ಮಣಿಪುರ ಹಿಂಸಾಚಾರದ ಕುರಿತು ಸದನದಲ್ಲಿ ಪ್ರತಿಪಕ್ಷಗಳ ಪ್ರತಿಭಟನೆಯ ಸಂದರ್ಭದಲ್ಲಿ ಅಶಿಸ್ತಿನ ವರ್ತನೆ ತೋರಿದ್ದಾರೆ ಎಂದು ಹೇಳಿ ಎಎಪಿ ಸಂಸದ ಸಂಜಯ್ ಸಿಂಗ್ ಅವರನ್ನು ಮಾನ್ಸೂನ್ ಅಧಿವೇಶನದ ಉಳಿದ ಅವಧಿಗೆ ರಾಜ್ಯಸಭೆಯಿಂದ ಅಮಾನತುಗೊಳಿಸಲಾಗಿದೆ.
ವಿರೋಧ ಪಕ್ಷದ ಸದಸ್ಯರು ಹಿಂಸಾಚಾರ ಪೀಡಿತ ರಾಜ್ಯದಲ್ಲಿನ ಪರಿಸ್ಥಿತಿಯ ಬಗ್ಗೆ ಚರ್ಚೆಗೆ ಒತ್ತಾಯಿಸಿ ಘೋಷಣೆಗಳನ್ನು ಎತ್ತುವುದನ್ನು ಮುಂದುವರೆಸಿದರು. ಈ ವೇಳೆ ಸಂಜಯ್ ಸಿಂಗ್ ಅವರು ಸದನದ ಬಾವಿಗೆ ಇಳಿದು ಪ್ರತಿಭಟಿಸಿದರು. ಹಾಗಾಗಿ ಸಭಾಪತಿ ಜಗದೀಪ್ ಧನಕರ್ ಅವರು ಸಂಜಯ್ ಸಿಂಗ್ ಅವರನ್ನು ಅಮಾನತು ಮಾಡಿದ್ದಾರೆ.
Rajya Sabha Chairman suspends AAP MP Sanjay Singh for the remaining duration of the Monsoon session during the Opposition's protest in the House over the Manipur issue pic.twitter.com/RnZ6qiFuql
— ANI (@ANI) July 24, 2023
ಸದನದ ನಾಯಕ ಪಿಯೂಷ್ ಗೋಯಲ್ ಅವರು ಸಿಂಗ್ ಅವರನ್ನು ಅಧಿವೇಶನದ ಉಳಿದ ಅವಧಿಗೆ ಅಮಾನತುಗೊಳಿಸುವ ಪ್ರಸ್ತಾಪವನ್ನು ಮಂಡಿಸಿದರು. ”ಈ ರೀತಿಯ ನಡವಳಿಕೆಯು ಬಾವಿಗೆ ಬರುವುದು ಮತ್ತು ಸದನವನ್ನು ತೊಂದರೆಗೊಳಿಸುವುದು ಸದನದ ನೈತಿಕತೆ ಮತ್ತು ನಿಯಮಗಳಿಗೆ ಸಂಪೂರ್ಣವಾಗಿ ವಿರುದ್ಧವಾಗಿದೆ” ಎಂದು ಗೋಯಲ್ ಹೇಳಿದರು.
ವಿರೋಧ ಪಕ್ಷದ ಸದಸ್ಯರ ದೊಡ್ಡ ಗದ್ದಲದ ನಡುವೆ ಧ್ವನಿ ಮತದ ಮೂಲಕ ಸದನವು ಈ ಪ್ರಸ್ತಾಪವನ್ನು ಅಂಗೀಕರಿಸಿತು.
ಸಂಜಯ್ ಸಿಂಗ್ ಅವರನ್ನು ಅಮಾನತುಗೊಳಿಸಿರುವುದನ್ನು ಪ್ರಕಟಿಸಿದ ರಾಜ್ಯಸಭಾ ಅಧ್ಯಕ್ಷರು, ”ಸಭಾಪತಿಯ ನಿರ್ದೇಶನವನ್ನು ಪದೇ ಪದೇ ಉಲ್ಲಂಘಿಸಿದ್ದಕ್ಕಾಗಿ ಸಂಜಯ್ ಸಿಂಗ್ ಅವರನ್ನು ಈ ಅಧಿವೇಶನದ ಸಂಪೂರ್ಣ ಅವಧಿಗೆ ಅಮಾನತುಗೊಳಿಸಲಾಗಿದೆ” ಎಂದು ಹೇಳಿದರು.
ಸಿಂಗ್ ಅವರನ್ನು ಅಮಾನತುಗೊಳಿಸಿದ ಕೂಡಲೇ ಸಭಾಪತಿಯವರು ಕಲಾಪವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಿದರು. ಪ್ರತಿಪಕ್ಷಗಳ ಸದಸ್ಯರು ಸದನದಲ್ಲಿ ಗದ್ದಲವನ್ನು ಮುಂದುವರೆಸಿದರು.
ಮಣಿಪುರ ವಿಚಾರವಾಗಿ ಸದನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಂದ ಹೇಳಿಕೆ ನೀಡಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ: ಮಣಿಪುರ ಹಿಂಸಾಚಾರ ಕುರಿತು ಪ್ರಧಾನಿ ಮೋದಿ ಸಂಸತ್ತಿನಲ್ಲಿ ಸಮಗ್ರ ಹೇಳಿಕೆ ನೀಡಬೇಕು: INDIA ಒಕ್ಕೂಟದಿಂದ ಒತ್ತಾಯ
ಗಾಂಧಿ ಪ್ರತಿಮೆ ಎದುರು ವಿಪಕ್ಷಗಳ ಪ್ರತಿಭಟನೆ
ಮಣಿಪುರದಲ್ಲಿ ನಡೆದ ಜನಾಂಗೀಯ ಹಿಂಸಾಚಾರದ ವಿಚಾರದಲ್ಲಿ ಸರ್ಕಾರದ ಮೌನದ ವಿರುದ್ಧ ವಿರೋಧ ಪಕ್ಷ ಗಳ INDIA ಒಕ್ಕೂಟ ಸೋಮವಾರ ಸಂಸತ್ತಿನ ಎದುರಿಗಿನ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದರು. ಈ ಬಗ್ಗೆ ಪ್ರಧಾನಿ ಮೋದಿ ಅವರು ಸಂಸತ್ತಿನಲ್ಲಿ ಮಾತನಾಡಬೇಕು ಎಂದು ಪುನರುಚ್ಚರಿಸಿದರು.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರತಿಭಟನಾ ಸ್ಥಳದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ”ವಾಸ್ತವ ಸ್ಥಿತಿ ಏನೆಂಬುದರ ಕುರಿತು ಮೋದಿ ಬಂದು ಮಾತನಾಡಬೇಕು ಎಂದು ರಾಜ್ಯಸಭಾ ಮತ್ತು ಲೋಕಸಭೆಯ ಸ್ಪೀಕರ್ಗಳಿಬ್ಬರನ್ನೂ ಒತ್ತಾಯಿಸುತ್ತೇವೆ. ಪ್ರಧಾನಿ ಸಂಸತ್ತಿನ ಚೇಂಬರ್ಗಳಿಗೆ ಬರುವುದಿಲ್ಲ ಮತ್ತು ಅವರು ತಮ್ಮ ಕಚೇರಿಯಲ್ಲಿ ಕುಳಿತು ಏನು ನಡೆಯುತ್ತಿದೆ ಎಂಬುದನ್ನು ನೋಡುತ್ತಾರೆ. ಮಣಿಪುರದ ಬಗ್ಗೆ ಸಂಸತ್ತಿನಲ್ಲಿ ಪ್ರಧಾನಿ ಹೇಳಿಕೆ ನೀಡಿದರೆ, ನಾವು ಚರ್ಚೆ ನಡೆಸಬಹುದು” ಎಂದು ಹೇಳಿದರು.
”ಸಂಸತ್ತಿನ ಕಾರ್ಯವಿಧಾನದ ನಿಯಮ 267 ಅಂತಹ ವಿಷಯದ ಬಗ್ಗೆ ಒಂದು ಗಂಟೆ ಅಥವಾ ಇಡೀ ದಿನ ಚರ್ಚೆಗೆ ಅವಕಾಶ ನೀಡುತ್ತದೆ. ಆದರೆ ಅವರು [ಸರ್ಕಾರ] ಅದನ್ನು ಚರ್ಚೆ ಮಾಡಲು ಬಯಸುವುದಿಲ್ಲ. ಒಬ್ಬರು ಅರ್ಧ ಗಂಟೆ ಚರ್ಚೆ, ಮತ್ತೊಬ್ಬರು ಅಲ್ಪಾವಧಿ ಚರ್ಚೆ ಎನ್ನುತ್ತಾರೆ. ನೀವು [ಮೋದಿ] ಸದನಕ್ಕೆ ಬಂದು ಸತ್ಯವನ್ನು ಏಕೆ ಹೇಳುತ್ತಿಲ್ಲ?” ಎಂದು ಪ್ರಶ್ನೆ ಮಾಡಿದರು.
ಮಣಿಪುರದಲ್ಲಿ ಮೂವರು ಮಹಿಳೆಯರನ್ನು ವಿವಸ್ತ್ರಗೊಳಿಸಿ ಮೆರವಣಿಗೆ ನಡೆಸುತ್ತಿರುವ ವಿಡಿಯೋ ಜುಲೈ 19 ರಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಇದು ದೇಶಾದ್ಯಂತ ಆಕ್ರೋಶ ಹೆಚ್ಚಾಗಲು ಕಾರಣವಾಯಿತು. ಕಳೆದ ವಾರ ಮುಂಗಾರು ಅಧಿವೇಶನದ ಮೊದಲ ಎರಡು ದಿನಗಳಲ್ಲಿ ಈ ವಿಚಾರ ಚರ್ಚೆ ನಡೆಸಬೇಕು ಎಂದು ಪ್ರತಿಪಕ್ಷಗಳು ಒತ್ತಾಯಿಸಿದವು. ಆದರೆ ಸರ್ಕಾರ ಚರ್ಚೆ ನಡೆಸದೇ ಎರಡು ದಿನದ ಕಲಾಪವನ್ನು ವ್ಯರ್ಥ ಮಾಡಿದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಉತ್ತರದ ನಂತರ ಉಭಯ ಸದನಗಳಲ್ಲಿ ಚರ್ಚೆ ನಡೆಸುವುದಾಗಿ ಸರ್ಕಾರ ಹೇಳಿತು ಆದರೆ ಪ್ರತಿಪಕ್ಷಗಳು ಮೋದಿ ಹೇಳಿಕೆಗೆ ಪಟ್ಟು ಹಿಡಿದಿವೆ.