ಯುಎಪಿಎ ಪ್ರಕರಣದಲ್ಲಿ ನ್ಯೂಸ್ಕ್ಲಿಕ್ ಸಂಸ್ಥಾಪಕ ಪ್ರಬೀರ್ ಪುರ್ಕಾಯಸ್ಥ, ಮಾನವ ಸಂಪನ್ಮೂಲ ಮುಖ್ಯಸ್ಥರನ್ನು ದೆಹಲಿ ನ್ಯಾಯಾಲಯವು 10 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ.
ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಅಡಿಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ನ್ಯೂಸ್ಕ್ಲಿಕ್ ಸಂಸ್ಥಾಪಕ ಪ್ರಬೀರ್ ಪುರ್ಕಾಯಸ್ಥ ಮತ್ತು ಪೋರ್ಟಲ್ನ ಮಾನವ ಸಂಪನ್ಮೂಲ ಮುಖ್ಯಸ್ಥ ಅಮಿತ್ ಚಕ್ರವರ್ತಿ ಅವರನ್ನು ದೆಹಲಿ ನ್ಯಾಯಾಲಯ ಮಂಗಳವಾರ ಹತ್ತು ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ.
ಚೀನಾ ಪರ ಪ್ರಚಾರಕ್ಕಾಗಿ ಪೋರ್ಟಲ್ ಹಣ ಪಡೆದಿದೆ ಎಂಬ ಆರೋಪದ ಮೇಲೆ ಅಕ್ಟೋಬರ್ 3 ರಂದು ದೆಹಲಿ ಪೊಲೀಸ್ ವಿಶೇಷ ಘಟಕವು ಈ ಇಬ್ಬರನ್ನು ಬಂಧಿಸಿತ್ತು.
ಕಳೆದ ವಾರ, ದೆಹಲಿ ಹೈಕೋರ್ಟ್ ವೆಬ್ಸೈಟ್ ಸಂಸ್ಥಾಪಕ ಮತ್ತು ಮಾನವ ಸಂಪನ್ಮೂಲ ಮುಖ್ಯಸ್ಥರಿಗೆ ಮಧ್ಯಂತರ ಜಾಮೀನು ನೀಡಲು ನಿರಾಕರಿಸಿತ್ತು.
”ನಿಮ್ಮ ಮೇಲಿನ ಆರೋಪಗಳನ್ನು ನೋಡಿದಾಗ ತಕ್ಷಣಕ್ಕೆ ಜಾಮೀನು ನೀಡಲು ಸಾಧ್ಯವಿಲ್ಲ. ನೀವು ತಪ್ಪು ಮಾಡಿರಬಹುದು ಅಥವಾ ಮಾಡದೇನೂ ಇರಬಹುದು. ಆದರೆ ನಾವು ಅವರಿಗೆ (ದೆಹಲಿ ಪೊಲೀಸರಿಗೆ) ವಿಚಾರಣೆಗೆ ಅವಕಾಶ ನೀಡಬೇಕಾಗಿದೆ” ಎಂದು ನ್ಯಾಯಮೂರ್ತಿ ತುಷಾರ್ ರಾವ್ ಗೆಡೆಲಾ ಅವರು ಬಂಧಿತರ ಪರ ಹಿರಿಯ ವಕೀಲ ಕಪಿಲ್ ಸಿಬಲ್ಗೆ ತಿಳಿಸಿದರು.
2009ರಲ್ಲಿ ಈ ಪೋರ್ಟಲ್ ಆರಂಭವಾಯಿತು. ಮುಂದೆ 2021 ರಲ್ಲಿ ತೊಂದರೆಗೆ ಸಿಲುಕಿತು. 2020 ರಲ್ಲಿ ದೆಹಲಿ ಪೋಲೀಸ್ನ ಆರ್ಥಿಕ ಅಪರಾಧ ವಿಭಾಗವು ಎಫ್ಐಆರ್ ದಾಖಲಿಸಿತು. ಅದನ್ನು ಆಧರಿಸಿ ED ಪ್ರಕರಣವನ್ನು ದಾಖಲಿಸಿತು. ಈ ಆರೋಪಗಳಲ್ಲಿ ಷೇರುಗಳ ಅತಿಯಾದ ಹಣವನ್ನು ಬೇರೆಡೆಗೆ ತಿರುಗಿಸುವುದು ಮತ್ತು ಎಫ್ಡಿಐ ನಿಯಮಗಳ ಉಲ್ಲಂಘನೆ ಸೇರಿದೆ ಎಂದು ಆರೋಪಿಸಲಾಗಿತ್ತು.
ಸಂಸ್ಥೆಗೆ ಸೇವೆಗಳಿಗಾಗಿ ಕೋಟಿಗಟ್ಟಲೆ ಹಣ ಬಂದಿದೆ ಎಂದು ಆರೋಪಿಸಲಾಗಿದ್ದು, ಅದರಲ್ಲಿ ₹1.55 ಕೋಟಿಯನ್ನು ಎಲೆಕ್ಟ್ರಿಷಿಯನ್ಗೆ ಮಾಡಲಾಗಿದೆ ಎಂದು ದೆಹಲಿ ಪೊಲೀಸ್ ಅಧಿಕಾರಿಯೊಬ್ಬರು ಎಚ್ಟಿಗೆ ತಿಳಿಸಿದ್ದಾರೆ.
ಇದನ್ನೂ ಓದಿ: ಕೇರಳ: ನ್ಯೂಸ್ಕ್ಲಿಕ್ನ ಮಾಜಿ ಸಿಬ್ಬಂದಿ ಮನೆ ಮೇಲೆ ದೆಹಲಿ ಪೊಲೀಸರ ದಾಳಿ