ಐತಿಹಾಸಿಕ ಅನ್ಯಾಯವನ್ನು ಸರಿಪಡಿಸಲು ಮತ್ತು ನೆರೆಯ ರಾಷ್ಟ್ರಗಳಲ್ಲಿ ವಾಸಿಸುವ ಧಾರ್ಮಿಕ ಅಲ್ಪಸಂಖ್ಯಾತರಿಗೆ ಬಿಜೆಪಿಯು ನೀಡಿದ್ದ ಹಳೆಯ ಭರವಸೆಯನ್ನು ಪೂರೈಸಲು ಸರ್ಕಾರ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ತಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಅವರು ನ್ಯಾಷನಲ್ ಕೆಡೆಟ್ ಕಾರ್ಪ್ಸ್ (ಎನ್ಸಿಸಿ)ಯ ವಾರ್ಷಿಕ ರ್ಯಾಲಿಯಲ್ಲಿ ಮಾತನಾಡುತ್ತಾ, ಪ್ರಸ್ತುತ ಸರ್ಕಾರವು ದೇಶವನ್ನು ಬಾಧಿಸುತ್ತಿರುವ ದಶಕಗಳ ಹಳೆಯ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸುತ್ತಿದೆ ಎಂದಿದ್ದಾರೆ. ಹಿಂದಿನ ಸರ್ಕಾರಗಳು ಈ ಸಮಸ್ಯೆಯನ್ನು ಕಾನೂನು ಸುವ್ಯವಸ್ಥೆ ಎಂದು ಪರಿಗಣಿಸಿದ್ದವು ಎಂದು ಸಹ ಅವರು ಹೇಳಿದ್ದಾರೆ.
ಸ್ವಾತಂತ್ರ್ಯದ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ಸಮಸ್ಯೆ ಮುಂದುವರೆದಿದೆ. ಕೆಲವು ಕುಟುಂಬಗಳು ಮತ್ತು ರಾಜಕೀಯ ಪಕ್ಷಗಳು ಈ ಪ್ರದೇಶದ ಸಮಸ್ಯೆಗಳನ್ನು ಜೀವಂತವಾಗಿರಿಸಿಕೊಂಡಿವೆ, ಇದರ ಪರಿಣಾಮವಾಗಿ ಅಲ್ಲಿ ಭಯೋತ್ಪಾದನೆ ಪ್ರವರ್ಧಮಾನಕ್ಕೆ ಬಂದಿತು ಎಂದು ಮೋದಿ ಹೇಳಿದ್ದಾರೆ.
ನೆರೆಯ ದೇಶ ಪಾಕಿಸ್ತಾನವು ಮೂರು ಯುದ್ಧಗಳನ್ನು ಸೋತಿದೆ. ಆದರೂ ಭಾರತದ ವಿರುದ್ಧ ಪ್ರಾಕ್ಸಿ ಯುದ್ಧಗಳನ್ನು ಮುಂದುವರಿಸಿದೆ ಎಂದು ಪ್ರಧಾನಿ ಪಾಕಿಸ್ತಾನದ ವಿರುದ್ಧ ಕಿಡಿಕಾರಿದ್ದಾರೆ.
ಪ್ರಸ್ತುತ ಜಮ್ಮು ಕಾಶ್ಮೀರ ಮಾತ್ರವಲ್ಲ, ದೇಶದ ಇತರ ಭಾಗಗಳೂ ಸಹ ಶಾಂತಿಯುತವಾಗಿವೆ ಮತ್ತು ದಶಕಗಳಿಂದ ನಿರ್ಲಕ್ಷಿಸಲ್ಪಟ್ಟ ಈಶಾನ್ಯ ಪ್ರದೇಶದ ಆಕಾಂಕ್ಷೆಗಳನ್ನು ಪರಿಹರಿಸಲು ಸರ್ಕಾರ ಯಶಸ್ವಿಯಾಗಿದೆ ಎಂದು ಅವರು ಹೇಳಿದ್ದಾರೆ.