ನಿನ್ನೆ ಬಿಹಾರದ ಮುಂಗೆರ್ನಲ್ಲಿ ದುರ್ಗಾ ಮೂರ್ತಿ ವಿಸರ್ಜನೆ ವೇಳೆ ಪೊಲೀಸರು ಮತ್ತು ಜನ ಸಮೂಹದ ನಡುವೆ ನಡೆದಿದ್ದ ಗುಂಪು ಘರ್ಷಣೆ ಬಗ್ಗೆ ರಾಷ್ಟ್ರೀಯ ಜನತಾದಳದ ತೇಜಸ್ವಿ ಯಾದವ್ ಅವರು ಬಿಹಾರದ ಹಾಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಮೇಲೆ ವಾಗ್ದಾಳಿ ನಡೆಸಿದ್ದಾರೆ.
ಗುಂಪು ಘರ್ಷಣೆಯಲ್ಲಿ ಬುಲೆಟ್ ತಾಗಿ 18 ವರ್ಷದ ಯುವಕ ಸಾವನ್ನಪ್ಪಿದ್ದಾರೆ. 20 ಮಂದಿ ಪೊಲೀಸರು ಸೇರಿದಂತೆ 27 ಜನರು ಗಾಯಗೊಂಡಿದ್ದಾರೆ. ಘರ್ಷಣೆಯಲ್ಲಿ ಕೆಲವರು ಬಂದೂಕುಗಳನ್ನು ಬಳಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದರು.
ಮುಂಗೆರ್ ಘರ್ಷಣೆ ಕ್ರೂರ ಮತ್ತು ಕಾನೂನು ಮತ್ತು ಸುವ್ಯವಸ್ಥೆಯನ್ನು ನಿರ್ವಹಿಸದ ರಾಜ್ಯ ಸರ್ಕಾರದ ಒಟ್ಟು ಅಸಮರ್ಥತೆಗೆ ಹಿಡಿದ ಕನ್ನಡಿ ಎಂದು ಆರ್ಜೆಡಿ-ಕಾಂಗ್ರೆಸ್ ಮತ್ತು ಎಡ ಪಕ್ಷಗಳನ್ನು ಒಳಗೊಂಡ ಪ್ರತಿಪಕ್ಷ ಗ್ರ್ಯಾಂಡ್ ಅಲೈಯನ್ಸ್ ವಾಗ್ದಾಳಿ ನಡೆಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ನಿತೀಶ್ ಕುಮಾರ್ ಸರ್ಕಾರವನ್ನು ವಜಾಗೊಳಿಸಬೇಕು ಎಂದು ಗ್ರ್ಯಾಂಡ್ ಅಲೈಯನ್ಸ್ ನಾಯಕರು ಒತ್ತಾಯಿಸಿದ್ದಾರೆ. “ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯ ಸಂಪೂರ್ಣ ವೈಫಲ್ಯ ಇರುವುದರಿಂದ ಈ ಸರ್ಕಾರವನ್ನು ಪ್ರಧಾನಿ ತಕ್ಷಣ ವಜಾಗೊಳಿಸಬೇಕೆಂದು ನಾವು ಬಯಸುತ್ತೇವೆ” ಎಂದು ಜಿಎ ನಾಯಕರು ಹೇಳಿದ್ದಾರೆ.
ಇದನ್ನೂ ಓದಿ: ಬಿಹಾರ ದುರ್ಗಾ ಮೂರ್ತಿ ವಿಸರ್ಜನೆಯಲ್ಲಿ ಗಲಾಟೆ, ಪೊಲೀಸರಿಂದ ಅಮಾನವೀಯ ದಾಳಿ: ಓರ್ವ ಬಲಿ, 27 ಮಂದಿಗೆ ಗಾಯ
ಪಾಟ್ನಾದಲ್ಲಿ ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪ್ರತಿಪಕ್ಷದ ನಾಯಕ ತೇಜಶ್ವಿ ಯಾದವ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಂದೀಪ್ ಸಿಂಗ್ ಸುರ್ಜೆವಾಲಾ ಮತ್ತು ಸಿಪಿಐ-ಎಂಎಲ್ (ಲಿಬರೇಶನ್) ಹಿರಿಯ ಮುಖಂಡ ಕವಿತಾ ಕೃಷ್ಣನ್ ಸೇರಿದಂತೆ ಎಡ ಮುಖಂಡರು ಮುಂಗೆರ್ ಘಟನೆಯನ್ನು ಖಂಡಿಸಿದ್ದಾರೆ.
“ಗುಂಡಿನ ದಾಳಿ ನಡೆಯುತ್ತಿರುವಾಗ ಗೃಹ ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ನಿತೀಶ್ ಕುಮಾರ್ ಏನು ಮಾಡುತ್ತಿದ್ದರು? ಮುಂಗೆರ್ನಲ್ಲಿ ಜನರಲ್ ಡಯರ್ ಆಗಲು ಪೊಲೀಸರಿಗೆ ಆದೇಶ ನೀಡಿದವರು ಯಾರು? ” ಎಂದು ತೇಜಸ್ವಿ ಯಾದವ್ ವಾಗ್ದಾಳಿ ನಡೆಸಿದ್ದಾರೆ.
ಈ ಮೂಲಕ ಏಪ್ರಿಲ್ 13, 1919 ರ ಕುಖ್ಯಾತ ಜಲಿಯನ್ ವಾಲಾ ಬಾಗ್ ಹತ್ಯಾಕಾಂಡಕ್ಕೆ ಮುಂಗೆರ್ ಘಟನೆಯನ್ನು ಹೋಲಿಸಿದ್ದಾರೆ. ಪೊಲೀಸ್ ವರಿಷ್ಠಾಧಿಕಾರಿ ಲಿಪಿ ಸಿಂಗ್ ಅವರನ್ನು ಜಲಿಯನ್ ವಾಲಾ ಬಾಗ್ ಹತ್ಯಾಕಾಂಡದ ಜನರಲ್ ಡಯರ್ ಅವರೊಂದಿಗೆ ಹೋಲಿಸಿದ್ದಾರೆ.
ದುರ್ಗಾ ಪೂಜಾ ಸಂಘಟಕರು ದುರ್ಗಾ ಮೂರ್ತಿ ವಿಸರ್ಜನೆಗೆ ತೆರಳುವ ಸಂದರ್ಭದಲ್ಲಿ ಜೋರಾಗಿ ಡಿಜೆ ಸಂಗೀತ ಹಾಕಲಾಗಿತ್ತು. ರಾತ್ರಿ 11.50 ರ ಸುಮಾರಿಗೆ ಪೊಲೀಸ್ ಅಧಿಕಾರಿಗಳು ವಿಗ್ರಹಗಳನ್ನು ಹೆಗಲ ಮೇಲೆ ಹೊತ್ತುಕೊಂಡಿದ್ದ ನಾಲ್ವರನ್ನು ಥಳಿಸಿದಾಗ ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಘರ್ಷಣೆ ನಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದರು.
ಇಂದು ಬಿಹಾರ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನ ನಡೆಯುತ್ತಿದೆ. ಈ ನಡುವೆ ವಿಧಾನಸಭಾ ಚುನಾವಣೆಗೆ ಬಿಜೆಪಿಯ ಎರಡನೇ ಹಂತದ ಚುನಾವಣಾ ಅಭಿಯಾನಕ್ಕಾಗಿ ಪ್ರಧಾನಿ ಮೋದಿ ದರ್ಬಂಗಾ, ಮುಜಾರ್ಫಪುರ ಮತ್ತು ಪಾಟ್ನಾದಲ್ಲಿ ಮೂರು ರ್ಯಾಲಿ ನಡೆಸಲು ಮುಂದಾಗಿದ್ದಾರೆ.