ನಿರುದ್ಯೋಗ ಸಮಸ್ಯೆಗೆ ಸಂಬಂಧಿಸಿದಂತೆ ಕೇಂದ್ರದ ಬಿಜೆಪಿ ಸರ್ಕಾರವನ್ನು ಬಹುಜನ ಸಮಾಜ ಪಕ್ಷದ(ಬಿಎಸ್ಪಿ) ಮುಖ್ಯಸ್ಥೆ ಮಾಯಾವತಿ ತರಾಟೆಗೆ ತೆಗೆದುಕೊಂಡಿದ್ದು, ಜನರಿಗೆ ಉದ್ಯೋಗ ಗ್ಯಾರೆಂಟಿ ನೀಡುವ ಮೂಲಕ ನಿಜವಾದ ದೇಶಭಕ್ತಿಯನ್ನು ಪ್ರದರ್ಶಿಸುವಂತೆ ಕೇಳಿಕೊಂಡಿದ್ದಾರೆ.
ಹಿಂದಿನ ಕಾಂಗ್ರೆಸ್ ಮತ್ತು ಈಗ ಬಿಜೆಪಿ ನೇತೃತ್ವದ ಜಾತಿವಾದಿ, ದುರಹಂಕಾರಿ ಸರ್ಕಾರಗಳಿಂದ ಕೋಟ್ಯಂತರ ಬಡವರ ಅಭಿವೃದ್ಧಿಗೆ ಧಕ್ಕೆಯಾಗಿದೆ ಎಂದು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ ಹೇಳಿದ್ದು, ಸಾರ್ವಜನಿಕ ಹಿತಾಸಕ್ತಿ ಮತ್ತು ಹಿಂದುಳಿದ ಜಾತಿಗಳ ಕಲ್ಯಾಣಕ್ಕಾಗಿ ಲೋಕಸಭೆಯಲ್ಲಿ ಬಿಎಸ್ಪಿ ಪಕ್ಷಕ್ಕೆ ಮತವನ್ನು ಹಾಕಲು ಜನರಲ್ಲಿ ಆಗ್ರಹಿಸಿದ್ದಾರೆ.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿದ ಮಾಯಾವತಿ, ಇದೀಗ ಹೊಸ ವರ್ಷವಾಗಿದೆ. ಇನ್ನು ಮುಂದೆಯಾದರೂ ಸರ್ಕಾರ ಉದ್ಯೋಗ ಖಾತರಿಯನ್ನು ಖಾತ್ರಿಪಡಿಸುವ ಮೂಲಕ ನಿಜವಾದ ದೇಶಭಕ್ತಿ ಮತ್ತು ರಾಜಧರ್ಮವನ್ನು ಪ್ರದರ್ಶಿಸಬೇಕು. ಏಕೆಂದರೆ ಉಳಿದ ಸರ್ಕಾರಿ ಗ್ಯಾರೆಂಟಿಗಳು ಸುಳ್ಳು ಎಂದು ಸಾಬೀತಾಗಿದೆ ಎಂದು ಮಾಯಾವತಿ ಅವರು ಹೇಳಿದ್ದಾರೆ.
ದೇಶದಲ್ಲಿ ಸಾಧಾರಣ ತಲಾ ಆದಾಯವಿದ್ದರೆ, ಖರ್ಚು ಮಾಡಲು ಜನರ ಜೇಬಿನಲ್ಲಿ ಹಣವಿಲ್ಲದಿದ್ದರೆ ಅಭಿವೃದ್ಧಿಯ ಕಹಳೆ ಊದುವುದರಿಂದ ಏನು ಪ್ರಯೋಜನ? ಹಾಗೆಯೇ ಅಭಿವೃದ್ಧಿ ಹೊಂದಿದ ಭಾರತದಲ್ಲಿ ಬಹುಸಂಖ್ಯೆಯ ಯುವ ಜನರು ನಿರುದ್ಯೋಗಿಗಳಾಗಿರಲು ಹೇಗೆ ಸಾಧ್ಯ ಎಂದು ಮಾಯಾವತಿ ಪ್ರಶ್ನಿಸಿದ್ದಾರೆ.
ಮಾಯಾವತಿ ನೇತೃತ್ವದ ಬಿಎಸ್ಪಿ ಲೋಕಸಭೆ ಚುನಾವಣೆಯಲ್ಲಿ ಎನ್ಡಿಎ ಒಕ್ಕೂಟವಾಗಲೀ, INDIA ಒಕ್ಕೂಟಕ್ಕಾಗಲೀ ಸೇರದೆ ಅಂತರವನ್ನು ಕಾಯ್ದುಕೊಂಡಿದ್ದಾರೆ. ಇತ್ತೀಚೆಗೆ INDIA ಒಕ್ಕೂಟಕ್ಕೆ ಬಿಎಸ್ಪಿ ಸೇರುವ ಕುರಿತು ಊಹಾಪೂಹಗಳು ಭುಗಿಲೆದ್ದಿದ್ದವು. ಇದರ ಬೆನ್ನಲ್ಲೇ ಎಸ್ಪಿ ನಾಯಕ ಅಖಿಲೇಶ್ ಯಾದವ್ ಅವರು ಬಿಎಸ್ಪಿಯನ್ನು INDIA ಒಕ್ಕೂಟಕ್ಕೆ ಸೇರ್ಪಡೆಗೆ ವಿರೋಧ ವ್ಯಕ್ತಪಡಿಸಿದ್ದು, ಮೈತ್ರಿಯಿಂದ ಹೊರ ಬರುವುದಾಗಿ INDIA ಸಭೆಯಲ್ಲಿ ಹೇಳಿರುವುದಾಗಿ ವರದಿಯಾಗಿತ್ತು.
ಇತ್ತೀಚೆಗೆ 2024ರ ಲೋಕಸಭೆ ಚುನಾವಣೆ ಹಿನ್ನೆಲೆ ನಡೆದ ಪಕ್ಷದ ಸಭೆಯಲ್ಲಿ ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಅವರು ಸೋದರಳಿಯ ಆನಂದ್ ಅವರನ್ನು ಉತ್ತರಾಧಿಕಾರಿಯನ್ನಾಗಿ ಘೋಷಿಸಿದ್ದಾರೆ ಮತ್ತು ಉತ್ತರಪ್ರದೇಶ ಮತ್ತು ಉತ್ತರಾಖಂಡ ರಾಜ್ಯಗಳಲ್ಲಿ ಪಕ್ಷವನ್ನು ಬಲಪಡಿಸುವ ಜವಾಬ್ದಾರಿಯನ್ನು ಅವರಿಗೆ ನೀಡಿದ್ದರು.
01-01-2024-BSP PRESS NOTE- NEW YEAR GREETINGS AND ROZGAR GUARANTEE pic.twitter.com/D7RUK3M7pN
— Mayawati (@Mayawati) January 1, 2024
ಇದನ್ನು ಓದಿ: ಬಿಜೆಪಿ ನಾಯಕನ ವಿರುದ್ಧ ಕಾನೂನು ಹೋರಾಟ ನಡೆಸುತ್ತಿದ್ದ ದಲಿತ ರೈತರಿಗೆ ‘ED’ಯಿಂದ ಸಮನ್ಸ್!