HomeಅಂಕಣಗಳುShe said: ಹೇಳಿಕೊಳ್ಳಲಾಗದ ಒಡಲಾಳದ ಸಂಕಟಕ್ಕೆ ದನಿಯಾದ ಪತ್ರಕರ್ತೆಯರ ಕಥನ

She said: ಹೇಳಿಕೊಳ್ಳಲಾಗದ ಒಡಲಾಳದ ಸಂಕಟಕ್ಕೆ ದನಿಯಾದ ಪತ್ರಕರ್ತೆಯರ ಕಥನ

- Advertisement -
- Advertisement -

ಭಾರತದಲ್ಲಿ ಸೆಪ್ಟಂಬರ್ ಮತ್ತು ಅಕ್ಟೋಬರ್ 2018ರಲ್ಲಿ #meToo ಲೈಂಗಿಕ ದೌರ್ಜನ್ಯ ಪ್ರಕರಣಗಳು ಸರಣಿಯಾಗಿ ಬಿಚ್ಚಿಕೊಳ್ಳತೊಡಗಿದವು. ಭಾರಿ ಹೆಸರು ಪಡೆದ ನಟರಿಂದ ಹಿಡಿದು, ನಿರ್ದೇಶಕರು, ಪತ್ರಕರ್ತರು ಮತ್ತು ಇನ್ನಿತರ ಪ್ರತಿಷ್ಠಿತರು ತಮ್ಮ ಅಧಿಕಾರ ದುರುಪಯೋಗದಿಂದ ತಮ್ಮ (ಕಿರಿಯ) ಸಹೋದ್ಯೋಗಿಗಳ ಮೇಲೆ ಲೈಂಗಿಕ ಅತಿಕ್ರಮಣ, ಹಲ್ಲೆ, ದೌರ್ಜನ್ಯಗಳನ್ನು ನಡೆಸಿದ ಕಥೆಗಳು ಮುಖ್ಯವಾಹಿನಿ-ಸ್ವತಂತ್ರ-ಸಾಮಾಜಿಕ ಮಾಧ್ಯಮಗಳಲ್ಲಿ ಮೂಡಿದವು. ಅತಿಕ್ರಮಣಕಾರರ ವಿರುದ್ಧ ಕ್ರಮಕ್ಕೆ ಮುಂದಾಗಲು, ಉದ್ಯೋಗದ ಸ್ಥಳಗಳನ್ನು ಮಹಿಳೆಯರಿಗೆ ಮತ್ತು ಕಿರಿಯ ಉದ್ಯೋಗಿಗಳಿಗೆ ಸುರಕ್ಷಿತಗೊಳಿಸಲು ಮುಂದಾಗುವಂತೆ ದೊಡ್ಡ ಕೂಗು ಕೇಳಿಬಂತು. ಇದರಿಂದ ಪ್ರತಿಷ್ಠಿತ ಸ್ಥಾನಗಳಲ್ಲಿದ್ದು ಪ್ರಬಲರಾಗಿದ್ದ ಹಲವು ಲೈಂಗಿಕ ಅತಿಕ್ರಮಣಕಾರರು ಸಾರ್ವಜನಿಕ ಮುಜುಗರವನ್ನು ಅನುಭವಿಸಿದರು; ಕೆಲವರು ಕೋರ್ಟ್‌ನಲ್ಲಿ ದಾವೆ ಹೂಡಿ ತಮ್ಮ ಪ್ರಬಲತೆಯನ್ನು ಅಲ್ಲಿಯೂ ಮೆರೆದರು. ಉದ್ಯೋಗದ ಸ್ಥಳಗಳಲ್ಲಿ ಅಷ್ಟೋ ಇಷ್ಟೋ ಸುಧಾರಣೆಗಳು ಆಗಿರುವುದಕ್ಕೆ ಸಾಧ್ಯವಿದೆ. ಆದರೆ, ಉದ್ಯೋಗದ ಸ್ಥಳಗಳಲ್ಲಿ ಸಾರ್ವಜನಿಕ ಪಿಡುಗಾಗಿ ಬೆಳೆದಿದ್ದ ಲೈಂಗಿಕ ಅತಿಕ್ರಮಣತೆ ಮತ್ತು ದೌರ್ಜನ್ಯ ಸಾರ್ವಜನಿಕರ ನಡುವೆ ಚರ್ಚೆಗೆ ಬಂದದ್ದು, ಕೆಲವರಲ್ಲಾದರೂ ಇದರ ಬಗ್ಗೆ ತಿಳಿವು-ಅರಿವು ಮೂಡಲು ಸಾಧ್ಯವಾಯಿತು; ಒಡಲಾಳದ ಸಂಕಟವನ್ನು ಹೊರಹಾಕಲು ವೇದಿಕೆಗಳು ದೊರೆತದ್ದು #meToo ಚಳವಳಿಯ ಮತ್ತೊಂದು ಯಶಸ್ಸು ಎನ್ನಬಹುದು. ಭಾರತದಲ್ಲಿ #meToo ಕಥನ ಸರಣಿ ಬಿಚ್ಚಿಕೊಳ್ಳುವುದಕ್ಕೂ ಒಂದು ವರ್ಷ ಮೊದಲು ಯುಎಸ್‌ಎನಲ್ಲಿ ಇದು ದೊಡ್ಡ ಸಾರ್ವಜನಿಕ ಚರ್ಚೆಯಾಗಿ ರೂಪುಗೊಂಡಿತ್ತು. ಅದು ಆ ಮಟ್ಟಕ್ಕೆ ಬೆಳೆಯಲು ಕಾರಣ ಹಾಲಿವುಡ್‌ನ ಪ್ರಖ್ಯಾತ ನಿರ್ಮಾಪಕ ಹಾರ್ವಿ ವೇನ್‌ಸ್ಟೈನ್ ಎಂಬ ಪ್ರಭಾವಿಯ ಲೈಂಗಿಕ ದೌರ್ಜನ್ಯಗಳನ್ನು ಬಯಲಿಗೆಳೆದಿದ್ದ ’ನ್ಯೂಯಾರ್ಕ್ ಟೈಮ್ಸ್’ ಪತ್ರಿಕೆಯ ವರದಿ. ಹಗಲು ರಾತ್ರಿ ತಮ್ಮ ತನಿಖಾ ಪತ್ರಿಕೋದ್ಯಮದಿಂದ ಇದನ್ನು ಬಯಲಿಗೆಳೆದಿದ್ದವರು ಜೋಡಿ ಕ್ಯಾಂಟನ್ ಮತ್ತು ಮೇಗನ್ ಟೂಯಿ. ಈ ಪತ್ರಿಕೋದ್ಯಮದ ಕಥಾನಕ ಈಗ ದೃಶ್ಯರೂಪದಲ್ಲಿ ’ಶಿ ಸೆಡ್’ ಸಿನಿಮಾವಾಗಿ ಮೂಡಿಬಂದಿದ್ದು, ಪತ್ರಿಕೋದ್ಯಮದ ಮೌಲ್ಯಗಳು ಕುಸಿಯುತ್ತಿರುವ ಸಮಯದಲ್ಲಿ ಎಚ್ಚರಿಕೆಯ ಕರೆಗಂಟೆಯಂತೆ ಸಿನಿಮಾ ಮಂದಿರಗಳಲ್ಲಿ ಬಿಡುಗಡೆಯಾಗಿದೆ.

ಹಾರ್ವಿ ವೇನ್‌ಸ್ಟೈನ್

ನ್ಯೂಯಾರ್ಕ್ ಟೈಮ್ಸ್ ತನಿಖಾ ಪತ್ರಕರ್ತೆ ಮೇಗನ್ ಟೂಯಿ (ಕ್ಯಾರಿ ಮಾಲಿಗನ್ ಈ ಪಾತ್ರವನ್ನು ನಿಭಾಯಿಸಿದ್ದಾರೆ) ಡೊನಾಲ್ಡ್ ಟ್ರಂಪ್ (ಅಧ್ಯಕ್ಷನಾಗುವುದಕ್ಕೆ ಮುಂಚೆ) ಬಗ್ಗೆ ಆರೋಪಿಸಲಾಗಿದ್ದ ಲೈಂಗಿಕ ದೌರ್ಜನ್ಯದ ಪ್ರಕರಣವನ್ನು ತನಿಖೆ ಮಾಡುವುದರ ಮೂಲಕ ಸಿನಿಮಾ ಆರಂಭವಾಗುತ್ತದೆ. ಅದಕ್ಕೆ ತಾರ್ಕಿಕ ಅಂತ್ಯ ಸಿಗಲು ಸಾಧ್ಯವಾಗದೆ ಇದ್ದರೂ, ಬಲಪಂಥೀಯ ಧೋರಣೆಯ ಫಾಕ್ಸ್ ನ್ಯೂಸ್‌ನ ಆಂಕರ್ ಒಬ್ಬನನ್ನು ಲೈಂಗಿಕ ಕಿರುಕುಳದ ಕಾರಣಕ್ಕೆ ಕೆಲಸದಿಂದ ವಜಾಮಾಡಿದ ಪ್ರಕರಣ, ಬೇರೆಬೇರೆ ವಲಯಗಳಲ್ಲಿ ಇಂತಹ ದೌರ್ಜನ್ಯಗಳನ್ನು ವರದಿ ಮಾಡಲು ಪ್ರೇರಕವಾಗುತ್ತದೆ. ಆಗ ಟೈಮ್ಸ್‌ನ ಮತ್ತೊಬ್ಬ ತನಿಖಾ ಪತ್ರಕರ್ತೆ ಜೋಡಿ ಕ್ಯಾಂಟರ್ (ಜೋಯಿ ಕಜಾನ್ ಈ ಪಾತ್ರವನ್ನು ನಿರ್ವಹಿಸಿದ್ದಾರೆ) ತನಿಖೆಗೆ ಹಾಲಿವುಡ್‌ಅನ್ನು ಆಯ್ಕೆ ಮಾಡಿಕೊಳ್ಳುತ್ತಾಳೆ. ತನಿಖಾ ಪತ್ರಕರ್ತೆಯಾಗಿದ್ದರಿಂದ ಹಾಲಿವುಡ್‌ನ ಹೆಚ್ಚು ಸಂಪರ್ಕವಿರದ ಜೋಡಿ ತನ್ನ ತನಿಖೆಯಲ್ಲಿ ಹಲವು ಅಡೆತಡೆಗಳನ್ನು ಎದುರಿಸುತ್ತಾರೆ. ಸಂಪರ್ಕದ ಸಮಸ್ಯೆ ಒಂದೆಡೆಯಾದರೆ, ಲೈಂಗಿಕ ಕಿರುಕುಳಗಳಿಗೆ ತುತ್ತಾಗಿರುವ ಸಂತ್ರಸ್ತೆಯರ ದಶಕಗಳ ಕಾಲದ ಒಡಲ ನೋವು ಅವರನ್ನು ಹೆಚ್ಚು ಮಾತನಾಡುವುದಕ್ಕೆ ಬಿಡುತ್ತಿರುವುದಿಲ್ಲ. ಹೆರಿಗೆ ರಜೆಯ ಮೇಲೆ ತೆರಳಿದ್ದ ಮೇಗನ್ ಟೂಯಿ ಕೆಲಸಕ್ಕೆ ಹಿಂದಿರುಗಿ ತನಿಖೆಗೆ ಜೋಡಿಯ ಜತೆಯಾಗುತ್ತಾಳೆ. ಸಂತ್ರಸ್ತೆಯರನ್ನು ಪತ್ತೆ ಹಚ್ಚುವುದರಿಂದ ಹಿಡಿದು, ದಾಖಲೆಗಳನ್ನು ಸಂಗ್ರಹಿಸುವ, ಅವುಗಳನ್ನು ತಾಳೆ ಹಾಕುವ, ವರದಿ ಬರೆಯಲು ಇರುವ ಕಂದರಗಳನ್ನು ತುಂಬಲು ಹೆಣಗುವ, ಶೋಷಕನ ಪ್ರಭಾವಿ ಒತ್ತಡವನ್ನು ನಿಭಾಯಿಸುವ ರೋಚಕ ಕಥೆಯಾಗಿ ಸಿನಿಮಾ ಮುಂದುವರಿಯುತ್ತದೆ.

ಜೋಡಿ ಕ್ಯಾಂಟರ್ ಮತ್ತು ಮೇಗನ್ ಟೂಯಿ

ಇದನ್ನೂ ಓದಿ: ಪಠ್ಯಪುಸ್ತಕವಾಯಿತು, ಈಗ ಶಾಲಾ ಕೊಠಡಿಗಳ ಕೇಸರೀಕರಣ!

ಇಬ್ಬರು ಪತ್ರಕರ್ತರ ಶ್ರದ್ಧೆ ಮತ್ತು ರೋಚಕ ತನಿಖೆಯು, ಬಯೋಪಿಕ್ ರೂಪದಲ್ಲಿ ಮೂಡಿಬಂದಿರುವ ಈ ಡ್ರಾಮಾದಲ್ಲಿ ಹಲವು ಅಂಶಗಳು ಮನಸ್ಸಿನಲ್ಲಿ ಉಳಿದುಕೊಳ್ಳುತ್ತವೆ. ಕೆಲವನ್ನು ಇಲ್ಲಿ ಅವಲೋಕಿಸಬಹುದು; ಮೊದಲನೆಯದಾಗಿ, ಇಬ್ಬರೂ ಪತ್ರಕರ್ತೆಯರ ಜರ್ನಲಿಸಂ ಪ್ಯಾಶನ್. ಜೋಡಿ ಕ್ಯಾಂಟರ್‌ಗೆ ಇಬ್ಬರು ಚಿಕ್ಕ ಮಕ್ಕಳು. ದುಡಿಯುವ ಗಂಡ. ಮಕ್ಕಳ ಆರೈಕೆ ನೋಡಿ ಸಂತೈಸುವುದರ ಜೊತೆಗೆ ತನ್ನ ಪ್ಯಾಶನ್‌ಅನ್ನು ಕೂಡ ನಿಭಾಯಿಸುವ ರೀತಿ ಅನನ್ಯವಾಗಿ ಮೂಡಿದೆ. ಅದೇ ರೀತಿ, ಹೆರಿಗೆ ರಜಕ್ಕೆ ತೆರಳಿರುವ ಮೇಗನ್ ಟೂಯಿ, ಪೋಸ್ಟ್ ಪ್ರಗ್ನೆನ್ಸಿ ಡಿಪ್ರಶನ್‌ಗೆ ಒಳಗಾಗುತ್ತಾಳೆ. ಮತ್ತೆ ತನ್ನ ನೆಚ್ಚಿನ ಕೆಲಸಕ್ಕೆ ಮರಳಿದ ನಂತರವೇ ಆಕೆಗೆ ಆ ಖಿನ್ನತೆಯಿಂದ ತುಸು ರಿಲೀಫ್ ಸಾಧ್ಯ. ಎರಡನೆಯದಾಗಿ, ಪತ್ರಿಕೋದ್ಯಮ ಬೇಡುವ ರಿಗರಸ್ ಆದ ತನಿಖೆಯ ಚಿತ್ರಣ; ಸಂತ್ರಸ್ತರು-ಇತರ ಪ್ರತ್ಯಕ್ಷದರ್ಶಿಗಳು ತಮ್ಮ ಕಥೆ ಹೇಳುವುದಕ್ಕೆ ಕನ್ವಿನ್ಸ್ ಮಾಡುವ, ಸಾಕ್ಷ್ಯಗಳನ್ನು ಕಲೆ ಹಾಕುವ ತಾಕಲಾಟ, ಅವುಗಳನ್ನು ವೆರಿಫೈ ಮಾಡಿ ಲಿಂಕ್‌ಗಳನ್ನು ಬೆಸೆಯುವ ತ್ರಾಸ ಇವೆಲ್ಲವನ್ನೂ ಬಹಳ ಸೂಕ್ಷ್ಮವಾಗಿ ಮತ್ತು ಅಷ್ಟೇ ಪರಿಣಾಮಕಾರಿಯಾಗಿ ಚಿತ್ರಿಸಿದ್ದಾರೆ ನಿರ್ದೇಶಕಿ ಮಾರಿಯಾ ಶ್ರಾಡರ್. ಸಂತ್ರಸ್ತ ಮಹಿಳೆಯರನ್ನು ಮಾತನಾಡಿಸುವುದು ಸುಲಭವಿರದೆ ಜೋಡಿ ಕ್ಯಾಂಟರ್ ಒಂದು ಹಂತದಲ್ಲಿ ಹತಾಶಳಾಗಿ, ’ತಾನು ಹಿಂದೆ ಮಾಡಿದ್ದ ವರದಿಯಲ್ಲಿ ಇದನ್ನ ಸಾಧಿಸಿದ್ದು ಹೇಗೆ’ ಎಂದು ಮೇಗನ್‌ಳನ್ನು ಕೇಳಿದಾಗ ಆಕೆ, “ನೀವು ಆಡುವ ಮಾತುಗಳಿಂದ ಕನಿಷ್ಠ ಮುಂದಿನ ನಟಿಯರ ಜೀವನದಲ್ಲಿ ಇಂತಹ ಕಿರುಕುಳಗಳು ಸಾಧ್ಯವಾಗದಂತೆ ತಡೆಯಬಹುದು” ಎಂದು ಹೇಳಿ ಪ್ರಯತ್ನಿಸಿದೆ ಅನ್ನುತ್ತಾಳೆ. ಹೀಗೆ ಮೂರನೆಯದಾಗಿ, ಲೈಂಗಿಕ ಕಿರುಕುಳಕ್ಕೆ ಒಳಗಾದ ಸಂತ್ರಸ್ತೆಯರು ತಮ್ಮ ಮೇಲಾದ ದೌರ್ಜನ್ಯದ ವಿರುದ್ಧ ಸುಲಭವಾಗಿ ಮಾತನಾಡಲಾಗದ ಪರಿಸ್ಥಿತಿಯನ್ನು ಸಿನಿಮಾ ಹಿಡಿದಿಡುತ್ತದೆ. ಒಂದು ದೃಶ್ಯದಲ್ಲಿ ಒಬ್ಬ ಸಂತ್ರಸ್ತೆಯನ್ನು ಕಾಣಲು ಮೇಗನ್ ಹೋದಾಗ, ಆಕೆ “ಇಪ್ಪತ್ತು ವರ್ಷಗಳಿಂದ ನನ್ನ ಕಥೆ ಕೇಳಲು ಯಾರಾದರೂ ಬರುತ್ತಾರೆ ಎಂದು ಕಾಯುತ್ತಿದ್ದೆ” ಎಂದು ನೊಂದುಕೊಳ್ಳುವ ದೃಶ್ಯ ಈ ವಸ್ತುವನ್ನು ಹ್ಯಾಂಡಲ್ ಮಾಡಿರುವ ಸೂಕ್ಷ್ಮತೆಗೆ ಸಾಕ್ಷಿಯಾಗಿದೆ.

ಮಾರಿಯಾ ಶ್ರಾಡರ್

ತನಿಖಾ ಪತ್ರಿಕೋದ್ಯಮದ ಕಥೆಯಾಗಿ ಮತ್ತು ಪತ್ರಕರ್ತರ ಬಯೋಪಿಕ್ ರೂಪ ಪಡೆದಿರುವುದರಿಂದ, ಸಿನಿಮಾ ಸರಣಿ ಸೆಕ್ಷುಯಲ್ ಅಫೆಂಡರ್ ಹಾರ್ವಿ ವೇನ್‌ಸ್ಟೈನ್‌ನ ಬಗ್ಗೆ ಮತ್ತು ಆತನ ಪ್ರಭಾವದ ಬಗ್ಗೆ ವೀಕ್ಷಕರಿಗೆ ದೊಡ್ಡ ಚಿತ್ರಣವನ್ನು ಕಟ್ಟಿಕೊಡುವುದಿಲ್ಲ. ಆತನ ಪಾತ್ರವನ್ನು ಹಿನ್ನೆಲೆಯಲ್ಲೇ ಕಟ್ಟಿಕೊಡುವ ತಂತ್ರ ಬಹುಶಃ ಸಂತ್ರಸ್ತರ ನೋವು ಸಿಡಿದರೆ ಒಬ್ಬ ಪ್ರಭಾವಿಯನ್ನು ಕೂಡ ಮಣಿಸಲಬಲ್ಲದು ಎಂಬುದನ್ನು ಕಟ್ಟಿಕೊಡಲು ಮಾಡಿದ ಪ್ರಯತ್ನ ಎನಿಸುತ್ತದೆ. ಮಿರಾಮ್ಯಾಕ್ಸ್‌ನಂತಹ ಬೃಹತ್ ನಿರ್ಮಾಣ ಸಂಸ್ಥೆಯನ್ನು ಮುನ್ನಡೆಸುತ್ತಿದ್ದ, ’ಪಲ್ಪ್ ಫಿಕ್ಷನ್’ ಸೇರಿದಂತೆ ಹಲವು ಜನಪ್ರಿಯ ಸಿನಿಮಾಗಳನ್ನು ನಿರ್ಮಿಸಿ ಹಲವು ಆಸ್ಕರ್ ಪ್ರಶಸ್ತಿಗಳನ್ನು ಗಳಿಸಿದ್ದ ವ್ಯಕ್ತಿ ಹಾರ್ವಿ; ಯುಎಸ್‌ಎನಲ್ಲಿ ಹಿಲರಿ ಕ್ಲಿಂಟನ್ ಸೇರಿದಂತೆ ಡೆಮಾಕ್ರಟ್ ಪಕ್ಷದ ಪ್ರಭಾವಿಗಳ ಜೊತೆಗೆ ಗುರುತಿಸಿಕೊಂಡವನು; ಸುಮಾರು ಮೂರು ದಶಕಗಳ ಕಾಲ ಹಲವು ಯುವ ನಟಿಯರು ಮತ್ತು ಕಿರಿಯ ಸಹೋದ್ಯೋಗಿಗಳಿಗೆ ನಿರಂತರ ಲೈಂಗಿಕ ಕಿರುಕುಳಗಳ ನೀಡಿ, ಸುಮಾರು 12 ಪ್ರಕರಣಗಳಲ್ಲಿ ಹಣಕಾಸಿನ ಸೆಟಲ್‌ಮೆಂಟ್ ಮಾಡಿ, ಅವರು ತಮ್ಮ ಕಥೆಯನ್ನು ಯಾರಿಗೂ ಹೇಳಿಕೊಳ್ಳದಂತೆ (ವೈದ್ಯರ ಬಳಿ ಕೂಡ) ನಿರ್ಬಂಧ ಹೇರಿ ಒಪ್ಪಂದಗಳನ್ನು ಮಾಡಿಕೊಂಡು ಬಚಾವಾಗುತ್ತಿದ್ದ ಅಪರಾಧಿ. ಹಲವಾರು ಬಾರಿ ಈತನ ವಿಷಯ ವರದಿಯಾಗುವ ಹಂತಕ್ಕೆ ಬಂದಾಗ ತನ್ನ ಪ್ರಭಾವ ಬಳಸಿ ಆ ವರದಿಗಳನ್ನು ಸಾಯಿಸುತ್ತಿದ್ದ ವ್ಯಕ್ತಿ. ಹೀಗೆ ತನ್ನ ಅಧಿಕಾರವನ್ನು ಎಲ್ಲೆ ಮೀರಿ ದುರುಪಯೋಗಮಾಡಿಕೊಂಡು ಅದನ್ನು ತನ್ನ ಲೋಲುಪತೆಗೆ ಬಳಸಿಕೊಳ್ಳುತ್ತಿದ್ದ ವ್ಯಕ್ತಿಯ ಪ್ರಭಾವದ ಬಗ್ಗೆ ಸಿನಿಮಾದಲ್ಲಿಯೇ ಒಂದು ಕಡೆ ಸಂತ್ರಸ್ತೆಯೊಬ್ಬಳು ಹೇಳುವ ಮಾತುಗಳು ಹೀಗಿವೆ: ’ನಾನು 28 ವರ್ಷದ ಮಹಿಳೆ ವೃತ್ತಿಪರ ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸುತ್ತಿದ್ದೆ. ಹಾರ್ವಿ ವೇನ್‌ಸ್ಟೈನ್ 64 ವರ್ಷದವ, ಜಗತ್‌ಪ್ರಖ್ಯಾತ ಮತ್ತು ಅದು ಅವನ ಕಂಪನಿಯಾಗಿತ್ತು. ಪವರ್ ಸಮತೋಲನ ಹೀಗಿತ್ತು; ನಾನು:0, ಹಾರ್ವಿ ವೇನ್‌ಸ್ಟೈನ್:10.

2020ರಲ್ಲಿ ವಿಚಾರಣೆಯಾಗಿ, ಹಲವು ಪ್ರಕರಣಗಳಲ್ಲಿ ಹಾರ್ವಿ ವೇನ್‌ಸ್ಟೈನ್ ಅಪರಾಧಿ ಎಂದು ಕೋರ್ಟ್ ತೀರ್ಪು ನೀಡಿ ಆತ 29 ವರ್ಷಗಳ ಜೈಲುಶಿಕ್ಷೆಯನ್ನು ಅನುಭವಿಸುತ್ತಿದ್ದಾನೆ. ತನಿಖಾ ಪತ್ರಿಕೋದ್ಯಮದ ವರದಿಯೊಂದು ಈ ಮಟ್ಟದ ತಿರುವು ಪಡೆಯಲು ಅಲ್ಲಿನ ಓದುಗರು ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯನ್ನು ಸಬ್‌ಸ್ಕ್ರೈಬ್ ಮಾಡಿ ತನಿಖಾ ಪತ್ರಿಕೋದ್ಯಮಕ್ಕೆ ಸಹಕರಿಸಿದ್ದೂ ಒಂದು ಕಾರಣ ಎನ್ನುತ್ತಾರೆ ಪತ್ರಕರ್ತೆ ಜೋಡಿ ಕ್ಯಾಂಟರ್ ಒಂದು ಸಂದರ್ಶನದಲ್ಲಿ. ಭಾರತದಲ್ಲಿ #meToo ಚಳವಳಿ ಈ ರೀತಿಯ ತಾರ್ಕಿಕ ಅಂತ್ಯ ಕಾಣಲು ಸಾಧ್ಯವಾಗಲಿಲ್ಲ. ಬಹುಶಃ ಇಲ್ಲಿನ ಪತ್ರಿಕೋದ್ಯಮದ ಸ್ವರೂಪವೂ ಅದಕ್ಕೆ ಒಂದು ಕಾರಣವಿರಬಹುದು. ಅಲ್ಲಲ್ಲಿ ಉಳಿದಿರುವ ಗಂಭೀರ ಪತ್ರಕರ್ತರಿಗೆ ಆ ಮಟ್ಟದ ಬೆಂಬಲ ಸಿಗದ ವಾತಾವರಣ ಸೃಷ್ಟಿಯಾಗಿರುವುದೂ ಮತ್ತೊಂದು ಕಾರಣವಿರಬಹುದು. ಒಟ್ಟಿನಲ್ಲಿ ಇಂತಹ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಒಳ್ಳೆಯ ಜರ್ನಲಿಸಂನ ಪ್ರಾಮುಖ್ಯತೆ ಮತ್ತದರ ಶಕ್ತಿಯನ್ನು ಹಿಡಿದಿಡುವ ಹಾಗೂ ಲೈಂಗಿಕ ದೌರ್ಜನ್ಯಗಳ ಬಗ್ಗೆ ವರದಿ ಮಾಡುವ ಸಂಕಷ್ಟಗಳ ಬಗ್ಗೆ ಚಿತ್ರಿಸಿರುವ She said ಇಂದಿಗೆ ಪ್ರಮುಖವಾದ ಸಿನಿಮಾ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಆರು ಮಕ್ಕಳಿದ್ದರೆ ನೀವು ಮತದಾನದ ಹಕ್ಕನ್ನು ಕಳೆದುಕೊಳ್ಳಬಹುದು: ಮತದಾರರ ಪಟ್ಟಿ ‘ಕ್ಲೀನ್’ ಮಾಡಲು ECI ಹೊಸ ಪ್ಲಾನ್!

ಭಾರತದಲ್ಲಿ 'ಆರು ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದಾರೆ' ಎಂಬ ಕಾರಣಕ್ಕೆ ಯಾರಾದರೂ ಮತದಾನದ ಹಕ್ಕನ್ನು ಕಳೆದುಕೊಳ್ಳಲು ಸಾಧ್ಯವೇ? ಮೇಲ್ನೋಟಕ್ಕೆ ಹೌದು ಎನ್ನುವಂತಿದೆ ಉತ್ತರ ಪ್ರದೇಶದ ವಾರಾಣಸಿಯ ಕ್ಯಾಂಟೋನ್ಮೆಂಟ್ ಕ್ಷೇತ್ರದ ಮತದಾರ ಸೋನು...

ಕದನ ವಿರಾಮವೆಂಬ ಕಳ್ಳಾಟ : ಗಾಝಾದಿಂದ ಸಿರಿಯಾವರೆಗೆ ಮುಂದುವರಿದ ಇಸ್ರೇಲ್ ನರಮೇಧ

ಬರೋಬ್ಬರಿ ಎಪ್ಪತ್ತು ಸಾವಿರದಷ್ಟು (ವರದಿಗಳ ಪ್ರಕಾರ 67, 900) ಜನರನ್ನು ಹತ್ಯೆಗೈದು, ಶೇಕಡ 90ರಷ್ಟು ಜನರನ್ನು ನಿರಾಶ್ರಿತರನ್ನಾಗಿ ಮಾಡಿದ ಬಳಿಕ, ಅಕ್ಟೋಬರ್ 10, 2025ರಂದು ಗಾಝಾ ಮೇಲಿನ ಆಕ್ರಮಣಕ್ಕೆ ಸಂಬಂಧಿಸಿದಂತೆ ಇಸ್ರೇಲ್ ಕದನ...

ಚುನಾವಣಾ ಆಯೋಗಕ್ಕೆ ಪೌರತ್ವ ನಿರ್ಧಾರ ಮಾಡುವ ಹಕ್ಕಿದೆಯೇ? SIR ತೀರ್ಪಿನ ಬಗ್ಗೆ ಸುಪ್ರೀಂ ಕೋರ್ಟ್ ಹೇಳಿದ್ದೇನು?

ಮೇ 27 ರಂದು 'ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಮತ್ತು ಭಾರತೀಯ ಚುನಾವಣಾ ಆಯೋಗ (ECI)' ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಚುನಾವಣಾ ಪಟ್ಟಿಗಳ 'ವಿಶೇಷ ತೀವ್ರ ಪರಿಷ್ಕರಣೆ'...

ಮಹಾರಾಷ್ಟ್ರ: 80 ಲಕ್ಷ ಮಹಿಳೆಯರು ‘ಲಡ್ಕಿ ಬಹಿನ್’ ಯೋಜನೆಗೆ ಅನರ್ಹ: ಆರ್ಥಿಕ ಬಿಕ್ಕಟ್ಟಿಗೆ ಸಾಕ್ಷಿ ಎಂದು ವಿಪಕ್ಷಗಳ ಆರೋಪ

ಮುಂಬೈ: ಮಹಾರಾಷ್ಟ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದ 'ಮುಖ್ಯಮಂತ್ರಿ ಮಾಝಿ ಲಡ್ಕಿ ಬಹಿನ್' ಇ-ಕೆವೈಸಿ (e-KYC) ಪ್ರಕ್ರಿಯೆ ಪೂರ್ಣಗೊಳಿಸಲು ನೀಡಿದ್ದ ಗಡುವು ಮುಗಿದಿದ್ದು, ಸುಮಾರು 80 ಲಕ್ಷ ಮಹಿಳೆಯರು ಯೋಜನೆಯಿಂದ ಅನರ್ಹರಾಗಿದ್ದಾರೆ. ರಾಜ್ಯ ಸರ್ಕಾರವು...

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...