ವೈಎಸ್ಆರ್ ಕಾಂಗ್ರೆಸ್ ಪಕ್ಷದ ಶಾಸಕನ ವಿರುದ್ಧ ದೌರ್ಜನ್ಯ ಆರೋಪ ಮಾಡಿ ಪತ್ರಕರ್ತನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದ್ದು, ಮೃತನ ಕುಟುಂಬಸ್ಥರು ನ್ಯಾಯಕ್ಕೆ ಆಗ್ರಹಿಸಿದ್ದಾರೆ.
ಸಾಕ್ಷಿ ಮಾಧ್ಯಮ ತಂಡದಲ್ಲಿ ಕೆಲಸ ಮಾಡುತ್ತಿದ್ದ ಗುರಿಜಾ ಧಮೋಧರ್ ರಾವ್(42) ಅವರು ಡಿ.28ರಂದು ಗುರುವಾರ ಶ್ರೀಕಾಕುಳಂನ ಲವೆಟಿಪಾಲೆಂನಲ್ಲಿರುವ ಅವರ ಗ್ರಾಮದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ವಿಷ ಸೇವಿಸಿ ಪತ್ರಕರ್ತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪ್ರಾಥಮಿಕವಾಗಿ ಹೇಳಲಾಗಿತ್ತು. ಮೃತದೇಹದ ಬಳಿ ಆತ್ಮಹತ್ಯೆ ಪತ್ರ ಪತ್ತೆಯಾಗಿದ್ದು, ವೈಎಸ್ಆರ್ ಕಾಂಗ್ರೆಸ್ ಪಕ್ಷದ ಶಾಸಕ ಕಿರಣ್ ಕುಮಾರ್ ಮತ್ತು ಲಂಕಾಪಲ್ಲೆ ಗೋಪಿ ಎಂಬವರು ಆತ್ಮಹತ್ಯೆಗೆ ಕಾರಣ ಎಂದು ಉಲ್ಲೇಖಿಸಲಾಗಿತ್ತು.
ಪೊಲೀಸರ ಪ್ರಕಾರ ಡಿ.26 ರಂದು ಧಮೋಧರ್ ರಾವ್ ನಾಪತ್ತೆಯಾಗಿದ್ದು, ಈ ಬಗ್ಗೆ ರಣಸ್ಥಲಂನ ಜೆಆರ್ ಪುರಂ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಾಗಿತ್ತು. 2 ದಿನಗಳ ಬಳಿಕ ಅವರ ಮೃತದೇಹವು ಅವರ ನಿವಾಸದಿಂದ 2 ಕಿಲೋಮೀಟರ್ ದೂರದಲ್ಲಿರುವ ಜಮೀನಿನಲ್ಲಿ ಪತ್ತೆಯಾಗಿದೆ. ಮೃತದೇಹದ ಬಳಿ ಡೆತ್ ನೋಟು ಪತ್ತೆಯಾಗಿದ್ದರೂ ಪೊಲೀಸರು ಶಾಸಕರ ವಿರುದ್ಧ ಎಫ್ಐಆರ್ ದಾಖಲಿಸಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ಜೆಆರ್ ಪುರಂ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಜಿ ರಾಜೇಶ್ ಈ ಕುರಿತು ಪ್ರತಿಕ್ರಿಯಿಸಿದ್ದು, ಪತ್ರದಲ್ಲಿನ ಕೈಬರಹವು ಮೃತರದ್ದೇ ಎಂದು ಖಚಿತಪಡಿಸಲು ನಾವು ಅದನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಿದ್ದೇವೆ. ನಾವು ವರದಿ ಬಂದ ಬಳಿಕ ಈ ಬಗ್ಗೆ ಹೆಚ್ಚಿನ ತನಿಖೆಯನ್ನು ನಡೆಸುತ್ತೇವೆ ಎಂದು ಹೇಳಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಧಮೋಧರ್ ಅವರ ಸಹೋದರ ಶ್ರೀನಿವಾಸ್, ನನ್ನ ಸಹೋದರ ಆಂಧ್ರಪ್ರದೇಶದ ಮುಖ್ಯಮಂತ್ರಿ ವೈಎಸ್ ಜಗನ್ ಒಡೆತನದ ಸಾಕ್ಷಿ ಮಾಧ್ಯಮದಲ್ಲಿ ಕೆಲಸ ಮಾಡಿದ್ದಾರೆ. 2019ರ ಚುನಾವಣೆಯ ಸಮಯದಲ್ಲಿ ಧಮೋಧರ್ ಗೊರ್ಲೆ ಕಿರಣ್ ಕುಮಾರ್ ಪರವಾಗಿ ಪ್ರಚಾರ ನಡೆಸಿದ್ದಾನೆ. ಚುನಾವಣೆಯಲ್ಲಿ ಗೊರ್ಲೆ ಕಿರಣ್ ಕುಮಾರ್ ಗೆದ್ದ ನಂತರ ನನ್ನ ಸಹೋದರ ಶಾಸಕ ಮತ್ತು ಆತನ ಆಪ್ತ ಲಂಕೆಲ್ಲಾ ಗೋಪಿಯಿಂದ ತೊಂದರೆ ಅನುಭವಿಸಿದ್ದಾರೆ. ಶಾಸಕರ ಅಕ್ರಮವನ್ನು ಬಯಲಿಗೆಳೆಯುತ್ತಿದ್ದಂತೆ ನನ್ನ ಸಹೋದರನಿಗೆ ದೌರ್ಜನ್ಯ ನಡೆಸಿದ್ದಾರೆ ಮತ್ತು ಕಿರುಕುಳ ನೀಡಿದ್ದಾರೆ ಎಂದು ಶ್ರೀನಿವಾಸು ಅವರು ಆರೋಪಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಶಾಸಕ ಕಿರಣ್ ಕುಮಾರ್, ಈ ಕುರಿತ ಸಂಪೂರ್ಣ ತನಿಖೆಗೆ ಪೊಲೀಸರಿಗೆ ಸಹಕರಿಸುತ್ತೇವೆ. ಮೃತರು ವೈಎಸ್ಆರ್ಸಿಪಿ ಕಾರ್ಯಕರ್ತರಾಗಿದ್ದು, ಅವರ ಸಾವಿನ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸಬೇಕು ಮತ್ತು ಪತ್ರದ ಹಿಂದೆ ಯಾರಿದ್ದಾರೆ ಎಂಬುವುದನ್ನು ಪೊಲೀಸರು ಪತ್ತೆ ಮಾಡಬೇಕು ಹೇಳಿದ್ದಾರೆ.
ಇದನ್ನು ಓದಿ: ಬಿಜೆಪಿ ನಾಯಕನ ವಿರುದ್ಧ ಕಾನೂನು ಹೋರಾಟ ನಡೆಸುತ್ತಿದ್ದ ದಲಿತ ರೈತರಿಗೆ ‘ED’ಯಿಂದ ಸಮನ್ಸ್!