Homeಮುಖಪುಟವಲಸೆಯ ವ್ಯಥೆ-3: ‘ನಾನು ಇದೇ ದೇಶದ ಪ್ರಜೆ ತಾನೆ? ಅದನ್ನು ನಾನು ‘ಆಧಾರಸಹಿತ’ ಸಾಬೀತು ಮಾಡಬೇಕೆ?’

ವಲಸೆಯ ವ್ಯಥೆ-3: ‘ನಾನು ಇದೇ ದೇಶದ ಪ್ರಜೆ ತಾನೆ? ಅದನ್ನು ನಾನು ‘ಆಧಾರಸಹಿತ’ ಸಾಬೀತು ಮಾಡಬೇಕೆ?’

ವಲಸೆ ಕಾರ್ಮಿಕರು ತಮ್ಮ ಸ್ಥಳಗಳಿಗೆ ತಲುಪಲು ಸಹಾಯ ಮಾಡುವುದಕ್ಕಾಗಿ ಆರಂಭವಾದ ಕರ್ನಾಟಕ ಜನಶಕ್ತಿ ಹೆಲ್ಫ್‌ಲೈನ್‌ನ ಭಾಗವಾದ ಮಲ್ಲಿಗೆ ಸಿರಿಮನೆಯವರು ತಮ್ಮ ಅನುಭವಕ್ಕೆ ಬಂದ ಕಾರ್ಮಿಕರ ವಸಲೆಯ ವ್ಯಥೆಗಳನ್ನು ಇಲ್ಲಿ ದಾಖಲಿಸಿದ್ದಾರೆ.

- Advertisement -
- Advertisement -

ಅಸ್ಸಾಂನ ರಾಜಧಾನಿ ಮತ್ತು ಸುಂದರ ಪಟ್ಟಣವಾದ ಗೌಹಾಟಿಯ ಅರಬಿಂದೋ ಕನ್ವರ್ 20 ವರ್ಷದ ಯುವಕ. ಇದೇ ಫೆಬ್ರವರಿ ತಿಂಗಳಿನಲ್ಲಷ್ಟೇ ಬೆಂಗಳೂರಿಗೆ ಬಂದ. ಕಟ್ಟಡ ಕಾರ್ಮಿಕನಾಗಿ ಸಿಫ್ಲೋ ಎಂಬ ಬೃಹತ್ ನಿರ್ಮಾಣ ಕಂಪೆನಿಯಲ್ಲಿ ಕೆಲಸಕ್ಕೆ ಸೇರಿದ. ಇದೇ ಕಂಪೆನಿಯಲ್ಲಿ ಈತನ ತಂದೆ ಪ್ರಥಮ್ ಕನ್ವರ್ ಕಳೆದ ಎರಡು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ.

ಈ ಕಂಪೆನಿಯ ಪ್ರಮುಖ ಕೆಲಸದ ಕ್ಷೇತ್ರ ದೊಡ್ಡ ಕಟ್ಟಡಗಳ ಛಾವಣಿಯನ್ನು ಜೋಡಿಸುವುದು. ಬಹುಮಹಡಿ ಕಟ್ಟಡಗಳ ಅತಿಯಾದ ಎತ್ತರದ ಮೇಲೆ ನಿಂತು, ಅವುಗಳ ಮೇಲ್ಛಾವಣಿಯನ್ನು (ಸೀಲಿಂಗ್) ಜೋಡಿಸುವ ಅತ್ಯಂತ ಅಪಾಯಕಾರಿ ಮತ್ತು ಅಷ್ಟೇ ಕೌಶಲ್ಯಪೂರ್ಣ ಕೆಲಸಕ್ಕೆ ಇವರಿಗೆ ಸಿಗುವುದು ದಿನಕ್ಕೆ 250-350 ರೂ ಮಾತ್ರ.

ಈತನ ಹಾಗೆಯೇ ಉತ್ತರ ಭಾರತ ಮತ್ತು ಈಶಾನ್ಯ ರಾಜ್ಯಗಳಿಂದ ದುಡಿಯಲು ಬಂದ ನೂರಾರು ಕಾರ್ಮಿಕರು ಈ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಕಂಪೆನಿಯೇ ಮಾಡಿಕೊಟ್ಟ ಚಿಕ್ಕ ರೂಮುಗಳಲ್ಲಿ 8-10 ಮಂದಿ ಕಾರ್ಮಿಕರು ಇದ್ದುಕೊಂಡು, ಇಲ್ಲಿನ ಬದುಕುವ ಖರ್ಚು ಕಳೆದು ಒಂದಷ್ಟನ್ನಾದರೂ ಉಳಿಸಿ ಊರಿಗೆ ಕಳಿಸುವ ಪ್ರಯತ್ನದಲ್ಲಿರುತ್ತಾರೆ.

ಅರಬಿಂದೋ ಇಂದ ನಮ್ಮ ಹೆಲ್ಪ್‌ಲೈನ್‌ಗೆ ಕರೆ ಬಂದಾಗ, ಅನೇಕ ಉತ್ತರ ಭಾರತದ ಕಾರ್ಮಿಕರಂತೆಯೇ ಈತನದ್ದೂ ಕೂಡಾ ‘ನಾವು ಯಾವಾಗ ಊರಿಗೆ ಹೋಗಲು ಸಾಧ್ಯ? ಸೇವಾ ಸಿಂಧು ಆಪ್ ನಲ್ಲಿ ಹೆಸರು ನೋಂದಣಿ ಮಾಡಿಸಲು ಪೊಲೀಸ್ ಠಾಣೆಯಲ್ಲಿ ಕೊಟ್ಟಿದ್ದೇವೆ, ನಮಗಿನ್ನೂ ನಮ್ಮ ಸರದಿ ನಂಬರ್ ಸಿಕ್ಕಿಲ್ಲ, ಯಾವಾಗ ಸಿಗುತ್ತದೆ? ಹೇಗಾದರೂ ನಮ್ಮನ್ನು ಊರಿಗೆ ಕಳಿಸಿ’ ಎಂಬ ಅಳಲು.

ಪೊಲೀಸ್ ಠಾಣೆಯಲ್ಲಿ ಕೊಟ್ಟಿದ್ದರೆ ಆಗುತ್ತದೆ, ಸ್ವಲ್ಪ ಕಾದು ನೋಡಿ ಎಂಬ ನಮ್ಮ ಧೈರ್ಯ ತುಂಬುವ ಮಾತುಗಳಿಂದ ಸ್ವಲ್ಪ ದಿನ ಸಮಾಧಾನಪಡಿಸುವ ಪ್ರಯತ್ನ ಮಾಡಿಯಾಯಿತು. ಆದರೆ, ಮತ್ತೆ ಮತ್ತೆ ಅರಬಿಂದೋನ ಕರೆ. ಕೊನೆಗೊಮ್ಮೆ, “ಎಲ್ಲ ಕಡೆ ಖಾಯಿಲೆ ಹರಡುತ್ತಿದೆ. ನಾನು ನಮ್ಮ ತಾಯಿಯೊಂದಿಗೆ ಇರಬೇಕೆನಿಸುತ್ತಿದೆ, ನನ್ನನ್ನು ದಯವಿಟ್ಟು ಕಳಿಸಿಕೊಡಿ” ಎನ್ನುತ್ತಾ ಅಕ್ಷರಶಃ ಆತ ಅಳಲಾರಂಭಿಸಿದಾಗ, ಕರುಳು ಚುರ್ ಎಂದಿತು.

ಪುಟ್ಟ ಮಗುವಿನಂತೆ ತಾಯಿಗಾಗಿ ಹಂಬಲಿಸುತ್ತಿರುವ ಈ ಹುಡುಗನನ್ನು ಊರಿಗೆ ಕಳಿಸಲೇಬೇಕೆಂದು ತೀರ್ಮಾನಿಸಿ, ಆತನ ‘ಸೇವಾ ಸಿಂಧು’ ನೋಂದಣಿಯನ್ನು ಹೆಲ್ಪ್‌ಲೈನ್‌ನ ವಾಲಂಟಿಯರ್ ಆದ ಸಾಫ್ಟ್ವೇರ್ ತಂತ್ರಜ್ಞ ಭರತ್ ಹೆಬ್ಬಾಳ್ ಪರಿಶೀಲಿಸಿದರು. ನೋಡಿದರೆ ಆತನ ನೋಂದಣಿ ಆಗಿರಲಿಲ್ಲ. ಅದನ್ನೂ ನಾವೇ ಮಾಡೋಣವೆಂದು ಅಂದುಕೊಂಡು ವಿವರಗಳನ್ನು ತುಂಬಿಸುತ್ತಾ ಬಂದೆವು. ಆಗ ನಮಗೆ ಸರ್ಕಾರದ ನೀತಿಗಳಲ್ಲಿರುವ ಉದ್ದೇಶಪೂರ್ವಕ ಅಡೆತಡೆಗಳ ಮತ್ತೊಂದು ಜೀವಂತ ಉದಾಹರಣೆ ಸಿಕ್ಕಿತು.

ಆಧಾರ್ ಸಂಖ್ಯೆ ಇಲ್ಲದೆ ಸೇವಾ ಸಿಂಧುವಿನಲ್ಲಿ ನೋಂದಣಿ ಸಾಧ್ಯವಿರಲಿಲ್ಲ; ಈಶಾನ್ಯ ರಾಜ್ಯಗಳ ಪ್ರಜೆಯಾದ ಅರಬಿಂಧೋ ಬಳಿ ಆಧಾರ್ ಕಾರ್ಡ್ ಇರಲಿಲ್ಲ! ಅವನೊಬ್ಬನೇ ಅಲ್ಲ, ಅಂತಹ ಹಲವು ಮಂದಿ ಇದ್ದಾರೆಂದು ತಿಳಿಯಿತು.

ಮೊದಮೊದಲಿಗೆ ವಲಸೆ ಕಾರ್ಮಿಕರ ಮರಳುವಿಕೆಗೆ ಸಂಬಂಧಿಸಿ ಬಂದ ಪ್ರಕಟಣೆಗಳನ್ನು ಹುಡುಕಿ ತೆಗೆದು ನೋಡಿದರೆ, ಅದರಲ್ಲಿ ಯಾವುದಾದರೊಂದು ಐಡಿ ಪ್ರೂಫ್ ಇದ್ದರೆ ಸಾಕು ಎಂದು ಹೇಳಲಾಗಿದೆ. ಆದರೆ, ಸೇವಾಸಿಂಧು ರಚನೆಯಲ್ಲಿ ಮಾತ್ರ ಆಧಾರ್ ಸಂಖ್ಯೆ ಇಲ್ಲದೆ ಮುಂದುವರೆಯಲು ಸಾಧ್ಯವಿಲ್ಲದಂತಹ ವ್ಯವಸ್ಥೆ ಮಾಡಲಾಗಿದೆ. ಸರಾಗವಾಗಿ ನಡೆಯಬಹುದಾದ ಪ್ರಕ್ರಿಯೆಯನ್ನು ಸಂಕೀರ್ಣಗೊಳಿಸಿ, ಒಂದಷ್ಟು ಮಂದಿ ಕಾರ್ಮಿಕರು ಈ ಕೂಡಲೇ ಮರಳಲು ಸಾಧ್ಯವಾಗದಂತಹ ಸ್ಥಿತಿ ಉಂಟುಮಾಡುವುದು ಬಿಟ್ಟು ಇದಕ್ಕೆ ಬೇರೇನಾದರೂ ತರ್ಕವಿರಲು ಸಾಧ್ಯವೇ?

ಅದರ ಬಗ್ಗೆ ಎಲ್ಲ ದಿಕ್ಕಿನಿಂದ ಪರಿಶೀಲನೆ ನಡೆಸಿ ಆಯಿತು. ಈ ಸಮಸ್ಯೆಯ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಗೆ ಹೋಗಿ ಪರಿಸ್ಥಿತಿ ವಿವರಿಸಿದೆವು; ಸರ್ಕಾರದ ಹಿರಿಯ ಅಧಿಕಾರಿಗಳನ್ನು ಮಾತಾಡಿಸಿದೆವು; ಅಷ್ಟೆಲ್ಲ ಮಾಡಿದ ನಂತರ ನಮಗೆ ಗೊತ್ತಾದದ್ದೇನೆಂದರೆ, ಅವರ‍್ಯಾರಿಗೂ ಈ ಬಗ್ಗೆ ಏನೂ ಮಾಹಿತಿ ಇರಲಿಲ್ಲ. ಅಷ್ಟಕ್ಕೂ ಹೆಚ್ಚಾಗಿ ಇದೊಂದಷ್ಟು ಮಂದಿ ಕಾರ್ಮಿಕರು ವಾಪಾಸ್ ಹೋಗದಿದ್ದರೆ ಯಾರ ಮನೆ ಕೊಚ್ಚಿಹೋಗುತ್ತದೆ ಎಂಬಂತಹ ಧೋರಣೆ ಕಂಡಿತು.

ಪೊಲೀಸ್ ಠಾಣೆಯ ಮುಂದೆ ಕಾರ್ಮಿಕರ ಉದ್ದನೆಯ ಸರತಿ ಸಾಲಿನಲ್ಲಿ ನಿಂತು, ತಾನೇ ಏನಾದರೂ ಮಾಡಲು ಸಾಧ್ಯವೇ ಎಂದು ಪ್ರಯತ್ನಿಸಲು ಹೋದ ಅರಬಿಂಧೋ ಒಂದು ದಿನ ಅವರಿಂದ ಲಾಠಿಯೇಟು ತಿಂದು ನಿರಾಶನಾಗಿ ಮರಳಿ ಬಂದ. ಕಣ್ಣಲ್ಲಿ ನೀರು ತುಂಬಿಕೊಂಡು “ನನ್ನ ಬಳಿ ವೋಟರ್ ಐಡಿ ಇದೆ, ರೇಷನ್ ಕಾರ್ಡ್ ಇದೆ, ಪಾನ್ ಕಾರ್ಡ್ ಇದೆ, ಡ್ರೈವಿಂಗ್ ಲೈಸನ್ಸ್ ಇದೆ…………. ಇವ್ಯಾವುವೂ ನನ್ನ ಗುರುತಿನ ಅಧಿಕೃತ ದಾಖಲೆಗಳಲ್ಲವೇ? ಇವೆಲ್ಲವುಗಳ ಪ್ರಕಾರ ನಾನು ಈ ದೇಶದ ಪ್ರಜೆಯಲ್ಲವೇ? ನಮ್ಮ ರಾಜ್ಯದಲ್ಲಿ ನಮಗೆ ಆಧಾರ್ ಯಾವುದಕ್ಕೂ ಬೇಕಿಲ್ಲ. ಅದನ್ನು ಕಡ್ಡಾಯ ಮಾಡಿಲ್ಲ. ಆದ್ದರಿಂದ ನಾನು ಮಾಡಿಸಿಕೊಂಡಿರಲಿಲ್ಲ; ಇಲ್ಲಿಗೆ ಬಂದು ದುಡಿಯುವಾಗ ಬೇಕಿಲ್ಲದ ಆಧಾರ್, ಈಗ ಮಾತ್ರ ಬೇಕಾಗಿದೆಯೇ? ನಾನು ಮಾತ್ರ ಯಾಕೆ ವಾಪಾಸ್ ಹೋಗಲು ಸಾಧ್ಯವಿಲ್ಲ”? ಎಂದ ಅರಬಿಂಧೋನ ಪ್ರಶ್ನೆಗಳಿಗೆ ನಮ್ಮಲ್ಲಿ ಉತ್ತರವಿರಲಿಲ್ಲ!

ಅವನ ಕಣ್ಣೀರು ಮುಖದ ಗುರುತನ್ನು ಮರೆಮಾಡುತ್ತಿದ್ದ ಮಾಸ್ಕ್‌ನೊಳಗೆ ಇಂಗಿಹೋಯಿತು. ದೇಶದ ಪ್ರಜೆಯಾಗಿ ತನ್ನ ಗುರುತಿನ ಬಗ್ಗೆ ಅವನ ಪ್ರಶ್ನೆಗಳು ದೇಶದ ಬಡವರನ್ನು ಇಲ್ಲದ ಸಮಸ್ಯೆಗಳ ಸುಳಿಗಳಿಗೆ ಸಿಲುಕಿಸುತ್ತಿರುವ ಪ್ರಭುತ್ವಗಳು ಹೆಣೆದಿರುವ ಚಕ್ರವ್ಯೂಹದಲ್ಲಿ ಇಂಗಿಹೋದವು!

ಹೇಗಾದರೂ ಮಾಡಿ ಅರಬಿಂದೋ ಮತ್ತು ಅಂತಹ ದುಡಿಮೆಗಾರರನ್ನು ಅವರೂರಿಗೆ ತಲುಪಿಸಲು ನಮ್ಮ ಪ್ರಯತ್ನ ಮುಂದುವರೆದಿದೆ……… ಅರಬಿಂದೋನ ಕಾಯುವಿಕೆಯಂತೆಯೇ ನಿರಂತರವಾಗಿ………
ಈ ಪ್ರಯತ್ನದಲ್ಲಿ ಯಶಸ್ಸುಗಳಿತ್ತೇವೆಂದು ನಂಬಲು ನಮಗೆ ಯಾವುದೇ ‘ಆಧಾರ’ಗಳಿಲ್ಲ; ಆದರೂ ಪ್ರಯತ್ನ ನಿಲ್ಲುವುದಿಲ್ಲ!!


ಇದನ್ನೂ ಓದಿ: ವಲಸೆಯ ವ್ಯಥೆ: ಈ ಮಹಾವಲಸೆಯ ಮಹಾಘಾತದ ಕೆಲವು ತುಣುಕುಗಳು ನಿಮ್ಮ ಮುಂದೆ..

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...