ಸಂಪುಟ ಪುನರ್ ರಚನೆ ಮಾಡ್ತಾರೋ, ವಿಸ್ತರಣೆ ಮಾಡ್ತಾರೋ ಗೊತ್ತಿಲ್ಲ. ನಾವೆಲ್ಲ ಬಿಜೆಪಿಗೆ ಈಗ ಎಂಟರ್ ಆಗಿದ್ದೇವೆ. ಅವೆಲ್ಲ ನಮಗೆ ಎಲ್ಲಿ ಹೇಳ್ತಾರೆ ಎಂದು ಸಚಿವ ಎಚ್.ಟಿ. ಸೋಮಶೇಖರ್ ಹೇಳಿದರು.
ತುಮಕೂರಿನಲ್ಲಿ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿ ಅವರು, ಸಂಪುಟ ವಿಸ್ತರಣೆ, ಪುನರ್ ರಚನೆ ಮಾಡುವುದು ಮುಖ್ಯಮಂತ್ರಿಗಳ ಪರಮಾಧಿಕಾರಕ್ಕೆ ಬಿಟ್ಟಿದ್ದು. ಅವೆಲ್ಲ ನಮಗೆ ತಿಳಿಸುವುದಿಲ್ಲ. ನಾವು ಈಗ ಬಿಜೆಪಿಗೆ ಎಂಟರ್ ಆಗಿದ್ದೇವೆ ಎಂದು ತಿಳಿಸಿದರು.
ಬಿಜೆಪಿಯಿಂದ 105 ಮಂದಿ ಗೆದ್ದಿದ್ದಾರೆ. ಅವರಿಗೂ ಸಂಪುಟದಲ್ಲಿ ಅವಕಾಶ ನೀಡಬೇಕು. ನಾವು 17 ಜನ ಸೇರಿದ್ದೇವೆ. ನಮಗೂ ಅವಕಾಶ ನೀಡಿದ್ದಾರೆ. 10 ಮಂದಿಗೆ ಸಚಿವ ಸ್ಥಾನ ನೀಡಲಾಗಿದೆ. ಉಳಿದವರಿಗೆ ಅವಕಾಶ ಸಿಗಬಹುದು ಎಂದರು.
ಇದನ್ನೂ ಓದಿ: ತುಮಕೂರು: ಬಳಕೆಗೆ ಬಾರದ ಬಿಎಂಶ್ರೀ ಭವನ, ಅನೈತಿಕ ಚಟುವಟಿಕೆಗಳ ತಾಣ, ತಿರುಗಿ ನೋಡದ ಇಲಾಖೆ!
ಚುನಾವಣೆಯಲ್ಲಿ ಗೆದ್ದವರಿಗೆ ಸಚಿವ ಸ್ಥಾನ ಕೊಟ್ಟಿದ್ದಾರೆ. ಎಂಟಿಬಿ ನಾಗರಾಜ್, ಶಂಕರ್, ಮುನಿರತ್ನ, ವಿಶ್ವನಾಥ್ ಪ್ರತಾಪ್ ಗೌಡ ಪಾಟೀಲ್ ಅವರಿಗೂ ಸಚಿವ ಸ್ಥಾನ ಸಿಗುವ ಸಾಧ್ಯತೆ ಇದೆ. ಚುನಾವಣೆಯಲ್ಲಿ ಸೋತವರನ್ನು ವಿಧಾನ ಪರಿಷತ್ಗೆ ಆಯ್ಕೆ ಮಾಡಲಾಗಿದೆ. ಅವರಿಗೂ ಅವಕಾಶ ದೊರೆಯುತ್ತೆ. ಮುಖ್ಯಮಂತ್ರಿಗಳು ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆ ಎಂದು ತಿಳಿಸಿದರು.
ಆರ್.ಆರ್. ನಗರದಿಂದ ಮುನಿರತ್ನ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಅವರಿಗೆ ಸಚಿವ ಸ್ಥಾನ ಕೊಡುವುದು ಬಿಡುವುದು ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟಿದ್ದು. ಮುನಿರತ್ನ ಮತ್ತು ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ನಾವು ಹಿಂದಿನಂತೆ ಚೆನ್ನಾಗಿಯೇ ಇದ್ದೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ನಾವು ಎಸ್.ಬಿ.ಎಂ. ಇದ್ದ ಹಾಗೆ. ಹಿಂದೆ ಸೋಮಶೇಖರ್, ಬೈರತಿ ಬಸವರಾಜು ಮತ್ತು ಮುನಿರತ್ನ ಅವರನ್ನು ಎಸ್.ಬಿ.ಎಂ. ಎಂದು ಕರೆಯುತ್ತಿದ್ದರು. ಈಗ ಮುನಿರತ್ನ ಗೆದ್ದಿರುವುದರಿಂದ ಎಸ್.ಬಿ. ಗೆ ಎಂ ಸೇರಿದಂತೆ ಆಗಿದೆ. ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆಯ ಕುರಿತು ನನಗೆ ಮಾಹಿತಿ ಇಲ್ಲ ಎಂದು ಹೇಳಿದರು.
ಇದನ್ನೂ ಓದಿ: ಯಡಿಯೂರಪ್ಪನವರು ಹೋದರೆ ಮುನಿರತ್ನ ಕಥೆ ಗೋವಿಂದ: ಡಿ.ಕೆ. ಶಿವಕುಮಾರ್