ಅಸ್ಸಾಂ ಚುನಾವಣೆ ಪ್ರಾರಂಭವಾಗಲು ಇನ್ನೇನು ಕೆಲವೇ ದಿನಗಳು ಬಾಕಿಯಿರುವಾಗ ರಾಜ್ಯದ ಆಡಳಿತಾರೂಢ ಬಿಜೆಪಿಯು, “ನಮ್ಮ ಪ್ರಮುಖ ಎದುರಾಳಿ ಕಾಂಗ್ರೆಸ್ ಅಲ್ಲ” ಎಂದು ಹೇಳಿದೆ. ಬದ್ರುದ್ದೀನ್ ಅಜ್ಮಲ್ ಅವರ ಅಖಿಲ ಭಾರತ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಎಐಯುಡಿಎಫ್) ಪಕ್ಷವು ನಮಗೆ ಪ್ರಮುಖ ಎದುರಾಳಿಯಾಗಲಿದೆ ಎಂದು ಹೇಳಿದೆ.
ಈ ಕುರಿತು ಹೇಳಿಕೆ ನೀಡಿದ ಅಸ್ಸಾಂ ಕ್ಯಾಬಿನೆಟ್ ಸಚಿವ ಹಿಮಂತ್ ಬಿಸ್ವಾ ಶರ್ಮಾ, “ಅಸ್ಸಾಂ ನಲ್ಲಿ ನಡೆಯುವ ಮೂರೂ ಹಂತದ ಚುನಾವಣೆಯಲ್ಲಿಯೂ ಸಂಸದರಾದ ಬದ್ರುದ್ದೀನ್ ಅಜ್ಮಲ್ ಪ್ರಮುಖ ಪಾತ್ರ ವಹಿಸಲಿದ್ದಾರೆ” ಎಂದು ಒಪ್ಪಿಕೊಂಡಿದ್ದಾರೆ.
“ಚುನಾವಣೆಯಲ್ಲಿ, ಬಿಜೆಪಿ ಮತ್ತು ಕಾಂಗ್ರೆಸ್-ಎಐಯುಡಿಎಫ್ ನಡುವೆ ಪೈಪೋಟಿ ಇರಲಿದೆ. ಪ್ರಾದೇಶಿಕ ಪಕ್ಷಗಳಿಗೆ ಜನರನ್ನು ತಲುಪಲು ಸಾಧ್ಯವಾಗಲಿಲ್ಲ. ಅಜ್ಮಲ್ ಅವರಿಂದ ಸಂಸ್ಕೃತಿ ಮತ್ತು ನಾಗರಿಕತೆಗೆ ಅಪಾಯವಿದೆ” ಎಂದು ಶರ್ಮಾ ಗುರುವಾರ ಹೇಳಿದರು.
ಇದರ ನಡುವೆ, ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಮತ್ತು ಅಸ್ಸಾಂ ರಾಜ್ಯದ ಉಸ್ತುವಾರಿ ಬೈಜಯಂತ್ ಜೇ ಪಾಂಡ, “ಈಗ ಕಾಂಗ್ರೆಸ್ ಎಐಯುಡಿಎಫ್ ಜೊತೆ ಒಪ್ಪಂದ ಮಾಡಿಕೊಂಡಿದೆ. ಎಐಯುಡಿಎಫ್ ಅಸ್ಮಿತೆಯ ರಾಜಕೀಯದ ಬಗ್ಗೆ ಮಾತನಾಡುತ್ತದೆ. ಕಾಂಗ್ರೆಸ್ ತನ್ನದೇ ಆದ ಉಳಿವಿನ ಬಗ್ಗೆ ಮಾತನಾಡುತ್ತಿದೆ. ಇವರು ಕಾಂಗ್ರೆಸ್ ಬಚಾವೊ ಕಡೆ ಗಮನ ಹರಿಸುತ್ತಿದ್ದಾರೆಯೇ ಹೊರತು, ಅಸ್ಸಾಂ ಬಚಾವೊ ಕಡೆ ಅಲ್ಲ. ಅಜ್ಮಲ್ ಕೋಮುವಾದಿ ಎಂಬ ಕಾರಣಕ್ಕಾಗಿ ದಿವಂಗತ ತರುಣ್ ಗೊಗೊಯ್ ಕೂಡ ಎಐಯುಡಿಎಫ್ ನಿಂದ ದೂರವಿರುತ್ತಿದ್ದರು” ಎಂದು ಆರೋಪಿಸಿದ್ದಾರೆ.
ಅಸ್ಸಾಂನಲ್ಲಿ ಮಾರ್ಚ್ 27 ರಿಂದ ಮೂರು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಮೇ 2 ರಂದು ಫಲಿತಾಂಶ ಹೊರಬೀಳಲಿದೆ.
ಇದನ್ನೂ ಓದಿ: ತಾಜ್ಮಹಲ್ ಆವರಣದಲ್ಲಿ ಶಿವಪೂಜೆ: ಹಿಂದೂ ಮಹಾಸಭಾ ಕಾರ್ಯಕರ್ತರ ಬಂಧನ