Homeಚಳವಳಿಮೇ ಸಾಹಿತ್ಯ ಮೇಳದ ಮಹತ್ವ: ‘ಅಭಿವೃದ್ಧಿ’ ವಿವಿಧ ನೆಲೆಗಳಿಂದ ಒಂದು ವಿಶ್ಲೇಷಣೆ

ಮೇ ಸಾಹಿತ್ಯ ಮೇಳದ ಮಹತ್ವ: ‘ಅಭಿವೃದ್ಧಿ’ ವಿವಿಧ ನೆಲೆಗಳಿಂದ ಒಂದು ವಿಶ್ಲೇಷಣೆ

- Advertisement -
- Advertisement -

| ಡಾ. ಎಚ್.ಎಸ್. ಅನುಪಮಾ |

ಒಂದು ಪ್ರದೇಶದ ಜನ ಆರ್ಥಿಕ, ಸಾಮಾಜಿಕ, ರಾಜಕೀಯ ಸ್ಥಿರತೆ ಮತ್ತು ಸುಸ್ಥಿತಿಯಲ್ಲಿ ಬದುಕಲು ಸಾಧ್ಯ ಮಾಡುವುದು ಅಭಿವೃದ್ಧಿ. ಆರೋಗ್ಯ, ಶಿಕ್ಷಣ, ಪೌಷ್ಟಿಕತೆ, ಮೂಲಸೌಕರ್ಯಗಳನ್ನು ಒದಗಿಸಿ ಜನರಿಗೆ ಘನತೆಯ ಬದುಕನ್ನು ಬದುಕಲು ಸಾಧ್ಯ ಮಾಡುವುದು ಅಭಿವೃದ್ಧಿ. ಸ್ವಾಯತ್ತ ಬದುಕಿಗೆ ಅವಕಾಶ ಕಲ್ಪಿಸಿಕೊಡುವುದು ಅಭಿವೃದ್ಧಿ. ಎಂದೇ ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಒಂದು ದೇಶ, ಸಮಾಜ ತೊಡಗಿಕೊಳ್ಳುತ್ತ ಹೋದಂತೆ ಜನರ ಸುತ್ತಮುತ್ತಲ ಪರಿಸರ, ಸಾಮುದಾಯಿಕ ಅಂತರ್ ಸಂಬಂಧಗಳು, ಮನುಷ್ಯ-ಪ್ರಕೃತಿ ಸಂಬಂಧಗಳು ಸುಧಾರಿಸುತ್ತವೆ.

ಇಂಥ ಉದಾತ್ತ ವ್ಯಾಖ್ಯಾನವನ್ನಿಟ್ಟುಕೊಂಡು ಕಳೆದ ಶತಮಾನದಲ್ಲಿ ವಿಶ್ವಾದ್ಯಂತ ನಾನಾ ದೇಶಗಳಲ್ಲಿ ಅಭಿವೃದ್ಧಿ ಪ್ರಕ್ರಿಯೆ ಶುರುವಾಯಿತು. ಹಲವು ಅಳತೆಗೋಲುಗಳು ರೂಪುಗೊಂಡವು. ವಿಶ್ವಯುದ್ಧಗಳ ನಂತರ ಹಲವು ದೇಶಗಳಲ್ಲಿ ತಾಂಡವವಾಡುತ್ತಿದ್ದ ಅನಕ್ಷರತೆ, ಬಡತನ, ನಿರುದ್ಯೋಗ, ತಾಯಿ ಮರಣ, ಶಿಶು ಮರಣ, ರೋಗರುಜಿನಗಳೇ ಮುಂತಾದ ಅಂಶಗಳನ್ನು ಆಧಾರವಾಗಿಟ್ಟುಕೊಂಡು ದೇಶಗಳು ಅಭಿವೃದ್ಧಿ ಹೊಂದಿದ, ಅಭಿವೃದ್ಧಿಶೀಲ, ಹಿಂದುಳಿದ ಎಂದು ಗೆರೆಯೆಳೆದು ಗುರುತುಗೊಂಡವು. ಅಭಿವೃದ್ಧಿ ಹೊಂದುತ್ತಿರುವ ಮತ್ತು ಹಿಂದುಳಿದ ದೇಶಗಳಿಗೆ ತಾವೂ ಅಭಿವೃದ್ಧಿ ಹೊಂದುವ ಕನಸು ರೆಕ್ಕೆಪುಕ್ಕ ಕಟ್ಟಿಕೊಂಡು ಹಾರತೊಡಗಿತು. ಹೆಚ್ಚುಕಡಿಮೆ ವಿಶ್ವದ ಎಲ್ಲ ದೇಶಗಳೂ ಅಭಿವೃದ್ಧಿ ಕಾರ್ಯಕ್ರಮಗಳಿಗೆಂದು ತಮ್ಮ ಆರ್ಥಿಕತೆಯನ್ನು, ಸಮಾಜ ಕಲ್ಯಾಣ ಕಾರ್ಯಕ್ರಮಗಳನ್ನು, ಆದ್ಯತೆಗಳನ್ನು ಮರುರೂಪಿಸಿಕೊಂಡವು. ಆರ್ಥಿಕ ಸಹಾಯಕ್ಕಾಗಿ ಸಂಪನ್ಮೂಲ ಕ್ರೋಢೀಕರಿಸಿಕೊಳ್ಳಲು ಯತ್ನಿಸಿದವು. ದೇಶ ಕಟ್ಟುವ ಮಾದರಿಗಾಗಿ, ಆರ್ಥಿಕ ಸಂಪನ್ಮೂಲ ಹೊಂದಿಸಿಕೊಳ್ಳಲಿಕ್ಕಾಗಿ ವಿಶ್ವದ ದೊಡ್ಡಣ್ಣಂದಿರಂತೆ ವರ್ತಿಸುವ ಯಜಮಾನ ದೇಶಗಳ ಕಡೆಗೆ ನೋಡಿದವು.

ದಶಕಗಳು ಕಳೆದವು. ಅಭಿವೃದ್ಧಿಯ ನೆಪದಲ್ಲಿ, ಸಾಲ ಕೊಡುವ ನೆಪದಲ್ಲಿ, ಸಾಲ ಕೊಡುವ ಮುನ್ನ ಹೇರುವ ಷರತ್ತುಗಳ ನೆಪದಲ್ಲಿ ಬಡದೇಶಗಳ ನೆಲ-ಜಲ-ಜನಜೀವನದ ತಲೆಯ ಮೇಲೆ ನವ ವಸಾಹತುಶಾಹಿಗಳು ಅಂಕುಶ ಹಿಡಿದು ಕುಳಿತುಕೊಳ್ಳಲು ಇದೇ ಅಭಿವೃದ್ಧಿ ಮಾತುಗಳು ಕಾರಣವಾದವು. ಬಡವರು ಮತ್ತು ಸಿರಿವಂತರ ನಡುವಿನ ಕಂದಕ ಹಿಂದೆಂದಿಗಿಂತ ಇವತ್ತು ಹಿರಿದಾಗಿದೆ. ಒಂದಷ್ಟು ಜನ ಸಿರಿವಂತರು ಸೃಷ್ಟಿಯಾಗಲು ಅಸಂಖ್ಯ ಜನಸಮುದಾಯ ತನ್ನ ನೆಲೆ, ಸಂಪನ್ಮೂಲದಿಂದ ವಂಚಿತರಾಗಿದ್ದಾರೆ. ಅಭಿವೃದ್ಧಿಯ ಹೆಸರಲ್ಲಿ ಪರಿಸರ ಮತ್ತೆ ಮೊದಲ ಸ್ಥಿಗೆ ಎಂದೆಂದೂ ತಲುಪಲು ಸಾಧ್ಯವಾಗದಷ್ಟು ನಾಶವಾಗಿದೆ. ಜನಜೀವನದ ಮೇಲೆ ನಿರುದ್ಯೋಗ, ಸಾಂಸ್ಕøತಿಕ ಪಲ್ಲಟಗಳು, ರಾಜಕೀಯ ಅಸ್ಥಿರತೆ, ಬಡತನ, ಕೋಮುಘರ್ಷಣೆಯೇ ಮೊದಲಾದ ಬಿಕ್ಕಟ್ಟುಗಳು ಹೇರಲ್ಪಟ್ಟಿವೆ. ಅಭಿವೃದ್ಧಿ ಪ್ರಕ್ರಿಯೆ ಚುರುಕುಗೊಂಡಷ್ಟೂ ಆರ್ಥಿಕ ಪ್ರಗತಿ ಕುಂಠಿತಗೊಳ್ಳುತ್ತಿರುವುದನ್ನು, ಜನಸಮುದಾಯಗಳು ತಮ್ಮ ಸ್ವಾತಂತ್ರ್ಯ, ಸ್ವಾಯತ್ತತೆಯನ್ನು ಕಳೆದುಕೊಳ್ಳುತ್ತಿರುವುದನ್ನು ಗಮನಿಸಬಹುದಾಗಿದೆ.

ಈ ವೈರುಧ್ಯಕ್ಕೆ ಕಾರಣವೇನು? ಇದನ್ನು ವಿವರಿಸುವುದು ಹೇಗೆ?

‘ನಮ್ಮ ಆಯ್ಕೆಯಂತೆ, ನಮಗೆ ಮೌಲಿಕವೆನಿಸುವ ಬದುಕನ್ನು ಬದುಕಲು ಸಾಧ್ಯಮಾಡುವುದೇ ಅಭಿವೃದ್ಧಿ. ಸಮಾಜವೊಂದರ ಯಶಸ್ಸು ಅದರಲ್ಲಿರುವ ಜನರು ಅನುಭವಿಸುವ ಸ್ವಾತಂತ್ರ್ಯವೇ ಆಗಿದೆ. ಅಭಿವೃದ್ಧಿ ಎಂದರೆ ಜನಸಮುದಾಯಗಳ ಅನುಭವಕ್ಕೆ ನಿಲುಕುವ ಹಿಗ್ಗುತ್ತಿರುವ ಸ್ವಾತಂತ್ರ್ಯ. ವ್ಯಕ್ತಿ ತನ್ನ ಸಂಪೂರ್ಣ ಮಾನವ ಸಾಮಥ್ರ್ಯವನ್ನರಿಯಲು ಸಾಧ್ಯ ಮಾಡುವುದೇ ಸ್ವಾತಂತ್ರ್ಯ ಮತ್ತು ಅಭಿವೃದ್ಧಿ.’ – ಅಮತ್ರ್ಯ ಸೆನ್

ನಿಜ. ಆದರೆ ನಮ್ಮ ಅಭಿವೃದ್ಧಿ ಮಾದರಿಗಳು ಇದನ್ನು ಸಾಧ್ಯಮಾಡಿವೆಯೆ? ಜನಸಮುದಾಯಗಳ ಮೇಲೆ, ಭಾಷೆ-ಶಿಕ್ಷಣ-ಕೃಷಿ-ಪರಿಸರದ ಮೇಲೆ, ದಮನಿತರ ಸಬಲೀಕರಣ ಪ್ರಕ್ರಿಯೆಯ ಮೇಲೆ ಅಭಿವೃದ್ಧಿ ಮಾದರಿಗಳ ಪ್ರಭಾವವೇನು? ಅಭಿವೃದ್ಧಿ ಹೊಂದುತ್ತಿರುವ ಈ ಕಾಲದಲ್ಲಿ ಸಮುದಾಯಗಳ ನಡುವಿನ ಸಂಬಂಧದ ಸೂಕ್ಷ್ಮ ಒಳತೋಟಿಗಳೇನು? ಮಹಿಳೆಯರು ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಎಷ್ಟು ಪಾಲುದಾರರು? ಅವರ ಮೇಲಾದ ಪರಿಣಾಮಗಳೇನು?

ಅಭಿವೃದ್ಧಿಯ ದಾರಿಯಲ್ಲಿ ಇಷ್ಟು ದೂರ ನಡೆದು ಬಂದಿರುವಾಗ ಅದರ ಸಾಧಕ-ಬಾಧಕಗಳ ಕುರಿತು ವಸ್ತುನಿಷ್ಠವಾಗಿ ಚರ್ಚಿಸುವ ಹೊತ್ತು ಬಂದಿದೆ. ಫಲಾನುಭವಿಗಳ ದೃಷ್ಟಿಯಿಂದಲ್ಲ, ವಂಚಿತರ ದೃಷ್ಟಿಕೋನದಿಂದ ಅಭಿವೃದ್ಧಿಯ ಮಾನದಂಡಗಳು ಹಾಗೂ ಮಾರ್ಗಗಳನ್ನು ಮರುಪರಿಶೀಲಿಸಬೇಕಾದ ತುರ್ತು ಹುಟ್ಟಿಕೊಂಡಿದೆ. ಅದರ ಸಲುವಾಗಿ 6ನೇ ಮೇ ಸಾಹಿತ್ಯ ಮೇಳವನ್ನು ಗದಗದ ಅಂಬೇಡ್ಕರ್ ಭವನದಲ್ಲಿ ಇದೇ ಮೇ 4, 5ರಂದು ಏರ್ಪಡಿಸಲಾಗಿದೆ. `ಅಭಿವೃದ್ಧಿ ಭಾರತ: ಕವಲುದಾರಿಗಳ ಮುಖಾಮುಖಿ’ ಎಂಬ ಶೀರ್ಷಿಕೆಯಡಿ ಅಭಿವೃದ್ಧಿ ಹೆಸರಿನಲ್ಲಿ ನಾವು ಕ್ರಮಿಸಿದ ದಾರಿಯನ್ನು ವಿಶ್ಲೇಷಿಸಲು, ಮರುಪರಿಶೀಲಿಸಲು, ಚರ್ಚಿಸಲು ಗೋಷ್ಠಿಗಳನ್ನು ಆಯೋಜಿಸಲಾಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಧ್ಯಪ್ರದೇಶ: ದಲಿತ ದಂಪತಿಯನ್ನು ಥಳಿಸಿ, ಚಪ್ಪಲಿ ಹಾರ ಹಾಕಿ ಮೆರವಣಿಗೆ

0
ಮಧ್ಯಪ್ರದೇಶದ ಅಶೋಕ್ ನಗರ ಜಿಲ್ಲೆಯಲ್ಲಿ ದಲಿತ ವೃದ್ಧ ದಂಪತಿಯನ್ನು ಥಳಿಸಿ, ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿರುವ ಘಟನೆ ನಡೆದಿದೆ ಎಂಬುದನ್ನು ಪೊಲೀಸರು ಭಾನುವಾರ ಖಚಿತಪಡಿಸಿದ್ದಾರೆ. ದಂಪತಿಯ ಮಗ ಮಹಿಳೆಯೊಬ್ಬರಿಗೆ ಕೀಟಲೆ ಮಾಡಿದ ಘಟನೆಯಲ್ಲಿ...