಕಂದಾಯ ಸಚಿವರಾದ ಕೃಷ್ಣ ಭೈರೇಗೌಡರು ಮಂಡಿಸಿದರು.

ನಂತರ ಮಾತನಾಡಿದ ಸಚಿವರು, “1978ರಲ್ಲಿ ಈ ಕಾನೂನನ್ನು ಇದೇ ಸದನ ಮಂಜೂರು ಮಾಡಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಸೇರಿದ ಜನರ ಸರ್ಕಾರದಿಂದ ಮಂಜೂರಾತಿಯಾಗಿರುವ ಜಮೀನುಗಳನ್ನು ಪರಭಾರೆ ಮಾಡಬೇಕಾದರೆ ಸರ್ಕಾರದ ಅನುಮತಿ ತೆಗೆದುಕೊಂಡಿರಬೇಕು. ಒಂದು ವೇಳೆ ಅನುಮತಿಯಿಲ್ಲದೇ ಮಾರಿದ್ದರೆ ಅಂತಹ ಜಮೀನುಗಳನ್ನು ಮೂಲ ಮಂಜೂರುದಾರರಿಗೆ ಮತ್ತೆ ಅವರಿಗೆ ಜಮೀನಿನ ಹಕ್ಕನ್ನು ನೀಡಬೇಕು ಎಂದು ಕಾನೂನು ತಂದಿತ್ತು. ಅಂದು ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಶ್ರೀಮತಿ ಇಂದಿರಾಗಾಂಧಿಯವರು ಪ್ರಧಾನಿಯಾಗಿದ್ದಾಗ ದೇಶದಲ್ಲಿ ಬಡವರಾಗಿದ್ದ ದಲಿತರು ತಿಳುವಳಿಕೆಯ ಕೊರತೆಯಿಂದ ಅವರ ಜಮೀನುಗಳನ್ನು ಸರ್ಕಾರದ ಅನುಮತಿಯಿಲ್ಲದೇ ಬೇರೆಯವರು ಕೊಂಡುಕೊಳ್ಳುವುದನ್ನು ಕಡಿವಾಣ ಹಾಕಲು ಮುಂದಾಗಿದ್ದರು ಎಂದರು.

ಅಂದು ದಲಿತರಿಗೆ ಇದ್ದ ಏಕೈಕ ಆಸ್ತಿ ಸರ್ಕಾರ ಮಂಜೂರು ಮಾಡಿದ್ದ ಜಮೀನನ್ನು ಅವರಿಗೆ ಉಳಿಸಲು ಈ ಮಾದರಿ ಕಾನೂನನ್ನು ರಚನೆ ಮಾಡಿ ಎಲ್ಲಾ ರಾಜ್ಯಗಳಿಗೆ ಕಳಿಸಿಕೊಟ್ಟಿದ್ದರು. ಆಗ ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿದ್ದ ದೇವರಾಜ ಅರಸುರವರು ಮತ್ತು ಕಂದಾಯ ಸಚಿವರಾಗಿದ್ದ ಬಸವಲಿಂಗಪ್ಪನವರು ಮಸೂದೆ ಮಂಡಿಸಿ 1978 ರಿಂದ ಕಾನೂನು ಜಾರಿಯಲ್ಲಿದೆ ಎಂದು ಸಚಿವರಾದ ಕೃಷ್ಣಭೈರೇಗೌಡರು ತಿಳಿಸಿದರು.

ಈ ಕಾನೂನಿನ ಅನ್ವಯ ನಮ್ಮ ಜಮೀನು ವಾಪಸ್ ಕೊಡಬೇಕೆಂದು ಪರಿಶಿಷ್ಟ ಜಾತಿಯ ಒಬ್ಬರು ದಾವೆ ಹೂಡಿದ್ದರು. ಆದರೆ ಎಸಿಯವರು ನಿಮ್ಮ ಜಮೀನು ಮಾರಿ ಬಹಳ ವರ್ಷಗಳಾಗಿವೆ ಹಾಗಾಗಿ ಈಗ ಕೇಳಲು ಬರುವುದಿಲ್ಲ ಎಂದು ತೀರ್ಪು ನೀಡಿದ್ದರು. ಕೊನೆಗೆ ಅದೇ ಕೇಸು ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಆಗ ಸುಪ್ರೀಂ ಕೋರ್ಟ್ ಸೆಕ್ಷನ್ 5 ರಲ್ಲಿ ಕಾಲಮಿತಿ ನಿಗದಿ ಮಾಡಿಲ್ಲ ಅನ್ನುವ ನ್ಯೂನತೆಯನ್ನು ಗುರುತಿಸಿ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಇದ್ದ ಹಕ್ಕನ್ನು ಕೊಡಲಾಗಿಲ್ಲ ಎಂದು ಸಚಿವರು ವಿವರಿಸಿದರು.

ಆದರೆ ಮೂಲ ಕಾನೂನಿನಲ್ಲಿ ಯಾವತ್ತೇ ಭೂಮಿ ಮಂಜೂರಾಗಿದ್ದರೂ, ಯಾವತ್ತೂ ಪರಬಾರೆಯಾಗಿದ್ದರೂ ಸಹ ಯಾವತ್ತು ಬೇಕಾದರೂ ಪ್ರಶ್ನಿಸಿ ಪರಬಾರೆ ಮಾಡಿಕೊಳ್ಳಬೇಕು ಎಂದಿದೆ. ಆದರೆ ಕಾನೂನಿನಲ್ಲಿ ಕಾಲಮಿತಿಯ ಬಗ್ಗೆ ಸ್ಪಷ್ಟತೆ ಇಲ್ಲ ಎಂದು ಸುಪ್ರೀಂ ಹೇಳಿದೆ. ಹಾಗಾಗಿ ಎಸಿಗಳು ಸುಪ್ರೀಂ ಕೋರ್ಟ್‌ನ ಈ ಆದೇಶ ಇಟ್ಟುಕೊಂಡು ಕಾಲಮಿತಿ ಮೀರಿದೆ ಎಂಬ ನೆಪ ಹೇಳಿ ಅರ್ಜಿಗಳನ್ನು ತಳ್ಳಿಹಾಕುವುದು ನಡೆಯುತ್ತಿದೆ. 2017 ರಿಂದ ದಲಿತ ಸಮುದಾಯಗಳು ಈ ಕಾನೂನಿನ ನ್ಯೂನತೆ ಸರಿಪಡಿಸಲು ತಿದ್ದುಪಡಿ ತರಲು ಹೋರಾಟ, ಧರಣಿ ಮಾಡುತ್ತಾ ಬಂದಿದ್ದಾರೆ. ಎಲ್ಲಾ ರಾಜಕೀಯ ಪಕ್ಷಗಳಿಗೂ ಮನವಿ ಮಾಡಿದ್ದಾರೆ ಎಂದರು.

ನಮ್ಮ ಪಕ್ಷ ವಿರೋಧ ಪಕ್ಷದಲ್ಲಿದ್ದಾಗಲೇ, ‘ನಮ್ಮ ಸರ್ಕಾರ ಬಂದ ಕೂಡಲೇ ನ್ಯೂನತೆ ಸರಿಪಡಿಸಿ, 1978ರ ಮೂಲ ಕಾನೂನಿಗೆ ಜೀವ ತುಂಬುತ್ತೇವೆ’ ಎಂದು ಹೇಳಿದ್ದೆವು. ನಮ್ಮ ನಾಯಕರಾದ ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್‌ರವರು ಚಿತ್ರದುರ್ಗದ ಸಮಾವೇಶದಲ್ಲಿ ದಲಿತರಿಗೆ ಈ ಮಾತನ್ನು ಕೊಟ್ಟಿದ್ದೆವು. ದಲಿತರು ಬಿಜೆಪಿಗೂ ಮನವಿ ಮಾಡಿದ್ದರೂ, ಬಿಜೆಪಿ 4 ವರ್ಷ ಅಧಿಕಾರದಲ್ಲಿದ್ದೂ ಸಹ ಮಾಡಿಲ್ಲ. ಫೆಬ್ರವರಿ ತಿಂಗಳಲ್ಲಿ 162ರಲ್ಲಿ 160ನೇ ಪ್ಯಾರದಲ್ಲಿ ಪ.ಜಾ ಮತ್ತು ಪ.ಪಂದವರ ಜಮೀನನ್ನು ಸಂರಕ್ಷಿಸಲು ಪಿಟಿಸಿಎಲ್ ಕಾಯ್ದೆಗೆ ಸೂಕ್ತ ತಿದ್ದುಪಡಿ ತರಲಾಗುವುದು ಎಂದು ಪೊಳ್ಳು ಭರವಸೆ ನೀಡಿದ್ದರು. ಆದರೆ ನ್ಯಾಯ ಕೊಡದೇ ಅನ್ಯಾಯ ಮುಂದುವರೆಸಿದ್ದರು ಎಂದು ಹೇಳಿದರು.

ನಮ್ಮ ಸರ್ಕಾರ ಮಾತು ಕೊಟ್ಟಂತೆ ಮುಖ್ಯಮಂತ್ರಿಗಳು ಬಜೆಟ್‌ನಲ್ಲಿ ಘೋಷಣೆ ಮಾಡಿದ್ದರು. ಮೊದಲನೇ ಅಧಿವೇಶನದಲ್ಲಿಯೇ ನಾವು ಪಿಟಿಸಿಎಲ್ ಕಾಯ್ದೆಗೆ ತಿದ್ದುಪಡಿ ಮಂಡಿಸುತ್ತಿದ್ದೇವೆ. “ಸೆಕ್ಷನ್ 5(1)ಸಿ ನಲ್ಲಿ ಯಾವುದೇ ಕಾನೂನಿನಲ್ಲಿ ಏನೇ ಒಳಗೊಂಡಿದ್ದರೂ ಈ ಅಧಿನಿಯಮದ ಉಪಬಂಧಗಳನ್ನು ರದ್ದುಪಡಿಸಲು ಯಾವುದೇ ಕಾಲಮಿತಿ ಇರತಕ್ಕದ್ದಲ್ಲ ಎಂಬ ತಿದ್ದುಪಡಿ ಸೇರಿಸಿದ್ದೇವೆ” ಎಂದರು.

ದಲಿತರ ಜಮೀನು ಉಳಿಯಬೇಕೆಂಬ ಸದುದ್ದೇಶದಿಂದ ಇದನ್ನು ಮಾಡಿದ್ದೇವೆ. ಇದು ಹೊಸ ಕಾನೂನು ಅಲ್ಲ. ಕಾಲಮಿತಿಯ ಏನು ಹೇಳಿಲ್ಲ ಎಂದು ಸುಪ್ರಿಂ ಹೇಳಿದೆ. ಹಾಗಾಗಿ ಮೂಲ ಕಾನೂನಿನಲ್ಲಿ ನಾವು ಕಾಲಮಿತಿ ಇಲ್ಲ ಎಂದು ತಿದ್ದುಪಡಿ ಮಾಡುತ್ತಿದ್ದೇವೆ.

ಇದು ಪ್ರಕರಣಗಳು ಯಾವ ನ್ಯಾಯಾಲಯದಲ್ಲಿ ಇರಲಿ, ಎಸಿ, ಡಿಸಿ, ಹೈಕೋರ್ಟ್, ಸುಪ್ರೀಂ ಕೋರ್ಟ್‌ ಎಲ್ಲೇ ಇರಲಿ, ಪೆಂಡಿಂಗ್ ಇದ್ದರೂ ಸಹ ಅವುಗಳಿಗೆ ಈ ಕಾಯ್ದೆ ಜಾರಿಯಾಗುತ್ತದೆ. ಯಾವುದಾದರೂ ಪ್ರಕರಣಗಳು ನ್ಯಾಯಸಮ್ಮತವಾಗಿ ವಿಲೇ ಆಗಿಹೋಗಿದ್ದರೆ ಅವು ಇದರ ವ್ಯಾಪ್ತಿಗೆ ಬರುವುದಿಲ್ಲ. ಆದರೆ ಈ ಕಾನೂನು ಜಾರಿಗೆ ಬಂದ ನಂತರ ಪೆಂಡಿಂಗ್ ಇರುವ ಕೇಸ್‌ಗಳಿಗೂ ಅನ್ವಯವಾಗುತ್ತದೆ ಎಂದು ಅವರು ತಿಳಿಸಿದರು.

ಮಸೂದೆ ಕುರಿತು ಮಾತನಾಡಿದ ಮಾಜಿ ಸಚಿವರಾದ ಪಿ.ಎಂ ನರೇಂದ್ರ ಸ್ವಾಮಿಯವರು, “2017ರಿಂದ ಈಗಾಗಲೇ ದಲಿತರ ವಿರುದ್ಧವಾಗಿ ತೀರ್ಪು ಬಂದಿರುವ ಪ್ರಕರಣಗಳಿಗೂ ಈ ಕಾಯ್ದೆ ಅನ್ವಯವಾಗುವಂತೆ ತಿದ್ದುಪಡಿ ತರಬೇಕು. ಇಲ್ಲದಿದ್ದರೆ ಬಹಳಷ್ಟು ಜಮೀನು ಈಗಾಗಲೇ ದಲಿತರಿಂದ ಕಿತ್ತುಕೊಳ್ಳಲಾಗಿದೆ, ಅದು ವಾಪಸ್ ಬರುವುದಿಲ್ಲ” ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, “2017ರಿಂದ ಇತ್ತೀಚೆಗೆ 1558 ಪ್ರಕರಣಗಳು ಖರೀದಿದಾರರ ಪರವಾಗಿ ಇತ್ಯರ್ಥವಾಗಿವೆ. 1003 ಪ್ರಕರಣಗಳು ಪರಿಶಿಷ್ಟರ ಪರವಾಗಿ ಇತ್ಯರ್ಥವಾಗಿವೆ. ಗಮನಿಸಿಬೇಕಾದ ವಿಚಾರವೆಂದರೆ ಕಾನೂನಿನಲ್ಲಿ ಡಿಸಿಗಳಿಗೆ ಅಪೀಲ್ ಹೋಗುವ ಪವರ್ ಇದೆ. ಹಾಗಾಗಿ ಜಿಲ್ಲಾಧಿಕಾರಿಗಳ ಮುಂದೆ 2303 ಅಪೀಲ್‌ಗಳು ಹೋಗಿವೆ. ಹೈಕೋರ್ಟ್‌ನಲ್ಲಿ 719 ಅಪೀಲ್‌ಗಳು ಇವೆ. ಎಸಿ ಕೋರ್ಟ್‌ನಲ್ಲಿ ಮೂಲ ಮಂಜೂರುದಾರರ ವಿರುದ್ಧ ಆಗಿದ್ದರೂ ಅವರು ಮೇಲ್ಮನವಿ ಹೋಗಿದ್ದಾರೆ. ಹಾಗಾಗಿ ಆ ಪ್ರಕರಣಗಳಿಗೂ ಈ ತಿದ್ದುಪಡಿ ಅನ್ವಯಿಸುವುದರಿಂದ 95% ಪ್ರಕರಣಗಳಿಗೆ ನ್ಯಾಯ ಸಿಗುತ್ತದೆ ಎಂದರು.

ಇದನ್ನೂ ಓದಿ: ಮಾರಾಟವಾದ ದಲಿತರ ಭೂಮಿ ವಾಪಸ್ ಕೊಡಿಸುವ PTCL ಕಾಯ್ದೆ ಬಗ್ಗೆ ನಿಮಗೆ ಗೊತ್ತೆ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ.ಬಂಗಾಳ: ಲೈಂಗಿಕ ದೌರ್ಜ್ಯನ್ಯದ ಆರೋಪದ ಬೆನ್ನಲ್ಲಿ ರಾಜಭವನಕ್ಕೆ ಪೊಲೀಸರಿಗೆ ಪ್ರವೇಶ ನಿಷೇಧಿಸಿದ ಗವರ್ನರ್‌

0
ಪಶ್ಚಿಮ ಬಂಗಾಳದ ರಾಜ್ಯಪಾಲ ಸಿ.ವಿ.ಆನಂದ ಬೋಸ್ ವಿರುದ್ಧ ನಿನ್ನೆ ರಾಜಭವನದ ಮಹಿಳಾ ಉದ್ಯೋಗಿಯೋರ್ವರು ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿದ್ದರು. ಇದರ ಬೆನ್ನಲ್ಲಿ ರಾಜ್ಯಪಾಲರು ತನಿಖೆಯ ನೆಪದಲ್ಲಿ ಪೊಲೀಸರು ರಾಜಭವನಕ್ಕೆ ಪ್ರವೇಶಿಸದಂತೆ ನಿಷೇಧಿಸಿದ್ದಾರೆ, ಇದಲ್ಲದೆ...