40 ಸೈನಿಕರು ಹುತಾತ್ಮರಗಲು ಕಾರಣವಾದ ಪುಲ್ವಾಮ ದಾಳಿಯು 2019ರ ಚುನಾವಣೆ ಗೆಲ್ಲಲ್ಲು ಬಿಜೆಪಿ ನಡೆಸಿದ ಪಿತೂರಿಯೇ ಎಂದು ಶಿವಸೇನೆ ಉದ್ಧವ್ ಠಾಕ್ರೆ ಬಣದ ಸಂಸದ ಸಂಜಯ್ ರಾವತ್ ಪ್ರಶ್ನಿಸಿದ್ದಾರೆ. ಕೂಡಲೇ ಬಿಜೆಪಿ ಸರ್ಕಾರದ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಮಾಜಿ ಗವರ್ನರ್ ಸತ್ಯಪಾಲ್ ಮಲಿಕ್ ಸಂದರ್ಶನವೊಂದರಲ್ಲಿ, ಪುಲ್ವಾಮಾ ಭಯೋತ್ಪಾದಕ ಘಟನೆಗೆ ಕಾರಣವಾದ ಲೋಪಗಳ ಬಗ್ಗೆ ಮಾತನಾಡದಂತೆ ಪ್ರಧಾನಿ ಮೋದಿ ನನ್ನನ್ನು ತಡೆದರು ಎಂಬ ಸ್ಪೋಟಕ ಹೇಳಿಕೆ ನಿಡಿದ್ದಕ್ಕೆ ಪ್ರತಿಯಾಗಿ ಸಂಜಯ್ ರಾವತ್ ಮೇಲಿನ ಹೇಳಿಕೆ ನೀಡಿದ್ದಾರೆ.
ನಾಗ್ಪುರದಲ್ಲಿ ಮಾತನಾಡಿದ ಸಂಜಯ್ ರಾವತ್, “ಈಗ ಸತ್ಯಪಾಲ್ ಮಲಿಕ್ ಏನು ಹೇಳಿದ್ದಾರೋ ಅದೇ ಪ್ರಶ್ನೆಗಳನ್ನು ಪುಲ್ವಾಮ ದಾಳಿಯ ನಂತರ ಪ್ರತಿಪಕ್ಷಗಳು ಕೇಳಿದವು, ಆದರೆ ಆಡಳಿತಾರೂಢ ಬಿಜೆಪಿಯು ದೇಶದ್ರೋಹಿಗಳು ಮತ್ತು ಪಾಕಿಸ್ತಾನದ ರೀತಿಯಲ್ಲಿ ಮಾತನಾಡುತ್ತಿದ್ದಾರೆ ಎಂದು ಆರೋಪಿಸುವ ಮೂಲಕ ಮೌನಗೊಳಿಲಸಿತು” ಎಂದಿದ್ದಾರೆ.
“ಸತ್ಯ ಪಾಲ್ ಮಲಿಕ್ ಅವರು ಪುಲ್ವಾಮ ಸ್ಫೋಟಕ್ಕಿಂತ ದೊಡ್ಡ ಸ್ಫೋಟಕ ಸತ್ಯವನ್ನು ಹೊರತಂದಿದ್ದಾರೆ. ಆದರೆ ಇದು ಹೊಸದೇನಲ್ಲ. ಕೆಲವು ಭಾರತ-ಪಾಕಿಸ್ತಾನದ ಘಟನೆಗಳು ರಾಜಕೀಯ ಲಾಭಕ್ಕಾಗಿ ತಯಾರಿಸಲ್ಪಡುತ್ತವೆ ಎಂದು ಜನರು ಆ ಸಮಯದಲ್ಲಿ ತಿಳಿದಿದ್ದರು. ಚುನಾವಣೆ ಗೆಲ್ಲುವ ಉದ್ದೇಶದಿಂದ ಉಗ್ರರ ದಾಳಿ ನಡೆಸಲಾಗಿದೆಯೇ? ರಾಜಕೀಯ ಲಾಭಕ್ಕಾಗಿ 40 ಯೋಧರ ಹತ್ಯೆಗೆ ಸಂಚು ನಡೆದಿದೆಯೇ? ನಾವು ವಿರೋಧ ಪಕ್ಷಗಳು ಆ ಸಮಯದಲ್ಲಿ ಇಂತಹ ಪ್ರಶ್ನೆಗಳನ್ನು ಕೇಳಲು ಪದೇ ಪದೇ ಪ್ರಯತ್ನಿಸಿದ್ದೆವು. ಆದರೆ ಆಡಳಿತ ಪಕ್ಷದಿಂದ ಬಾಯಿ ಮುಚ್ಚಲಾಯಿತು ಮತ್ತು ನಮ್ಮನ್ನು ‘ದೇಶದ್ರೋಹಿಗಳು’ ಎಂದು ಬ್ರಾಂಡ್ ಮಾಡಲಾಯಿತು” ಎಂದು ಅವರು ಹೇಳಿದ್ದಾರೆ.
ಭಾರೀ ಬಿಗಿ ಭದ್ರತೆಯ ನಡುವೆಯೂ ಆರ್ಡಿಎಕ್ಸ್ ಪುಲ್ವಾಮ ತಲುಪಿದ್ದು ಹೇಗೆ? ಭದ್ರತಾ ಸಿಬ್ಬಂದಿ ಎಂದಿಗೂ ಪುಲ್ವಾಮ ರಸ್ತೆಯಲ್ಲಿ ಪ್ರಯಾಣಿಸುವುದಿಲ್ಲ. ಹಾಗಾದರೆ ಸರ್ಕಾರ ಮತ್ತು ವಾಯುಪಡೆಯಿಂದ ಬೆಂಗಾವಲು ಪಡೆಗೆ ಏಕೆ ವಿಮಾನಗಳನ್ನು ನೀಡಲಿಲ್ಲ? ಈ ಅಪರಾಧಕ್ಕೆ ಮೋದಿ ಸರ್ಕಾರದ ಮೇಲೆ ದೇಶದ್ರೋಹದ ಪ್ರಕರಣ ದಾಖಲಿಸುವುದಲ್ಲದೆ, ಇದಕ್ಕೆ ಕಾರಣರಾದ ಮಂತ್ರಿಗಳನ್ನು “ಕೋರ್ಟ್ ಮಾರ್ಷಲ್” ಮಾಡಬೇಕು ಎಂದು ಸಂಜಯ್ ರಾವತ್ ಒತ್ತಾಯಿಸಿದ್ದಾರೆ.
ದಿ ವೈರ್ ಪತ್ರಕರ್ತ ಕರಣ್ ಥಾಪರ್ರವರಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ, “ಪುಲ್ವಾಮಾದಲ್ಲಿ ಸಿಆರ್ಪಿಎಫ್ ಬೆಂಗಾವಲು ಪಡೆಯ ಮೇಲಿನ ದಾಳಿಯು ಭಾರತೀಯ ಗುಪ್ತಚರ ಇಲಾಖೆಯ ಬಹುದೊಡ್ಡ ವೈಫಲ್ಯ ಮತ್ತು ನಿರ್ದಿಷ್ಟವಾಗಿ ಗೃಹ ಸಚಿವಾಲಯದ ಅಸಮರ್ಥತೆಯ ಪರಿಣಾಮವಾಗಿದೆ. ಆಗ ರಾಜನಾಥ್ ಸಿಂಗ್ ಗೃಹ ಸಚಿವರಾಗಿದ್ದರು. ಸಿಆರ್ಪಿಎಫ್ ತನ್ನ ಜವಾನರನ್ನು ಸಾಗಿಸಲು ವಿಮಾನವನ್ನು ಕೇಳಿತ್ತು. ಆದರೆ ಕೇಂದ್ರ ಗೃಹ ಸಚಿವಾಲಯ ಅದನ್ನು ನಿರಾಕರಿಸಿತು” ಎಂದು ಮಲಿಕ್ ದೂರಿದ್ದಾರೆ.
ದಾಳಿ ನಡೆದ ದಿನ ಸಂಜೆಯೇ ಪ್ರಧಾನಿ ಮೋದಿಯವರಿಗೆ ಈ ವೈಫಲ್ಯಗಳ ಬಗ್ಗೆ ತಿಳಿಸಿದೆ. ನಮ್ಮ ತಪ್ಪಿನಿಂದಾಗಿ 40 ಸೈನಿಕರು ಪ್ರಾಣ ಕಳೆದುಕೊಳ್ಳಬೇಕಾಯಿತು ಎಂದು ವಿವರಿಸಿದೆ. ಆದರೆ ಅವರು ಯಾರಿಗೂ ಹೇಳಬೇಡಿ, ಸುಮ್ಮನಿದ್ದುಬಿಡಿ ಎಂದರು. ಎನ್ಎಸ್ಎ ಅಜಿತ್ ದೋವಲ್ ಕೂಡ ನನ್ನ ಬಾಯಿ ಮುಚ್ಚಿಸಿದರು. ಆಗ ನನಗೆ ತಕ್ಷಣವೇ ಅರ್ಥವಾಯಿತು, ಅವರ ಉದ್ದೇಶ ಪಾಕಿಸ್ತಾನದ ಮೇಲೆ ದೋಷಾರೋಪ ಮಾಡಿ ಚುನಾವಣೆಯಲ್ಲಿ ಸರ್ಕಾರ ಮತ್ತು ಬಿಜೆಪಿಗೆ ಲಾಭ ಪಡೆಯುವುದಾಗಿತ್ತು ಎಂದು ಸತ್ಯಪಾಲ್ ಮಲಿಕ್ ಸಂದರ್ಶನದಲ್ಲಿ ಹೇಳಿದ್ದಾರೆ.
ಪುಲ್ವಾಮಾ ಘಟನೆಯಲ್ಲಿ 300 ಕೆಜಿ ಆರ್ಡಿಎಕ್ಸ್ ಸ್ಫೋಟಕಗಳನ್ನು ಹೊತ್ತ ಕಾರು ಪಾಕಿಸ್ತಾನದಿಂದ ಬಂದಿದ್ದು, ಜಮ್ಮು ಮತ್ತು ಕಾಶ್ಮೀರದ ರಸ್ತೆಗಳು ಮತ್ತು ಹಳ್ಳಿಗಳಲ್ಲಿ 10-15 ದಿನಗಳ ಕಾಲ ಯಾರಿಗೂ ಗೊತ್ತಾಗದಂತೆ ಮತ್ತು ಯಾರಿಗೂ ತಿಳಿಯದಂತೆ ಸಂಚರಿಸುತ್ತಿತ್ತು ಎಂದರೆ ಇದು ಗಂಭೀರ ಗುಪ್ತಚರ ವೈಫಲ್ಯ ಅಲ್ಲವೇ ಎಂದಿದ್ದಾರೆ.
ಭ್ರಷ್ಟಾಚಾರದ ವಿಷಯಕ ಕುರಿತು ಮಾತನಾಡಿದ ಅವರು, “ಹೈಡ್ರೋ ಎಲೆಕ್ಟ್ರಿಕ್ ಯೋಜನೆ ಮತ್ತು ರಿಲಯೆನ್ಸ್ ಇನ್ಸೂರೆನ್ಸ್ ಯೋಜನೆಗೆ ಅನುಮತಿ ಪಡೆಯಲು ಬಿಜೆಪಿ ಆರ್ಎಸ್ಎಸ್ ಮುಖಂಡ ರಾಮ್ ಮಾಧವ್ ಬಂದಿದ್ದರು. ಆ ಯೋಜನೆಗಳಿಗೆ ಸಹಿ ಹಾಕಿದ್ದರೆ ನನಗೆ 300 ಕೋಟಿ ಸಿಗುತ್ತದೆ ಎಂದು ಜನ ಮಾತನಾಡುತ್ತಿದ್ದರು. ಆದರೆ ನಾನು ಆ ತಪ್ಪು ಕೆಲಸ ಮಾಡಲಿಲ್ಲ. ರಾಮ್ ಮಾಧವ್ ಎಷ್ಟೇ ಪ್ರಯತ್ನ ಪಟ್ಟರೂ ನಾನು ಆ ಯೋಜನೆಗಳನ್ನು ಜಾರಿಗೊಳಿಸಲಿಲ್ಲ ಎಂದಿದ್ದಾರೆ.
ಇದನ್ನೂ ಓದಿ: ಪುಲ್ವಾಮ ಕುರಿತು ಸತ್ಯಪಾಲ್ ಮಲಿಕ್ ಹೇಳಿಕೆಯಿಂದ ದೇಶವೇ ಬೆಚ್ಚಿಬಿದ್ದಿದೆ: ಕಾಂಗ್ರೆಸ್