ಸಾಮಾಜಿಕ ಪಿಡುಗೆಂದು ನಿರೂಪಿತವಾಗಿರುವ, ಪ್ರತಿಗಾಮಿ ಚಿಂತನೆ ಮತ್ತು ಕ್ರೂರ ಆಚರಣೆಯಾಗಿರುವ ವರದಕ್ಷಿಣೆ ಪದ್ದತಿಯನ್ನು ಪ್ರೋತ್ಸಾಹಿಸುವಂತಹ ಪಠ್ಯ ಪ್ರಕಟವಾಗಿರುವುದು ವಿವಾದಕ್ಕೆ ಕಾರಣವಾಗಿದೆ. ಈ ಪಠ್ಯ ಮುದ್ರಿಸಿದ ಪಠ್ಯ ಪುಸ್ತಕ ಸಮಿತಿ ವಿರುದ್ದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ರಾಷ್ಟ್ರೀಯ ಮಹಿಳಾ ಆಯೋಗವು ಮಾನವ ಸಂಪನ್ಮೂಲ ಸಚಿವ ಧರ್ಮೇಂದ್ರ ಪ್ರಧಾನ್ ಅವರಿಗೆ ಪತ್ರ ಬರೆದಿದೆ.
ಆ ಪುಸ್ತಕದ ಮುಖಪುಟದ ಪ್ರಕಾರ ಟಿ.ಕೆ ಇಂದ್ರಾಣಿಯವರು ಭಾರತೀಯ ನರ್ಸಿಂಗ್ ಕೌನ್ಸಿಲ್ ಪಠ್ಯಕ್ರಮದ ಪ್ರಕಾರ ಬರೆದಿರುವ ‘ನರ್ಸ್ಗಳಿಗಾಗಿ ಸಮಾಜಶಾಸ್ತ್ರದ ಪಠ್ಯಪುಸ್ತಕ’ದಲ್ಲಿ ವರದಕ್ಷಿಣೆಯ ಉಪಯೋಗಗಳು ಎಂಬ ಪಠ್ಯ ಪ್ರಕಟವಾಗಿದೆ. ಅಪರ್ಣ ಎಂಬ ಟ್ವಿಟರ್ ಬಳಕೆದಾರರು ಇದನ್ನು ಪೋಸ್ಟ್ ಮಾಡಿದ ನಂತರ ವಿವಾದದ ಕಿಡಿ ಹೊತ್ತಿದೆ.
‘ವರದಕ್ಷಿಣೆಯ ಉಪಯೋಗಗಳು’ ಎಂಬ ಶೀರ್ಷಿಕೆಯಲ್ಲಿ ಹೆಣ್ಣು ಮಗಳೊಬ್ಬಳು ತಮ್ಮ ಪೋಷಕರಿಂದ ಆಸ್ತಿಯಲ್ಲಿ ಪಡೆಯುವ ಪಾಲನ್ನು ವರದಕ್ಷಿಣೆ ಎಂದು ಕರೆಯಲಾಗುತ್ತದೆ ಎಂದು ವಿವರಿಸಲಾಗಿದೆ. ಮುಂದುವರೆದು “ಹೊಸ ಸಂಸಾರ ಸ್ಥಾಪನೆಗೆ ವರದಕ್ಷಿಣೆ ಸಹಕಾರಿ. ಮನೆಯ ಸಾಮಾನುಗಳಾದ ಮಂಚ, ಹಾಸಿಗೆ, ಟಿವಿ, ಫ್ಯಾನ್, ರೆಫ್ರಿಜರೇಟರ್, ಪಾತ್ರೆಗಳು, ಬಟ್ಟೆಗಳು ಮತ್ತು ವಾಹನವನ್ನು ಸಹ ವರದಕ್ಷಿಣೆಯಾಗಿ ನೀಡುವ ಪದ್ಧತಿ ನಮ್ಮ ಭಾರತದ ಅನೇಕ ಭಾಗಗಳಲ್ಲಿ ಕಂಡುಬರುತ್ತದೆ” ಎಂದು ಬರೆಯಲಾಗಿದೆ.
College textbook in India. pic.twitter.com/LOM4grizJq
— Aparna (@chhuti_is) April 3, 2022
ಪ್ರಚಲಿತದಲ್ಲಿರುವ ವರದಕ್ಷಿಣೆ ಪಿಡುಗಿನ ಬಗ್ಗೆ ಈ ಪಠ್ಯವು ವಿದ್ಯಾರ್ಥಿಗಳಿಗೆ ತಪ್ಪು ಸಂದೇಶವನ್ನು ರವಾನಿಸುತ್ತದೆ ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಕಿಡಿಕಾರಿದ್ದಾರೆ. ಮಾನವ ಸಂಪನ್ಮೂಲ ಸಚಿವರು ಕೂಡಲೇ ಮಧ್ಯಪ್ರವೇಶಿಸಿ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಅಲ್ಲದೆ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ರವರಿಗೆ ಸಹ ಪತ್ರ ಬರೆದಿದ್ದು, ಭಾರತೀಯ ನರ್ಸಿಂಗ್ ಕೌನ್ಸಿಲ್ ಈ ಪಠ್ಯಕ್ಕೆ ಹೇಗೆ ಅನುಮತಿ ನೀಡಿದೆ ಎಂಬುದರ ಕುರಿತು ತನಿಖೆ ನಡೆಸಿ ವರದಿ ನೀಡುವಂತೆ ಆಗ್ರಹಿಸಿದ್ದಾರೆ.
ಈ ಹಿಂದೆ ಬೆಂಗಳೂರಿನ ಇಂಜಿನಿಯರಿಂಗ್ ಓದುತ್ತಿದ್ದ ಯುವತಿಯೊಬ್ಬಳು ಡೌರಿಯ ಅನುಕೂಲಗಳು ಎಂಬ ಬರಹವನ್ನು ಹಂಚಿಕೊಂಡು ವಿವಾದ ಎಬ್ಬಿಸಿದ್ದರು. ಈಗ ಅಂತಹ ಅನಾಹುತವನ್ನು ಶಿಕ್ಷಣ ಸಂಸ್ಥೆಗಳೆ ಎಸಗಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
ವರದಕ್ಷಿಣೆ ಎಂಬ ಅನಿಷ್ಟ ಪದ್ದತಿ
ಇಂದಿಗೂ ಭಾರತ ದೇಶದಲ್ಲಿ ಒಂದು ವರ್ಷಕ್ಕೆ ಸುಮಾರು 8,000 ಮಂದಿ ವರದಕ್ಷಿಣೆ ಪದ್ದತಿಗೆ ಬಲಿಯಾಗುತ್ತಿದ್ದಾರೆ. ಇದು ಕೇವಲ ಅಧಿಕೃತವಾಗಿ ವರದಿಯಾಗಿರುವುದು. ಆದರೆ ದಾಖಲಾಗದ ಸಾವಿರಾರು ಪ್ರಕರಣಗಳ ಅಂಕಿ-ಅಂಶಗಳು ಲಭ್ಯವಾಗುವುದಿಲ್ಲ. ಆತಂಕಕಾರಿ ವಿಷಯವೆಂದರೆ, 1930 ರಲ್ಲಿ 40% ಮದುವೆಗಳಲ್ಲಿ ವರದಕ್ಷಿಣಿ ನೀಡಲಾಗುತ್ತಿತ್ತು. ಆದರೆ 2000 ರಲ್ಲಿ ದೇಶದಲ್ಲಿ ನಡೆಯುವ ಶೇ.90 ರಷ್ಟು ಮದುವೆಗಳಲ್ಲಿ ವಧುವಿನ ಕಡೆಯವರು ವರನಿಗೆ ವರದಕ್ಷಿಣೆ ನೀಡುತ್ತಿದ್ದಾರೆ. ಈ ವರದಕ್ಷಿಣಿಯಿಂದ ಉಂಟಾಗುವ ಅನಾಹುತಗಳು ಬರಿ ಸಾವು, ದೌರ್ಜನ್ಯವಲ್ಲ. ಹೆಣ್ಣು ಭ್ರೂಣ ಹತ್ಯೆ, ಹೆಣ್ಣು ಶಿಶುಗಳ ಹತ್ಯೆಗೆ ಕಾರಣವಾಗುತ್ತದೆ. ಒಟ್ಟಾರೆಯಾಗಿ ಹೇಳುವುದಾದರೆ ಅದು ಭ್ರಷ್ಟತೆಯನ್ನು ಬೆಂಬಲಿಸಿದಂತೆ..
ಕೇರಳದಲ್ಲಿ ಇತ್ತಿಚೆಗೆ ಮೂವರು ಯುವತಿಯರು ವರದಕ್ಷಿಣಿಗೆ ಬಲಿಯಾದ ಬಳಿಕ ಪ್ರಕರಣಗಳ ವಿಚಾರಣೆಗೆ, ತನಿಖೆಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿಶೇಷ ತನಿಖಾ ದಳ ರಚಿಸಿದ್ದಾರೆ. ’ಲಿಂಗಸಮಾನತೆಯನ್ನು ಮಕ್ಕಳ ಮನಸ್ಸಿನಲ್ಲಿ ಇಳಿಸುವ ಸಲುವಾಗಿ ಕೇರಳದ ಪಠ್ಯಪುಸ್ತಕಗಳನ್ನು ಪರಿಷ್ಕರಿಸಲಾಗುತ್ತದೆ. ಮಹಿಳೆಯರಿಗೆ ಅಗೌರವ ತೋರುವ ಪದಗಳು ಮತ್ತು ನುಡಿಗಟ್ಟುಗಳನ್ನು ತೆಗೆದುಹಾಕಲಾಗುತ್ತದೆ. ಶಾಲಾ-ಕಾಲೇಜುಗಳನ್ನು ಲಿಂಗಸಮಾನತೆಯ ಮತ್ತು ಸಮಾನ ಹಕ್ಕುಗಳ ತಾಣಗಳಾಗಿ ಪರಿವರ್ತಿಸಲು ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.
’ಒಂದು ಸಮಾಜವಾಗಿ, ನಾವು ಚಾಲ್ತಿಯಲ್ಲಿರುವ ವಿವಾಹ ವ್ಯವಸ್ಥೆಯನ್ನು ಸುಧಾರಿಸಬೇಕಾಗಿದೆ. ಮದುವೆಯು ಕುಟುಂಬದ ಸಾಮಾಜಿಕ ಸ್ಥಾನಮಾನ ಮತ್ತು ಸಂಪತ್ತಿನ ಆಡಂಬರದ ಪ್ರದರ್ಶನವಾಗಿರಬಾರದು. ಅನಾಗರಿಕ ವರದಕ್ಷಿಣೆ ಪದ್ಧತಿಯು ನಮ್ಮ ಹೆಣ್ಣುಮಕ್ಕಳನ್ನು ಸರಕುಗಳಂತೆ ಪರಿಗಣಿಸುತ್ತದೆ ಎಂಬುದನ್ನು ಪೋಷಕರು ಅರಿತುಕೊಳ್ಳಬೇಕು. ನಾವು ಅವರನ್ನು ಮಾನವರಂತೆ ಉತ್ತಮವಾಗಿ ಪರಿಗಣಿಸಬೇಕು” ಎಂದಿದ್ದಾರೆ.
ಇದನ್ನೂ ಓದಿ; 1930 ಕ್ಕೆ ಹೋಲಿಸಿದರೆ ಈಗ ವರದಕ್ಷಿಣೆ 90% ಹೆಚ್ಚಳವಾಗಿದೆ: ಕಾರಣವೇನು?
ಮನುವಾದಿಗಳು, ಮಹಿಳಾ ವಿರೋಧಿಗಳು ಎಂಬುದು ಮತ್ತೊಮ್ಮೆ ಸಾಕ್ಷ್ಯಾಧಾರಗಳ ಸಮೇತ ಸಾಬೀತಾಗಿದೆ.