ಕಡಗಂಚಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯು ವಿನಾಕಾರಣ ಸುಳ್ಳು ಆರೋಪ ಮಾಡಿದ್ದು, ಮಾನಸಿಕ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿ ಬುಧವಾರ(ಏ.12)ದಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ವಿವಿಯ ಕನ್ನಡ ವಿಭಾಗದ ಸಂಶೋಧನಾ ವಿದ್ಯಾರ್ಥಿ ಅಸ್ವಸ್ಥಗೊಂಡಿದ್ದಾರೆ.
ಕೇಂದ್ರೀಯ ವಿಶ್ವ ವಿದ್ಯಾಲಯದ ಸಂಶೋಧನಾ ವಿಭಾಗದ ವಿದ್ಯಾರ್ಥಿ ನಂದಪ್ಪ ತನ್ನ ಮೇಲೆ ದಾಖಲಾಗಿರುವ ಸುಳ್ಳು ಪ್ರಕರಣಗಳು ಮತ್ತು ವಿಚಾರಣೆ ಹೆಸರಲ್ಲಿ ನೀಡುತ್ತಿರುವ ಮಾನಸಿಕ ಕಿರುಕುಳ ನಿಲ್ಲಿಸಬೇಕೆಂದು ಆಗ್ರಹಿಸಿ ಕಳೆದ ನಾಲ್ಕು ದಿನಗಳಿಂದ ಉಪವಾಸ ಸತ್ಯಾಗ್ರಹ ನಿರತ ವಿದ್ಯಾರ್ಥಿ ಅಸ್ವಸ್ಥಗೊಂಡಿದ್ದಾರೆ. ಅಸ್ವಸ್ಥ ವಿದ್ಯಾರ್ಥಿ ನಂದಪ್ಪನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಸಾಮಾಜಿಕ ಹೋರಾಟಗಾರ ನಟ ಚೇತನ್ ಅಹಿಂಸಾ ಅವರು ಸಂಶೋಧನಾ ವಿದ್ಯಾರ್ಥಿಯನ್ನು ಇಂದು ಭೇಟಿಯಾಗಿದ್ದು, ಆ ಬಗ್ಗೆ ಅವರು ಟ್ವೀಟ್ ಮಾಡಿದ್ದಾರೆ. ”ವಿಶ್ವವಿದ್ಯಾನಿಲಯದ ಪ್ರಾಬಲ್ಯದ ಶಕ್ತಿಗಳಿಂದ ಅವರು ಮತ್ತು ಬಹುಜನ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಾಂಸ್ಥಿಕ ಕಿರುಕುಳವನ್ನು ವಿರೋಧಿಸಿ 5 ದಿನಗಳ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ವಿದ್ಯಾರ್ಥಿ ಹೋರಾಟಗಾರ ನಂದ ಕುಮಾರ್ ಅವರನ್ನು ನಾನು ಇಂದು ಕಲ್ಬುರ್ಗಿಯಲ್ಲಿ ಭೇಟಿಯಾದೆ. ನಂದ ಕುಮಾರ್ ಅವರ ಪಕ್ಕದಲ್ಲಿ ಬಾಬಾಸಾಹೇಬ್ ಮತ್ತು ಬಸವನ ಪುಸ್ತಕಗಳಿದ್ದವು – ಸತ್ಯವು ಮೇಲುಗೈ ಸಾಧಿಸುತ್ತದೆ” ಎಂದು ತಿಳಿಸಿದ್ದಾರೆ.
Today in Kalburgi, I met equalitarian student activist Nanda Kumar who is on a 5-day hunger strike opposing the institutional targeting he & Bahujan students have been facing from university’s hegemonic forces
Nanda had books on Babasaheb & Basava by his side —truth will prevail pic.twitter.com/J9giZXlxEv
— Chetan Kumar Ahimsa / ಚೇತನ್ ಅಹಿಂಸಾ (@ChetanAhimsa) April 16, 2023
ಕಳೆದ ಕೆಲವು ದಿನಗಳಿಂದ ವಿಶ್ವವಿದ್ಯಾಲಯವು ಸುಳ್ಳು ಆರೋಪ ಮಾಡಿದ್ದು, ಪ್ರಕರಣ ದಾಖಲಿಸಿದೆ. ಅಷ್ಟೇ ಅಲ್ಲದೆ ಅನಾವಶ್ಯಕವಾಗಿ ಮಾನಸಿಕ ಕಿರುಕುಳ ನೀಡಲಾಗುತ್ತಿದೆ. ಇದರಿಂದ ವೈಯಕ್ತಿಕ ಕಾರಣಗಳಿಗೆ ಹೊರಗೆ ಓಡಾಡುವಾಗ ಅನಗತ್ಯವಾಗಿ ತೊಂದರೆ ಆಗುತ್ತಿದೆ. ಈ ಬಗ್ಗೆ ಆಡಳಿತ ಮಂಡಳಿಯ ಗಮನಕ್ಕೆ ತಂದರೂ ಯಾವುದೇ ರೀತಿಯ ಪ್ರಯೋಜನವಾಗಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.
ಕೆಲವು ದಿನಗಳಿಂದ ಎಬಿವಿ ಮತ್ತು ಆರ್ಎಸ್ಎಸ್ನಂತಹ ಸಂಘಟನೆಗಳಿಂದ ನನಗೆ ಹಿಂಸೆಯಾಗಿದೆ. ನನ್ನ ಜೊತೆ ಇನ್ನು ಇಬ್ಬರು ಸ್ನೇಹಿತರ ಮೇಲೂ ಸುಳ್ಳು ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಇದನ್ನೂ ಓದಿ: ಐಐಟಿ ಬಾಂಬೆ ದಲಿತ ವಿದ್ಯಾರ್ಥಿಯ ಸಾವಿಗೆ ಜಾತಿ ತಾರತಮ್ಯ ಕಾರಣವಲ್ಲ; ವಿಚಾರಣಾ ಸಮಿತಿ ವರದಿ
ಈ ಬಗ್ಗೆ ಮಾಧ್ಯಮದವರ ಜೊತೆ ಮಾತನಾಡಿದ ಅವರು, ”ನನ್ನ ಮೇಲೆ ಸುಳ್ಳು ಆರೋಪಗಳನ್ನು ಮಾಡುವುದಲ್ಲದೆ, ‘ಹೊರಗೆ ಸಿಗು ನೋಡಿಕೊಳ್ಳುತ್ತೇವೆ’ ಎಂದು ಕೊಲೆ ಬೆದರಿಕೆ ಹಾಕುತ್ತಿದ್ದಾರೆ. ಕಾಲೇಜಿನ ಆಡಳಿತ ಮಂಡಳಿಯೂ ಅವರ ಪರವಾಗಿಯೇ ಇದೆ. ಆಡಳಿತ ಮಂಡಳಿಗೆ ನಾನೂ ಕೂಡ ದೂರು ನೀಡಿದ್ದು, ಕೆಲವು ಸಂಘಟನೆಗಳವರು ಅನಾವಶ್ಯಕವಾಗಿ ನನಗೆ ಕಿರುಕುಳ ನೀಡುತ್ತಿದ್ದಾರೆ. ನನ್ನ ಮೇಲಿನ ಆರೋಪಗಳು ಸುಳ್ಳು. ವಿಚಾರಣೆ ನಡೆಸಿ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ನನಗೆ ನ್ಯಾಯ ದೊರೆಯುವವರೆಗೂ ಉಪವಾಸ ಸತ್ಯಾಗ್ರಹ ಮಾಡುತ್ತೇನೆಂದು ಈ ಮೊದಲೇ ತಿಳಿಸಿದ್ದೇನೆ” ಎಂದು ಹೇಳಿಕೊಂಡಿದ್ದಾರೆ.
”ಸಂಶೋಧನಾ ವಿದ್ಯಾರ್ಥಿ ನರೇಂದ್ರ ಕುಮಾರ್ ಸುಳ್ಳು ಆರೋಪ ಮಾಡಿ ನನ್ನ ವಿರುದ್ಧ ದೂರು ಸಲ್ಲಿಸಿದ್ದರು. ಶಿಸ್ತುಪಾಲನಾ ಸಮಿತಿಯು ವಿಚಾರಣೆಯ ವಿದ್ಯಾರ್ಥಿ ಕಲ್ಯಾಣ ಅಧಿಕಾರಿ ಅನುಪಸ್ಥಿತಿಯಲ್ಲಿ ಅಸಂಬದ್ಧ ಪ್ರಶ್ನೆಗಳನ್ನು ಕೇಳಿ ಗಂಟೆಗಟ್ಟಲೆ ವಿಚಾರಣೆ ನಡೆಸಿತು” ಎಂದು ಹೇಳಿದ್ದಾರೆ.
”ಶಿಸ್ತುಪಾಲನಾ ಅಧಿಕಾರಿಗಳು ವಿಚಾರಣೆ ವೇಳೆ, ದೂರಿಗೆ ಸಂಬಂಧಿತ ವಿಷಯಗಳನ್ನು ಕೇಳುವ ಹೊರತಾಗಿ ವೈಯಕ್ತಿಕ ವಿಚಾರಗಳ ಬಗ್ಗೆ ಕೇಳುತ್ತಾರೆ. ‘ನೀನು ಬೇರೆ ರಾಜ್ಯದವನಂತೆ ಕಾಣುತ್ತೀಯ, ದನದ ಮಾಂಸ ತಿನ್ನುತ್ತೀಯ. ಅದನ್ನು ಎಲ್ಲಿಂದ ತರ್ತೀರಾ’ ಎಂದು ನಿಂದಿಸುತ್ತಾರೆ. ಅನಗತ್ಯವಾಗಿ ಮಾನಸಿಕ ಹಿಂಸೆ ಕೊಡುತ್ತಿದ್ದಾರೆ” ಎಂದು ನೋವು ತೋಡಿಕೊಂಡಿದ್ದಾರೆ.
”ವಿಶ್ವವಿದ್ಯಾಲಯದ ಕ್ಯಾಂಪಸ್ ಆವರಣ ಗಿಡ-ಮರಗಳಿಗೆ ಈಚೆಗೆ ಬೆಂಕಿ ತಗುಲಿತ್ತು. ಅದರ ಆರೋಪವನ್ನು ನನ್ನ ಮೇಲೆ ಹೊರಿಸಲಾಗಿದೆ. ಕಿರುಕುಳ ಕೊಟ್ಟು ಮಾನಸಿಕ ಒತ್ತಡ ನೀಡಲಾಗುತ್ತಿದೆ. ಇದರಿಂದಾಗಿ ಸಂಶೋಧನ ಕಾರ್ಯಗಳಿಗೂ ತೊಂದರೆ ಆಗುತ್ತಿದೆ. ಇದನ್ನು ಇಲ್ಲಿಗೆ ನಿಲ್ಲಿಸಬೇಕು. ಇಲ್ಲದಿದ್ದರೆ ಕಾನೂನಿನ ಹೋರಾಟ ನಡೆಸಲಾಗುವುದು” ಎಂದು ಎಚ್ಚರಿಕೆ ನೀಡಿದ್ದಾರೆ.