ಚಿಕ್ಕಬಳ್ಳಾಪುರ ತಾಲ್ಲೂಕು ಬ್ರಾಹ್ಮಣರ ಸಂಘವು ಇತ್ತೀಚೆಗೆ ಏರ್ಪಡಿಸಿದ್ದ ‘ನಿವೃತ್ತ ನೌಕರರಿಗೆ ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ’ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, “ಭಾರತವನ್ನು ಬೌದ್ಧಧರ್ಮದ ಅಪಾಯದಿಂದ ಕಾಪಾಡಿದ್ದು ಬ್ರಾಹ್ಮಣರ ಹೆಗ್ಗಳಿಕೆಯಾಗಿದೆ” ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಮುಖಂಡರಾದ ಡಾ.ಎಚ್.ಸಿ ಮಹದೇವಪ್ಪ ಮತ್ತು ಮಾಜಿ ಸಂಸದರಾದ ಆರ್.ಧ್ರುವನಾರಾಯಣ್ ಸುಧಾಕರ್ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.
“ಬೌದ್ಧಧರ್ಮದ ಅಪಾಯದಿಂದ ಭಾರತವನ್ನು ಕಾಪಾಡಿದ್ದು ಬ್ರಾಹ್ಮಣರ ಹೆಗ್ಗಳಿಕೆಯಾಗಿದೆ: ಡಾ.ಕೆ.ಸುಧಾಕರ್” ಎಂಬ ಶೀರ್ಷಿಕೆಯಲ್ಲಿ ‘ಸುವರ್ಣ ಪಾಲಾರ್’ ವರದಿ ಮಾಡಿದ್ದು, “ಬೌದ್ಧಧರ್ಮದ ಸುಳಿಗೆ ಸಿಕ್ಕ ವಿಶ್ವದ ನಾನಾ ದೇಶಗಳು ಆ ಧರ್ಮಕ್ಕೆ ಮತಾಂತರ ಆಗುತ್ತಿರುವಾಗ ಅದನ್ನು ತಡೆದು ಭಾರತೀಯ ಧರ್ಮವನ್ನು ಉಳಿಸಿದ ಕೀರ್ತಿ ಬ್ರಾಹ್ಮಣ ಸಮುದಾಯದ ಆದಿಶಂಕರಾಚಾರ್ಯರಿಗೆ ಸಲ್ಲುತ್ತದೆ” ಎಂದು ಸುಧಾಕರ್ ಹೇಳಿದ್ದಾರೆ.
“ವಿಜ್ಞಾನಕ್ಕೂ ಮೊದಲು ಮಾನವ ಸಮಾಜಕ್ಕೆ ದಿಕ್ಕುದೆಸೆ ತೋರಿ ಆಚಾರ್ಯ ಸ್ಥಾನದಲ್ಲಿರುವ ಬ್ರಾಹ್ಮಣ ಸಮುದಾಯ ಎಲ್ಲಾ ಸಮಾಜದ ಕಾರ್ಯಕ್ರಮಗಳಿಗೂ ನೈತಿಕ ಬಲ ತುಂಬಿ ಆಗುವಂತೆ ಮಾಡುವ ಶಕ್ತಿಯನ್ನು ಹೊಂದಿದೆ. ಇಂದು ಭಾರತೀಯ ಸಂಸ್ಕೃತಿ, ಆಚಾರ ವಿಚಾರ ವಿಶ್ವಮಾನ್ಯವಾಗಿದ್ದರೆ ಅದರ ಶ್ರೇಯ ಈ ಸಮುದಾಯಕ್ಕೆ ಸಲ್ಲಬೇಕು. ಈ ನಿಟ್ಟಿನಲ್ಲಿ ಸಾವಿರಾರು ವರ್ಷದಿಂದ ನಾಗರಿಕ ಸಮಾಜವನ್ನು ಸನ್ಮಾರ್ಗದಲ್ಲಿ ನಡೆಸುತ್ತಿರುವ ಬ್ರಾಹ್ಮಣ ಸಮುದಾಯವು ವಿಶೇಷ ಗೌರವ ಸ್ಥಾನವನ್ನು ಹೊಂದಿದೆ” ಎಂದು ಸುಧಾಕರ್ ತಿಳಿಸಿದ್ದಾರೆ.
“ಇಡೀ ದೇಶವೇ ಬೌದ್ಧಧರ್ಮವನ್ನು ಅಪ್ಪಿಕೊಳ್ಳುವ ಸಂದಿಗ್ಧ ಪರಿಸ್ಥಿತಿಯಲ್ಲಿ ನಮ್ಮ ಧರ್ಮ, ಸಂಸ್ಕೃತಿಗೆ ಎದುರಾಗಿದ್ದ ಅಪಾಯವನ್ನು ತಪ್ಪಿಸಿ ಭಾರತವನ್ನು ಭಾರತೀಯತೆಯನ್ನು ಉಳಿಸಿದ ಆದಿಶಂಕರಚಾರ್ಯರನ್ನು ನಾವು ಸ್ಮರಿಸಲೇಬೇಕು. ಈ ಸಾಲಿನಲ್ಲಿ ಮಧ್ವರು, ಶ್ರೀರಾಮಾನುಜಾಚಾರ್ಯರು ಸೇರಿದ್ದಾರೆ” ಎಂದು ಅಭಿಪ್ರಾಯಪಟ್ಟಿದ್ದಾರೆ.
ಮತ್ತೊಂದೆಡೆ, “ಬ್ರಾಹ್ಮಣರಿಗೆ ಪಾಳೇಗಾರರು, ರಾಜ ಮಹಾರಾಜರು ಬಹಳಷ್ಟು ಜಮೀನನ್ನು ಕೊಟ್ಟಿದ್ದರು. ಬ್ರಾಹ್ಮಣರ ಬಳಿ ಬಹಳಷ್ಟು ಜಮೀನು ಇತ್ತು. ಅದೆಲ್ಲವನ್ನೂ ಇಂದಿರಾ ಗಾಂಧಿಯವರು ವಾಪಸ್ ಕಿತ್ತುಕೊಂಡರು” ಎನ್ನುತ್ತಾ, ಉಳುವವನೇ ಭೂಮಿಯ ಒಡೆಯ ಕಾನೂನನ್ನು ಪ್ರಸ್ತಾಪಿಸುತ್ತಾರೆ. ಜೊತೆಗೆ ದೇವರಾಜ ಅರಸು ಅವರ ಹೆಸರನ್ನೂ ಸುಧಾಕರ್ ಹೇಳುತ್ತಾರೆ. “ನಿಮ್ಮ ಮಕ್ಕಳಿಗೆ ಉಳಿದಿರುವುದು ಜ್ಞಾನದ ಶಕ್ತಿಯಷ್ಟೇ” ಎನ್ನುತ್ತಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಸಂಸದ ಆರ್.ಧ್ರುವನಾರಾಯಣ್, “ಬುದ್ಧಿ ಇಲ್ಲದವರಿಗೆ ಬೌದ್ಧಧರ್ಮ ಅರ್ಥವಾಗುವುದಿಲ್ಲ, ಆದ್ದರಿಂದಲೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರಂತಹ ಅನಾರೋಗ್ಯ ಮನಸ್ಸಿನವರು ಬೌದ್ಧ ಧರ್ಮದ ಕುರಿತು ಅವಹೇಳನಕಾರಿಯಾಗಿ ಮಾತಾಡುತ್ತಾರೆ. ಅರ್ಟಿಕಲ್ 15 ಪ್ರಕಾರ ಯಾವುದೇ ಧರ್ಮ, ಜಾತಿ, ವ್ಯಕ್ತಿಯನ್ನು ನಿಂದಿಸುವುದು ಅಪರಾಧ. ಆದರೆ ಜವಾಬ್ದಾರಿ ಸ್ಥಾನದಲ್ಲಿರುವ ಸಚಿವರು ಇನ್ನೊಬ್ಬರನ್ನು ಮೆಚ್ಚಿಸಲು ಅವಹೇಳನ ಮಾಡಿದ್ದಾರೆ” ಎಂದು ಕಿಡಿಕಾರಿದ್ದಾರೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ವಿಶ್ವಸಂಸ್ಥೆ ಪ್ರವಾಸದ ವೇಳೆ ‘ನಾನು ಬುದ್ಧನ ನಾಡಿನಿಂದ ಬಂದವರೆಂದು’ ಹೇಳುತ್ತಾರೆ. ಆದರೆ ಕರ್ನಾಟಕದ ಅನಾರೋಗ್ಯ ಮಂತ್ರಿ ಬುದ್ಧಿ ಇಲ್ಲದಂತೆ ಮಾತಾಡುತ್ತಾರೆ.
ಬೌದ್ಧ ಧರ್ಮ ಭಾರತದಲ್ಲಿ ಹುಟ್ಟಿ ಹೊರ ದೇಶದಲ್ಲಿ ವಿಶಾಲವಾಗಿ ಬೆಳೆದಿದೆ. ಬೌದ್ಧ ಧಮ್ಮದ ಸಾರ ಪ್ರೀತಿ, ಕರುಣೆ, ದಯೆ, ಸೌಹಾರ್ದತೆ ಹಾಗೂ ವೈಜ್ಞಾನಿಕ ತಳಹದಿಯಿಂದ ಕೂಡಿದೆ. ನಿಂದಿಸುವವರು ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು. ಬುದ್ಧರು ಸ್ಥಾಪಿಸಿರುವ ಧಮ್ಮದ ಕುರಿತು ಅವಹೇಳನಕಾರಿಯಾಗಿ ಮಾತಾಡಿರುವ ಸಚಿವ ಡಾ.ಕೆ.ಸುಧಾಕರ್ ಕೂಡಲೇ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಪಕ್ಷದ ವತಿಯಿಂದ ಧರಣಿ ಹಮ್ಮಿಕೊಳ್ಳಲಾಗುತ್ತದೆಂದು ಧ್ರುವ ನಾರಾಯಣ ಅವರು ಎಚ್ಚರಿಕೆ ನೀಡಿದರು.
ಸುಧಾಕರ್ ಅವರಿಗೆ ತಮ್ಮ ನಿಲುವುಗಳನ್ನು ವ್ಯಕ್ತಪಡಿಸುವ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ. ಆದರೆ ಮಾನವನ ಘನತೆಗಾಗಿ, ಸಮಾನತೆಗಾಗಿ ಹೋರಾಡಿದ ಬೌದ್ಧಧರ್ಮದ ಕುರಿತು ಅಪಪ್ರಚಾರ ಮಾಡುವುದು ಅಕ್ಷ್ಯಮ್ಯವಲ್ಲವೇ? ಸುಧಾಕರ್ ಅವರ ಪ್ರಕಾರ ಬೌದ್ಧಧರ್ಮ ಈ ದೇಶದ ಜನರಿಗೆ ಮಾಡಿರುವ ಅನ್ಯಾಯವಾದರೂ ಏನು?
ಮಾಜಿ ಸಚಿವ ಎಚ್.ಸಿ.ಮಹದೇವಪ್ಪ ಅವರು ಸುಧಾಕರ್ ಹೇಳಿಕೆಯನ್ನು ಖಂಡಿಸಿದ್ದು, “ನಾನು ಸಚಿವ ಸುಧಾಕರ್ ಅವರನ್ನು ಅಷ್ಟೋ ಇಷ್ಟೋ ಇತಿಹಾಸ ಬಲ್ಲಂತಹ ಪ್ರಜ್ಞಾವಂತ ಎಂದುಕೊಂಡಿದ್ದೆ. ಆದರೆ ಈತ ಚುನಾವಣಾ ಸಂದರ್ಭದಲ್ಲಿ ಒಂದು ಸಮುದಾಯವನ್ನು ಓಲೈಸಲು, ಈ ದೇಶಕ್ಕೆ ಧರ್ಮದ ಮೂಲಕ ಸಮಾನತೆಯನ್ನು ಪರಿಚಯಿಸಿದ ಮತ್ತು ಸಾಮಾಜಿಕ ಮೇಲು ಕೀಳನ್ನು ಆಚರಿಸುತ್ತಿದ್ದ ಪುರೋಹಿತಶಾಹಿಗಳನ್ನು ತಿದ್ದಲು ಪ್ರಯತ್ನಿಸಿ ಕೊನೆಗೆ ಅವರಿಂದಲೇ ಕೊನೆಗೊಂಡ ಬೌದ್ಧ ಧರ್ಮದ ಬಗ್ಗೆ ಅಜ್ಞಾನದಿಂದ ಮಾತನಾಡುತ್ತಿರುವುದು ಖಂಡನೀಯ” ಎಂದಿದ್ದಾರೆ.
“ಬೌದ್ಧ ಧರ್ಮ ಸಮಾನತೆಯನ್ನು ನೀಡುವ ಸಲುವಾಗಿ ಮಹಾನ್ ಸಂತ ಬುದ್ಧನಿಂದ ಹಬ್ಬಿದ ಈ ದೇಶದ ಮೂಲ ನಿವಾಸಿಗಳ ಧರ್ಮ. ಬೌದ್ಧ ಧರ್ಮವು ತನ್ನ ಸಮ ಸಮಾಜದ ಕಲ್ಪನೆಯಲ್ಲಿ ಅಷ್ಟೊಂದು ಸ್ಪಷ್ಟವಾಗಿದ್ದ ಕಾರಣದಿಂದಲೇ ಬಾಬಾ ಸಾಹೇಬರು ಹಿಂದೂ ಧರ್ಮದ ಅಸಮಾನತೆಗಳ ವಿರುದ್ಧ ಸಿಡಿದೆದ್ದು ಬೌದ್ಧ ಧರ್ಮ ಸ್ವೀಕರಿಸಿದರು” ಎಂಬುದನ್ನು ಮಹದೇವಪ್ಪ ನೆನಪಿಸಿದ್ದಾರೆ.
“ಅಷ್ಟಕ್ಕೂ ಹಿಂಸಾ ಪ್ರವೃತ್ತಿಯನ್ನು ಕೈಬಿಟ್ಟು ಬೌದ್ಧ ಧರ್ಮವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ದವರು ಮೌರ್ಯರು. ಈ ಮೌರ್ಯ ವಂಶದ ಅರಸ ಬೃಹದ್ರಥನನ್ನು ಕೆಳಗಿಸಲು ಶೃಂಗರ ಅರಸ ಋಷ್ಯಶೃಂಗ ಏನು ಮಾಡಿದ ಮತ್ತು ಬೌದ್ಧರ ಚಹರೆಗಳನ್ನು ಹೇಗೆಲ್ಲಾ ಅಳಿಸಿ ಹಾಕಿದ ಎಂದು ಸುಧಾಕರ್ಗೆ ತಿಳಿದಿಲ್ಲ. ಅದೇ ಮಾರ್ಗವಾಗಿ ಬೌದ್ಧರಿಂದ ಆಯುರ್ವೇದವನ್ನು ಕಲಿತು ಕೊನೆಗೆ ಅವರಿಗೆ ತಿರುಗು ಬಾಣವಾದ ಪತಂಜಲಿಯ ಕುರಿತೂ ಸುಧಾಕರ್ ಓದಿಕೊಳ್ಳಲಿ” ಎಂದು ಸಲಹೆ ನೀಡಿದ್ದಾರೆ.
ಸುಮ್ಮನೇ ಇತಿಹಾಸ ತಿಳಿಯದೇ ಮಾತಾನಾಡುವುದು ಅಷ್ಟೊಂದು ಉಚಿತವಲ್ಲ, ಹಾಗೆ ನಿಮಗೆ ಬುದ್ದನ ಧರ್ಮದ ಹಿರಿತನದ ಬಗ್ಗೆ ತಿಳಿಯಬೇಕಿದ್ದರೆ, ಅಮೆರಿಕಾದಲ್ಲಿ ನಿಂತು, “ನಾನು ಬುದ್ದನ ನಾಡಿನಿಂದ ಬಂದಿದ್ದೇನೆ” ಎಂದು ಹೇಳಿದ ಪ್ರಧಾನಿ ಮೋದಿಯವರನ್ನೇ ನೀವು ಕೇಳಿ ತಿಳಿದುಕೊಳ್ಳುವುದು ಸೂಕ್ತ ಎಂಬುದು ನನ್ನ ಭಾವನೆ ಎಂದಿದ್ದಾರೆ.
ಇಷ್ಟು ಮಹದೇವಪ್ಪನವರ ಪ್ರತಿಕ್ರಿಯೆಯಾದರೆ, ಸುಧಾಕರ್ ಅವರಿಗೆ ಬುದ್ಧನ ಕುರಿತು ಏನೂ ಗೊತ್ತಿಲ್ಲವೆಂದಲ್ಲ. ಬುದ್ಧನನ್ನು ಬಣ್ಣಿಸಿ, ಬೌದ್ಧಧಮ್ಮ ಸ್ವೀಕರಿಸಿದ ಸಂವಿಧಾನಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ವರ್ಣಿಸಿ ಅವರು ಅನೇಕ ಸಲ ಮಾತನಾಡಿದ್ದಾರೆ.
Buddha Purnima Greetings to everyone. Lord Buddha is the greatest gift that India has given to the world. His was a life devoted to alleviating suffering and removing injustice from society. His compassion has endeared him to millions.#Buddhapurnima2020 pic.twitter.com/ZdcwSoaSwL
— Dr Sudhakar K (@mla_sudhakar) May 7, 2020
2020ರ ಮೇ 7ರಂದು ಬುದ್ಧನ ಪ್ರತಿಮೆಯೊಂದಿಗಿನ ತಮ್ಮ ಫೋಟೋಗಳನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದ ಅವರು ಬುದ್ಧ ಪೂರ್ಣಿಮೆಯ ಶುಭಾಶಯ ಕೋರಿದ್ದರು. “ಈ ಜಗತ್ತಿಗೆ ಭಾರತ ನೀಡಿದ ಅತಿದೊಡ್ಡ ಗಿಫ್ಟ್ ಲಾರ್ಡ್ ಬುದ್ಧ. ದುಃಖವನ್ನು ನಿವಾರಿಸಲು ಮತ್ತು ಸಮಾಜದಿಂದ ಅನ್ಯಾಯವನ್ನು ತೊಡೆದುಹಾಕಲು ಬುದ್ಧನ ಜೀವನ ಮೀಸಲಾಗಿತ್ತು…” ಎಂದಿದ್ದಾರೆ.
2020ರ ಏಪ್ರಿಲ್ 14ರಂದು ಬುದ್ಧನ ಮಹಾನ್ ಅನುಯಾಯಿಯಾದ ಅಂಬೇಡ್ಕರ್ ಅವರ ಕುರಿತು ಸುಧಾಕರ್ ಹೀಗೆ ಹೇಳುತ್ತಾರೆ: “ಅಂಬೇಡ್ಕರ್ ಈ ಜಗತ್ತು ಕಂಡ ಪರಮೋಚ್ಛ ಮನುಷ್ಯತ್ವವಾದಿ. ವಿಭಿನ್ನ ಸಂಸ್ಕೃತಿ, ನೂರಾರು ಜಾತಿ, ಸಾವಿರಾರು ಭಾಷೆ, ನಾಲ್ಕಾರು ಧರ್ಮಗಳನ್ನೊಳಗೊಂಡ ಭವ್ಯ ಭಾರತಕ್ಕೆ ಸಮಗ್ರವಾದ ಸಕಲರೂ ಒಪ್ಪುವಂಥ ಸಂವಿಧಾನವನ್ನು ಅಂಬೇಡ್ಕರ್ ಕೊಡದೇ ಇದಿದ್ದರೆ ನಾವೆಲ್ಲರೂ ಪರೋಕ್ಷವಾಗಿ ಮತ್ತೆ ದಾಸ್ಯಕ್ಕೆ ಒಳಪಡುತ್ತಿದ್ದೆವೇನೋ? ಅದೊಂದು ಘಟನೆ ನನಗೆ ಇನ್ನೂ ಕಾಡುತ್ತಿದೆ. 1927 ಮಾರ್ಚ್ 19, ಮಹಡ್ ನಗರದ ಚೌಡರ ಕೆರೆಯ ಚಳವಳಿ. ಅಸ್ಪೃಶ್ಯರಿಗೆ ನಿರಾಕರಣೆಯಿದ್ದ ಆ ಕೆರೆಯ ನೀರನ್ನು ಸಾವಿರಾರು ಮಂದಿ ಅಸ್ಪೃಶ್ಯರನ್ನು ಕರೆದುಕೊಂಡು ಬಂದು ಮುಟ್ಟಿ ಕುಡಿದರು. ಅಂಬೇಡ್ಕರ್ ಮತ್ತು ಅನುಯಾಯಿಗಳನ್ನು ಜಾತಿವಾದಿಗಳು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದರು. ಆದರೆ ಶಾಂತಿ ಕಾಯ್ದುಕೊಳ್ಳುವಂತೆ ಅಂಬೇಡ್ಕರ್ ನೀಡಿದ್ದ ಕರೆಯಿಂದ ಅಸ್ಪೃಶ್ಯರು ತಿರುಗಿ ಬೀಳಲಿಲ್ಲ….”- ಹೀಗೆ ಸುಧಾಕರ್ ಬಣ್ಣಿಸುತ್ತಾರೆ.
ಕಾಂಗ್ರೆಸ್ನಲ್ಲಿದ್ದಾಗ ಕೆ.ಸುಧಾಕರ್ ಅವರು ಬುದ್ಧ, ಅಂಬೇಡ್ಕರ್ ಅವರನ್ನು ಹೊಗಳಿದ್ದು ಮಾತ್ರವಲ್ಲ, ಬಿಜೆಪಿ ಸೇರಿ ಸಚಿವರಾದ ಬಳಿಕವೂ ಅವರು ಬುದ್ಧನನ್ನು ಹೊಗಳಿರುವುದನ್ನು ಕಾಣಬಹುದು. ಆದರೆ ಯಾರನ್ನು ಓಲೈಕೆ ಮಾಡಲು ಈಗ ಬುದ್ಧ ಧರ್ಮದ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡುತ್ತಿದ್ದಾರೆ? ಜಾತಿ ವ್ಯವಸ್ಥೆಯಿಂದ ಹೊರ ತರಲು ಹೋರಾಡಿದ ಬೌದ್ಧಧರ್ಮವನ್ನು ಪರೋಕ್ಷವಾಗಿ ಟೀಕಿಸಿ, ಶ್ರೇಣಿಕೃತ ವ್ಯವಸ್ಥೆಯನ್ನು ಸುಧಾಕರ್ ಪ್ರೋತ್ಸಾಹಿಸುತ್ತಿದ್ದಾರಾ? ಅಸ್ಪೃಶ್ಯತೆಯನ್ನು ತೊಡೆದು ಹಾಕಲು ಯತ್ನಿಸಿದ ಬುದ್ಧನನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವುದು ಅಸ್ಪಶ್ಯತೆ ಆಚರಣೆಯ ಭಾಗವಲ್ಲವೇ? ಅಸ್ಪೃಶ್ಯತೆಯನ್ನು ಆಚರಿಸುವುದು ಸಂವಿಧಾನದ 17ನೇ ವಿಧಿಯ ಉಲ್ಲಂಘನೆಯಲ್ಲವೇ?
ಇದನ್ನೂ ಓದಿರಿ: ರಾಷ್ಟ್ರಧ್ವಜಕ್ಕೆ ಅವಮಾನ ಆರೋಪ: ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್ ಪೂಂಜಾ ವಿರುದ್ಧ ದೂರು