ಸಂಸತ್ತಿನಲ್ಲಿ ಅವಿಶ್ವಾಸ ಗೊತ್ತುವಳಿ ಮಂಡನೆಗೆ ಪ್ರಧಾನಿ ನರೇಂದ್ರ ಮೋದಿಯವರು ನೀಡಿದ ಪ್ರತಿಕ್ರಿಯೆಯನ್ನು ಪ್ರತಿಪಕ್ಷಗಳು ಟೀಕಿಸಿದೆ. ಅವರು ಮಣಿಪುರ ಹಿಂಸಾಚಾರದ ಬಗ್ಗೆ 90 ನಿಮಿಷಗಳ ಕಾಲ ಭಾಷಣ ಮಾಡಿದರೂ ಮಾತನಾಡಲಿಲ್ಲ ಮತ್ತು ನಾವು ಸದನದಿಂದ ಹೊರನಡೆದ ನಂತರ ಮಾತ್ರ ವಿಷಯ ಪ್ರಸ್ತಾಪಿಸಿದ್ದಾರೆ ಎಂದು ವಿರೋಧ ಪಕ್ಷಗಳು ಟೀಕಿಸಿದೆ.
ಅವಿಶ್ವಾಸ ನಿರ್ಣಯಕ್ಕೆ ಪ್ರಧಾನಿ ಮೋದಿಯವರ ಉತ್ತರದ ಸಮಯದಲ್ಲಿ ಪ್ರತಿಪಕ್ಷ I.N.D.I.A ಯ ಸಂಸದರು ಲೋಕಸಭೆಯಿಂದ ಹೊರನಡೆದಿದ್ದಾರೆ.
ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಡೆರೆಕ್ ಒ’ಬ್ರೇನ್ ಅವರುಈ ಕುರಿತು ಟ್ವೀಟ್ ಮಾಡಿದ್ದು , 21 ದಿನಗಳ ಕಾಲ ತಲೆಮರೆಸಿಕೊಂಡ ನಂತರ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಎಳೆದುಕೊಂಡು ಲೋಕಸಭೆಗೆ ವಿಶ್ವಾಸಮತ ಯಾಚನೆಯೊಂದಿಗೆ ಬರುವಂತೆ ಮಾಡಬೇಕಾಯಿತು.ಮೊದಲ ಒಂದು ಗಂಟೆ ಭಾಷಣದಲ್ಲಿ, ಕಲ್ಲು ಹೃದಯದ ವ್ಯಕ್ತಿ ಮಣಿಪುರದ ಬಗ್ಗೆ ಒಂದು ಮಾತನ್ನು ಕೂಡ ಹೇಳಿಲ್ಲ ಎಂದು ಹೇಳಿದ್ದಾರೆ. ಯಾವುದೇ ಪ್ರಧಾನಿ ಮೋದಿಗಿಂತ ಹೆಚ್ಚು ಸಂಸತ್ತಿಗೆ ಅವಮಾನ ಮಾಡಿಲ್ಲ ಎಂದು ಡೆರೆಕ್ ಒಬ್ರಿಯಾನ್ ಹೇಳಿದ್ದಾರೆ.
ವಿರೋಧ ಪಕ್ಷವು ನಿರ್ಗಮಿಸಿದ ಮೂವತ್ತು ಸೆಕೆಂಡುಗಳಲ್ಲಿ, ಪ್ರಧಾನಿ ಮೋದಿ ಮಣಿಪುರದ ಬಗ್ಗೆ ಕೇವಲ ನಾಲ್ಕು ನಿಮಿಷಗಳ ಭಾಷಣದಲ್ಲಿ ತೊಡಗಿದರು ಎಂದು ಟಿಎಂಸಿ ಪ್ರಧಾನಿ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದೆ.
ಪ್ರಧಾನಿಯವರು ತಮ್ಮ ಭಾಷಣದಲ್ಲಿ ಪ್ರತಿಪಕ್ಷಗಳನ್ನು, ಮುಖ್ಯವಾಗಿ ಕಾಂಗ್ರೆಸ್ನ್ನು ತರಾಟೆಗೆ ತೆಗೆದುಕೊಂಡರು, “ಅವರಿಗೆ ಬಡವರ ಹಸಿವಿನ ಬಗ್ಗೆ ಚಿಂತೆ ಇಲ್ಲ, ಅಧಿಕಾರದ ಬಗ್ಗೆ ಮಾತ್ರ ಚಿಂತೆ” ಎಂದು ಹೇಳಿದರು.
ಮುಂದಿನ ವರ್ಷದ ಸಾರ್ವತ್ರಿಕ ಚುನಾವಣೆಯಲ್ಲಿ ತಮ್ಮ ಪಕ್ಷವು ಗೆಲ್ಲುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು ಮತ್ತು 2028ರಲ್ಲಿ ಮತ್ತೊಂದು ಅವಿಶ್ವಾಸ ನಿರ್ಣಯಕ್ಕೆ ಸಿದ್ಧರಾಗಿ ಬರಲು ಪ್ರತಿಪಕ್ಷಗಳನ್ನು ಲೇವಡಿ ಮಾಡಿದರು.
ಮಣಿಪುರ ಕುರಿತು ಮಾತನಾಡಿದ ಪ್ರಧಾನಿ ಮೋದಿ, ಇಡೀ ದೇಶವು ಮಣಿಪುರದೊಂದಿಗೆ ಇದೆ ಮತ್ತು ರಾಜ್ಯದಲ್ಲಿ ಶಾಂತಿ ಮರುಸ್ಥಾಪಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಟ್ಟಾಗಿ ಕೆಲಸ ಮಾಡುತ್ತಿವೆ ಎಂದು ಹೇಳಿದರು.
ಪ್ರಧಾನಿ ಮೋದಿಯವರಿಗೆ ಕಾಂಗ್ರೆಸ್ ನ ಭಯ ಆವರಿಸಿದೆ ಮತ್ತು ಅದಕ್ಕಾಗಿಯೇ ಅವರು ಲೋಕಸಭೆಯಲ್ಲಿ ಮಾಡಿದ ಭಾಷಣದುದ್ದಕ್ಕೂ ಪಕ್ಷವನ್ನು ಟೀಕಿಸಿದರು ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ. ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ಮಾತನಾಡಿ, ಪ್ರಧಾನಿ ಅವರು ಎರಡು ಗಂಟೆಗಳ ಕಾಲ ಮಾತನಾಡಿದ್ದಾರೆ. ಈ ಸಮಯದಲ್ಲಿ ಅವರು ಮಣಿಪುರದ ಬಗ್ಗೆ ಮಾತನಾಡುವ ಬದಲು ಪಕ್ಷವನ್ನು ಟೀಕಿಸಿದ್ದಾರೆ ಎಂದು ಹೇಳಿದ್ದಾರೆ.
ಪ್ರಧಾನಿ ಮೋದಿಯವರ ಭಾಷಣಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ, ಪ್ರಧಾನಿ ಮೋದಿ ಲೋಕಸಭೆಯ ಚರ್ಚೆಯನ್ನು ಚುನಾವಣಾ ರ್ಯಾಲಿಯಂತೆ ಬಳಸುತ್ತಿದ್ದಾರೆ.ನೀವು ಮೊದಲು ನಿಮ್ಮ ಮೊಂಡುತನ ಮತ್ತು ದುರಹಂಕಾರವನ್ನು ತ್ಯಜಿಸಿದ್ದರೆ, ಸಂಸತ್ತಿನ ಈ ಅಮೂಲ್ಯ ಸಮಯವನ್ನು ಉಳಿಸಬಹುದಿತ್ತು ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಇದನ್ನು ಓದಿ: ಮಹಾರಾಷ್ಟ್ರ:ಪತ್ರಕರ್ತನ ಮೇಲೆ ಶಾಸಕನ ಬೆಂಬಲಿಗರಿಂದ ಹಲ್ಲೆ