Homeಚಳವಳಿಬಸವಣ್ಣನವರ ಪಠ್ಯ ತಿರುಚುವಿಕೆ ಕುಚೋದ್ಯ: ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ಖಂಡನೆ - ಸಿಎಂಗೆ ಬಹಿರಂಗ ಪತ್ರ

ಬಸವಣ್ಣನವರ ಪಠ್ಯ ತಿರುಚುವಿಕೆ ಕುಚೋದ್ಯ: ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ಖಂಡನೆ – ಸಿಎಂಗೆ ಬಹಿರಂಗ ಪತ್ರ

- Advertisement -
- Advertisement -

ಪಠ್ಯ ಪರಿಷ್ಕರಣೆ ವಿವಾದ ಮುಗಿಯುವ ಯಾವ ಸೂಚನೆಗಳೂ ಕಾಣುತ್ತಿಲ್ಲ. ಬದಲಿಗೆ ದಿನದಿಂದ ದಿನಕ್ಕೆ ಕಾವು ಪಡೆದುಕೊಳ್ಳುತ್ತಲೇ ಇದೆ. ಇದೀಗ ಬಸವಣ್ಣನವರ ಪಠ್ಯ ತಿರುಚುವಿಕೆಗೆ ಆಕ್ರೋಶ ವ್ಯಕ್ತಪಡಿಸಿರುವ ಲಿಂಗಾಯತ ಮಠಾಧಿಪತಿಗಳ ಒಕ್ಕೂಟವು ಕೂಡಲೇ ಸರಿಪಡಿಸಬೇಕೆಂದು ಆಗ್ರಹಿಸಿ ಸಿಎಂ ಬಸವರಾಜ ಬೊಮ್ಮಾಯಿಯವರಿಗೆ ಬಹಿರಂಗ ಪತ್ರ ಬರೆದಿದೆ.

ನೂರಾರು ಲಿಂಗಾಯಿತ ಮಠಾಧೀಶರು ಇರುವ ಲಿಂಗಾಯಿತ ಮಠಾಧಿಪತಿಗಳ ಒಕ್ಕೂಟ ಬಸವಣ್ಣನವರ ಪಠ್ಯವನ್ನು ತಿರುಚಿರುವ ಕುರಿತು ಗಂಭೀರವಾದ ಆಕ್ಷೇಪ ವ್ಯಕ್ತಪಡಿಸಿದೆ. ಇದನ್ನು ಸರಿಪಡಿಸದೇ ಹೋದಲ್ಲಿ ದೊಡ್ಡ ಪ್ರಮಾಣದ ಪ್ರತಿಭಟನೆ ಅನಿವಾರ್ಯ ಎಂಬ ಎಚ್ಚರಿಕೆಯನ್ನೂ ನೀಡಿದೆ.

ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಅಧ್ಯಕ್ಷರಾದ ಭಾಲ್ಕಿಯ ಹಿರೇಮಠ ಸಂಸ್ಥಾನದ ಡಾ.ಬಸವಲಿಂಗ ಪಟ್ಟದ್ದೇವರು ಮತ್ತು ಹಂದಿಗುಂದದ ವಿರಕ್ತಮಠದ  ನೇತೃತ್ವದಲ್ಲಿ ಶ್ರೀ ಶಿವಾನಂದ ಮಹಾಸ್ವಾಮಿಗಳ ನೇತೃತ್ವದಲ್ಲಿ ಪತ್ರ ಬರೆದಿದ್ದು, ಲಿಂಗಾಯತ ಧರ್ಮಗುರು ಬಸವಣ್ಣನವರ ಕುರಿತು ಪಠ್ಯದಲ್ಲಿ ಬದಲಾವಣೆ ಮಾಡಿರುವುದು ಕುಚೋದ್ಯದ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

9ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಮಸ್ತಕದಲ್ಲಿ ಉಪನಯನವಾದ ನಂತರ ಕೂಡಲಸಂಗಮಕ್ಕೆ ನಡೆದರು ಎಂದು ಬರೆಯಲಾಗಿದೆ. ಇದು ತಪ್ಪು. ಬಸವಣ್ಣನವರು ತಮ್ಮ ಸಹೋದರಿ ಅಕ್ಕನಾಗಾಯಿಗೆ ಇಲ್ಲದ ಉಪನಯನ ನನಗೇಕೆ? ಎಂದು ಧಿಕ್ಕರಿಸಿ ಕೂಡಲಸಂಗಮಕ್ಕೆ ಹೋದುದು ಐತಿಹಾಸಿಕ ಸಂಗತಿ ಎಂದು ಪತ್ರದಲ್ಲಿ ಬರೆಯಲಾಗಿದೆ.

ಅದೇ ರೀತಿ “ಶೈವ-ಗುರುಗಳ ಸಾನಿಧ್ಯದಲ್ಲಿ ಲಿಂಗದೀಕ್ಷೆಯನ್ನು ಪಡೆದು” ಎಂದು ಬರೆಯಲಾಗಿದೆ. ಇದು ಸಹ ತಪ್ಪು. ಶೈವಗುರುಗಳು ಗುಡಿ-ಗುಂಡಾರಗಳಲ್ಲಿರುವ ಸ್ಥಾವರ ಲಿಂಗಾರಾಧಕರು, ಅವರು ಹೇಗೆ ಇಷ್ಟಲಿಂಗ ದೀಕ್ಷೆ ಮಾಡಬಲ್ಲರು. ಇಷ್ಟಲಿಂಗ ಬಸವಣ್ಣನವರ ಪರಿಕಲ್ಪನೆಯಲ್ಲಿ ಮೂಡಿಬಂದದು. ಅವರೇ ಇಷ್ಟಲಿಂಗದ ಜನಕರು. ಅಲ್ಲಮಪ್ರಭುದೇವರಾದಿಯಾಗಿ ಎಲ್ಲ ಶರಣರು ತಮ್ಮ ವಚನಗಳಲ್ಲಿ ಇದನ್ನು ಉಲ್ಲೇಖಿಸಿದ್ದಾರೆ. ‘ಬಸವಣ್ಣನ ಉದರದಲ್ಲಿ ಹುಟ್ಟಿತ್ತು ಲಿಂಗ’ ಎಂದು ಚನ್ನಬಸವಣ್ಣನವರು ಉಲ್ಲೇಖಿಸಿದ್ದಾರೆ. ‘ನಿನ್ನ ನಾನರಿಯದ ಮುನ್ನ ನೀನೆಲ್ಲಿ ಇದ್ದೆ? ಎನ್ನೊಳಗಿದ್ದು ನಿನ್ನ ತೋರಲಕೆ ನೀನೆ ರೂಪಾದೆ’ ಎಂದು ಬಸವಣ್ಣನವರು ಸ್ವತಃ ತಮ್ಮ ವಚನದಲ್ಲಿ ಹೇಳಿದ್ದಾರೆ” ಎಂದು ಬಹಿರಂಗ ಪತ್ರದಲ್ಲಿ ತಿಳಿಸಲಾಗಿದೆ.

“ಬಸವಣ್ಣನವರು ವೀರಶೈವ ಮತವನ್ನು ಅಭಿವೃದ್ಧಿಪಡಿಸಿದರು ಎಂದು ಈಗ ಪಠ್ಯದಲ್ಲಿ ಸೇರಿಸಲಾಗಿದೆ. ಇದು ಕೂಡ ಶುದ್ಧ ತಪ್ಪು. ವೀರಶೈವ ಶೈವದ ಶಾಖೆ. ಅದು ಮತವಿರಬಹುದು ಈಗ ಅದನ್ನು ಅಂಗಾಯತ ಧರ್ಮದ ಒಂದು ಪಂಗಡ ಎಂದು ಹೆಸರಿಸಲಾಗಿದೆ. ಸರಕಾರದ ದಾಖಲೆಗಳಲ್ಲಿ ಕ್ರಿ.ಶ.1871 ರಿಂದಲೂ ಇದನ್ನು ಕಾಣಬಹುದು. ಆದರೆ ಬಸವಣ್ಣನವರು ಅಂಗಾಯತ ಧರ್ಮದ ಸ್ಥಾಪಕರು ಎಂಬುದು ಎಲ್ಲರಿಗೂ ತಿಳಿದ ಸಂಗತಿ. ಶೈವದಲ್ಲಿ ವರ್ಣಾಶ್ರಮದ ಆಚರಣೆ ಇದೆ. ಅಂಗಾಯತರಲ್ಲಿ ವರ್ಣಾಶ್ರಮ ಭೇದಗಳಲ್ಲ. ಬಸವಣ್ಣನವರು ವೀರಶೈವ ಮತವನ್ನು ಅಭಿವೃದ್ಧಿಪಡಿಸಿದರು ಎಂಬುದು ಶುದ್ಧ ಅನೈತಿಹಾಸಿಕ” ಎಂದು ಮಠಾಧಿಪತಿಗಳು ತಿಳಿಸಿದ್ದಾರೆ.

ಕಳೆದ ವರ್ಷ ಪಠ್ಯದಲ್ಲಿದ್ದ ವೈದಿಕ ಧರ್ಮದ ಆಚರಣೆಗಳ ನಿರಾಕರಣೆ, ಮಾನವೀಯ ಮಾಲ್ಯಗಳಿಂದ ಕೂಡಿದ ಸಿದ್ಧಾಂತದ ಪ್ರತಿಪಾದನೆ, ಅನಿಷ್ಟ ಪದ್ಧತಿಗಳ ವಿರುದ್ಧದ ಹೋರಾಟ, ಸ್ವಾವಲಂಬನೆ, ದೇಹವೇ ದೇಗುಲ ತತ್ವಗಳ ಬೋಧನೆ ಮುಂತಾದವುಗಳ ಜೊತೆಗೆ ಅವರು ಕನ್ನಡವನ್ನು ಬಳಸುವ ಮೂಲಕ ತಮ್ಮ ಚಳುವಳಿಯನ್ನು ಜನಮುಖಿಯಾಗಿಸಿದರು ಎನ್ನುವಂತಹ ಸಾಲುಗಳನ್ನು ಕೈಬಿಟ್ಟಿರುವುದು ದುರ್ದೈವದ ಸಂಗತಿ ಎಂದು ಮಠಾಧಿಪತಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

“ಈ ಹಿನ್ನೆಲೆಯಲ್ಲಿ ಪರಿಷ್ಕೃತ ಪಠ್ಯದಲ್ಲಿ ಆಗಿರುವ ಈ ಎಲ್ಲ ದೋಷಗಳನ್ನು ನಿವಾರಿಸಿ ಪಠ್ಯಪುಸ್ತಕ ಮುದ್ರಿಸಬೇಕು. ಅನ್ಯಥಾ ಸಮಾಜಕ್ಕೆ ತಪ್ಪು ಸಂದೇಶ ನೀಡಿದಂತಾಗುವುದಲ್ಲದೆ ವೈಶಿಷ್ಟ್ಯಪೂರ್ಣವಾದ ಲಿಂಗಾಯತ ಧರ್ಮಕ್ಕೆ ಮತ್ತು ಬಸವಣ್ಣನವರಿಗೆ ಅಪಚಾರವೆಸಗಿದಂತಾಗುತ್ತದೆ. ಲಿಂಗಾಯತ ಧರ್ಮದ ಅನುಯಾಯಿ ಮತ್ತು ಬಸವಣ್ಣನವರ ಹೆಸರಿನವರಾದ ತಾವು ಮುಖ್ಯ ಮಂತ್ರಿಯಾಗಿರುವ ಸಮಯದಲ್ಲಿ ಇಂತಹ ಅಪಚಾರವಾಗಿರುವುದು ನಮಗೆ ಆಘಾತಕಾರಿಯಾಗಿದೆ. ಬಹುಸಂಖ್ಯಾತ ಲಿಂಗಾಯತರು ಮತ್ತು ಲಿಂಗಾಯತ ಮಠಾಧಿಪತಿಗಳು ಬೃಹತ್ ಪ್ರಮಾಣದ ಪ್ರತಿಭಟನೆ ನಡೆಸುವ ಮೊದಲು ಈ ತಪ್ಪು ಸರಿಪಡಿಸಿ ಪಠ್ಯ ಪುಸ್ತಕಗಳನ್ನು ಪ್ರಕಟಸಬೇಕು. ಇಲ್ಲವಾದರೆ ರಾಜ್ಯಾದ್ಯಂತ ಸೂಕ್ತ ಸಂದರ್ಭದಲ್ಲಿ ಹೋರಾಟ ಮಾಡುವುದು ನಮಗೆ ಅನಿವಾರ್ಯವಾಗುತ್ತದೆ” ಎಂದು ಪತ್ರದಲ್ಲಿ ಎಚ್ಚರಿಸಲಾಗಿದೆ.

ಇದೇ ರೀತಿ ರಾಷ್ಟ್ರಕವಿ ಕುವೆಂಪು ಅವರ ಬಗ್ಗೆ ಮತ್ತು ನಾಡಗೀತೆಯ ಬಗ್ಗೆಯೂ ಅವಹೇಳನಕಾರಿ ವಿಷಯ ಪ್ರಕಟವಾಗಿರುವುದು ಸರಿಯಾದ ರೀತಿಯಲ್ಲ. ಇದು ಅತ್ಯಂತ ಖಂಡನೀಯವಾಗಿದೆ. ಅದನ್ನು ಸರಿಪಡಿಸುವ ನಿಟ್ಟಿನಲ್ಲಿ ಸೂಕ್ತಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.

ಇದನ್ನೂ ಓದಿ: 🛑 Live Updates| ಪಠ್ಯಪುಸ್ತಕ ತಿರುಚೀಕರಣ ವಿವಾದ: ಅಂಬೇಡ್ಕರ್‌ ಕುರಿತು ಚಕ್ರತೀರ್ಥ ಮಾಡಿದ್ದ ವ್ಯಂಗ್ಯದ…

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಬಸವಣ್ಣ ಮಂಗಳವೇಡೆಯಿಂದ ತಮ್ಮ ಸಾಮಾಜಿಕ ಕೆಲಸಗಳನ್ನು ಆರಂಭಿಸಿದರು ಎಂಬುದಕ್ಕೆ ಸಂಬಂಧಿಸಿದಂತೆ, ಬೆಳಗಾವಿ ಜಿಲ್ಲೆಯ ಮಂಗಳವೇಡೆಗೂ ಬಸವಣ್ಣಿಗೂ ಏನು ಸಂಬಂಧ ಎಂದು ಹುಡುಕಿದರೆ ವಿಕಿಪೀಡಿಯದಲ್ಲಿ ಈ ಕೆಳಗಿನ ಒಂದು ಬರಹ ಕಾಣಸಿಗುತ್ತದೆ. ಅದರ ಪ್ರಕಾರ ಮಂಗಳವೇಡದಿಂದ ಆಳ್ವಿಕೆ ನಡೆಸಿದ ಕರ್ಣ ಎಂಬ ಸಾಮಂತರಾಜ ಕಳಚುರಿ ವಂಶದ ಒಂದನೇ ಬಿಜ್ಜಳನ ಮಗ ಎಂಬುದೊಂದನ್ನು ಬಿಟ್ಟರೆ, ಬಸವಣ್ಣನು ಬಾಗೇವಾಡಿಯಿಂದ ಹೊರಟು ತಲುಪಿದ ಕೂಡಲಸಂಗಮ ಅಥವಾ ತನ್ನ ಸಾಮಾಜಿಕ ಕಾರ್ಯಗಳನ್ನು ನಡೆಸಿದ ಬಸವಕಲ್ಯಾಣ ಇವುಗಳಿಗೂ ಮಂಗಳವೇಡೆಗೂ ಮತ್ಯಾವ ಸಂಬಂಧವೂ ಕಾಣುವುದಿಲ್ಲ.

    [ಇದಲ್ಲದೆ ಕರ್ನಾಟಕ ಏಕೀಕರಣ ಚಳವಳಿಯನ್ನಾರಂಭಿಸಿದ ಆಲೂರು ವೆಂಕಟರಾಯರ ಶಿಷ್ಯರಾಗಿದ್ದ ಏಕೀಕರಣ ಹೋರಾಟಗಾರ ಮಂಗಳವೇಡೆ ಕೃಷ್ಣರಾಯರಿಗೆ ಸಂಬಂಧಿಸಿದ ವಿವರಗಳಿವೆ. ಮಂಗಳವೇಡೆಯೊಂದಿಗೆ ಬಸವಣ್ಣನಿಗೆ ಯಾವುದೇ ನಂಟು ಇದ್ದುದು ನನಗೆ ವಿಕಿಪೀಡಿಯದಲ್ಲಿ ಸಿಗಲಿಲ್ಲ.]

    ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕರ್ಣ (ಕಳಚುರಿ)

    ಕರ್ಣ (ಕಳಚುರಿ): ಕರ್ನಾಟಕದಲ್ಲಿ ಚಾಳುಕ್ಯರ ಆಶ್ರಯದಲ್ಲಿ ಆಳುತ್ತಿದ್ದ ಕಳಚುರಿ ದೊರೆಗಳಲ್ಲೊಬ್ಬ. ಒಂದನೆಯ ಬಿಜ್ಜಳನ (ಬಿಜ್ಜ) ಮಗ. ಕನ್ನಮ, ಕೃಷ್ಣರಾಜ ಎಂದೂ ಈತನನ್ನು ಸಂಬೋಧಿಸಲಾಗಿದೆ. 1067ರಲ್ಲಿ ಈತನ ಆಳ್ವಿಕೆ ಪ್ರಾರಂಭವಾಯಿತೆಂದು ತಿಳಿದುಬರುತ್ತದೆ. ಮಂಗಳಿವೇಡದಿಂದ (ಈಗಿನ ಮಂಗಳವೇಢೆ; ಷೋಲಾರಪುರ ಜಿಲ್ಲೆ) ಅದರ ಸುತ್ತಮುತ್ತಣ ಪ್ರದೇಶಗಳನ್ನು ಈತ ಆಳುತ್ತಿದ್ದ. ಐವತ್ತು ಕದನಗಳಲ್ಲಿ ಕಾದಾಡಿ ಗೆದ್ದನೆಂದೂ ಹನ್ನೆರಡು ಮಂದಿ ದೊರೆಗಳನ್ನು ಕೊಂದು ತನ್ನ ರಾಜಧಾನಿಯನ್ನು ಶತ್ರುಗಳಿಂದ ರಕ್ಷಿಸಿದನೆಂದೂ ಇವನನ್ನು ಹೊಗಳಲಾಗಿದೆ. ಪರಮಾರರು, ಪೂರ್ವ ಚಾಳುಕ್ಯರು, ಚೋಳರು ಮುಂತಾದವರೊಂದಿಗೆ ಈತನ ಪ್ರಭುವಾದ ಒಂದನೆಯ ಸೋಮೇಶ್ವರ ಮಾಡಿದ ಕದನಗಳಲ್ಲಿ ಇವನೂ ಭಾಗವಹಿಸಿರಬೇಕೆಂದು ತೋರುತ್ತದೆ. ಈತ 1080ರ ವರೆಗೂ ರಾಜ್ಯವಾಳಿದ (ನೋಡಿ- ಕಳಚುರಿಗಳು).

    – ಸಿರಿಮನೆ ನಾಗರಾಜ್.

LEAVE A REPLY

Please enter your comment!
Please enter your name here

- Advertisment -

Must Read

ಬಡ ಜನರಿಗೆ ಬದುಕು ಕಟ್ಟಿಕೊಳ್ಳಲು ನೆರವಾದ ‘ಕಾಂಗ್ರೆಸ್‌’ ಸರಕಾರದ ‘ಗ್ಯಾರಂಟಿ ಯೋಜನೆ’ ಬಗ್ಗೆ ತೇಜಸ್ವಿ...

0
ಕರ್ನಾಟಕದ ಕಾಂಗ್ರೆಸ್‌ ಸರಕಾರ ಜಾರಿಗೆ ತಂದಿದ್ದ ಪಂಚ ಗ್ಯಾರಂಟಿಗಳ ಬಗ್ಗೆ ತುಚ್ಛವಾಗಿ ಮಾತನಾಡಿದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ, ರಾಜ್ಯದ ಕೋಟ್ಯಾಂತರ ಜನರಿಗೆ ಆಶ್ರಯವಾದ ಗ್ಯಾರಂಟಿ ಯೋಜನೆಗಳನ್ನು 'ಮತಿ ಹೀನ ಉಚಿತ ಕೊಡುಗೆ'...