ಚಿನ್ನ ಕಳ್ಳ ಸಾಗಾಣಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಿರುವನಂತಪುರಂನ ಖಾಸಗಿ ಆಯುರ್ವೇದ ಆಸ್ಪತ್ರೆಯಿಂದ ಮಾಜಿ ಪ್ರಧಾನ ಕಾರ್ಯದರ್ಶಿ ಎಂ.ಶಿವಶಂಕರ್ ಅವರನ್ನು ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು ಇಂದು ವಶಕ್ಕೆ ತೆಗೆದುಕೊಂಡಿದ್ದಾರೆ. ಅವರ ಜಾಮೀನು ಅರ್ಜಿಯನ್ನು ಕೇರಳ ಹೈಕೋರ್ಟ್ ತಿರಸ್ಕರಿಸಿದ ಕೆಲವೇ ನಿಮಿಷಗಳಲ್ಲಿ ಈ ಘಟನೆ ನಡೆದಿದೆ.
ಅವರನ್ನು ಕೊಚ್ಚಿಯ ED ಕಚೇರಿಗೆ ಕರೆದೊಯ್ಯಲಾಗುವುದು. ಅವರ ಬಂಧನವನ್ನು ಸಂಜೆಯೊಳಗೆ ದಾಖಲಿಸಲಾಗುವುದು ಎಂದು ಹಿಂದೂಸ್ಥಾನ್ ಟೈಮ್ಸ್ ವರದಿ ಮಾಡಿದೆ.
ಅಧಿಕಾರಿಗಳ ವಿಚಾರಣೆಯಿಂದ ತಪ್ಪಿಸಿಕೊಳ್ಳುವ ಸಲುವಾಗಿ ಅನಾರೋಗ್ಯದ ನೆಪವೊಡ್ಡಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಅಧಿಕಾರಿಗಳು ಆರೋಪಿಸಿದ್ದಾರೆ.
ಇದನ್ನೂ ಓದಿ: ಕೇರಳದಲ್ಲಿ ಮತ್ತೆ ಎಡರಂಗ: ಸಿಎಂ ಪಿಣರಾಯಿ ಪರ ಒಲವು ಎಂದ ಏಷ್ಯಾನೆಟ್ ಸಮೀಕ್ಷೆ
ರಾಜತಾಂತ್ರಿಕ ಮಾರ್ಗಗಳ ಮೂಲಕ ಚಿನ್ನದ ಕಳ್ಳ ಸಾಗಣೆಯಲ್ಲಿ ಮಾಜಿ ಉನ್ನತ ಅಧಿಕಾರಿಗಳ ಪಾತ್ರವಿದೆ ಎಂಬ ಕಾರಣಕ್ಕೆ ಜಾಮೀನು ಅರ್ಜಿಯನ್ನು ED ವಿರೋಧಿಸಿದೆ.
ಶಿವಶಂಕರ್ ಮತ್ತು ಅವರ ಚಾರ್ಟರ್ಡ್ ಅಕೌಂಟೆಂಟ್ ವೇಣುಗೋಪಾಲ್ ಅವರ ಹೇಳಿಕೆಯಲ್ಲಿನ ವಿರೋಧಾಭಾಸಗಳನ್ನು ED ಉಲ್ಲೇಖಿಸಿ, ಈ ಪ್ರಕರಣದಲ್ಲಿ ಸ್ವಪ್ನಾ ಸುರೇಶ್ ಅವರೊಂದಿಗಿನ ಸಂಬಂಧವನ್ನು ಖಚಿತಪಡಿಸಿದೆ.
ಈ ಮೊದಲು ಎಂ.ಶಿವಶಂಕರ್ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಚಿನ್ನ ಕಳ್ಳ ಸಾಗಾಣಿಕೆಯಲ್ಲಿ ಇವರ ಹೆಸರು ಪ್ರಸ್ತಾಪವಾಗಿದ್ದಕ್ಕೆ ಪ್ರಸ್ತುತ ಅಮಾನತುಗೊಂಡಿದ್ದಾರೆ.
ಇದನ್ನೂ ಓದಿ: ಕೇರಳ ಚಿನ್ನ ಕಳ್ಳ ಸಾಗಾಣಿಕೆ; ಪ್ರಕರಣವನ್ನು ’ಎನ್ಐಎ’ಗೆ ವಹಿಸಿದ ಕೇಂದ್ರ ಸರ್ಕಾರ
ಜುಲೈ 5 ರಂದು ತಿರುವನಂತನಪುರಂ ವಿಮಾನ ನಿಲ್ಧಾಣದ ಕಸ್ಟಮ್ ಅಧಿಕಾರಿಗಳು 30 ಕೆಜಿ ಬಂಗಾರವನ್ನು ಯುಎಇ ರಾಜತಾಂತ್ರಿಕ ಬ್ಯಾಗ್ನಲ್ಲಿ ಇರುವುದನ್ನು ಪತ್ತೆ ಹಚ್ಚಿದ್ದರು.
ಈ ಚಿನ್ನ ಕಳ್ಳ ಸಾಗಾಣಿಕೆಯಲ್ಲಿ ರಾಯಭಾರಿ ಕಚೇರಿಯ ಮಾಜಿ ಉದ್ಯೋಗಿಗಳಾದ ಸ್ವಪ್ನಾ ಸುರೇಶ್ ಹಾಗೂ ಸರಿತ್ ನಾಯರ್ ಭಾಗಿಯಾಗಿದ್ದಾರೆ ಎಂದು ಅಧಿಕಾರಿಗಳು ಕಂಡುಕೊಂಡಿದ್ದಾರೆ. ಇಬ್ಬರೂ ಆರು ತಿಂಗಳ ಹಿಂದಿನವರೆಗೂ ರಾಯಭಾರಿ ಕಚೇರಿಯಲ್ಲಿ ಕೆಲಸ ಮಾಡಿದ್ದರು ಎನ್ನಲಾಗಿದೆ.
ಅಧಿಕಾರಿಗಳು ಚಿನ್ನದ ಮೌಲ್ಯವನ್ನು 15 ಕೋಟಿ ಎಂದು ಹೇಳಿದ್ದಾರೆ. ಸರಿತ್ ನಾಯರ್ ಕಸ್ಟಮ್ಸ್ ವಿಭಾಗದ ವಶದಲ್ಲಿದ್ದರೆ, ಸ್ವಪ್ನಾ ಸುರೇಶ್ ಪರಾರಿಯಾಗಿದ್ದರು.
ಇದನ್ನೂ ಓದಿ: ಶಿರಾ: ಹಣ ಹಂಚಿದ ಬಿಜೆಪಿ ಅಭ್ಯರ್ಥಿಯನ್ನು ಅನರ್ಹಗೊಳಿಸಿ; ಕಾಂಗ್ರೆಸ್ ದೂರು
ಈ ಕುರಿತು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪ್ರಧಾನಿ ನರೇಂದ್ರ ಮೋದಿಗೆ ಈ ಹಿಂದೆ ಪತ್ರ ಬರೆದಿದ್ದು, ಈ ಪ್ರಕರಣದ ಬಗ್ಗೆ ಕೇಂದ್ರ ಸಂಸ್ಥೆಗಳು ತನಿಖೆ ನಡೆಸುವಂತೆ ಕೋರಿದ್ದರು. ಅಲ್ಲದೆ ಕೇರಳದ ಕಾಂಗ್ರೆಸ್ ಘಟಕ ಕೂಡಾ ಬುಧವಾರ ಪತ್ರ ಬರೆದಿದ್ದು ಕೇಂದ್ರ ತನಿಖಾ ದಳ ಮತ್ತು ಜಾರಿ ನಿರ್ದೇಶನಾಲಯ ತನಿಖೆ ನಡೆಸುವಂತೆ ಕೋರಿತ್ತು.
“ಈ ಪ್ರಕರಣವನ್ನಿಟ್ಟುಕೊಂಡು ರಾಜ್ಯದ ಕಮ್ಯೂನಿಸ್ಟ್ ಸರ್ಕಾರವನ್ನು ಗುರಿಯಾಗಿಸುತ್ತಿದ್ದಾರೆ, ಆದರೆ ನಮಗೆ ಮರೆಮಾಡಲು ಏನೂ ಇಲ್ಲ. ಯಾವುದೇ ತನಿಖೆಗೆ ರಾಜ್ಯ ಸಿದ್ಧ ಎಂದು ಮುಖ್ಯಮಂತ್ರಿ ಪ್ರಧಾನಿಗೆ ಪತ್ರ ಕಳುಹಿಸಿದ್ದರು. ಆದರೆ ತನಿಖೆಯನ್ನು ವಿಳಂಬ ಮಾಡಿ ಸರ್ಕಾರವನ್ನು ಮುಜುಗರಕ್ಕೀಡಾಗುವ ಹಾಗೆ ಮಾಡುತ್ತಿದ್ದಾರೆ ಎಂದು ಅನುಮಾನ ಬರುತ್ತಿದೆ” ಎಂದು ಎಡ ಪ್ರಜಾಸತ್ತಾತ್ಮಕ ಒಕ್ಕೂಟದ ಕನ್ವೀನರ್ ವಿ.ಎಸ್.ವಿಜಯರಾಘವನ್ ಅಭಿಪ್ರಾಯಪಟ್ಟಿದ್ದರು.
ಇದನ್ನೂ ಓದಿ: ಮಧ್ಯಪ್ರದೇಶ: ವಿವಾದಾತ್ಮಕ ಹೇಳಿಕೆ; ಬಿಜೆಪಿ ನಾಯಕಿಗೆ ನೋಟಿಸ್!