ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ತಮ್ಮ ರಾಜ್ಯದಲ್ಲಿ ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್ಪಿಆರ್)ಗಾಗಿ 2010 ರಲ್ಲಿ ಇದ್ದ ಷರತ್ತುಗಳನ್ನು ಅನುಸರಿಸುವಂತೆ ಕೇಂದ್ರವನ್ನು ಕೋರಲಿದ್ದೇನೆ ಎಂದು ಘೋಷಿಸಿದರು.
ಎನ್ಪಿಆರ್ನಲ್ಲಿ ಪ್ರಸ್ತಾಪಿಸಲಾದ ಕೆಲವು ಪ್ರಶ್ನೆಗಳು ನನ್ನ ರಾಜ್ಯದ ಅಲ್ಪಸಂಖ್ಯಾತರ ಮನಸ್ಸಿನಲ್ಲಿ ಅಭದ್ರತೆಯನ್ನು ಉಂಟುಮಾಡುತ್ತಿವೆ. ನಮ್ಮ ಪಕ್ಷದೊಳಗೆ ವಿಸ್ತಾರವಾದ ಸಮಾಲೋಚನೆಗಳ ನಂತರ, 2010 ರಲ್ಲಿ ಚಾಲ್ತಿಯಲ್ಲಿದ್ದ ಷರತ್ತುಗಳನ್ನು ಅಳವಡಿಸುವಂತೆ ಕೇಂದ್ರ ಸರ್ಕಾರವನ್ನು ಕೋರಲು ನಾವು ನಿರ್ಧರಿಸಿದ್ದೇವೆ ಎಂದು ಜಗನ್ ಟ್ವೀಟ್ ಮಾಡಿದ್ದಾರೆ.
Some of the questions proposed in the NPR are causing insecurities in the minds of minorities of my state. After elaborate consultations within our party, we have decided to request the Central Government to revert the conditions to those prevailing in 2010. (1/2)
— YS Jagan Mohan Reddy (@ysjagan) March 3, 2020
ಇದಕ್ಕಾಗಿ ಮುಂಬರುವ ಅಸೆಂಬ್ಲಿ ಅಧಿವೇಶನದಲ್ಲಿ ನಾವು ನಿರ್ಣಯವನ್ನು ಅಂಗೀಕರಿಸುತ್ತೇವೆ ಎಂದು ಸಹ ಜಗನ್ ಹೇಳಿದ್ದಾರೆ.
ಏಪ್ರಿಲ್ನಿಂದ ಸೆಪ್ಟಂಬರ್ ಒಳಗೆ ಎನ್ಪಿಆರ್ ಜಾರಿಗೊಳಿಸುವಂತೆ ಕೇಂದ್ರ ಸರ್ಕಾರ ಆದೇಶಿಸಿದ ಬೆನ್ನಲ್ಲೇ ಜಗನ್ ಮೋಹನ್ ರೆಡ್ಡಿಯವರ ಈ ತೀರ್ಮಾನ ವ್ಯಕ್ತಿವಾಗಿದೆ. ಈಗಿರುವ ಎನ್ಪಿಆರ್ ಪ್ರಶ್ನಾವಳಿಗಳು ತಮ್ಮ ಪೋಷಕರ ಜನ್ಮದಿನಾಂಕ ಮತ್ತು ಹುಟ್ಟಿದ ಸ್ಥಳಗಳನ್ನು ಕೇಳುವುದರಿಂದ ಇದು ಎನ್ಆರ್ಸಿ ಜಾರಿಗೆ ಪ್ರಥಮ ಹೆಜ್ಜೆಯಾಗಿದೆ ಎಂದು ಹಲವಾರು ಜನ ಅನುಮಾನ ವ್ಯಕ್ತಪಡಿಸಿದ್ದಾರೆ. ಗೃಹ ಸಚಿವರೆ ಈ ಕುರಿತು ಕೆಲವೆಡೆ ಹೇಳಿಕೆಗಳನ್ನು ಸಹ ನೀಡಿದ್ದಾರೆ.
“ಎನ್ಪಿಆರ್ ಜಾರಿಗೆ ಸಂಬಂಧಿಸಿದಂತೆ ಹಲವಾರು ಭಾಗಗಳಲ್ಲಿ ಹಲವಾರು ಆತಂಕಗಳು ಮತ್ತು ಅನುಮಾನಗಳು ವ್ಯಕ್ತವಾಗುತ್ತಿರುವುದರಿಂದ, ಎಲ್ಲಾ ಜಿಲ್ಲಾಧಿಕಾರಿಗಳು / ಪ್ರಧಾನ ಜನಗಣತಿ ಅಧಿಕಾರಿಗಳಿಗೆ ಈ ಕೆಳಗಿನ ಸ್ಪಷ್ಟೀಕರಣಗಳನ್ನು ‘ಪದೇ ಪದೇ ಕೇಳಲಾಗುವ ಪ್ರಶ್ನೆಗಳು’ (FAQ) ರೂಪದಲ್ಲಿ ನೀಡಲಾಗುತ್ತದೆ. ಸಂಬಂಧಪಟ್ಟ ಎಲ್ಲರಿಗೂ ಸುಲಭವಾಗಿ ಪ್ರಸಾರ ಮಾಡಲಾಗುವುದು” ಎಂದು ಸಾಮಾನ್ಯ ಆಡಳಿತ ಇಲಾಖೆ ಕಾರ್ಯದರ್ಶಿ ಶಶಿ ಭೂಷಣ್ ಕುಮಾರ್ ಜನವರಿ 22 ರಂದು ಹೊರಡಿಸಿದ ಆದೇಶದಲ್ಲಿ ತಿಳಿಸಿದ್ದರು.
ಎನ್ಪಿಆರ್ ನಡೆಯುವ ಸಮಯದಲ್ಲಿ ಜನರು ಯಾವುದೇ ದಾಖಲೆಗಳನ್ನು ಎಣಿಕೆದಾರರಿಗೆ ಸಲ್ಲಿಸುವ ಅಗತ್ಯವಿಲ್ಲ ಎಂದು ಅವರು ಹೇಳಿದ್ದರು.
“ಎನ್ಪಿಆರ್ ಮಾಡುವವರು ಜನರು ನೀಡುವ ಯಾವುದೇ ಉತ್ತರಗಳನ್ನು ದಾಖಲಿಸುವುದು ಅಗತ್ಯವಾಗಿರುತ್ತದೆ. ಯಾವುದೇ ಪ್ರಶ್ನೆಗೆ ಹೆಚ್ಚಿನ ಉತ್ತರಗಳನ್ನು ನೀಡುವಂತೆ ಒತ್ತಾಯಿಸಬಾರದು, ಅವರು ನೀಡಲು ಇಚ್ಛಿಸದಿದ್ದರೆ ಯಾವುದೇ ದಾಖಲೆಯನ್ನು ಕೇಳಬಾರದು” ಎಂದು ಕುಮಾರ್ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.