ಗಲಭೆ ಪೀಡಿತ ಮಣಿಪುರ ರಾಜ್ಯದಲ್ಲಿ 23 ವರ್ಷದ ತಖೆಲ್ಲಂಬಮ್ ಮನೋರಂಜನ್ ಸಿಂಗ್ ಹತ್ಯೆಯ ವಿರುದ್ಧ ರಚಿಸಲಾದ ಜಂಟಿ ಕ್ರಿಯಾ ಸಮಿತಿ (ಜೆಎಸಿ) ರಾಜ್ಯಾದ್ಯಂತ 48 ಗಂಟೆಗಳ ಬಂದ್ಗೆ ಕರೆ ನೀಡಿದ್ದು, ಜ.20ರಿಂದ ಬಂದ್ ಜಾರಿಗೆ ಬಂದಿದ್ದು, ಜ.22 ರವರೆಗೆ ಜಾರಿಯಲ್ಲಿರುತ್ತದೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
ಗುರುವಾರ (ಜನವರಿ 17) ಇಂಫಾಲ್ ಪೂರ್ವದಲ್ಲಿ ಶಸ್ತ್ರಸಜ್ಜಿತ ಉಗ್ರಗಾಮಿಗಳಿಂದ ತಖೆಲ್ಲಂಬಮ್ ಮನೋರಂಜನ್ ಸಿಂಗ್ ಸಾವಿಗೆ ರಾಜ್ಯವು ಶೋಕ ವ್ಯಕ್ತಪಡಿಸುತ್ತಿದ್ದಂತೆ, ಜನವರಿ 21ರಂದು ತನ್ನ ರಾಜ್ಯತ್ವ ದಿನವನ್ನು ಆಚರಿಸುವ ಮಣಿಪುರವು ಭೀಕರ ಪರಿಸ್ಥಿತಿಗೆ ಸಾಕ್ಷಿಯಾಗಿದೆ.
‘ತಖೆಲ್ಲಂಬಮ್ ಮನೋರಂಜನ್ ಸಿಂಗ್ ಗ್ರಾಮ ಕಾವಲುಗಾರರಾಗಿದ್ದರು. ಕುಕಿ ಉಗ್ರರು ನಡೆಸಿದ ದಾಳಿಯಲ್ಲಿ ಸಿಂಗ್ ಸಾವನ್ನಪ್ಪಿದ್ದಾರೆ’ ಎಂದು ಜೆಎಸಿ ಆರೋಪಿಸಿದೆ.
ಜೆಎಸಿ ಸಂಚಾಲಕರು ಮುಖ್ಯಮಂತ್ರಿ ಮತ್ತು ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕ ಎನ್ ಬಿರೇನ್ ಸಿಂಗ್ ಅವರಿಗೆ ಮನವಿ ಸಲ್ಲಿಸಿದ್ದು, ತಮ್ಮ ಬೇಡಿಕೆಗಳನ್ನು ಈಡೇರಿಸಲು 24 ಗಂಟೆಗಳ ಗಡುವು ನೀಡಲಾಗಿದೆ ಎಂದು ತಿಳಿಸಿದ್ದಾರೆ.
‘ಕಾಂಗ್ಚುಪ್ ಹಿಲ್ ರೇಂಜ್ನಲ್ಲಿ ಒಬ್ಬ ಮಹಿಳೆ ಸೇರಿದಂತೆ ಏಳಕ್ಕೂ ಹೆಚ್ಚು ಜನರು ಬಂದೂಕುಧಾರಿಗಳಿಂದ ಸಿಂಗ್ ಕೊಲ್ಲಲ್ಪಟ್ಟರು’ ಎಂದು ಸ್ಥಳೀಯ ನಿವಾಸಿಗಳು ಶನಿವಾರ ಮಾಹಿತಿ ನೀಡಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯ ವರದಿ ಮಾಡಿದೆ.
‘ಶನಿವಾರ ಬಂದ್ಗೆ ಕರೆ ನೀಡಿದ್ದ ಜೆಎಸಿ, ನಿಗದಿತ ಗಡುವಿನೊಳಗೆ ಬೇಡಿಕೆಗೆ ಸಕಾರಾತ್ಮಕ ಪ್ರತಿಕ್ರಿಯೆ ನೀಡಲು ಸರ್ಕಾರ ವಿಫಲವಾಗಿದೆ’ ಎಂದು ಆರೋಪಿಸಿದೆ.
‘ಪರಿಣಾಮಕಾರಿಯಲ್ಲದ ಕೇಂದ್ರ ಪಡೆಗಳನ್ನು ರಾಜ್ಯದಿಂದ ತೆಗೆದುಹಾಕುವುದು ಮತ್ತು ರಾಜ್ಯ ಪಡೆಗಳನ್ನು ನಿಯೋಜಿಸುವಂತೆ’ ಎನ್ ಬಿರೇನ್ ಸಿಂಗ್ ಅವರು ಸರ್ಕಾರದ ಮುಂದೆ ಬೇಡಿಕೆ ಇಟ್ಟಿದ್ದಾರೆ.
ಜೊತೆಗೆ, ಕುಕಿ ಉಗ್ರಗಾಮಿ ಗುಂಪುಗಳು ಮತ್ತು ಸರ್ಕಾರದ ನಡುವೆ ಸಹಿ ಹಾಕಲಾದ ಕಾರ್ಯಾಚರಣೆಯ ಅಮಾನತು ಒಪ್ಪಂದದ ಹಿಂಪಡೆಯಬೇಕು. ಮಣಿಪುರದಲ್ಲಿ ರಾಷ್ಟ್ರೀಯ ನಾಗರಿಕರ ನೋಂದಣಿ ಅನುಷ್ಠಾನ ಮಾಡಬೇಕು ಎಂಬ ಬೇಡಿಕೆಗಳನ್ನೂ ಸೇರಿಸಿದ್ದಾರೆ.
ರಾಜ್ಯದ ಎಲ್ಲ ಪ್ರದೇಶಗಳಲ್ಲಿ ಗ್ರಾಮ ಸಂರಕ್ಷಣಾ ಪಡೆಗಳ ರಚನೆಗೆ ಅವಕಾಶ ನೀಡುವಂತೆ ಜೆಎಸಿ ಸರ್ಕಾರವನ್ನು ಒತ್ತಾಯಿಸಿದೆ. ಕಾಂಗ್ಚುಪ್ ಹಿಲ್ ರೇಂಜ್, ಮೇಟಿ ಪ್ರಾಬಲ್ಯವಿರುವ ಪ್ರದೇಶದಲ್ಲಿ ಹೆಚ್ಚುವರಿ ಭದ್ರತಾ ಪಡೆಗಳ ನಿಯೋಜನೆಗೆ ಒತ್ತಾಯಿಸಿದೆ.
ಇಮಾ ಕೈಥೆಲ್ ಸೇರಿದಂತೆ ಮಾರುಕಟ್ಟೆಗಳು, ಇತರ ವ್ಯಾಪಾರ ಉದ್ಯಮಗಳು ಇಂಫಾಲ್ ಮತ್ತು ಇತರ ಕಣಿವೆ ಜಿಲ್ಲೆಗಳಲ್ಲಿ ಮುಚ್ಚಲ್ಪಟ್ಟಿವೆ. ಇಂಫಾಲ್ ಕಣಿವೆಯಲ್ಲಿ ಸಾರ್ವಜನಿಕ ಸಾರಿಗೆಯು ಜೆಎಸಿ ಕರೆ ನೀಡಿರುವ ಮುಷ್ಕರಕ್ಕೆ ಬೆಂಬಲವಾಗಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿತು.
ಅಗತ್ಯ ಸೇವೆಗಳು ಮತ್ತು ಧಾರ್ಮಿಕ ಕಾರ್ಯಕ್ರಮಗಳಿಗೆ ಮಾತ್ರ ಬಂದ್ನ ವ್ಯಾಪ್ತಿಯಿಂದ ವಿನಾಯಿತಿ ನೀಡಲಾಗಿದೆ ಎಂದು ಜೆಎಸಿಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಕಳೆದ ವರ್ಷದ ಮೇ ತಿಂಗಳಿನಿಂದ, ಮಣಿಪುರವು ಜನಾಂಗೀಯ ಉದ್ವಿಗ್ನತೆಯನ್ನು ಎದುರಿಸುತ್ತಿದೆ. ಇದರ ಪರಿಣಾಮವಾಗಿ 180 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಮೇ 3 ರಂದು ಪರಿಶಿಷ್ಟ ಪಂಗಡದ (ಎಸ್ಟಿ) ಸ್ಥಾನಮಾನಕ್ಕಾಗಿ ಮೈತೇಯಿ ಸಮುದಾಯದ ಕರೆಯನ್ನು ವಿರೋಧಿಸಲು ಬೆಟ್ಟದ ಜಿಲ್ಲೆಗಳಲ್ಲಿ ಆಯೋಜಿಸಲಾದ ‘ಬುಡಕಟ್ಟು ಒಗ್ಗಟ್ಟಿನ ಮೆರವಣಿಗೆ’ ನಂತರ ಹಿಂಸಾಚಾರ ಭುಗಿಲೆದ್ದಿತು.
ಮಣಿಪುರದ ಜನಸಂಖ್ಯೆಯ ಸರಿಸುಮಾರು 53 ಪ್ರತಿಶತವನ್ನು ಒಳಗೊಂಡಿರುವ, ಮೈತೇಯಿಗಳು ಪ್ರಾಥಮಿಕವಾಗಿ ಇಂಫಾಲ್ ಕಣಿವೆಯಲ್ಲಿ ವಾಸಿಸುತ್ತಾರೆ. ಜೊತೆಗೆ ಬುಡಕಟ್ಟು ಜನಾಂಗದವರು, ನಾಗಾಗಳು ಮತ್ತು ಕುಕಿ ಸಮುದಾಗಳು ರಾಜ್ಯದ ಜನಸಂಖ್ಯೆಯ ಶೇ.40ರಷ್ಟಿದ್ದಾರೆ. ಇವರು ಪ್ರಧಾನವಾಗಿ ಗುಡ್ಡಗಾಡು ಜಿಲ್ಲೆಗಳಲ್ಲಿ ವಾಸಿಸುತ್ತಾರೆ.
ಇದನ್ನೂ ಓದಿ; ಹೆದ್ದಾರಿಯಲ್ಲಿ ಹಸುಗಳ ಹಿಂಡು: ‘ಎಕ್ಸ್ಪ್ರೆಸ್ ವೇ’ ಅಲ್ಲ ‘ಆಕ್ಸ್ಪ್ರೆಸ್ ವೇ’ ಎಂದು ಅಖಿಲೇಶ್ ಲೇವಡಿ