ಸಿಖ್ ಸಮುದಾಯದ ವಿರುದ್ಧ ಸಭೆ ನಡೆಯುತ್ತಿದೆ ಎಂದು ಬಿಂಬಿಸಿ ಕ್ಯಾಬಿನೆಟ್ ಸಮಿತಿಯ ನಕಲಿ ವೀಡಿಯೊ ಹರಿದಾಡುತ್ತಿದ್ದು, ಇದರ ವಿರುದ್ದ ದೆಹಲಿ ಪೊಲೀಸರು ಪ್ರಕರಣವನ್ನು ದಾಖಲಿಸಿದ್ದಾರೆ. ಸಾಮಾಜಿಕ ಜಾಲತಾಣಗಳ ಮೇಲ್ವಿಚಾರಣೆಯ ಸಮಯದಲ್ಲಿ, ಕೆಲವು ಟ್ವಿಟರ್ ಹ್ಯಾಂಡಲ್ಗಳು ನಕಲಿ ಅಥವಾ ಮಾರ್ಫ್ ಮಾಡಿದ ವೀಡಿಯೊವನ್ನು ಹಂಚಿಕೊಂಡಿರುವುದು ಕಂಡುಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.
ವಾಸ್ತವದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವುದು, CDS ಬಿಪಿನ್ ರಾವತ್ ಅವರ ನಿಧನದ ನಂತರ ಡಿಸೆಂಬರ್ 9, 2021 ರಂದು ನಡೆದ ಕ್ಯಾಬಿನೆಟ್ ಸಮಿತಿಯ ಸಭೆಯ ವೀಡಿಯೊವಾಗಿದೆ. ಈ ವಿಡಿಯೊ ವಿವಿಧ ಸುದ್ದಿ ಪೋರ್ಟಲ್ಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಸುಲಭವಾಗಿ ಲಭ್ಯವಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ:ಬುಲ್ಲಿ ಬಾಯ್ ವಿಕೃತಿಯ ಬಳಿಕ ‘ಟ್ರೇಡ್’ ‘ರಾಯ್ತಾಸ್’ ಗುಂಪುಗಳ ನಡುವಿನ ಬಲಪಂಥೀಯ ಭಿನ್ನತೆ ಬಯಲು
“ದ್ವೇಷವನ್ನು ಉತ್ತೇಜಿಸುವ ಮತ್ತು ಕೋಮು ಸೌಹಾರ್ದತೆಯನ್ನು ಪ್ರಚೋದಿಸುವ ದುರುದ್ದೇಶದಿಂದ, ವೀಡಿಯೊವನ್ನು ಮಾರ್ಫ್ ಮಾಡಲಾಗಿದೆ. ಜೊತೆಗೆ ಅದಕ್ಕೆ ಹೊಸ ವಾಯ್ಸ್ಓವರ್ ನೀಡಲಾಗಿದ್ದು, ಸಭೆಯು ಸಿಖ್ ಸಮುದಾಯದ ವಿರುದ್ಧವಾಗಿದೆ ಎಂದು ಬಿಂಬಿಸಲು ಪ್ರಯತ್ನಿಸಲಾಗಿದೆ” ಎಂದು ಉಪ ಪೊಲೀಸ್ ಆಯುಕ್ತ (IFSO) ಕೆಪಿಎಸ್ ಮಲ್ಹೋತ್ರಾ ಹೇಳಿದ್ದಾರೆ.
“ಭದ್ರತಾ ಕುರಿತ ಕ್ಯಾಬಿನೆಟ್ ಸಮಿತಿಯ ಸಭೆಯಲ್ಲಿ ಭಾರತೀಯ ಸೇನೆಯಿಂದ ಸಿಖ್ಖರನ್ನು ತೆಗೆದುಹಾಕಲು ಕರೆ ನೀಡಲಾಗಿದೆ ಎಂಬ ವೈರಲ್ ವೀಡಿಯೊ ಹೇಳಿಕೆಯನ್ನು ಉಲ್ಲೇಖಿಸುವ ಟ್ವೀಟ್ನ ಪ್ರತಿಪಾದನೆ ನಕಲಿಯಾಗಿದೆ. ಅಂತಹ ಯಾವುದೇ ಚರ್ಚೆ ಹಾಗೂ ಸಭೆ ನಡೆದಿಲ್ಲ” PIB ಫ್ಯಾಕ್ಟ್ ಚೆಕ್ ಟ್ವೀಟ್ ಮಾಡಿದೆ.
ಧರ್ಮದ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವ ಇಂತಹ ಕೃತ್ಯವು ಸೌಹಾರ್ದತೆ ಹಾಳು ಮಾಡುತ್ತದೆ ಮತ್ತು ಸಾರ್ವಜನಿಕ ನೆಮ್ಮದಿಗೆ ಭಂಗ ತರುತ್ತದೆ. ಈ ಕೃತ್ಯವು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153A ಅಡಿಯಲ್ಲಿ ಅಪರಾಧವಾಗಿದೆ ಎಂದು ಡಿಸಿಪಿ ಹೇಳಿದ್ದಾರೆ.
ಇದನ್ನೂ ಓದಿ:ಅನಿಮೇಷನ್ ವಿಡಿಯೊ ಆಧಾರದಲ್ಲಿ ರೈತರ ಮೇಲೆ ಪ್ರಧಾನಿ ಕೊಲೆ ಸಂಚು ಆರೋಪ ಹೊರಿಸಿದ ‘ನ್ಯೂಸ್ ಫಸ್ಟ್ ಕನ್ನಡ?’
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಈ ವೀಡಿಯೊದ ಪ್ರಚಾರವನ್ನು ಪ್ರಾರಂಭಿಸಿದ ಟ್ವಿಟರ್ ಖಾತೆಗಳು @simrankaur0507 ಮತ್ತು @eshalkaur1 ಎಂದು ಕಂಡುಬಂದಿದೆ ಎಂದು ಅವರು ಹೇಳಿದ್ದಾರೆ.
“ಇಂತಹ ವೀಡಿಯೊಗಳನ್ನು ನಂಬಬೇಡಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೊದಲು ಸರಿಯಾದ ಸತ್ಯಾಸತ್ಯತೆಯನ್ನು ಪರಿಶೀಲಿಸಿ” ದೆಹಲಿ ಪೊಲೀಸರು ಸಾರ್ವಜನಿಕರಿಗೆ ಪತ್ರಿಕಾ ಹೇಳಿಕೆಯ ಮೂಲಕ ತಿಳಿಸಿದ್ದಾರೆ.
ಈ ವಿಡಿಯೊಗೆ ನೀಡಲಾಗಿರುವ ವಾಯ್ಸ್ ಒವರ್ ಕ್ಲಬ್ ಹೌಸ್ನಲ್ಲಿ ಮಾಡಿರುವ ಒಂದು ಚರ್ಚೆಯಾಗಿದೆ. ಈ ಚರ್ಚೆಯನ್ನು ಏರ್ಪಡಿಸಿದ್ದು, ಬಿಜೆಪಿ ಪರವಾಗಿ ಪ್ರೊಪಗಾಂಡ ಚಲಾವಣೆ ಮಾಡುವ ವೆಬ್ಸೈಟ್ನ ಸಂಪಾದಕಿ ನುಪುರ್ ಜೆ ಶರ್ಮಾ ಅವರಾಗಿದ್ದಾರೆ. ಈ ಚರ್ಚೆಯಲ್ಲಿ ಮಾತನಾಡಿದ್ದ ವ್ಯಕ್ತಿಯೊಬ್ಬ, ಸೇನೆಯಲ್ಲಿರುವ ಪ್ರತಿಯೊಬ್ಬ ಸಿಖ್ಖರನ್ನೂ ತೆಗೆದುಹಾಕಬೇಕು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದನು.
ಇದನ್ನೂ ಓದಿ:ನಕಲಿ ಅಬಿಯಾನ, ದ್ವೇಶ ರಾಜಕಾರಣಕ್ಕೆ ಬಿಜೆಪಿ ಬಳಸಿದ ಅಪ್ಲಿಕೇಶನ್ ಹೆಸರು ‘Tek Fog’: ‘ದಿ ವೈರ್’ ಸ್ಪೋಟಕ ವರದಿ