ಮಣಿಪುರದಲ್ಲಿ ಮೇ 3 ರಿಂದ ಆರಂಭವಾದ ಜನಾಂಗೀಯ ಹಿಂಸಾಚಾರವನ್ನು ಕೂಡಲೇ ನಿಗ್ರಹಿಸಬಹುದಿತ್ತು. ಆದರೆ ಆ ಹಿಂಸಾಚಾರದಲ್ಲಿ ರಾಜ್ಯ ಸರ್ಕಾರದ ಸಹಭಾಗಿತ್ವವಿದ್ದ ಕಾರಣದಿಂದಲೇ ಅದು ಇಲ್ಲಿಯವರೆಗೂ ಬೆಳೆಯಿತು ಎಂದು ಸ್ವತಃ ಮಣಿಪುರದ ಬಿಜೆಪಿ ಶಾಸಕ ಪೋಲಿಯೆನ್ಲಾಲ್ ಹಾಕಿಪ್ ಆರೋಪಿಸಿದ್ದಾರೆ.
ಈ ಕುರಿತು ಇಂಡಿಯಾ ಟುಡೆ ಪತ್ರಿಕೆಗೆ ವಿವರವಾದ ಲೇಖನ ಬರೆದಿರುವ ಅವರು, ರಾಜ್ಯದಲ್ಲಿ ಹಿಂಸಾಚಾರ ಭುಗಿಲೆದ್ದಾಗ ಅದನ್ನು ಜನಾಂಗೀಯ ಕೋಮು ಹಿಂಸಾಚಾರ ಎಂಬುದನ್ನು ಮರೆಮಾಚಲು ಸ್ವತಃ ಮುಖ್ಯಮಂತ್ರಿಗಳು ಡ್ರಗ್ಸ್ ವಿರುದ್ಧದ ಸಮರ ಎಂಬಂತೆ ತಪ್ಪಾಗಿ ಬಿಂಬಿಸಿದರು. ಅಲ್ಲಿಂದಲೇ ರಾಜ್ಯದಲ್ಲಿ ಜಟಿಲತೆ ಆರಂಭವಾಯಿತು. ಆನಂತರ ಕುಕಿ ಸಮುದಾಯದ ವಿರುದ್ಧ ಮೈತೇಯಿ ಸಮುದಾಯ ದಾಳಿ ಮಾಡಲು ರಾಜ್ಯ ಸರ್ಕಾರದ ಪಡೆಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.
ಬಿಜೆಪಿ ಶಾಸಕ ಪೋಲಿಯೆನ್ಲಾಲ್ ಹಾಕಿಪ್ ಸೇರಿದಂತೆ 10 ಶಾಸಕರು ಮೇ ತಿಂಗಳಿನಲ್ಲಿಯೇ ಹಿಂಸಾಚಾರವನ್ನು ತಡೆಯುವಂತೆ ಒತ್ತಾಯಿಸಿ ಮುಖ್ಯಮಂತ್ರಿ ಎನ್.ಬಿರೇನ್ ಸಿಂಗ್ರವರಿಗೆ ಪತ್ರ ಬರೆದಿದ್ದರು. ಆ ಪತ್ರದಲ್ಲಿ ಬಹುಸಂಖ್ಯಾತ ಮೈತೇಯಿ ಸಮುದಾಯದವರು ಕುಕಿ ಸಮುದಾಯದ ಮೇಲೆ ಹಿಂಸಾಚಾರ ನಡೆಸುತ್ತಿದ್ದು ಅದನ್ನು ಬಿಜೆಪಿ ಆಡಳಿತ ಸರ್ಕಾರ ಮೌನವಾಗಿ ಬೆಂಬಲಿಸುತ್ತಿದೆ ಎಂದು ಆರೋಪಿಸಿದ್ದರು. ಹಿಂಸಾಚಾರವನ್ನು ತಹಬದಿಗೆ ತರಲು ‘ರಾಜ್ಯದಲ್ಲಿ ಕುಕಿ ಪ್ರಾಬಲ್ಯವಿರುವ ಜಿಲ್ಲೆಗಳಿಗೆ ಪ್ರತ್ಯೇಕ ಆಡಳಿತದ’ ಬೇಡಿಕೆ ಇಟ್ಟಿದ್ದರು. ಆದರೆ ರಾಜ್ಯದ ಸಮಗ್ರತೆಯ ವಿಚಾರ ಮುಂದಿಟ್ಟು ಆ ಬೇಡಿಕೆಯನ್ನು ಮುಖ್ಯಮಂತ್ರಿಗಳು ತಿರಸ್ಕರಿಸಿದ್ದರು.
ಆರಂಭದಲ್ಲಿ ಡ್ರಗ್ಸ್ ವಿರುದ್ಧದ ಯುದ್ಧ ಎಂಬರ್ಥದಲ್ಲಿ ಕುಕಿಗಳ ಮೇಲಿನ ದಾಳಿಗೆ ರಾಜ್ಯದ ಯಂತ್ರಾಂಗವನ್ನು ದುರಪಯೋಗಪಡಿಸಕೊಳ್ಳಲಾಯಿತು. ಅದು ಮುಂದುವರಿದು ಮೈತೇಯಿಗಳು ರಕ್ತಪಾತಕ್ಕೆ ಕಾರಣರಾದರು. ಅಲ್ಲದೇ ಸಂವಿಧಾನದ ಅಡಿಯಲ್ಲಿ ಹಕ್ಕುಗಳ ಮೇಲಿನ ದೀರ್ಘಕಾಲದ ಸಂಘರ್ಷವು ರಾಜ್ಯ ರಚನೆಯ ಪೂರ್ವದ ದಿನಗಳಿಂದಲೂ ಅಸ್ತಿತ್ವದಲ್ಲಿದೆ. ರಾಜ್ಯದ ಸಂಪತ್ತಿನ ಮೇಲಿನ ಹೆಚ್ಚಿನ ಹಿಡಿತ ಮೈತೇಯಿಗಳ ಕೈಯಲ್ಲಿದೆ. ಶಾಸನ ಸಭೆಗಳಲ್ಲಿಯೂ ಸಹ ಗುಡ್ಡಗಾಡು ಪ್ರದೇಶಗಳ ಸಮಿತಿಯ ಅಧಿಕಾರವನ್ನು ಕಿತ್ತುಕೊಳ್ಳಲಾಗಿದೆ. ಕುಕಿ ಸಮುದಾಯದ ಹಿಡಿತ ಹೊಂದಿದ್ದ ಬುಡಕಟ್ಟು ಭೂಮಿಗಳನ್ನು ಕಾಯ್ದಿರಿಸಿದ ಅರಣ್ಯಗಳು ಮತ್ತು ಸಂರಕ್ಷಿತ ಅರಣ್ಯಗಳಾಗಿ ಬದಲಾಯಿಸಲಾಗಿದೆ. ಅಲ್ಲದೇ ಜನಸಂಖ್ಯಾವಾರು ಮೀಸಲಾತಿ ಪರಿಚಯಿಸಲು ಮುಂದಾಗುತ್ತಿರುವುದು ಕುಕಿಗಳಿಗೆ ತಮ್ಮ ಅಸ್ತಿತ್ವದ ಪ್ರಶ್ನೆಯಾಗಿ ಕಂಡರೆ ಮೈತೇಯಿಗಳಿಗೆ ಕಣಿವೆ ಪ್ರದೇಶದ ಭೂಮಿಯ ಆಸೆಯಾಗಿ ಕಂಡಿದೆ ಎಂದು ಪೋಲಿಯೆನ್ಲಾಲ್ ಹಾಕಿಪ್ ಲೇಖನದಲ್ಲಿ ವಿವರಿಸಿದ್ದಾರೆ.
ರಾಜ್ಯದಲ್ಲಿ ಭ್ರಷ್ಟಾಚಾರವು ನಿರ್ವಹಿಸಲಾಗದ ಮಟ್ಟ ತಲುಪಿದೆ. ಇದರಿಂದ ಕುಕಿಗಳು ಅವಕಾಶ ವಂಚಿತರಾಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಆಳುವವರು ಪಕ್ಷಪಾತ ಮತ್ತು ತಾರತಮ್ಯ ಎಸಗಿದರು. ಮುಖ್ಯಮಂತ್ರಿ ಬಿರೇನ್ ಸಿಂಗ್ ಕುಕಿಗಳ ವಿರುದ್ಧದ ಹಿಂಸಾಚಾರದಲ್ಲಿ ಮೈತೆ ಲೀಪುನ್ ಮತ್ತು ಅರಾಂಬೈ ತೆಂಗೋಲ್ನಂತಹ ಮೂಲಭೂತ ಗುಂಪುಗಳೊಂದಿಗೆ ಕೈಜೋಡಿಸಿದ್ದರಿಂದ ಹಿಂಸಾಚಾರ ಉಲ್ಬಣವಾಯಿತು ಎಂದು ಅವರು ಬರೆದಿದ್ದಾರೆ.
ನ್ಯೂಸ್ಲಾಂಡ್ರಿಗೆ ನೀಡಿರುವ ಸಂದರ್ಶನದಲ್ಲಿ ಅವರು, ಪ್ರಧಾನಿಗಳು ತಮ್ಮ ಆದ್ಯತೆಗಳನ್ನು ಪರಿಗಣಿಸುವುದರಲ್ಲಿ ಎಡವಿದ್ದಾರೆ. ನಾವು ಪ್ರಧಾನಿಯವರನ್ನು ಭೇಟಿಯಾಗಿ ಮಣಿಪುರದ ಸಮಸ್ಯೆಗಳನ್ನು ಮುಂದಿಡಲು ಪ್ರಯತ್ನಿಸುತ್ತಿದ್ದರೂ ಅವರು ಅದನ್ನು ತಪ್ಪಿಸಿಕೊಳ್ಳುತ್ತಿದ್ದಾರೆ. ಈಗಲೂ ಮಣಿಪುರದ ಹಿಂಸಾಚಾರದ ನಿಯಂತ್ರಣಕ್ಕೆ ಪ್ರಧಾನಿಗಳ ಮಧ್ಯಪ್ರವೇಶ ಅನಿವಾರ್ಯ ಎಂದು ಹೇಳಿದ್ದಾರೆ.
ಇದನ್ನೂ ಓದಿ; ‘ನಾನು ಕಂಡ ಅತ್ಯಂತ ಕೆಟ್ಟ ಪ್ರಧಾನಿ ಈ ಮೋದಿ’: ಸಚಿವ ಆರ್.ಬಿ.ತಿಮ್ಮಾಪುರ