ಸೋಮವಾರದಿಂದ ಆರಂಭವಾಗಲಿರುವ ಮಾನ್ಸೂನ್ ಅಧಿವೇಶನದಲ್ಲಿ ಕೇಂದ್ರ ಸರ್ಕಾರ ಅಂಗೀಕರಿಸಲು ಸಿದ್ಧವಾಗಿರುವ 3 ಸುಗ್ರಿವಾಜ್ಞೆಗಳ ವಿರುದ್ಧ ಪಂಜಾಬ್, ಉತ್ತರ ಪ್ರದೇಶ ಮತ್ತು ಹರಿಯಾಣದ ರೈತರು ತಿರುಗಿಬಿದ್ದಿದ್ದಾರೆ. ಅಧಿವೇಶನಕ್ಕೂ ಮುನ್ನವೇ ಕೊರೊನಾ ಸಾಂಕ್ರಾಮಿಕದ ನಡುವೆಯೂ ಭಾರೀ ಪ್ರತಿಭಟನೆ ನಡೆಸಿ ತಮ್ಮ ವಿರೋಧ ದಾಖಲಿಸಿದ್ದಾರೆ.
ಅವಶ್ಯಕ ಸಾಮಾಗ್ರಿಗಳ (ತಿದ್ದುಪಡಿ) ಸುಗ್ರಿವಾಜ್ಞೆ, ರೈತರ (ಸಶಕ್ತಿಕರಣ ಹಾಗೂ ರಕ್ಷಣೆ) ಬೆಲೆ ಖಾತರಿ ಒಪ್ಪಂದ ಹಾಗೂ ಕೃಷಿ ಸೇವೆಗಳ ಸುಗ್ರಿವಾಜ್ಞೆ-2020, ರೈತರ ಉತ್ಪನ್ನ ವ್ಯಾಪಾರ ಹಾಗೂ ವಾಣಿಜ್ಯ (ಉತ್ತೇಜನ ಹಾಗೂ ಸೌಕರ್ಯ) ಸುಗ್ರಿವಾಜ್ಞೆಗಳನ್ನು ಕೇಂದ್ರ ಸರ್ಕಾರ ಸಾಂಕ್ರಾಮಿಕ ಕಾಲದಲ್ಲಿ ಜಾರಿಗೊಳಿಸಿದೆ. ಅವುಗಳನ್ನು ಸಂಸತ್ತಿನ ಉಭಯ ಸದನಗಳಲ್ಲಿ ಪರಿಚಯಿಸಿ, ಅನುಮೋದಿಸಲು ಸಿದ್ದತೆ ನಡೆಸಿದೆ. ಆದರೆ ದೇಶಾದ್ಯಂತ ರೈತರು “ಈ ಸುಗ್ರಿವಾಜ್ಞೆಗಳು ಕೃಷಿಯನ್ನು ಕಾರ್ಪೋರೇಟ್ ಕೈಗೆ ಒಪ್ಪಿಸುವ ಹುನ್ನಾರವಾಗಿದ್ದು, ಒಂದು ವೇಳೆ ಅಂಗೀಕಾರಗೊಂಡಲ್ಲಿ ರೈತರು ತಮ್ಮ ಸ್ವಾಯುತ್ತತೆಯನ್ನು ಕಳೆದುಕೊಳ್ಳಲಿದ್ದಾರೆ” ಎಂದು ಆರೋಪಿಸಿದ್ದಾರೆ.
ರೈತರ ಉತ್ಪನ್ನ ವ್ಯಾಪಾರ ಹಾಗೂ ವಾಣಿಜ್ಯ (ಉತ್ತೇಜನ ಹಾಗೂ ಸೌಕರ್ಯ) ಸುಗ್ರಿವಾಜ್ಞೆಯು ರಾಜ್ಯಗಳ ಎಪಿಎಂಸಿ ಕಾಯ್ದೆಗಿಂತಲೂ ಮೇಲುಗೈ ಸಾಧಿಸುತ್ತದೆ. ಆಗ ಯಾವುದೇ ರಾಜ್ಯಗಳಲ್ಲಿ ಬೇಕಾದರೂ ಮುಕ್ತವಾಗಿ ಮಾರಬಹುದಾದ ವ್ಯವಸ್ಥೆಯಿಂದಾಗಿ ಸ್ಥಳೀಯ ಮತ್ತು ಸಣ್ಣ ಪುಟ್ಟ ರೈತರು ತೀವ್ರ ಸಂಕಷ್ಟಕ್ಕೊಳಗಾಗುತ್ತಾರೆ ಎಂಬುದು ರೈತರ ಆತಂಕವಾಗಿದೆ. ಇದು ಈಗಿನ ಮಂಡಿ ಮಾರುಕಟ್ಟೆ ವ್ಯವಸ್ತೆಯನ್ನು ಸಂಪೂರ್ಣವಾಗಿ ನಾಶಗೊಳಿಸಿ ರೈತರೆಲ್ಲರೂ ಕನಿಷ್ಠ ಬೆಂಬಲ ಬೆಲೆಗಿಂತಲೂ ಕಡಿಮೆ ಬೆಲೆಗೆ ತಮ್ಮ ಉತ್ಪನ್ನಗಳನ್ನು ಮಾರಬೇಕಾದ ದುಸ್ಥಿತಿಗೆ ತಲುಪುತ್ತಾರೆ ಎಂಬುದು ರೈತರ ಚಿಂತೆಯಾಗಿದೆ.
ಇದನ್ನೂ ಓದಿ: ತಿದ್ದುಪಡಿ ಕಾಯ್ದೆಗೆ ಮುಚ್ಚಲಿವೆ ಎಪಿಎಂಸಿಗಳು; ಲಕ್ಷಾಂತರ ಕಾರ್ಮಿಕರು ಬೀದಿಪಾಲು ಸಾಧ್ಯತೆ!
ಆದರೆ ಕೇಂದ್ರ ಸರ್ಕಾರ ಇದು ರೈತರು ತಮ್ಮ ಬೆಳೆಗಳನ್ನು ಸ್ಪರ್ಧಾತ್ಮಕ ಬೆಲೆಗೆ ಮಾರುವ ಅವಕಾಶ ನೀಡುವುದರಿಂದ ಇದು ರೈತ ಪರ ಎಂದು ಘೋಷಿಸಿದೆ. ಉತ್ಪಾದನೆ, ಸಾಗಾಟ, ಶೇಖರಣೆ ಮತ್ತು ಮಾರುಕಟ್ಟೆ ಸೇರಿದಂತೆ ಎಲ್ಲಾ ವಿಚಾರಗಳಿಗೂ ವಿದೇಶಿ ಹೂಡಿಕೆಯನ್ನು ಆಕರ್ಷಿಸುವ ಮೂಲಕ ಗುತ್ತಿಗೆ ಕೃಷಿಯನ್ನು ಪ್ರೋತ್ಸಾಹಿಸಲಾಗುತ್ತಿದೆ. ಇದು ರೈತರಿಗೆ ವರವಾಗಿ ಪರಿಣಮಿಸಲಿದೆ ಎಂಬುದು ಕೇಂದ್ರದ ವಾದವಾಗಿದೆ.
ರೈತರು ಕೇಂದ್ರ ವಾದವನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದು, ದೊಡ್ಡ ದೊಡ್ಡ ಕಾರ್ಪೋರೇಟ್ಗಳಿಗೆ ಅನುಕೂಲ ಮಾಡಿಕೊಡಲು ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ ಎಂದು ಕಿಡಿಕಾರಿದ್ದಾರೆ. ಗುರುವಾರದಿಂದ ಪ್ರತಿಭಟನೆ ಆರಂಭಿಸಿರುವ ಅವರು ಯಾವುದೇ ಕಾರಣಕ್ಕೂ ಸುಗ್ರೀವಾಜ್ಞೆ ಅಂಗೀಕಾರವಾಗಬಾರದು ಎಂದು ಪಟ್ಟು ಹಿಡಿದಿದ್ದಾರೆ.
ಭಾರತೀಯ ಕಿಸಾನ್ ಯೂನಿಯನ್ ನೇತೃತ್ವದಲ್ಲಿ ರೈತರು ಹರಿಯಾಣದ ಕುರುಕ್ಷೇತ್ರದಲ್ಲಿ ಹೆದ್ದಾರಿಗಳನ್ನು ಬಂದ್ ಮಾಡುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹರಿಯಾಣ ಪೊಲೀಸರು ಲಾಠಿಚಾರ್ಜ್ ಮಾಡಿ ಪ್ರತಿಭಟನೆ ಹತ್ತಿಕ್ಕಿದ್ದಾರೆ. ಹರಿಯಾಣದ ಬಿಜೆಪಿ ಮುಖ್ಯಸ್ಥ ಓಂ ಪ್ರಕಾಶ್ ಧನ್ಕಾರ್ರೊಂದಿಗೆ ಹಲವು ಸಂಸದರು ಪ್ರತಿಭಟನಾನಿರತ ರೈತರನ್ನು ಮಾತನಾಡಿಸಿ ಅವರ ಮನವೊಲಿಸುವ ವಿಫಲ ಯತ್ನ ನಡೆಸಿದ್ದಾರೆ.
ಈ ಕುರಿತು ಹರಿಯಾಣದ ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ಮುಖಂಡ ಭೂಪೇಂದರ್ ಸಿಂಗ್ ಹೂಡಾ ಮಾತನಾಡಿ “ಇದು ರೈತರ ಹಿತಾಸಕ್ತಿಗಳಿಗೆ ವಿರುದ್ಧವಿರುವ ಸುಗ್ರಿವಾಜ್ಞೆಯಾಗಿದೆ. ಕೇಂದ್ರಕ್ಕೆ ನಿಜಕ್ಕೂ ರೈತರ ಬಗ್ಗೆ ಕಾಳಜಿಯಿದ್ದರೆ ಕನಿಷ್ಠ ಬೆಂಬಲ ಬೆಲೆಗಿಂತ ಕಡಿಮೆ ಬೆಲೆಗೆ ಯಾವುದೇ ಉತ್ಪನ್ನಗಳನ್ನು ಕೊಳ್ಳುವಂತಿಲ್ಲ ಎಂಬ ಸುಗ್ರಿವಾಜ್ಞೆ ತರಲಿ” ಎಂದು ಆಗ್ರಹಿಸಿದ್ದಾರೆ.
ಈ ಮುಂಚೆಯೇ ಕರ್ನಾಟಕದಲ್ಲಿ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದಾಗ ರಾಜ್ಯದ ರೈತರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಇನ್ನು ನಾಳೆಯಿಂದ ಅಧಿವೇಶನ ಆರಂಭವಾಗಲಿದ್ದು ದೇಶಾದ್ಯಂತ ರೈತರು ಬೀದಿಗಳಿಯುವ ಸಾಧ್ಯತೆಯಿದೆ.