ಹೆಸರಾಂತ ಕಣ್ಣಿನ ಆಸ್ಪತ್ರೆ ‘ವಾಸನ್ ಐ ಕೇರ್’ ಸಂಸ್ಥಾಪಕ ಎ.ಎಂ.ಅರುಣ್ ಸೋಮವಾರ ಮೃತಪಟ್ಟಿದ್ದು, ಅವರ ಸಂಬಂಧಿಕರು ಈ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರಿಂದ ಪೊಲೀಸರು ಅಸಹಜ ಸಾವಿನ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ತಮಿಳುನಾಡು ಮೂಲದ ಅರುಣ್ ತಿರುಚ್ಚಿಯಿಂದ ತಮ್ಮ ವೃತ್ತಿಜೀವನ ಆರಂಭಿಸಿದ್ದರು. ಇವರಿಗೆ 51 ವರ್ಷ ವಯಸ್ಸಾಗಿತ್ತು.
ಎ.ಎಂ.ಅರುಣ್ ಹೃದಯಾಘಾತದಿಂದ ನಿಧನರಾಗಿದ್ದಾರೆ ಎನ್ನಲಾಗುತ್ತಿದೆ. ಆದರೆ ಅವರ ಕುಟುಂಬಸ್ಥರು ಇದು ಅನುಮಾನಾಸ್ಪದ ಸಾವು ಎಂದು ಹೇಳುತ್ತಿದ್ದಾರೆ.
ಪೊಲಿಸರ ಪ್ರಕಾರ, “ಅರುಣ್ಗೆ ಎದೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸೋಮವಾರ ಬೆಳಗ್ಗೆ ತೇನಾಂಪೇಟೆಯಲ್ಲಿರುವ ಕಾವೇರಿ ಆಸ್ಪತ್ರೆಗೆ ಅರುಣ್ ಅವರನ್ನು ಕರೆ ತರಲಾಗಿತ್ತು. ಆದರೆ ಅಷ್ಟರಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಹೇಳಿದರು. ಅವರ ಮೃತದೇಹವನ್ನು ಓಮಂದೂರಾರ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿತ್ತು. ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ” ಎಂದು ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಇದನ್ನೂ ಓದಿ: ಪ್ರತಾಪ್ ಸಿಂಹ ಪೇಟೆ ರೌಡಿ ತರ ಮಾತನಾಡುತ್ತಾರೆ; ಪ್ರತಿಕ್ರಿಯೆಗೆ ಅರ್ಹರಲ್ಲ: ಸಂಸದೆ ಸುಮಲತ
“ಅವರು ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ. ಆಸ್ಪತ್ರೆಯಲ್ಲಿ ಅವರ ನರಳಾಟ ಕೇಳುತ್ತಿತ್ತು ಎಂದು ಕೆಲ ಸಂಬಂಧಿಕರು ಹಾಗೂ ಸ್ನೇಹಿತರು ಅನುಮಾನ ವ್ಯಕ್ತಪಡಿಸಿದ್ದಾರೆ. ಅವರ ಹೇಳಿಕೆಗಳನ್ನು ಆಧರಿಸಿ ಐಪಿಸಿ ಸೆಕ್ಷನ್ 174ರ ಅನ್ವಯ ಪೊಲೀಸರು ಅನುಮಾನಾಸ್ಪದ ಸಾವಿನ ಪ್ರಕರಣ ದಾಖಲಿಸಿಕೊಂಡಿದ್ದಾರೆ” ಎಂದು ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.
ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರ ಪ್ರಕಾರ, ಆತ್ಮಹತ್ಯೆ ಅಥವಾ ಕೊಲೆಯ ಸಾಧ್ಯತೆ ಕಂಡುಬಂದಿಲ್ಲ. ಸಹಜ ಸಾವು ಸಂಭವಿಸಿದಂತಿದೆ. ಅಟಾಪ್ಸಿ ವರದಿ ಹಾಗೂ ವಿಸ್ಕೆರಾ ವರದಿಗಾಗಿ ಕಾಯುತ್ತಿದ್ದೇವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಇದನ್ನೂ ಓದಿ: ರಾಜ್ಯ ಸರ್ಕಾರಕ್ಕೆ ಇಷ್ಟು ದಿನ ಮರಾಠರ ಬಗ್ಗೆ ಕಾಳಜಿ ಇರಲಿಲ್ಲವೇ? – ಡಿ.ಕೆ. ಶಿವಕುಮಾರ್…
ದೇಶದಾದ್ಯಂತ 100ಕ್ಕೂ ಹೆಚ್ಚು ಕಣ್ಣಿನ ಆಸ್ಪತ್ರೆಗಳ ಶಾಖೆಗಳನ್ನು ತೆರೆದಿದ್ದ ಅರುಣ್ ತಿರುಚ್ಚಿಯಲ್ಲಿ ಮೆಡಿಕಲ್ ಶಾಪ್ ಒಂದನ್ನು ನಿರ್ವಹಿಸುತ್ತಿದ್ದರು. ನಂತರ ವಾಸನ್ ಐ ಕೇರ್ ಎಂಬ ಹೆಸರಿನಲ್ಲಿ ಕಣ್ಣಿನ ಆಸ್ಪತ್ರೆ ತೆರೆದಿದ್ದರು. ಕೆಲವೇ ವರ್ಷಗಳಲ್ಲಿ ಇದು ಸಾಕಷ್ಟು ಪ್ರಸಿದ್ಧಿ ಪಡೆಯಿತು. ಹಲವು ಕಡೆ ವಾಸನ್ ಡೆಂಟಲ್ ಕೇರ್ ಕೂಡಾ ಸ್ಥಾಪಿಸಿದ್ದರು. ಸಂಸ್ಥೆಯಲ್ಲಿ 600ಕ್ಕೂ ಹೆಚ್ಚು ಕಣ್ಣಿನ ತಜ್ಞರು ಹಾಗೂ 6 ಸಾವಿರಕ್ಕೂ ಹೆಚ್ಚು ಮಂದಿ ಉದ್ಯೋಗ ಪಡೆದುಕೊಂಡಿದ್ದಾರೆ.
ಅಮೆರಿಕಾ ಮೂಲದ ಸಂಸ್ಥೆಯಾದ ಫ್ರಾಸ್ಟ್ & ಸುಲ್ಲಿವಾನ್ 2011 ರ ತನ್ನ ಅಧ್ಯಯನದ ವರದಿಯಲ್ಲಿ ಈ ಆಸ್ಪತ್ರೆಯನ್ನು ‘ಗರಿಷ್ಠ ಸ್ವತಂತ್ರ ಶಸ್ತ್ರಚಿಕಿತ್ಸಾ ಕೇಂದ್ರಗಳನ್ನು ಹೊಂದಿರುವ ವಿಶ್ವದ ಅತಿದೊಡ್ಡ ಕಣ್ಣಿನ ಆರೈಕೆಯ ಕೇಂದ್ರ’ ಎಂದು ಹೇಳಿತ್ತು.
ಇದನ್ನೂ ಓದಿ: ಜೆಎನ್ಯು ಮರುನಾಮಕರಣವಾಗಲಿ ಎಂದ ಸಿ.ಟಿ. ರವಿಯನ್ನು ತರಾಟೆಗೆ ಪಡೆದ ನೆಟ್ಟಿಗರು!